ಶನಿವಾರ, ಫೆಬ್ರವರಿ 21, 2015

ನಿಜವಾದ ಪತ್ರಕರ್ತರು ಕಾಣೆಯಾಗಿದ್ದಾರೆಯೆ?

ಹೀಗೊಂದು ಅನುಮಾನ ಇತ್ತೀಚೆಗೆ ನನ್ನನ್ನು ಕಾಡುತ್ತಿದೆ. ಕಾರಣ ಇಷ್ಟೆ. ಕಳೆದ ವಾರ ಹೀಗೊಂದು ಮಠದಲ್ಲಿದ್ದೆ. ಅದು ಬೇರೆ ಕೋಮಿನ ಮಠ. ಆದರೂ ಅಲ್ಲಿಯೂ ಹವ್ಯಕ ಸಮುದಾಯದ ಸನ್ಯಾಸಿಗಳಿದ್ದಾರೆ. ಅವರು ಹೇಳಿದರು, ಪಾಪ, ನಮ್ಮ ಸ್ವಾಮಿಗಳಿಗೆ ಹೀಗಾಗಬಾರದಿತ್ತು ಎಂದು. ನನಗೆ ಉರಿದುಹೋಯಿತು. ಅವರಿಗೆ ವಿವರಿಸಿದ್ದನ್ನು ನಾನಿಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಕರ್ನಾಟಕದ ಇತ್ತೀಚಿನ ಇತಿಹಾಸದಲ್ಲಿ ಸೇರಿರುವ ಪ್ರಮುಖ ಆರೋಪಗಳು ಎರಡು. ಒಂದು ಬಿಡದಿಯ ನಿತ್ಯಾನಂದ ಸ್ವಾಮಿ ಪ್ರಕರಣ ಹಾಗೂ ಇನ್ನೊಂದು ರಾಘವೇಶ್ವರ ಭಾರತಿ ಪ್ರಕರಣ. ಈ ಎರಡೂ ಪ್ರಕರಣಗಳಲ್ಲಿ ಪ್ರಮುಖ ಮಾಧ್ಯಮಗಳ ನಡೆಯನ್ನು ಅವಲೋಕಿಸುತ್ತ ಬಂದಿದ್ದೇನೆ.
ಯಾವ ನಿತ್ಯಾನಂದ ಸ್ವಾಮೀಜಿ ವಿರುದ್ದ ಸಾಕ್ಷಿಗಳನ್ನು ತಂದು ಅವುಗಳನ್ನು ಹಗಲು ರಾತ್ರಿ ವಾರಗಟ್ಟಲೆ ತೋರಿಸಿ ಆ ಸ್ವಾಮೀಜಿ ದೂರುದಾರರು ಇಲ್ಲದ ದೂರಿನ ಮೇಲೆ ವಿಚಾರಣೆಯಿಲ್ಲದೆ ಜೈಲಿಗೆ ಹೋಗಿ ಬರುವಂತೆ ಮಾಡುತ್ತಾರೆ. ಇನ್ನೊಂದೆಡೆ ರಾಘವೇಶ್ವರ ಸ್ವಾಮೀಜಿ ಪ್ರಕರಣದಲ್ಲಿ ದೂರುದಾರರು, ಸಾಕ್ಷಿ , ಆ ಸಾಕ್ಷಿ ಮೇಲ್ನೋಟಕ್ಕೇ ಸಾಬೀತಾಗಿದ್ದರೂ ಅದರ ಸತ್ಯಾಸತ್ಯತೆಯನ್ನು ಇನ್ನಷ್ಟು ಪರೀಕ್ಷಿಸಲು ಸಮಯ ತೆಗೆದುಕೊಂಡು ಬಂಧನವಿರಲಿ, ಚಾರ್ಜ್ ಶೀಟ್ ಹಾಕಲೂ ಹಿಂದೆ ಮುಂದೆ ನೋಡುವಂತಾಗುತ್ತದೆ. ಗಮನಿಸಬೇಕಾದ ಅಂಶವೆಂದರೆ ಈ ಎರಡೂ ಪ್ರಕರಣಗಳ ಹಿಂದೆ ಒಂದೇ ಪತ್ರಕರ್ತರ ಗುಂಪಿನ ಕೈವಾಡ! ಇದು ಜಗಜ್ಜಾಹೀರು ವಿಷಯವೇ ಆಗಿದ್ದರೂ ಉಳಿದ ಪತ್ರಕರ್ತರಿಗೆ ಸತ್ಯ ಹೇಳಲು ಅದನೋ ಹೆದರಿಕೆ!
ಇದೊಂದೇ ಪ್ರಕರಣವಲ್ಲ. ಇಂತಹ ಸಾಕಷ್ಟು ಪ್ರಕರಣಗಳು, ಉದಾಹರಣೆಗಳು ನನ್ನಲ್ಲಿವೆ.
