ಗುರುವಾರ, ನವೆಂಬರ್ 20, 2014

ಹೀಗೊಂದು ಭಾವಬಿಂದು

           ಆಗಲೇ 1/3 ಜೀವನ ಕಳೆದುಹೋಯ್ತು. ಹಿಂತಿರುಗಿ ನೋಡಿದರೆ ಸಾವಿರ ಹೆಜ್ಜೆಗಳು. ಬೇಕಿದ್ದವು, ಬೇಕಿಲ್ಲದವು. ಆದರೆ ಹೆಜ್ಜೆಗೆ ಜೊತೆಯಾದವರು? ಅವರಿಗೊಂದು ಕೃತಜ್ಞತೆ ಹೇಳಲೇಬೇಕು. ಈ ಬರಹ ಹೀಗೆ ಹೆಜ್ಜೆಗಳೊಂದಿಗೆ ಹೆಜ್ಜೆಯಾದ ಸಾವಿರ ಸಾವಿರ ಜನರಿಗೆ ಸಲ್ಲುತ್ತದೆ.
            ಮೊದಲಿಗೆ ನನ್ನನ್ನು  ಹುಟ್ಟಿಸಿದ ಅಪ್ಪನಿಗೆ, ಹೊತ್ತು, ಹೆತ್ತ ಅಮ್ಮನಿಗೆ, ಬೆಳೆಸಿದ ಆಯಿಗೆ, ಬಹಳ ಶಿಸ್ತಿನಿಂದ ಬೆಳೆಸಿದ ಅಮ್ಮ ಹಾಗೂ ಅಪ್ಪ ಸೇರಿದಂತೆ ಎಲ್ಲ ದೊಡ್ಡವರಿಗೆ, ನನ್ನ ಬೇಕು ಬೇಡಗಳ ನಿಗಾ ಇಟ್ಟ ನನ್ನ ಅಜ್ಜ ಹಾಗೂ ಮಾವಂದಿರಿಗೆ ನನ್ನ ಅನಂತ ಪ್ರಣಾಮಗಳು. ನನ್ನ ಪ್ರೇಮದ ಗೆಳೆಯ, ಪ್ರೀತಿಯ ತಂಗಿ, ತಮ್ಮ , ಮನೆಯವರು ಮತ್ತು ಮೈದುನ ಇವರೆಲ್ಲ  ನನ್ನ ಬದುಕಿಗೆ ಬಂದು ಜೀವನಕ್ಕೊಂದು ಅರ್ಥ ಕೊಟ್ಟಿದ್ದಾರೆ.
            ಬಾಲ್ಯದಲ್ಲಿಯೇ ಸತ್ಯ ಹಾಗೂ ಪ್ರಾಮಾಣಿಕತೆಯ ಬಗ್ಗೆ, ನನ್ನಲ್ಲಿ ಅದನ್ನು ಗುರುತಿಸಿ ಗಾಢವಾಗಿ ಬೇರೂರಲು ಕಾರಣರಾದ ವಿ.ಡಿ.ನಾಯಕ್ ಮಾಸ್ತರರಿಗೆ, ಅಂಗನವಾಡಿಯ ಗೌರಕ್ಕೋರಿಂದ ಹಿಡಿದು ಹೈಸ್ಕೂಲಿನ ಆರ್.ಜಿ.ಹೆಗಡೆಯವರವರೆಗೆ, ಕಾಲೇಜಿನ ನಾಗರಾಜ್ ಸರ್, ರಾಮಲಿಂಗಂ ಸರ್ ವರೆಗೆ ಎಲ್ಲ ನನ್ನ ಗುರುವೃಂದಕ್ಕೆ ಹೃತ್ಪೂರ್ವಕ ನಮನಗಳು.
