ಸೋಮವಾರ, ಜನವರಿ 2, 2017

ಭಾರತೀಯ ಪ್ರಜೆ- ಅತ್ತ ದರಿ ಇತ್ತ ಪುಲಿ !?

ಕಳೆದೆರಡು ತಿಂಗಳ ಹಿಂದೆ ಅಮೆರಿಕದ ಅಧ್ಯಕ್ಷೀಯ ಚುನಾವಣೆ ನಡೆಯಿತು. ಆಗ ಅಲ್ಲಿಯ ಪ್ರಜೆಗಳ ಮುಂದೆ ಎರಡು ಆಯ್ಕೆ ಇತ್ತು. ಒಂದು ಶಿಷ್ಟಾಚಾರದ ಭಾಷೆ ಗೊತ್ತಿಲ್ಲದ, ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡುವ, ತೆರಿಗೆ ಬಾಕಿ ಉಳಿಸಿಕೊಂಡ, ಮೂಲಭೂತವಾದಿ ಎನಿಸುವ ಡೊನಾಲ್ಡ್ ಟ್ರಂಪ್ ಒಂದೆಡೆಯಾದರೆ, ಭಯೋತ್ಪಾದನೆಗೆ ಪರೋಕ್ಷ ಸಹಾಯ ಮಾಡಿದ ಆರೋಪ ಹೊತ್ತ ಹಿಲರಿ ಕ್ಲಿಂಟನ್ ಇನ್ನೊಂದೆಡೆ. ಇಬ್ಬರನ್ನು ಆಯ್ಕೆ ಮಾಡಿದ ಪಕ್ಷಗಳಲ್ಲಿ ಸಹ ಇವರಿಬ್ಬರ ಹೊರತಾಗಿ ಬೇರೆ ಉತ್ತಮ ಆಯ್ಕೆಗಳು ಇರಲಿಲ್ಲ ಎಂಬುದು ಮೊದಲನೆ ಅಚ್ಚರಿಯ ವಿಷಯ. ಇವರಿಬ್ಬರಲ್ಲಿ ಒಬ್ಬರನ್ನು ಆರಿಸಲೇಬೇಕಾದ ಅನಿವಾರ್ಯತೆ ಜಗತ್ತಿನ ದೊಡ್ಡಣ್ಣ ಹಾಗೂ ಜಗತ್ತಿಗೆ ಮಾದರಿ ಎನಿಸಿದ ಅಮೆರಿಕನ್ನರದಾಗಿತ್ತು ಎಂಬುದು ಎರಡನೆಯ ಅಚ್ಚರಿಯ ವಿಷಯ.
ಈಗ ನನ್ನನ್ನು ಕಾಡುತ್ತಿರುವುದು ಭಾರತದ ಭವಿಷ್ಯದಲ್ಲಿರುವ ಇಂತಹುದೇ ಪರಿಸ್ಥಿತಿಯ ಕಲ್ಪನೆ. ಕಳೆದ ಲೋಕಸಭಾ ಚುನಾವಣೆ ಇದಕ್ಕಿಂತ ಹೊರತಾಗಿಯೇನೂ ಇರಲಿಲ್ಲ. ಅದು ನೇರವಾಗಿ ಭಾರತೀಯ ಜನತಾ ಪಕ್ಷದ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಪಕ್ಷದ ರಾಹುಲ್ ಗಾಂಧಿಯ ನಡುವಿನ ಸಮರವಾಗಿತ್ತು. ಆದರೆ ನಾವು ದಕ್ಷತೆ, ಜನಪ್ರಿಯತೆ, ಕಾರ್ಯಕ್ಷಮತೆ, ದೇಶಭಕ್ತಿ, ಬ್ರಹ್ಮಚರ್ಯ, ಕುಟುಂಬದ ಹೊರತಾದ ರಾಜಕಾರಣ, ಬಡತನದ ಹಿನ್ನೆಲೆ ಹೀಗೆ ಸಾಕಷ್ಟು ವಿಷಯದಲ್ಲಿ ಸೈ ಎನಿಸಿಕೊಂಡ ಅಭ್ಯರ್ಥಿಯಾಗಿ ಮೋದಿಯವರನ್ನು ಆಯ್ಕೆ ಮಾಡಿದೆವು. ಆ ನಂತರದ್ ಈ ಎರಡು ವರ್ಷಗಳಲ್ಲಿ ಮೋದಿಯವರ ಇನ್ನೊಂದು ಮುಖ ಕೂಡ ಬಹಿರಂಗಗೊಂಡಿದೆ. ಅವೆಂದರೆ ಜನಪ್ರಿಯತೆಯ ದಾಹ, ಸರ್ವಾಧಿಕಾರದ ಮನೋಭಾವ, ದೂರದರ್ಶಿತ್ವ ಇಲ್ಲದ ಅಥವಾ ಚುನಾವಣೆಗಳಲ್ಲಿ ಗೆಲುವು ಸಾಧಿಸಲು ಬೇಕಾದ ಹಲವು ಗೇಮ್ ಪ್ಲಾನ್ ,  ಅದೂ ಸಾಮಾನ್ಯ ಜನರ ಜೀವನದ ಬೆಲೆ ತೆತ್ತು! , ಸ್ವಜನಪಕ್ಷಪಾತ ....ನಿಜವಾಗಿಯೂ ಭ್ರಮನಿರಸನ.