ನನಗೆ ಪತ್ರಕರ್ತರು, ಬರಹಗಾರರು, ಕವಿಗಳು, ಸಾಮಾಜಿಕ ಕಾರ್ಯಕರ್ತರು, ಆಧ್ಯಾತ್ಮಿಕ ವ್ಯಕ್ತಿಗಳು ಇವರ ಬಗ್ಗೆ ಎಲ್ಲರಂತೆ ಅಥವಾ ಎಲ್ಲರಿಗಿಂತ ಹೆಚ್ಚು ಅದೇನೋ ಗೌರವ. ಈ ಎಲ್ಲರೂ ಯಾವ ಜಾತಿ, ಪಕ್ಷ, ಬಡವ, ಬಲ್ಲಿದ, ಸ್ವರತಿ, ಸ್ವಾರ್ಥಗಳನ್ನು ಮೀರಿರುತ್ತಾರೆ ಎಂಬುದು ನನ್ನ ನಂಬಿಕೆ. ಈ ನಂಬಿಕೆಯ ಬುನಾದಿ, ಗೋಡೆ ಎಲ್ಲವೂ ಇಂದು ಶಿಥಿಲವಾಗಿದ್ದು ನನ್ನ ದುರಾದೃಷ್ಟ. ಇವತ್ತಿನ ಬಹುತೇಕ ಪತ್ರಕರ್ತರು ಸಮಾಜಕ್ಕಿಂತಲೂ ಸ್ವಹಿತಾಸಕ್ತಿಗೆ ಹೆಚ್ಚು ಒತ್ತುಕೊಡುತ್ತಿರುವುದು ನನಗೆ ಆದ ಮೊದಲ ಆಘಾತ. ನಂತರ ಸತ್ಯವಲ್ಲದೆ ಉಳಿದಿದ್ದನ್ನೆಲ್ಲ ಸುದ್ದಿಯೆಂದು ಸಾರುತ್ತಿರುವುದು ಎರಡನೆಯ ಆಘಾತ. ಮೂರನೆಯದು ದಿನವಿಡೀ ಅಪರಾಧ ಸುದ್ದಿಗಳು, ಪೇಜ್ 3 ವಿಷಯಗಳನ್ನು ಬರೆದು, ಹೇಳಿ ಇಡೀ ಸಮಾಜದ ವೈಚಾರಿಕತೆಯನ್ನೇ ಕೊಂದು ಹಾಕುತ್ತಿರುವುದು, ನಂಬಿಕೆ ಎಂದರೆ ಮನುಷ್ಯರನ್ನು ನಂಬಬೇಡ, ಯಾವುದಾದರೂ ಜ್ಯೋತಿಷಿಯನ್ನು ನಂಬು, ಪ್ರೀತಿಸಲೇಬೇಡ, ಪ್ರೀತಿಸಿದರೆ ಕೊಲೆಯಾಗುತ್ತೀಯ, ಇಲ್ಲವೆ ಕೊಲೆ ಮಾಡಿಸುತ್ತೀಯ ಎನ್ನುವಂತಹ ಸಂದೇಶಗಳನ್ನು ದಿನವಿಡೀ ಬಿತ್ತರಿಸಿ ಬಿತ್ತರಿಸಿ ಜನಸಾಮಾನ್ಯರು ನಿಜಕ್ಕೂ ದಿಕ್ಕು ತಪ್ಪಿಹೋಗಿರುವುದು.