             ಕೆಲಸಕ್ಕೆ ಸೇರಿದಾಗ ಕಾನ್ಫಿಡೆನ್ಸ್ ತುಂಬಿದ ಪರ್ಸನಲ್ ನೆಟ್ ವರ್ಕ್ ನ ಪ್ರಭು ಸರ್, ಫಾರ್ಚೂನ್ ನ ಸಂಜಯ್ ಮತ್ತು ಅವರ ಪತ್ನಿ, ಸೌತ್ ಇಂಡಿಯಾ ಟೆಲಿವಿಷನ್ ನೆಟ್ ವರ್ಕ್ ನ ಶಶಿಧರ್ ಭಟ್ ಸರ್, ಭೂಮಿಕಾ ಸಂಸ್ಥೆಯ ಟಿ.ಎನ್.ಸೀತಾರಾಂ ಸರ್,  ಕಸ್ತೂರಿಯ ಕೆಎಂ ಮಂಜುನಾಥ್ ಮತ್ತು ರಾಜಶೇಖರ್ ಅಬ್ಬೂರ್ ಸರ್, ಜನಮಾಧ್ಯಮ ಪತ್ರಿಕೆಯ ಸುಬ್ರಾಯ ಬಕ್ಕಳ ಸರ್ , ಆಂದೋಲನ ಪತ್ರಿಕೆಯ ರಾಜಶೇಖರ್ ಕೋಟಿ ಸರ್ , ರಾಜಹನ್ಸ್ ಪಬ್ಲಿಕೇಷನ್ಸ್ ನ ಬಾಲಚಂದ್ರ ಸರ್ ಮತ್ತು ಟಿ.ಟಿ. ಕಸ್ತೂರಿ ಸರ್ ಮತ್ತು ಮಾನವ ಹಕ್ಕು ಆಯೋಗದ ಕಾರ್ಯದರ್ಶಿ ಮಧು ಶರ್ಮಾ ಮೇಡಂ, ಹೀಗೆ ಪ್ರತಿ ಹಂತದಲ್ಲಿ ನನ್ನ ವೃತ್ತಿಪರ ಬದುಕಿಗೆ ಯಾವ ಶಿಫಾರಸ್ಸು, ವಶೀಲಿಯ ಹಂಗಿಲ್ಲದೆ ಕೆಲಸ ಕೊಟ್ಟು, ಬೆಳೆಸಿದ ಇವರೆಲ್ಲರಿಗೆ ನನ್ನ ಅನಂತಾನಂತ ಕೃತಜ್ಞತೆಗಳು.
           ಇನ್ನು ಬೆಂಗಳೂರಿಗೆ ಕಾಲಿಟ್ಟ ಕೂಡಲೇ ಮಡಿಲಿಗೆ ಹಾಕಿಕೊಂಡು ಜಗತ್ತು ತೋರಿಸಿದ ನನ್ನ ದೊಡ್ಡಮ್ಮ ಎಂತಲೇ ಪರಿಗಣಿಸುವ ನನ್ನ ಜಯತ್ತೆ, ನನಗೆ ಬೇಕಾದಾಗೆಲ್ಲ ಬಿಸಿಬಿಸಿ ದೋಸೆ ಮಾಡಿ ಬಡಿಸುತ್ತಿದ್ದ, ಸದಾ ನನ್ನ ಕಷ್ಟಕ್ಕೆ ಆಗುತ್ತಿದ್ದ ಗಂಗತ್ತೆ, ಕೈಯಲ್ಲಿ ಹಿಡಿದುಕೊಳ್ಳಲಾಗದ ಕೂದಲನ್ನು ಕಾಲ ಕಾಲಕ್ಕೆ ಬಾಚಿ, ಹೇನು ತೆಗೆದು ಒಪ್ಪ ಓರಣ ಮಾಡುತ್ತಿದ್ದ, ನನಗೆ ಚೆಂದಗೆ ರಂಗೋಲಿ ಹಾಕುವುದನ್ನು ಹೇಳಿಕೊಟ್ಟ ದೊಡ್ಡತ್ತೆ, ಓದಿನ ಹಸಿವೆಗೆ ಉಣಬಡಿಸಿದ ಪಕ್ಕದಮನೆಯ ಶಾರದಜ್ಜಿ, ಕೃಷ್ಣ ಹೆಗಡೆ ಮನೆ, ಶಿರಸಿಯ ದತ್ತಾತ್ರೇಯ ಬುಕ್ ಸ್ಟಾಲ್ ಇವರೆಲ್ಲರ ಋಣ ದೊಡ್ಡದು.
