ಗುರುವಾರ, ಅಕ್ಟೋಬರ್ 28, 2021

ಮತಾಂತರ ತಪ್ಪಿಸಲು ಏನು ಮಾಡಬೇಕು?

 ಮತಾಂತರ ತಪ್ಪಿಸಲು ಏನು ಮಾಡಬೇಕು?


    ದೇಶದಲ್ಲಿ ಬಿಜೆಪಿ ಸರ್ಕಾರ ಬಂದ ಮೇಲೆ ಹಿಂದೂ ಧರ್ಮದ ಉಳಿವಿನ ಹೋರಾಟ ಮುಂಚೂಣಿಗೆ ಬಂದಿದೆ. ಆಡಳಿತಾರೂಢ ಬಿಜೆಪಿ ಮತ್ತು ಸಂಘ ಪರಿವಾರದಂತಹ ಸಂಘಟನೆಗಳು ಈ ಕುರಿತು ತಮ್ಮದೇ ಕಾರ್ಯತಂತ್ರ ರೂಪಿಸಿವೆ. ಪ್ರತ್ಯೇಕ ಐಟಿ ಸೆಲ್ ಮೂಲಕ ಪ್ರತಿನಿತ್ಯ ಮುಸ್ಲಿಂ ಮತ್ತು ಕ್ರಿಶ್ಚಿಯನ್ ಧರ್ಮದ ಒಳಹುಳುಕುಗಳನ್ನು ಎತ್ತಿತೋರಿಸುವ ಪೋಸ್ಟಗಳು, ಆ ಧರ್ಮದವರು ಎಸಗಿದ್ದಾರೆ ಎನ್ನುವ ಅಪರಾಧಗಳ ವಿಡಿಯೊಗಳು, ಮಾಹಿತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಎಗ್ಗಿಲ್ಲದೆ ಹರಿದಾಡುತ್ತಿವೆ. ಇವುಗಳಲ್ಲಿ ಶೇ.90ಕ್ಕಿಂತಲೂ ಹೆಚ್ಚು ಸುಳ್ಳು ಮಾಹಿತಿ ಅಥವಾ ತಿರುಚಲಾದ ಮಾಹಿತಿ ಎಂದು ಹಲವು ಫ್ಯಾಕ್ಟ ಚೆಕ್ಫ಼್ ಸಂಸ್ಥೆಗಳು ಸಾಬೀತು ಮಾಡಿವೆ. ಇತ್ತೀಚೆಗೆ ಫೇಸ್ಬುಕ್ ಸಹ ಇದನ್ನು ದೃಢಪಡಿಸಿದೆ. ಆದ್ದರಿಂದ ಮತಾಂತರದ ಬಗ್ಗೆ ಸೂಕ್ಷ್ಮ ಮತ್ತು ಸ್ಥೂಲ ಅವಲೋಕನ ಇವತ್ತಿನ ಅವಶ್ಯಕತೆಯಾಗಿದೆ.

    ವಿಶ್ವದ ಸನಾತನ ಧರ್ಮ ಎಂದು ಹೇಳಲಾಗುವ ಹಿಂದೂ ಧರ್ಮ ಒಂದು ಧರ್ಮವೇ ಅಲ್ಲ. ಅದೊಂದು ಬದುಕುವ ವಿಧಾನ ಎಂದೂ ಹೇಳಲಾಗುತ್ತದೆ. ಸರ್ವಧರ್ಮ ಸಮ್ಮೇಳನದಲ್ಲಿ ಸ್ವಾಮಿ ವಿವೇಕಾನಂದರು ಹಿಂದೂ ಧರ್ಮದ ಮಹತ್ವವನ್ನು ಹೇಳುತ್ತಾ ಒಳಗೊಳ್ಳುವಿಕೆ ಮತ್ತು ಜೀವನ್ಮುಖಿ ಬದುಕುವ ವಿಧಾನವೇ ಅದರ ಮೂಲ ತಿರುಳು ಎಂದು ಪ್ರತಿಪಾದಿಸುತ್ತಾರೆ. ಹಾಗೆ ಅವರೊಮ್ಮೆ ಹೇಳುತ್ತಾರೆ, ಹಸಿದವನ ಮುಂದೆ ಭಗವದ್ಗೀತೆ ಹೇಳಬಾರದು ಎಂದು. ಈ ಎರಡು ವಾಕ್ಯಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಸಾಕು. ಹಿಂದೂಧರ್ಮವನ್ನು ಯಾರು ಯಾರಿಂದ ಉಳಿಸಬೇಕು ಎನ್ನುವುದು ಅರಿವಾಗುತ್ತದೆ.

    ಕೊವಿಡ್ ನಂತರದ ಕಾಲದಲ್ಲಿ ಹಸಿವಿನ ಸೂಚ್ಯಂಕದಲ್ಲಿ ಭಾರತದ ಸ್ಥಾನ ಕುಸಿದಿದೆ. ಭಾರತ ಅಭಿವೃದ್ಧಿ ಶೀಲ ರಾಷ್ಟ್ರಗಳ ಪಟ್ಟಿಯಿಂದ ಮುಂದಕ್ಕೆ ಹೋಗುತ್ತಿದೆ ಎನ್ನುವಷ್ಟರಲ್ಲಿ ಮತ್ತೆ ಮೂವತ್ತು ವರ್ಷಗಳಷ್ಟು ಹಿಂದೆ ಬಿದ್ದಿದೆ. ಈ ಸಂದರ್ಭವನ್ನು ಉಪಯೋಗಿಸಿಕೊಂಡು ಕೆಲವು ಅನ್ಯಧರ್ಮದ ಅಡ್ಡಕಸುಬಿಗಳು ಮತಾಂತರ ಕಾರ್ಯಕ್ಕೆ ಇಳಿದಿದ್ದರೆ ಆಶ್ಚರ್ಯವಿಲ್ಲ. ಇವರನ್ನು ಅಡ್ಡಕಸುಬಿಗಳು ಎಂದು ಯಾಕೆ ಹೇಳುತ್ತೇನೆಂದರೆ ಮತಾಂತರ ತಡೆಯುತ್ತೇವೆ ಎಂದು ಇಲ್ಲಸಲ್ಲದ ಪೋಸ್ಟ್ ಹಾಕಿ ಜನರ ದಾರಿ ತಪ್ಪಿಸುವವರು ಮತ್ತು ಸಂದರ್ಭ ಉಪಯೋಗಿಸಿಕೊಂಡು ಮತಾಂತರ ಮಾಡುತ್ತಿರುವವರು ಇಬ್ಬರಿಗೂ ಅವರವರ ಧರ್ಮಗಳ ಸಾರ ಗೊತ್ತಿಲ್ಲ. ನಿಜವಾದ ಧಾರ್ಮಿಕರು ಯಾವತ್ತೂ ಈ ಎರಡೂ ಕೆಲಸ ಮಾಡಲಾರರು. ನಿಜ ಧಾರ್ಮಿಕರು ಅವರವರ ಧರ್ಮ, ನಂಬಿಕೆಗಳನ್ನು ಅವರವರ ಆಯ್ಕೆಗೇ ಬಿಡುತ್ತಾರೆ. ಕೈಲಾಗದ ಅಸಹಾಯಕರ ಅಸಹಾಯಕತೆಯನ್ನು ಬಳಸಿಕೊಂಡು ಮತಾಂತರ ಮಾಡುವುದಿಲ್ಲ. ಜೊತೆಗೆ ಯಾರು ಮತಾಂತರ ಮಾಡುತ್ತಿದ್ದಾರೆ, ಇಲ್ಲ ಎಂಬುದು ಸರಿಯಾಗಿ ತಿಳಿದುಕೊಳ್ಳದೆ ಮುಗ್ಧಮನಸ್ಸುಗಳಲ್ಲಿ ಅನ್ಯರ ಬಗ್ಗೆ ಅಸಹ್ಯ, ಅಸಹನೆ ತುಂಬುವುದಿಲ್ಲ. ಬದಲಿಗೆ ಬೇರೆವರ ಕಷ್ಟಗಳಿಗೆ ವಿನಾಕಾರಣ, ನಿರೀಕ್ಷೆಗಳಿಲ್ಲದೆ ಸಹಾಯಕ್ಕೆ ನಿಲ್ಲುತ್ತಾರೆ. 

    ಹಾಗೊಂದುವೇಳೆ ಮತಾಂತರ ನಡೆಯುತ್ತಿದ್ದರೆ ಜನ ಯಾಕಾಗಿ ಮತಾಂತರಗೊಳ್ಳುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು. ಎರಡು ಕಾರಣ ಸಾಮಾನ್ಯ. ಒಂದು ತಾವು ಇರುವ ಧರ್ಮದ ಬಗ್ಗೆ ಅಸಮಾಧಾನ ಇರಬೇಕು. ಅದರ ರೀತಿ, ನೀತಿಗಳು ಆ ವ್ಯಕ್ತಿಗೆ ಅರಿವಿಲ್ಲದೇ ಇರಬಹುದು. ೨. ಯಾವುದಾದರೂ ಆರ್ಥಿಕ, ಸಾಮಾಜಿಕ ಒತ್ತಡ ಇರಬಹುದು. 

   ಇಲ್ಲಿ ಮೊದಲ ಕಾರಣವನ್ನೇ ತೆಗೆದುಕೊಂಡಾಗ ಹಿಂದೂ ಧರ್ಮದ ಆಚರಣೆಗಳು, ಬದುಕಿನ ವಿಧಾನ , ಇವೆಲ್ಲ ಎಷ್ಟು ಜನರಿಗೆ ಗೊತ್ತಿವೆ. ಸುಮ್ಮನೆ ಆಡಂಬರಕ್ಕೆ ಆಚರಣೆಗಳಾದಾಗ ಅವುಗಳ ಒಳತಿರುಳು ಟೊಳ್ಳಾಗುತ್ತವೆ. ನಗರೀಕರಣ ಹೆಚ್ಚಾದಂತೆಲ್ಲ ಈ ಡಾಂಭಿಕತೆ ಇನ್ನಷ್ಟು ಡಾಳಾಗುತ್ತದೆ. ಇದು ಸಹಜವಾಗಿಯೇ ಪಾಶ್ಚಿಮಾತ್ಯ ಸಂಸ್ಕೃತಿಯ ಶಿಕ್ಷಣ ಪಡೆದ ಯುವಕರಲ್ಲಿ ಅಸಮಾಧಾನ ಮೂಡಿಸುತ್ತದೆ. ಇಲ್ಲಿಯ ಆಚಾರ, ವಿಚಾರಗಳಲ್ಲಿ ಜೀವನ್ಮುಖಿ ಕ್ಷಣಗಳು ಮರೆಯಾಗತೊಡಗಿದಾಗ ಜನರು ಅನ್ಯಧರ್ಮಗಳತ್ತ ದೃಷ್ಟಿ ನೆಡುತ್ತಾರೆ. ಹಾಗೆಯೇ ಬದುಕಿಗೆ ಅನ್ನವೇ ಮುಖ್ಯವಾದಾಗ ಅದು ಯಾರು ಯಾವ ಷರತ್ತಿನ ಮೇಲೆ ಕೊಟ್ಟರು ಎನ್ನುವುದು ಮುಖ್ಯವಾಗುವುದಿಲ್ಲ. ಹಸಿವು ಇಂಗಿದ್ದಷ್ಟೇ ಸತ್ಯ. ಇನ್ನು ಯಾವ ಧರ್ಮವಾದರೇನು, ದೇವರಾದರೇನು? ಹಾಗೆ ನೋಡಿದರೆ ಈ ಹಂತದಲ್ಲಿರುವವರಿಗೇ ದೇವರು ಮತ್ತು ಧರ್ಮ ಹೆಚ್ಚು ಗೊತ್ತು ಎನಿಸುತ್ತದೆ. 

   ಯಾರಿಗೆ ದೇವರು ಗೊತ್ತೊ, ತಮ್ಮ ಧರ್ಮ ಗೊತ್ತೊ ಅವನಿಗೆ ಎಲ್ಲಾ ಧರ್ಮಗಳ ಸಾರ ಒಂದೇ, ಎಲ್ಲಾ ದೇವರೂ ಒಂದೇ ಎಂದು ಗೊತ್ತಿರುತ್ತದೆ. ಅದಕ್ಕಾಗಿಯೇ ಶ್ರೀರಾಮಕೃಷ್ಣ ಪರಮಹಂಸರು ಕಾಳಿ, ಸೀತೆ, ರಾಮ, ರಾಮಲಾಲ ಇವರ ಜೊತೆಗೆ ಪೈಗಂಬರ್, ಏಸುಕ್ರಿಸ್ತರನ್ನೂ ಸಾಕ್ಷಾತ್ಕರಿಸಿಕೊಂಡಿದ್ದು. ದೇವರು ಅವರಿಗೆ ಬೇರೆ, ನಮಗೆ ಬೇರೆ ಇರುತ್ತಾನೊ ಅಥವಾ ಒಬ್ಬನೇಯೊ ಎಂದು ಪರೀಕ್ಷಿಸಿ ದೃಷ್ಟಾಂತ ಕೊಟ್ಟಿದ್ದು. 

  ಆದ್ದರಿಂದ ಮತಾಂತರ ತಡೆಯುವ ಹುಸಿ ಕೆಲಸಗಳನ್ನು ಬಿಟ್ಟು ಜನರು ಸ್ವಧರ್ಮ ಪರಿಪಾಲನೆ ಮಾಡಿದರೆ ಸಾಕು ಅರ್ಧ ಸಮಸ್ಯೆ ಬಗೆಹರಿಯುತ್ತದೆ. ಇನ್ನು ಕೈಯಲ್ಲೇ ಅಧಿಕಾರ, ಜನಬೆಂಬಲ ಇಟ್ಟುಕೊಂಡಿರುವಾಗ ಜನರ ಹಸಿವಿನ ಸಮಸ್ಯೆಗೆ ಪರಿಹಾರ ಕೊಡುವ ಮನಸ್ಸು ಮಾಡಬೇಕು. ಆಗ ಈ ಮತಾಂತರ ಮತ್ತು ಅದನ್ನು ತಡೆಯುವ ಪ್ರಹಸನಗಳನ್ನು ತಡೆಯಬಹುದು.



ಶನಿವಾರ, ಜುಲೈ 17, 2021

She came up with a new lesson

 ಅವಳು ಬಂದಳು ಹೊಸ ಪಾಠದೊಂದಿಗೆ 


           ಅವಳು ಅದಾಗ್ಲೇ ಬದುಕಿಗೆ ಬರುವವಳಿದ್ದಳು. ನನಗೆ ಆಗ್ಲೇ ಅನಿಸಿತ್ತು. ಆದ್ರೆ ಸಮಯ ಬಂದಿರಲಿಲ್ಲ. ಅಕ್ಕಪಕ್ಕದ ಮನೆಗೆ ಬರುತ್ತಿದ್ದಳು. ನಾನು ಮಗುವಿನೆತ್ತಿಕೊಂಡು ಮನೆಗೆ ಬಂದಾಗ ಹೆರಿಗೆಯಾಗಿ ಒಂದೂವರೆ ತಿಂಗಳು. ತವರುಮನೆ ಬೆಂಗಳೂರಿನಲ್ಲಿ ಚಿಕ್ಕದಾಗಿತ್ತು. ತಂಗಿಯೂ ಆಗಷ್ಟೇ ಮಗುವಿಗೆ ಜನ್ಮ ನೀಡಿದ್ದಳು. ನಾನು ಇನ್ನು ತವರುಮನೆಯಲ್ಲೇ ಇದ್ದಾರೆ ಆ ಚಿಕ್ಕ ಕೊನೆಯಲ್ಲಿ ಇಬ್ಬರು ಬಾಣಂತಿಯರು, ಇಬ್ಬರು ಮಕ್ಕಳು ಅಮ್ಮ ಎಲ್ಲ ಮಲಗುವುದು ದುಃಸಾಧ್ಯ ಎನಿಸಿತ್ತು. ಜೊತೆಗೆ ಇವ್ನು ಸರಿಯಾಗಿ ಊಟವಿಲ್ಲದೆ, ಪ್ರತಿದಿನ ನನ್ನ ಭೇಟಿಯಿಲ್ಲದೆ ಸೊರಗಿಹೋಗಿದ್ದ. ಮನೆಯಲ್ಲಿ ಗಲಾಟೆಗೋ ಏನೋ ಮಗುವೂ ಸರಿಯಾಗಿ ನಿದ್ದೆ ಮಾಡುತ್ತಿರಲಿಲ್ಲ. ನನಗೆ ದುಃಖವಾಗಿತ್ತು. ಅದಾಗಲೇ ವಯಸ್ಸು ಮೀರಿದ್ದರಿಂದ ಈ ಜನ್ಮದಲ್ಲಿ ಮಕ್ಕಳ ಆಸೆಯನ್ನೇ ಬಿಟ್ಟಿದ್ದೆ. ಆದ್ರೆ ಎಲ್ಲೋ ಒಂದೆಡೆ ಮನಸ್ಸು ಹೇಳುತ್ತಿತ್ತು. ನನಗೂ ಮಗುವಾಗುತ್ತದೆ ಎಂದು. ಹಾಗಾಗಿ ಪ್ರತಿದಿನ ಅಶ್ವತ್ಥ ಪ್ರದಕ್ಷಿಣೆ, ಆಂಜನೇಯನ ಪ್ರದಕ್ಷಿಣೆ ಮಾಡುತ್ತಿದ್ದೆ. ಮನಸ್ಸನ್ನು ಸದಾ ಶಾಂತವಾಗಿಟ್ಟುಕೊಳ್ಳುತ್ತಿದ್ದೆ. ಯಾವತ್ತೋ ಒಂದು ದಿನ ಮಗುವಾಗುತ್ತದೆ ಎಂದು ಮನಸ್ಸು ಕೂಗಿ ಕೂಗಿ ಹೇಳುತ್ತಿತ್ತು. 

           ಹಾಗೆಯೆ ಮಗುವಾಗಿ ಮನೆಗೆ ಬರಬೇಕು ಎಂದು ನಿರ್ಧಾರ ಮಾಡಿದೆ. ಮನೆ ಬಹಳ ಗಲೀಜಾಗಿತ್ತು. ಒಂದೂವರೆ ತಿಂಗಳ ಬಾಣಂತಿ ನಾನು ಮಗುವನ್ನು ಮನೆಯಲ್ಲಿ ಬಿಟ್ಟು ಆಟೋ ಹಿಡಿದು ಮನೆಗೆ ಬಂದೆ. ಅಲ್ಲಿ ಅವಳು ಪಕ್ಕದ ಮನೆಗೆ ತಾಯಿಯೊಂದಿಗೆ ಕೆಲ್ಸಕ್ಕೆ ಬಂದಿದ್ದಳು. ಅವಳ ಹತ್ತಿರ ಮನೆ ಸ್ವಚ್ಛ ಮಾಡಿಸಿಕೊಂಡೆ. ಒಂದೆರೆಡು ದಿನಗಳಲ್ಲಿ ನಾನು ಆಯಿಯೊಂದಿಗೆ ಮನೆಗೆ ಬಂದೆ. ಬಂದವಳೇ ಮನೆಯಲ್ಲಿ ಅಡುಗೆಗೆ ನಿಂತೆ. ಆಯಿ ಮಗುವನ್ನು ಸ್ನಾನ ಮಾಡಿಸಲು, ಅಡುಗೆಗೆ ಸಹಾಯ ಮಾಡುತ್ತಿದ್ದಳು. ಅವಳನ್ನು ಮನೆಕೆಲಸಕ್ಕೆ ಬರಲು ಹೇಳಿದೆ. ಹಾಗೆ ದಿನ ಸಾಗುತ್ತಿತ್ತು. ನಾಲ್ಕು ದಿನ ಕಳೆಯುವಷ್ಟರಲ್ಲಿ ತಂಗಿ ತವರಿಗೆ ಬಂದಿದ್ದಳು. ಅಲ್ಲಿ ಅವಳಿಗೆ ಯಾಕೋ ಉಸಿರುಗಟ್ಟಿಸಿದಂತಿತ್ತು. ಅಮ್ಮ, ತಂಗಿ ಇಬ್ಬರೂ ತಮ್ಮ ದುಃಖ ಹೇಳಿಕೊಂಡರು. ನಾನು ಸರಿ ನನಗೂ ಒಬ್ಬಳೇ ಇಲ್ಲಿ ಬೇಸರ. ಜೊತೆಗೆ ನನಗೂ ಸಹಾಯವಾಗುತ್ತದೆ. ಹೇಗೋ ನೋಡೋಣ , ಬನ್ನಿ ಎಂದೆ. ಅವರೂ ಬಂದರು. ಈಗ ಮನೆಯಲ್ಲಿ ಮಕ್ಕಳ ಕಲರವ. ಆದರೆ ನನಗೆ ನಿದ್ದೆ ಮರೀಚಿಕೆಯಾಗಿತ್ತು. ರಾತ್ರಿ ಎಷ್ಟು ಹೊತ್ತಾದರೂ ನಿದ್ದೆ ಬರುತ್ತಿರಲಿಲ್ಲ. ಮಗುವಿಗೆ ಡಯಾಪರ್ ಹಾಕಬೇಡಿ ಎಂದಿದ್ದರು ವೈದ್ಯರು. ನಾನೂ ಹೌದೆಂದು ಪ್ರಯತ್ನ ಮಾಡಿದೆ. ಅದರ ಜೊತೆಗೆ ಮನೆಯ ಖರ್ಚು ಜಾಸ್ತಿಯಾಗುತ್ತಿತ್ತಲ್ಲ. ಅದನ್ನು ಉಳಿಸಿದಹಾಗೆಯೂ  ಆಯಿತೆಂದುಕೊಂಡೆ. ಆದ್ರೆ ರಾತ್ರಿ ಮಗು ಪದೇ ಪದೇ ಉಚ್ಛೆ ಹೊಯ್ದುಕೊಂಡು ಇಬ್ಬರಿಗೂ ನಿದ್ದೆ ಇಲ್ಲದಾಯಿತು. ಸರಿ ಎಂದು ರಾತ್ರಿ ಮಾತ್ರ ಡಯಾಪರ್ ಹಾಕತೊಡಗಿದೆ. 

            ಮಕ್ಕಳ ಉಚ್ಛೆಬಟ್ಟೆ, ಬಾತ್ರೂಮ್ ಎಲ್ಲ ಅಮ್ಮ ತೊಳೆಯುತ್ತಿದ್ದಳು. ಆಡುಗೆ ನಾನು ಮಾಡುತ್ತಿದ್ದೆ. ಅಷ್ಟಕ್ಕೇ ಬಹಳ ಸುಸ್ತಾಗುತ್ತಿತ್ತು. ಮಧ್ಯಾಹ್ನ ಮಲಗೋಣವೆಂದರೆ ಮಗುವನ್ನು ನೋಡಿಕೊಳ್ಳಲು ಯಾರೂ ಇರಲಿಲ್ಲ. ತಂಗಿಯ ಪುಟ್ಟಮಗು ರಾತ್ರಿಯೆಲ್ಲಾ ಏಳುತ್ತಿದ್ದರಿಂದ ಅದಕ್ಕೆ ಹಾಲು ಕುಡಿಸಿ ಮಲಗಿಸಲು ಅವರೆಲ್ಲ ಎದ್ದಿರುತ್ತಿದ್ದರು. ಹಾಗಾಗಿ ಅವರು ಮಧ್ಯಾಹ್ನ ವಿಶ್ರಾಮ್ತಿ ತೆಗೆದುಕೊಳ್ಳುವುದು ಅನಿವಾರ್ಯವಾಗಿತ್ತು. ನಾನು ಎಂದಿನಂತೆ ಸುಸ್ತಾಗಿ ಮಗುವಿಗೆ ಹಾಲು ಕುಡಿಸುವುದಕ್ಕೂ ಬಹಳ ಕಷ್ಟಪಡುತ್ತಿದ್ದೆ. ಯಾರಿಗೂ ಹೇಳಿಕೊಳ್ಳಲಿಲ್ಲ. ನನಗೆ ಮೊದಲಿನಿಂದಲೂ ಹಾಗೆಯೇ . ನನ್ನ ಜೊತೆಗೆ ಬದುಕುವವರು ನನ್ನ ಕಷ್ಟಗಳನ್ನೂ ಹೇಳದೆ ಅರ್ಥ ಮಾಡಿಕೊಳ್ಳಬೇಕೆಂದು ಬಯಸುತ್ತೇನೆ. ಅದು ಸಾಧ್ಯವೇ ಇಲ್ಲ ಎಂಬುದು ಈಗ ಅರ್ಥವಾಗಿದೆ. 



ಮುಂದುವರಿಯುವುದು