ಒಂದೆಡೆ ಎಲ್ಲಿಂದಲೋ ಆಸೆಯಿಂದ, ಪ್ಯಾಷನ್ ಆಗಿ ವೃತ್ತಿ ಮಾಡಲು ಬಂದು ತಿಂಗಳ ಸಂಬಳವೂ ಇಲ್ಲದೆ, ರೂಮಿನ ಬಾಡಿಗೆಯನ್ನೂ ಕೊಡಲಾಗದೆ ಒದ್ದಾಡುತ್ತಿರುವ ಹೊಸ ಪೀಳಿಗೆ. ಆಗಲೇ ವೃತ್ತಿಯ ಅನಿಶ್ಚಿತತೆಯನ್ನು ಮನಗಂಡು ಸೈಡ್ ಬಿಸಿನೆಸ್ ಗೆ ಕೈಯಲ್ಲಿರುವ ಪೆನ್ನೋ, ಮೈಕೋ, ಕ್ಯಾಮರಾವನ್ನೋ ಬಳಸಿಕೊಳ್ಳುತ್ತಿರುವ ಏಣಿ ಮಧ್ಯದವರು, ಏಣಿಯ ತುದಿಯಲ್ಲಿರುವ ಕೆಲವೇ ಕೆಲ ಮಂದಿಯಲ್ಲಿ ಬಹುತೇಕರು ಈ ಮಧ್ಯದ ಗುಂಪಿನಿಂದಲೇ ಎದ್ದು ಬಂದವರು. ಇಂತಹ ಸಂದರ್ಭದಲ್ಲಿ ಪತ್ರಕರ್ತ ತನ್ನ ಹೊಟ್ಟೆಪಾಡು ನೋಡಿಕೊಳ್ಳಬೇಕೇ ಅಥವಾ ಸಮುದಾಯದ ಹಿತಾಸಕ್ತಿ ಕಾಪಾಡಬೇಕೆ ಎನ್ನುವುದು ಮಹತ್ವದ್ದೆನಿಸುತ್ತದೆ. ದಿನದಿಂದ ದಿನಕ್ಕೆ ಏರುತ್ತಿರುವ ಬೆಲೆ, ಜನರ ಹೊರನೋಟದಿಂದ ಗುರುತಿಸುವ, ಆಡಂಬರದ ಓಲೈಕೆಯ ಸ್ವಭಾವ, ಎಲ್ಲರಂತೆ ನಾವೂ ಆಗುವ ಹೆಬ್ಬಯಕೆ ಇವುಗಳ ನಡುವೆ ಪತ್ರಕರ್ತ ಕಾಣೆಯಾಗಿದ್ದಾನೆ. ಪ್ರಜಾಪ್ರಭುತ್ವದ ಕಾವಲು ನಾಯಿ ಇಂದು ಭೂಗಳ್ಳರು, ರಾಜಕಾರಣಿಗಳು, ರೌಡಿಗಳು, ಮೌಲ್ಯವಿಲ್ಲದ ವ್ಯಾಪಾರಿಗಳು ಹಾಕುವ ತುಂಡು ಬಿಸ್ಕತ್ತಿನ ಆಸೆಗೆ ಜೊಲ್ಲು ಸುರಿಸುತ್ತ ನಡೆದಂತೆ ನನಗೆ ಭಾಸವಾಗುತ್ತದೆ. ಸಮಾಜದ ಕನ್ನಡಿಯಂತಹ ಪತ್ರಿಕಾ ಮನೆಗಳಲ್ಲಿ ಎಲ್ಲವೂ ವ್ಯಾಪಾರವಾಗಿದೆ. ಹೆಣ್ಣು, ಹೊನ್ನು, ಮಣ್ಣು ಈ ಮೂರರ ಆಸೆಗೆ ಬಿದ್ದ ಪತ್ರಕರ್ತನೇ ದೊಡ್ಡ ಮನುಷ್ಯನೆಂದು ಸಮಾಜ ಗುರುತಿಸತೊಡಗಿದಾಗ ನನ್ನಂತಹವರ ನಂಬಿಕೆಯ ಬುಡ ಅಲ್ಲಾಡತೊಡಗುತ್ತದೆ. ಸರ್ವೇ ಗುಣಾಃ ಕಾಂಚನಮಾಶ್ರಯಂತಿ ಎಂಬ ಮಾತು ಇಲ್ಲಿಯೂ ಸತ್ಯವೆಂದು ಅರಿವಾದಾಗ ಯಾವ ಚಾನೆಲ್ಲು, ಯಾವ ಪತ್ರಿಕೆಯೂ ನಂಬಿಕೆಗೆ ಅರ್ಹವಲ್ಲ ಎಂಬಂತಾಗುತ್ತದೆ. ಒಂದು ದಿನ ಪತ್ರಕರ್ತರು ಯಾರು ಎಂದು ನನ್ನ ಮುಂದಿನ ಅತ್ಯಂತ ಕಿರಿಯ ಜನಾಂಗ ನನ್ನನ್ನು ಕೇಳಿದರೆ,  ನಾನು ಏನು ಉತ್ತರ ಕೊಡಬಲ್ಲೆ? ಪತ್ರಕರ್ತರೆಂದರೆ ಅದೇ ಸುದ್ದಿ ವಾಹಿನಿಗಳಲ್ಲಿ ದಿನವೆಲ್ಲ ಸುದ್ದಿಯನ್ನು ನೀಡುತ್ತಾರಲ್ಲ, ಪತ್ರಿಕೆಗಳಲ್ಲಿ ಪ್ರತಿದಿನ ಸುದ್ದಿ ಬರುವಂತೆ ನೋಡಿಕೊಳ್ಳುತ್ತಾರಲ್ಲ ಅವರೆಂದೇ? ಹಾಗೆಂದರೆ ಯಾವುದಾದರೂ ಬುದ್ಧಿವಂತ ಮಗು ನಿಜವಾಗಿ ಯಾರು ಪತ್ರಕರ್ತ ಎಂದು ತಿಳಿದುಕೊಂಡು ನೀನು ಹೇಳುವುದೆಲ್ಲ ಡೋಂಗಿ ಎಂದರೆ ನಾನೂ ಕೂಡ.....!?