         ಹೈಸ್ಕೂಲಿಗೆ ಹೋಗುವಾಗ ಪ್ರತಿನಿತ್ಯ ನನಗೆ ಹೂವು ತಂದುಕೊಟ್ಟ ನನ್ನ ಪ್ರೀತಿಯ ಭಾರತಕ್ಕ ಮತ್ತು ಸಹಪಾಠಿ ವಿನುತ, ನನ್ನನ್ನು ಪ್ರೀತಿಯಿಂದ ಸದಾ ಕಾಯುತ್ತಿದ್ದ ನನ್ನ ರಾಜು ನಾಯಿ, ಏನೂ ಅಲ್ಲದಿದ್ದರೂ ಓದುವ ಪುಟ್ಟ ತಂಗಿಯಂತೆ ಕಂಡು ಮಧ್ಯಾಹ್ನದ ಊಟದ ದುಡ್ಡಿಗೆ ಸಂಜೆಗೂ ಬಾಕ್ಸ್ ತುಂಬಿ ಕೊಡುತ್ತಿದ್ದ ಎಸ್.ಜೆ.ಪಿ ಕ್ಯಾಂಟೀನಿನ ಅಣ್ಣಂದಿರು, ಕಾಲೇಜು ಮುಗಿದ ಮೇಲೆ ಕೆಲ ದಿನ ನನ್ನನ್ನು ಇಟ್ಟುಕೊಂಡು ಬೆಂಗಳೂರಿನಲ್ಲೊಂದು ನೆಲೆಕೊಟ್ಟ ಗೀತಕ್ಕ, ಕೇಶವ ದೊಡ್ಡಪ್ಪ, ವಿದ್ಯಕ್ಕ, ಉಮೇಶಣ್ಣ, ನನಗೆ ಮನೆ/ವಸತಿ ಕೊಟ್ಟು ವಿಶ್ವಾಸದಿಂದ ಕಂಡ ಹಾಸ್ಟೆಲ್ ನ ಸರೋಜ ಆಂಟಿ, ಇಂದಕ್ಕ ಮತ್ತು ಮನೆ ಕೊಟ್ಟ ಓನರ್ ಗಳಿಗೆ ನನ್ನ ಯಾವತ್ತೂ ನಮಸ್ಕಾರಗಳು. ಇವೆಲ್ಲ ಕೇವಲ ಬಾಯಿಮಾತಾಗದೆ ಹೃದಯದಿಂದ ಹಾರೈಸುವ ನುಡಿಮುತ್ತುಗಳು. ಮಾತಿದೆಯಲ್ಲ, `ಉಂಡವ ಹರಸುವುದು ಬೇಡ, ನೊಂದವ ಬೈಯುವುದು ಬೇಡ'. ಹಾಗೆ ನನ್ನ ಕಳೆದ ಮೂವತ್ತು ವರ್ಷಗಳಿಂದ ನೋಡುತ್ತಿರುವ ಎಲ್ಲ ಸಹೃದಯ ಬಂಧುಗಳಿಗೂ ನನ್ನ ಅನಂತ ಶುಭಹಾರೈಕೆಗಳು.
         ಅಧ್ಯಾತ್ಮದ ಹಂಬಲಕ್ಕೆ ಮಂತ್ರದೀಕ್ಷೆಯ ದಾರಿತೋರಿಸಿ ಹರಸಿ ಹಾರೈಸಿದ ಶ್ರೀರಾಮಕೃಷ್ಣ ವಿದ್ಯಾರ್ಥಿ ಮಂದಿರಂನ
ಶ್ರೀಸ್ವಾತ್ಮಾರಮಾನಂದ ಸ್ವಾಮೀಜಿ, ನನ್ನ ಗುರುಗಳಾದ ಶ್ರೀಸ್ಮರಣಾನಂದ ಸ್ವಾಮೀಜಿ ಮತ್ತು ನನ್ನನ್ನು ಸತ್ಯದೆಡೆಗೆ ಪ್ರತಿನಿತ್ಯ ಕರೆದೊಯ್ಯುತ್ತಿರುವ ಗುರುವಿನ ಗುರು ಶ್ರೀ ರಾಮಕೃಷ್ಣರಿಗೆ ನನ್ನ ಚಿರಸಾಷ್ಟಾಂಗ ಪ್ರಣಾಮಗಳು. ಬಾರಿ ಬಾರಿಯ ಭವದ ಹೊಡೆತದಿಂದ ಪಾರು ಮಾಡುವ ತಾಯಿ ಕಾಳಿ ಮತ್ತು ತಂದೆ ಮಲ್ಲಿಕಾರ್ಜುನನಿಗೆ ಅಣುವೊಂದು ಸಲ್ಲಿಸುವ ಅನಂತಾನಂತ ಕೃತಜ್ಞತೆಗಳು.