ಇನ್ನು ರಾಹುಲ್ ಗಾಂಧಿ!? ಅಮ್ಮನ ಸೆರಗಿಂದ ಅಪ್ಪ, ಅಜ್ಜಿ, ಮುತ್ತಜ್ಜನ ನೆರಳಿಂದ ಹೊರಬಂದು ಆಗಷ್ಟೆ ಅಂಬೆಗಾಲಿಡುತ್ತಿರುವ ಹಸುಳೆಯಂತಹ ವ್ಯಕ್ತಿತ್ವ. ಒಂದೆಡೆ ಶಿಸ್ತಿನ ಗರಡಿಯಲ್ಲಿ ಪಳಗಿ ಕರಾರುವಕ್ಕಾಗಿ ದಾಳಿ ಮಾಡಬಲ್ಲ ಭಾರತೀಯ ಜನತಾ ಪಕ್ಷದ ಧುರೀಣರು, ಇನ್ನೊಂದೆಡೆ ಅಶಿಸ್ತಿನ ಪರಮಾವಧಿ, ಅಸಂಘಟಿತ ಮನೋಭಾವದ ಕಾಂಗ್ರೆಸ್ ಪಕ್ಷ ಸೇರಿದಂತೆ ಇತರ ಎದುರಾಳಿಗಳು. ಸ್ವತಃ ಶಿಸ್ತು, ಯೋಜನೆ, ಮುಂದಾಲೋಚನೆ, ಮಹತ್ವಾಕಾಂಕ್ಷೆ ಯಾವುದೂ ಇಲ್ಲದ ರಾಹುಲ್ ಗಾಂಧಿ ಈ ಅಶಿಸ್ತಿನ ಹಿಂಬಾಲಕರನ್ನು ತರಬೇತಿ ನೀಡುವ ಆಲೋಚನೆಯನ್ನೂ ಮಾಡಿರಲಿಕ್ಕಿಲ್ಲ. ಆದ್ದರಿಂದ ಇನ್ನು ಕೆಲವು ದಶಕಗಳ ಕಾಲ ಭಾರತೀಯ ಜನತಾ ಪಕ್ಷವೇ ದೇಶದ ಜನತೆಗೆ ಅನಿವಾರ್ಯ ಎನ್ನುವುದು ಅಸಹಾಯಕತೆಯೂ ಹೌದು.
ಈ ಮಧ್ಯೆ ಪ್ರಾದೇಶಿಕ ಪಕ್ಷಗಳು, ಆಮ್ ಆದ್ಮಿ ಪಾರ್ಟಿ ಎಲ್ಲವೂ ಸ್ವಲ್ಪ ನಿರೀಕ್ಷೆ ಹುಟ್ಟಿಸಿದ್ದು ನಿಜ. ಆದರೆ ಅವೂ ಕೂಡ ಯಾವುದೇ ಶಿಸ್ತು, ಯೋಜನೆ ಇಲ್ಲದೆ, ನಾಯಕರನ್ನು, ನಾಯಕತ್ವವನ್ನು ಬೆಳೆಸದೆ ಬರೀ ಹಗಲುಗನಸು ಕಾಣುವ ಪಕ್ಷಗಳಾಗಿವೆ. ಇದೂ ಸಹ ಮುಂದೆ ಭಾರತೀಯ ಜನತಾ ಪಕ್ಷದ ಸರ್ವಾಧಿಕಾರದ ಮುನ್ಸೂಚನೆಯಾಗಿದೆ.
ಸರ್ವಾಧಿಕಾರವೆಂದು ಯಾಕೆ ಹೇಳುತ್ತಿದ್ದೇನೆಂದರೆ, ಈ ಪಕ್ಷದ ಮುಖ್ಯ ಭೂಮಿಕೆಯಲ್ಲಿರುವವರು ಮೇಲ್ಜಾತಿಯ ಜನ. ಈಗ ಮೋದಿಯವರಲ್ಲಿ ಕಾಣುತ್ತಿರುವ ದೌರ್ಬಲ್ಯಗಳು ಈ ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತನಿಂದ ಹಿಡಿದು ಉಳಿದ ನಾಯಕರಲ್ಲೂ ಇರುವ ಸಾಮಾನ್ಯ ಮನೋಭಾವ. ಇದರಿಂದ ದೇಶಭಕ್ತಿ ಎಂಬುದು ಚುನಾವಣೆಯ ಸರಕಷ್ಟೆ. ಬದಲಾಗಿ ಬರೆದಿಟ್ಟುಕೊಳ್ಳಿ, ಇನ್ನು ಮುಂದೆ ನಾವೆಲ್ಲ ಎಲ್ಲೆಲ್ಲೂ ಸ್ವಜನಪಕ್ಷಪಾತ, ದುರ್ಬಲರ ಮೇಲೆ ಮಿತಿಯಿಲ್ಲದ ದೌರ್ಜನ್ಯ, ಅಧಿಕಾರದ ಆಟಾಟೋಪವನ್ನು ಕಾಣಬಹುದು.
ನೋಟು ಅಮಾನ್ಯೀಕರಣದ ವಿಷಯವನ್ನೇ ತೆಗೆದುಕೊಂಡಾಗ ಈಗಾಗಲೇ ಜನರ ದಿಕ್ಕು ತಪ್ಪಿಸುವ ರೀತಿ ನೋಡಿ ದಂಗಾಗಿದ್ದೇವೆ. ಜನಸಾಮಾನ್ಯರ, ದುರ್ಬಲರ ತುಳಿತ ಆರಂಭವಾಗಿದೆ. ಜಿಎಸ್ ಟಿ, ಕ್ಯಾಶ್ ಲೆಸ್ ಎಕಾನಮಿ ತಂದು ಇಡೀ ದೇಶದ ಆರ್ಥಿಕತೆಯನ್ನು ದೂರದಲ್ಲಿರುವ ಉಪಗ್ರಹಗಳ ನಿಯಂತ್ರಣಕ್ಕೆ ಒಪ್ಪಿಸುತ್ತಿದ್ದೇವೆ. ಒಂದು ದಿನ ಜಿಹಾದಿಗಳು, ಐ ಎಸ್ ಉಗ್ರಗಾಮಿಗಳಂತಹವರು ಒಂದು ಸಣ್ಣ ಹೊಡೆತದಲ್ಲಿ ಇಡೀ ದೇಶದ ಆರ್ಥಿಕತೆಯ ನಿಯಂತ್ರಣ ಪಡೆಯಬಹುದಾಗಿದೆ. ಇವತ್ತಿನ ಸುದ್ದಿಯಂತೆ ಭಾರತದ ಸೈನ್ಯಕ್ಕೆ ಸಂಬಂಧಿಸಿದ ವೆಬ್ ಸೈಟ್ ಹ್ಯಾಕ್ ಆಗಿದ್ದು, ಅದರಲ್ಲಿ ಪ್ರಧಾನಿ ವಿರುದ್ಧ ಕೀಳಾಗಿ ಬರೆಯಲಾಗಿದೆ ಎಂಬುದನ್ನು ಎಷ್ಟು ಗಂಭೀರವಾಗಿ ಪರಿಗಣಿಸಬೇಕು ಎಂಬುದು ಗೊತ್ತಿಲ್ಲ. ಆದಾಗ್ಯೂ ನೋಟ್ ಪ್ರಿಂಟ್ ಮಾಡಲಾಗದ ಅಸಹಾಯಕತೆ ಮುಚ್ಚಿಕೊಳ್ಳಲು ಸಾಮಾನ್ಯ ಜನರನ್ನು ಕ್ಯಾಶ್ ಲೆಸ್ ಗೆ ತಂದು ಹಾಕಿ, ಇಡೀ ದೇಶದ ವ್ಯಾಪಾರವನ್ನು ಒಂದೇ ಚಿಟಿಕೆಯಲ್ಲಿ ನಿಯಂತ್ರಿಸಲು ಹೋಗಲಾಗುತ್ತಿದೆ. ಇದು ಭವಿಷ್ಯದಲ್ಲಿ ಇನ್ನೇನು ಗಂಡಾಂತರ ಸೃಷ್ಟಿಸಲಿದೆಯೋ!!
ಏನಾದರೂ ನಾವೀಗ ಭಾರತೀಯ ಪ್ರಾಮಾಣಿಕ, ಸಹನಾಶೀಲ, ತ್ಯಾಗಿ ಪ್ರಜೆಗಳು. ಆ ಬಿರುದನ್ನು ಉಳಿಸಿಕೊಳ್ಳಲಾದರೂ ಮುಂದಿನ ಚುನಾವಣೆಗಳಲ್ಲಿ ಓಟು ಹಾಕಬೇಕು. ಅದೂ ಅನಿವಾರ್ಯವಾಗಿ ಯಾರಿಗೆ?

ಕಾಮೆಂಟ್‌ಗಳಿಲ್ಲ: