ಗುರುವಾರ, ನವೆಂಬರ್ 20, 2014

ಹೀಗೊಂದು ಭಾವಬಿಂದು

           ಆಗಲೇ 1/3 ಜೀವನ ಕಳೆದುಹೋಯ್ತು. ಹಿಂತಿರುಗಿ ನೋಡಿದರೆ ಸಾವಿರ ಹೆಜ್ಜೆಗಳು. ಬೇಕಿದ್ದವು, ಬೇಕಿಲ್ಲದವು. ಆದರೆ ಹೆಜ್ಜೆಗೆ ಜೊತೆಯಾದವರು? ಅವರಿಗೊಂದು ಕೃತಜ್ಞತೆ ಹೇಳಲೇಬೇಕು. ಈ ಬರಹ ಹೀಗೆ ಹೆಜ್ಜೆಗಳೊಂದಿಗೆ ಹೆಜ್ಜೆಯಾದ ಸಾವಿರ ಸಾವಿರ ಜನರಿಗೆ ಸಲ್ಲುತ್ತದೆ.
            ಮೊದಲಿಗೆ ನನ್ನನ್ನು  ಹುಟ್ಟಿಸಿದ ಅಪ್ಪನಿಗೆ, ಹೊತ್ತು, ಹೆತ್ತ ಅಮ್ಮನಿಗೆ, ಬೆಳೆಸಿದ ಆಯಿಗೆ, ಬಹಳ ಶಿಸ್ತಿನಿಂದ ಬೆಳೆಸಿದ ಅಮ್ಮ ಹಾಗೂ ಅಪ್ಪ ಸೇರಿದಂತೆ ಎಲ್ಲ ದೊಡ್ಡವರಿಗೆ, ನನ್ನ ಬೇಕು ಬೇಡಗಳ ನಿಗಾ ಇಟ್ಟ ನನ್ನ ಅಜ್ಜ ಹಾಗೂ ಮಾವಂದಿರಿಗೆ ನನ್ನ ಅನಂತ ಪ್ರಣಾಮಗಳು. ನನ್ನ ಪ್ರೇಮದ ಗೆಳೆಯ, ಪ್ರೀತಿಯ ತಂಗಿ, ತಮ್ಮ , ಮನೆಯವರು ಮತ್ತು ಮೈದುನ ಇವರೆಲ್ಲ  ನನ್ನ ಬದುಕಿಗೆ ಬಂದು ಜೀವನಕ್ಕೊಂದು ಅರ್ಥ ಕೊಟ್ಟಿದ್ದಾರೆ.
            ಬಾಲ್ಯದಲ್ಲಿಯೇ ಸತ್ಯ ಹಾಗೂ ಪ್ರಾಮಾಣಿಕತೆಯ ಬಗ್ಗೆ, ನನ್ನಲ್ಲಿ ಅದನ್ನು ಗುರುತಿಸಿ ಗಾಢವಾಗಿ ಬೇರೂರಲು ಕಾರಣರಾದ ವಿ.ಡಿ.ನಾಯಕ್ ಮಾಸ್ತರರಿಗೆ, ಅಂಗನವಾಡಿಯ ಗೌರಕ್ಕೋರಿಂದ ಹಿಡಿದು ಹೈಸ್ಕೂಲಿನ ಆರ್.ಜಿ.ಹೆಗಡೆಯವರವರೆಗೆ, ಕಾಲೇಜಿನ ನಾಗರಾಜ್ ಸರ್, ರಾಮಲಿಂಗಂ ಸರ್ ವರೆಗೆ ಎಲ್ಲ ನನ್ನ ಗುರುವೃಂದಕ್ಕೆ ಹೃತ್ಪೂರ್ವಕ ನಮನಗಳು.
             ಕೆಲಸಕ್ಕೆ ಸೇರಿದಾಗ ಕಾನ್ಫಿಡೆನ್ಸ್ ತುಂಬಿದ ಪರ್ಸನಲ್ ನೆಟ್ ವರ್ಕ್ ನ ಪ್ರಭು ಸರ್, ಫಾರ್ಚೂನ್ ನ ಸಂಜಯ್ ಮತ್ತು ಅವರ ಪತ್ನಿ, ಸೌತ್ ಇಂಡಿಯಾ ಟೆಲಿವಿಷನ್ ನೆಟ್ ವರ್ಕ್ ನ ಶಶಿಧರ್ ಭಟ್ ಸರ್, ಭೂಮಿಕಾ ಸಂಸ್ಥೆಯ ಟಿ.ಎನ್.ಸೀತಾರಾಂ ಸರ್,  ಕಸ್ತೂರಿಯ ಕೆಎಂ ಮಂಜುನಾಥ್ ಮತ್ತು ರಾಜಶೇಖರ್ ಅಬ್ಬೂರ್ ಸರ್, ಜನಮಾಧ್ಯಮ ಪತ್ರಿಕೆಯ ಸುಬ್ರಾಯ ಬಕ್ಕಳ ಸರ್ , ಆಂದೋಲನ ಪತ್ರಿಕೆಯ ರಾಜಶೇಖರ್ ಕೋಟಿ ಸರ್ , ರಾಜಹನ್ಸ್ ಪಬ್ಲಿಕೇಷನ್ಸ್ ನ ಬಾಲಚಂದ್ರ ಸರ್ ಮತ್ತು ಟಿ.ಟಿ. ಕಸ್ತೂರಿ ಸರ್ ಮತ್ತು ಮಾನವ ಹಕ್ಕು ಆಯೋಗದ ಕಾರ್ಯದರ್ಶಿ ಮಧು ಶರ್ಮಾ ಮೇಡಂ, ಹೀಗೆ ಪ್ರತಿ ಹಂತದಲ್ಲಿ ನನ್ನ ವೃತ್ತಿಪರ ಬದುಕಿಗೆ ಯಾವ ಶಿಫಾರಸ್ಸು, ವಶೀಲಿಯ ಹಂಗಿಲ್ಲದೆ ಕೆಲಸ ಕೊಟ್ಟು, ಬೆಳೆಸಿದ ಇವರೆಲ್ಲರಿಗೆ ನನ್ನ ಅನಂತಾನಂತ ಕೃತಜ್ಞತೆಗಳು.
           ಇನ್ನು ಬೆಂಗಳೂರಿಗೆ ಕಾಲಿಟ್ಟ ಕೂಡಲೇ ಮಡಿಲಿಗೆ ಹಾಕಿಕೊಂಡು ಜಗತ್ತು ತೋರಿಸಿದ ನನ್ನ ದೊಡ್ಡಮ್ಮ ಎಂತಲೇ ಪರಿಗಣಿಸುವ ನನ್ನ ಜಯತ್ತೆ, ನನಗೆ ಬೇಕಾದಾಗೆಲ್ಲ ಬಿಸಿಬಿಸಿ ದೋಸೆ ಮಾಡಿ ಬಡಿಸುತ್ತಿದ್ದ, ಸದಾ ನನ್ನ ಕಷ್ಟಕ್ಕೆ ಆಗುತ್ತಿದ್ದ ಗಂಗತ್ತೆ, ಕೈಯಲ್ಲಿ ಹಿಡಿದುಕೊಳ್ಳಲಾಗದ ಕೂದಲನ್ನು ಕಾಲ ಕಾಲಕ್ಕೆ ಬಾಚಿ, ಹೇನು ತೆಗೆದು ಒಪ್ಪ ಓರಣ ಮಾಡುತ್ತಿದ್ದ, ನನಗೆ ಚೆಂದಗೆ ರಂಗೋಲಿ ಹಾಕುವುದನ್ನು ಹೇಳಿಕೊಟ್ಟ ದೊಡ್ಡತ್ತೆ, ಓದಿನ ಹಸಿವೆಗೆ ಉಣಬಡಿಸಿದ ಪಕ್ಕದಮನೆಯ ಶಾರದಜ್ಜಿ, ಕೃಷ್ಣ ಹೆಗಡೆ ಮನೆ, ಶಿರಸಿಯ ದತ್ತಾತ್ರೇಯ ಬುಕ್ ಸ್ಟಾಲ್ ಇವರೆಲ್ಲರ ಋಣ ದೊಡ್ಡದು.
         ಹೈಸ್ಕೂಲಿಗೆ ಹೋಗುವಾಗ ಪ್ರತಿನಿತ್ಯ ನನಗೆ ಹೂವು ತಂದುಕೊಟ್ಟ ನನ್ನ ಪ್ರೀತಿಯ ಭಾರತಕ್ಕ ಮತ್ತು ಸಹಪಾಠಿ ವಿನುತ, ನನ್ನನ್ನು ಪ್ರೀತಿಯಿಂದ ಸದಾ ಕಾಯುತ್ತಿದ್ದ ನನ್ನ ರಾಜು ನಾಯಿ, ಏನೂ ಅಲ್ಲದಿದ್ದರೂ ಓದುವ ಪುಟ್ಟ ತಂಗಿಯಂತೆ ಕಂಡು ಮಧ್ಯಾಹ್ನದ ಊಟದ ದುಡ್ಡಿಗೆ ಸಂಜೆಗೂ ಬಾಕ್ಸ್ ತುಂಬಿ ಕೊಡುತ್ತಿದ್ದ ಎಸ್.ಜೆ.ಪಿ ಕ್ಯಾಂಟೀನಿನ ಅಣ್ಣಂದಿರು, ಕಾಲೇಜು ಮುಗಿದ ಮೇಲೆ ಕೆಲ ದಿನ ನನ್ನನ್ನು ಇಟ್ಟುಕೊಂಡು ಬೆಂಗಳೂರಿನಲ್ಲೊಂದು ನೆಲೆಕೊಟ್ಟ ಗೀತಕ್ಕ, ಕೇಶವ ದೊಡ್ಡಪ್ಪ, ವಿದ್ಯಕ್ಕ, ಉಮೇಶಣ್ಣ, ನನಗೆ ಮನೆ/ವಸತಿ ಕೊಟ್ಟು ವಿಶ್ವಾಸದಿಂದ ಕಂಡ ಹಾಸ್ಟೆಲ್ ನ ಸರೋಜ ಆಂಟಿ, ಇಂದಕ್ಕ ಮತ್ತು ಮನೆ ಕೊಟ್ಟ ಓನರ್ ಗಳಿಗೆ ನನ್ನ ಯಾವತ್ತೂ ನಮಸ್ಕಾರಗಳು. ಇವೆಲ್ಲ ಕೇವಲ ಬಾಯಿಮಾತಾಗದೆ ಹೃದಯದಿಂದ ಹಾರೈಸುವ ನುಡಿಮುತ್ತುಗಳು. ಮಾತಿದೆಯಲ್ಲ, `ಉಂಡವ ಹರಸುವುದು ಬೇಡ, ನೊಂದವ ಬೈಯುವುದು ಬೇಡ'. ಹಾಗೆ ನನ್ನ ಕಳೆದ ಮೂವತ್ತು ವರ್ಷಗಳಿಂದ ನೋಡುತ್ತಿರುವ ಎಲ್ಲ ಸಹೃದಯ ಬಂಧುಗಳಿಗೂ ನನ್ನ ಅನಂತ ಶುಭಹಾರೈಕೆಗಳು.
         ಅಧ್ಯಾತ್ಮದ ಹಂಬಲಕ್ಕೆ ಮಂತ್ರದೀಕ್ಷೆಯ ದಾರಿತೋರಿಸಿ ಹರಸಿ ಹಾರೈಸಿದ ಶ್ರೀರಾಮಕೃಷ್ಣ ವಿದ್ಯಾರ್ಥಿ ಮಂದಿರಂನ
ಶ್ರೀಸ್ವಾತ್ಮಾರಮಾನಂದ ಸ್ವಾಮೀಜಿ, ನನ್ನ ಗುರುಗಳಾದ ಶ್ರೀಸ್ಮರಣಾನಂದ ಸ್ವಾಮೀಜಿ ಮತ್ತು ನನ್ನನ್ನು ಸತ್ಯದೆಡೆಗೆ ಪ್ರತಿನಿತ್ಯ ಕರೆದೊಯ್ಯುತ್ತಿರುವ ಗುರುವಿನ ಗುರು ಶ್ರೀ ರಾಮಕೃಷ್ಣರಿಗೆ ನನ್ನ ಚಿರಸಾಷ್ಟಾಂಗ ಪ್ರಣಾಮಗಳು. ಬಾರಿ ಬಾರಿಯ ಭವದ ಹೊಡೆತದಿಂದ ಪಾರು ಮಾಡುವ ತಾಯಿ ಕಾಳಿ ಮತ್ತು ತಂದೆ ಮಲ್ಲಿಕಾರ್ಜುನನಿಗೆ ಅಣುವೊಂದು ಸಲ್ಲಿಸುವ ಅನಂತಾನಂತ ಕೃತಜ್ಞತೆಗಳು.
       




ಗುರುವಾರ, ಅಕ್ಟೋಬರ್ 30, 2014

ದೈಹಿಕ ಆಸೆ ಹಣ ತರುವ ವಿಧಾನಗಳಲ್ಲೊಂದಾದಾಗ....

ನನ್ನ ದೃಷ್ಟಿಯಲ್ಲಿ ದೈಹಿಕ ಕಾಮನೆ ಬಹಳ ಉನ್ನತವಾದದ್ದು. ಇದರ ಬಗ್ಗೆ ಸ್ವಲ್ಪ ಹೆಚ್ಚಿನ ಗೌರವವನ್ನೇ ಇಟ್ಟುಕೊಂಡಿದ್ದೇನೆ. (ನನ್ನನ್ನು ಮಡಿವಂತೆ ಎಂದು ಹೀಗಳೆಯುವ ಮಂದಿಯೂ ಇದ್ದಾರೆ, ಅದರಿಂದ ನನಗೇನೂ ತೊಂದರೆಯಿಲ್ಲ, ಆ ವಿಷಯ ಬೇರೆ) ಆದ್ದರಿಂದ ನನಗೆ ಈ ತಲೆಬರಹ ಯಾವಾಗಲೂ ಹೆಚ್ಚು ಕಾಡುತ್ತದೆ.

ದೈಹಿಕ ಕಾಮನೆಗಳು ಮಾರಾಟಕ್ಕೂ ಇರುತ್ತವೆ ಎಂದು ನನಗೆ ಅರಿವಾದಾಗ ೧೯ ವರ್ಷ. ಆ ನಂತರ ಹೆಚ್ಚು ಹೆಚ್ಚು ಜಗತ್ತನ್ನು ನೋಡಿದಂತೆಲ್ಲ ನನಗೆ ಈ ವಿಷಯ ಹೆಚ್ಚು ಹೆಚ್ಚು ಅರ್ಥವಾಗುತ್ತ ಮತ್ತು ಸದಾ ಮನುಷ್ಯರ ಬಗ್ಗೆ ಒಂದು ರೀತಿಯ ಅನುಮಾನ ಕಾಡತೊಡಗಿತು. ಈ ವಿಷಯದಲ್ಲಿ ಮನು ಹೇಳುವ ಮಾತನ್ನು ನಾನು ಒಪ್ಪಿಕೊಳ್ಳುತ್ತೇನೆ, ಹೆಣ್ಣಿಗೆ ಬಾಲ್ಯದಲ್ಲಿ ತಂದೆಯೂ, ವಯಸ್ಸಿನಲ್ಲಿ ಗಂಡನೂ ಮತ್ತು ವೃದ್ಧಾಪ್ಯದಲ್ಲಿ ಮಕ್ಕಳೂ ರಕ್ಷಣೆಗೆ ಇರಬೇಕು. ಆದರೆ ಇಂದು ಇದು ದೈಹಿಕ ಯಾ ಸಾಮಾಜಿಕ ರಕ್ಷಣೆಯಲ್ಲ, ಬದಲಿಗೆ ಹಣದ ಬಲ. ಯಾವ ಹೆಣ್ಣುಮಕ್ಕಳ ತಂದೆ/ಗಂಡ/ಮಗ ಇವರಲ್ಲಿ ಹಣವಿರುವುದಿಲ್ಲವೋ ಅವರು ಅಕ್ಷರಶಃ ಬೀದಿಗೆ ಬಂದು ಬಿಡುತ್ತಾರೆ. ಈ ಪುರುಷರು ಯಾವ ಮಟ್ಟದ ಜೀವನವನ್ನು ನಡೆಸುತ್ತಾರೆ ಎನ್ನುವುದನ್ನು ಈ ದಂಧೆ ಅವಲಂಬಿಸಿರುತ್ತದೆ. ಬಡ ತಂದೆಯ ಮಗಳಾದರೆ ರಾಜಾರೋಷವಾಗಿ ಮಾರಾಟವಾಗುತ್ತಾಳೆ. ಮಧ್ಯಮ ವರ್ಗದ ತಂದೆ/ಪತಿಯಾಗಿದ್ದರೆ ಅವ ತನ್ನದೇ ರೀತಿಯಲ್ಲಿ ಈ ವಿಷಯವನ್ನು ನಿಭಾಯಿಸುತ್ತಾನೆ. ಮಗನಾದರೂ ಉದ್ದೇಶ ಪೂರ್ವಕವಾಗಲ್ಲದಿದ್ದರೂ ಬೇಜವಾಬ್ದಾರಿಯಾದಾಗ ಅವನೂ ತಾಯಿಯ ಮಾರಾಟಕ್ಕೆ ಕಾರಣವಾಗುತ್ತಾನೆ. ಹೆಚ್ಚಿನ ಸಂದರ್ಭದಲ್ಲಿ ಪುರುಷರು ಉದ್ದೇಶಪೂರ್ವಕವಾಗಿ ಮಾರಾಟ ಮಾಡುವುದಿಲ್ಲ, ಬದಲಿಗೆ ತಮ್ಮ ಮೇಲಿನ ಜವಾಬ್ದಾರಿಯ ಒತ್ತಡವನ್ನು ಹೀಗೂ ಇಳಿಸಿಕೊಳ್ಳುತ್ತಾರೆ ಎನ್ನಬಹುದು. ಒಟ್ಟಿನಲ್ಲಿ ಇಲ್ಲಿ ಮಾರಾಟ ಮಾಡುವ ಮತ್ತು ಕೊಳ್ಳುವ ಇಬ್ಬರೂ ಪುರುಷರೇ ಆಗಿರುತ್ತಾರೆ. ಇಲ್ಲಿ ಮಾರಾಟ ಮಾಡುವವ ಅತಿ ಆಸೆ ಉಳ್ಳ, ಆದರೆ ಏನೂ ಮಾಡಲು ಅಸಹಾಯಕನಾಗಿರುವ ಬಡ ರೈತ, ವ್ಯಾಪಾರಿ, ಮೇಷ್ಟ್ರು ಹೀಗೆ ಯಾರೂ ಆಗಬಹುದು. ಹಾಗೆಯೇ ಇಲ್ಲಿ ಕೊಂಡುಕೊಳ್ಳುವವರು ಧನಿಕರು, ಪ್ರಭಾವಿಗಳು, ಜನಬೆಂಬಲ ಇರುವವರೂ ಆಗಿರುತ್ತಾರೆ. ಯಾರದ್ದು ತಪ್ಪು, ಯಾರದ್ದು ಸರಿ? ನಿರ್ಧಾರ ನಿಮಗೆ ಬಿಟ್ಟದ್ದು.

ಇನ್ನೊಂದೆಡೆ ದೈಹಿಕ ಹಂಬಲವನ್ನು ಮಾರಾಟ ಮಾಡಿ ತಮ್ಮ ಮಹತ್ವಾಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವ ಹೆಣ್ಣುಮಕ್ಕಳೂ ಇದ್ದಾರೆ. ಈ ಮಾರಾಟ ಯಾವ ಬಗೆಯಲ್ಲೇ ಇರಲಿ, ಇದು ನಮ್ಮದೇ ಆತ್ಮಕ್ಕೆ ಮಾಡಿಕೊಳ್ಳುವ ಆಘಾತ.  ಅಂತರ್ ವಿದ್ಯೆಯ ಶ್ರೇಷ್ಠ ಅಧ್ಯಯನಕಾರ ಮತ್ತು ಗುರು ಮಾಸ್ಟರ್ ಚಾ ಕೊ ಕ್ಸಿ ಒಂದೆಡೆ ಬರೆಯುತ್ತಾರೆ, ಸಂಭೋಗ ಎನ್ನುವುದು ಕೇವಲ ದೈಹಿಕ ಆಸೆಯಲ್ಲ, ಅದು ಆತ್ಮೋದ್ಧಾರದ ಸಾಧನವೂ ಹೌದು. ಎಲ್ಲಿಯವರೆಗೆ? ಇದು ಮುಖ್ಯವಾದ ಪ್ರಶ್ನೆ. ಎಲ್ಲಿಯವರೆಗೆ ಎಂದರೆ ಎರಡು ಸಂಪೂರ್ಣ ಒಪ್ಪಿತ ದೇಹಗಳು ಒಂದಾಗುವುದು ಮಾತ್ರವಲ್ಲ, ಎರಡು ಪರಿಶುದ್ಧ ಆತ್ಮಗಳ ಪ್ರಭಾವಲಯಗಳ ವರ್ಗಾವಣೆಯೂ ಈ ಕ್ರಿಯೆಯಲ್ಲಿ ನಡೆಯುತ್ತದೆ. ಹಾಗಾಗಿ ಇಲ್ಲಿ ನಮ್ಮ ವ್ಯಕ್ತಿತ್ವದ ಪರಿಶುದ್ಧತೆಯ ಜೊತೆಗೆ ಒಂದಾಗುವ ವ್ಯಕ್ತಿತ್ವದ ಪರಿಶುದ್ಧತೆಯೂ ಮುಖ್ಯ. ಆತ/ಆಕೆ ಕಳ್ಳ, ಸುಳ್ಳ, ಅಪ್ರಮಾಣಿಕ, ದುಷ್ಟಬುದ್ಧಿಯುಳ್ಳವ, ಕೇಡು ಬಗೆಯುವ, ಈರ್ಷ್ಯೆ ಪಡುವವ ಹೀಗೆ ಯಾವುದೇ ಬಗೆಯ ಅಶುದ್ಧತೆಯಿದ್ದರೂ ಅದು ಇಬ್ಬರನ್ನೂ ನಾಶಮಾಡುತ್ತದೆ. ಅದಕ್ಕಾಗಿಯೇ ದೇಹದ ಆಸೆಯನ್ನು ಹಂಚಿಕೊಳ್ಳುವ ಮುನ್ನ ಎರಡೂ ಕಡೆಯಿಂದ ಒಪ್ಪಿಗೆಗಿಂತಲೂ ಪರಸ್ಪರ ಪ್ರೀತಿ, ಪ್ರೇಮ, ಗೌರವಗಳು ಮೂಡಬೇಕು. ಹಾಗೆ ಒಳ್ಳೆಯ ಭಾವನೆಗಳು ಪರಸ್ಪರರೆಡೆಗೆ ಮೂಡುವ ವ್ಯಕ್ತಿತ್ವಗಳು ಒಂದಾದರೆ ಅದು ಪೂಜೆಯಾಗುತ್ತದೆ. ಇಲ್ಲದಿದ್ದರೆ ಅಧಃಪತನ ನಿಶ್ಚಿತ.

ಆದರೆ ಇಂದು ತಾಂತ್ರಿಕ ಸೆಕ್ಸ್ ಹೆಸರಲ್ಲಿ, ನಾನು ಹಣ ಕೊಡುತ್ತೇನೆ, ನಿನ್ನನ್ನು ಯಶಸ್ವಿ ಮಾಡುತ್ತೇನೆ, ಹೀಗೆ ಹತ್ತು ಹಲವು ಆಮಿಷಗಳಿಂದ, ಆಸೆಗಳಿಂದ, ದುರಾಸೆಯಿಂದ ನಡೆಯುವ, ಹೆಂಡತಿ/ಗಂಡ ಪರಿಶುದ್ಧರಾಗಿಲ್ಲದಿದ್ದರೆ/ಒಳ್ಳೆಯವರಲ್ಲದಿದ್ದರೆ ನಡೆಯುವ ಭೋಗ ನಿಜವಾಗಿಯೂ ಮನುಷ್ಯನಿಗೆ ಶಾಪ.  ಈ ಬಗ್ಗೆ ಪ್ರತಿ ತಂದೆ-ತಾಯಿ, ಗಂಡ - ಹೆಂಡತಿ ಅರಿಯಬೇಕು. ಮದುವೆಯಾಗುವ ಹುಡುಗ, ಹುಡುಗಿಯರು ಅರಿಯಬೇಕು. ಎಲ್ಲಕ್ಕಿಂತಲೂ ಹೆಚ್ಚು ಎಲ್ಲರೂ ದೈಹಿಕ ಕಾಮನೆಯೆಂಬುದು ಹಣ ಕೊಡಿಸುವ ದಂಧೆಯಲ್ಲ, ಸ್ಥಾನ ಕೊಡಿಸುವ, ಆಸೆ ತೀರಿಸುವ ಒಂದು ಸಾಧನವಲ್ಲ ಎನ್ನುವುದನ್ನು ತಿಳಿಯಬೇಕು. ಹೀಗೆ ಅರಿಯುವ ಆಸೆ ಮೂಡಬೇಕಿದ್ದರೆ ಅದಮ್ಯ ಜೀವನಪ್ರೀತಿ ಮತ್ತು ಸ್ವಲ್ಪ ಪಾರಮಾರ್ಥಿಕತೆ ಬೇಕು. ಎಲ್ಲದಕ್ಕೂ ಮೊದಲು `ಹೆಜ್ಜೆ ಹೆಜ್ಜೆಗೂ ಹೊನ್ನೆ ಸುರಿಯಲಿ., ಗೆಜ್ಜೆಪೂಜೆಯ ಉರುಳಿಗೆ ಕೊರಳನೆಂದೂ ನೀಡೆನು' ಎನ್ನುವ ಹಠ ಪ್ರತಿ ಹೆಣ್ಣಿಗೆ ಹುಟ್ಟಬೇಕು. ಇದು ಎಲ್ಲಿಯವರೆಗೆ ಸಾಧ್ಯವಿಲ್ಲವೋ ಅಲ್ಲಿಯವರೆಗೆ ಈ ದೈಹಿಕ ವ್ಯಾಪಾರಕ್ಕೆ ಕೊನೆಯಿಲ್ಲ...... ಕಾಮಿಣೀ, ಕಾಮರೂಪಿಣಿಯಾದ ಶ್ರೀರಾಜರಾಜೇಶ್ವರಿ ಎಲ್ಲ ಹೆಣ್ಣುಮಕ್ಕಳಿಗೂ ಈ ಬಗೆಯ ಹಠ ನೀಡಲಿ, ಎಲ್ಲರೂ ದೌರ್ಜನ್ಯಗಳಿಂದ ಮುಕ್ತರಾಗಲಿ, ಎಲ್ಲ ಹೆಣ್ಣುಮಕ್ಕಳ ಮುಖದಲ್ಲೂ ನಿಜಸಂತೋಷ ಅರಳಲಿ.. 

ಶನಿವಾರ, ಅಕ್ಟೋಬರ್ 4, 2014

ಐ ಡೋಂಟ್ ಲೈಕ ದ ಪೀಪಲ್ ಹು ನೀಡ್ ಸರ್ವೆಂಟ್ I don't like the people who need servent


ಅಂದು ಸಂಜೆ ಬಹಳ ಸುಸ್ತಾಗಿತ್ತು. ಬೆಂಗಳೂರಿನ ಟ್ರಾಫಿಕ್ ನಲ್ಲಿ ತಿರುಗಿ, ಕಚೇರಿಗೆ ಹೋಗಿ ಬರೆದು, ಕೆಲಸ ಮಾಡಿ ಮನೆಗೆ ಬಂದಾಗ ಹಾಸಿಗೆ ಕಂಡರೆ ಸಾಕು ಎನ್ನುವಂತಾಗಿತ್ತು. ಆದರೆ ಮನೆಕೆಲಸ ಬಿಡಬೇಕಲ್ಲ. ಬೆಳಿಗ್ಗೆ ಅರ್ಜೆಂಟಾಗಿ ಹೊರಟವಳಿಗೆ ನೆಲ ಒರೆಸಲು ಆಗಿರಲಿಲ್ಲ. ಇನ್ನು ಅಡುಗೆ ಮಾಡಿಕೊಳ್ಳುವುದು ಬಾಕಿ ಇತ್ತು. ಅಡುಗೆ ಎಂದರೆ ಒಂದು ಸಾರು, ಅನ್ನ ಅಲ್ಲ. ನನಗೆ ಒಬ್ಬಳಿದ್ದರೂ, ನಾಲ್ಕು ಜನವಿದ್ದರೂ ಕನಿಷ್ಠ ಪಕ್ಷ ಮೂರು ವೆರೈಟಿ ಇರಬೇಕು. ಅಂತೂ ಆಗಿಲ್ಲವೆಂದರೆ ಸಾರಿನ ಜೊತೆಗೆ ಪಲ್ಯವಾದರೂ ಇರಬೇಕು, ಮೊಸರು ಬಿಟ್ಟು. ಹಾಗಾಗಿ ಇಷ್ಟೂ ಕೆಲಸ ಅನಿವಾರ್ಯವಾಗಿ ಮಾಡಲೇಬೇಕಾದಾಗ ದಣಿವಾಗುತ್ತದೆ ಎಂದುಕೊಂಡಿದ್ದೆ. ಆದರೆ ಆಗಿದ್ದೇ ಬೇರೆ. ಇನ್ನೊಮ್ಮೆ ಕಸಗುಡಿಸಿ, ನೆಲ ಒರೆಸಿ, ಅಡುಗೆ ಮಾಡುವಷ್ಟರಲ್ಲಿ ನನ್ನ ದಣಿವು ಮಂಗ ಮಾಯವಾಗಿತ್ತು.
ಇದು ನನಗೆ ಹೊಸ ಅನುಭವವೇನಲ್ಲ. ನನಗೆ ಮಾನಸಿಕವಾಗಿ ಬಹಳ ಸುಸ್ತಾದಾಗ ಎದ್ದು ದೈಹಿಕವಾಗಿ ಸ್ವಲ್ಪ ಚಟುವಟಿಕೆಯಿಂದ ಕೆಲಸ ಮಾಡಿದರೆ ಸಾಕು. ನಂತರ ಬರುವ ಗಾಢ ನಿದ್ದೆ ಎಲ್ಲವನ್ನು ಸರಿ ಮಾಡಿರುತ್ತದೆ. ಕೆಲಸಕ್ಕಾಗಿ ಕೆಲಸ. ಅದು ಯಾವುದೇ ಫಲಾಪೇಕ್ಷೆಯಿಲ್ಲದೆ ಮಾಡುವ ತಪಸ್ಸು ಎನ್ನುವುದು ನನ್ನ ಭಾವನೆ. ಅಧ್ಯಾತ್ಮದ ಮೊಟ್ಟ ಮೊದಲ ಮೆಟ್ಟಿಲು ಆರಂಭವಾಗುವುದೇ ದೈಹಿಕ ದಂಡನೆಯ ಮೂಲಕ. ಯಾರು ಆಲಸಿಗಳೋ ಅವರಿಗೆ ಅಧ್ಯಾತ್ಮವೆನ್ನುವುದು ಮರೀಚಿಕೆ. ಆದ್ದರಿಂದ ನನಗೆ ಯಾರಾದರೂ ಒಂದು ಕಡ್ಡಿ ಎತ್ತಿ ಆ ಕಡೆ ಇಡಲೂ ಜನ ಬೇಕೆಂದು ಹೇಳಿದರೆ ಕೆಂಡಾಮಂಡಲ ಸಿಟ್ಟು ಬರುತ್ತದೆ. ಆರಂಭದಲ್ಲಿ ಸ್ವಲ್ಪ ಸಹಿಸಿಕೊಳ್ಳುತ್ತೇನೆ. ಆದರೆ ನನ್ನ ಕೆಲಸ, ಅದರಿಂದ ಸಿಗುವ ಖುಷಿಯನ್ನು ಕಂಡೂ ಅವರು ಬದಲಾಗದಿದ್ದರೆ ಸುಮ್ಮನೆ ಅವರನ್ನು ತಿರಸ್ಕರಿಸಿಬಿಡುತ್ತೇನೆ. ಕಾರಣ ಇಷ್ಟೆ, ಜೀವಿಯ ಮೂಲ ಧರ್ಮ ಕ್ರಿಯೆ. ಈ ಕ್ರಿಯೆ/ಕೆಲಸ ಎನ್ನುವುದು ಶ್ರದ್ಧೆಯಿಂದ ಮಾಡಿದಾಗ ಪೂಜೆಯಾಗುತ್ತದೆ. ಯಾವಾಗ ವ್ಯಕ್ತಿ ತನ್ನ ಕೆಲಸ ತಾನು ಮಾಡಿಕೊಳ್ಳಲೂ ಅಯ್ಯೋ, ಅಮ್ಮಾ ಎನ್ನುತ್ತಾನೋ ಅಲ್ಲಿಗೆ ಅವ ಬದುಕಿಲ್ಲ ಎಂತಲೇ ನನ್ನ ಲೆಕ್ಕ.

ಇಂತಿಪ್ಪ ನಾನು ಬೆಂಗಳೂರಿಗೆ ಬಂದಾಗ ನನಗೆ ಇಲ್ಲಿ ನನ್ನ ಸುತ್ತಲಿನ ಸಾವಿರದಷ್ಟು ಜನ ಬದುಕಿಲ್ಲವೆಂದೇ ಎನಿಸಿತು. ಪುಟ್ಟ ಮಕ್ಕಳು ಬೆಳಿಗ್ಗೆ 5 ಗಂಟೆಗೆ ಟ್ಯೂಷನ್ಗೆ ಓಡುತ್ತಾರೆ. ಅವರ ತಿಂಡಿ, ಊಟ ತಯಾರಿಯಲ್ಲಿ ಅಮ್ಮನ ಬೆಳಗಾಗುತ್ತದೆ. ಅಪ್ಪ ಮಕ್ಕಳಿಗೆ ಸ್ನಾನ ಮಾಡಿಸಿ, ಬಟ್ಟೆ ಹಾಕಿಸುವಲ್ಲಿ ನೆರವಾದರೆ/ ಕುಳಿತಲ್ಲೆ ಕುಳಿತು ಆರ್ಡರ್ ಮಾಡಿದ ಕಾಫಿ ಕುಡಿದು ಪೇಪರ್ ಓದುತ್ತಾನೆ. ಒಮ್ಮೆ ಮಕ್ಕಳು ಶಾಲೆಗೆ ಹೋದವೆಂದರೆ ಮನೆಯಲ್ಲಿ ಉಳಿದವರಿಗೆ ನೆಮ್ಮದಿ. ಅಪ್ಪ ಸ್ನಾನಕ್ಕೆ ಗೀಜರ್ ಹಾಕಿಕೊಂಡು ಅಂತೂ ಇಂತು ತಂಗಳನ್ನದ ಚಿತ್ರಾನ್ನ ತಿಂದು ಹೊರಟನೆಂದರೆ ರಾತ್ರಿಯೇ ಬರುವುದು. ಅಪ್ಪ ಕಚೇರಿಗೆ ಹೋದ ನಂತರ ಅಮ್ಮ ನಿರಾಳ. ಸಂಜೆ ಮಕ್ಕಳು ಬರುವ ತನಕ ಅವಳದ್ದೇ ರಾಜ್ಯ.ಆ ಹೊತ್ತಿನಲ್ಲೇ ಕೆಲಸದವಳು ಬಂದು ಪಾತ್ರೆ, ಬಟ್ಟೆ, ಗುಡಿಸಿ, ಒರೆಸುವುದು ಮಾಡಿ ಹೋಗುತ್ತಾಳೆ. ಮಧ್ಯಾಹ್ನದ ತನಕ ಕೆದರಿದ ತಲೆ, ಹಳೇ ಮಾಸಲು ನೈಟಿಯಲ್ಲಿ ಊರೆಲ್ಲ ಸುದ್ದಿ ಹೇಳಿ ಮನೆಗೆ ಬಂದು, ರಾತ್ರಿ ಮಾಡಿದ್ದು, ಬೆಳಿಗ್ಗೆ ಮಾಡಿದ್ದರಲ್ಲಿ ಉಳಿದಿದ್ದನ್ನು ತಿಂದು ಅಮ್ಮಾ ಅಂತ ಟಿ.ವಿ ನೋಡುತ್ತಾರೆ. ಮಕ್ಕಳು ಬಂದ ನಂತರ ಅಂಗಡಿಯಿಂದಲೋ/ಹೋಟೆಲ್ಲಿಂದಲೋ ತಿಂಡಿ ತಂದು ಕೊಡುತ್ತಾರೆ. ಮತ್ತೆ ಟ್ಯೂಷನ್, ಹೋಂ ವರ್ಕ ಆರಂಭವಾಗುತ್ತದೆ. ಒಂದೆಡೆ ಮಕ್ಕಳಿಗೆ ಓದಲು ಕೂಡಿಸುತ್ತಲೇ ಅಮ್ಮ ರಾತ್ರಿಯ ಅಡುಗೆಗೆ, ಟಿ.ವಿ ನೋಡುತ್ತ ತಯಾರಿ ನಡೆಸುತ್ತಾಳೆ. ರಾತ್ರಿ ಹತ್ತು ಹತ್ತೂವರೆಗೆ ಒಂದು ಸಾರು, ಅನ್ನ ಮಾಡಿ ಅಯ್ಯಮ್ಮಾ ಎಂದು ಉಸಿರು ಬಿಡುತ್ತಾಳೆ. ಅಪ್ಪ ದಿನದ ಎಲ್ಲ ಆಯಾಸ ತಂದು ಮನೆಯ ಸದಸ್ಯರ ಮೇಲೆ ಹಾಕುತ್ತಾನೆ. ಹೆಂಡತಿಗೆ ಸ್ವಲ್ಪ ಹೆದರುವವನಾದರೆ ಹೀಗೆ ಹೋಗಿ ಹಾಗೆ ಒಂದು ಗುಟುಕು ಕುಡಿದು ಬಂದು ತೆಪ್ಪಗೆ ಅಡುಗೆಯಾಗುವ ತನಕ ಟಿ.ವಿ ನೋಡುತ್ತ ಸೋಪಾಕ್ಕೆ ತಗಲುಹಾಕಿಕೊಳ್ಳುತ್ತಾನೆ. ನನಗೆ ಇಡೀ ಬದುಕು ಎಷ್ಟು ಯಾಂತ್ರಿಕವಪ್ಪ ಎನಿಸುತ್ತದೆ.

ಇನ್ನು ಹಾಸ್ಟೆಲ್ ಗಳಿಗೆ ಬಂದರೆ ಹೆಣ್ಣುಮಕ್ಕಳು ರಾತ್ರಿಯೆಲ್ಲ ಕಥೆ ಹೇಳಿ ಬೆಳಿಗ್ಗೆ ಏಳುವುದು ಲೇಟು. ಅಂತೂ ಇಂತು ಎದ್ದು ಶೃಂಗಾರ ಮಾಡಿ ಹೊರಟರೆ ಮತ್ತೆ ಬರುವುದು ರಾತ್ರಿಯೇ. ಇರುವ ಚಿಕ್ಕ ಕೋಣೆಯಲ್ಲೇ ಎಲ್ಲ ಆಗಬೇಕು. ಕುಳಿತರೆ, ನಿಲ್ಲಲಾಗದು, ನಿಂತರೆ ಕುಳಿತುಕೊಳ್ಳಲಾಗದು. ಇದ್ದಿದ್ದರಲ್ಲಿ ಇವರು ಸ್ವಲ್ಪ ವಾಸಿ. ತೀರ ಸೋಂಬೇರಿಗಳ ಹೊರತಾಗಿ ಬಹುತೇಕರು ತಮ್ಮ ಬಟ್ಟೆಯನ್ನು ತಾವೇ ಒಗೆದುಕೊಳ್ಳುತ್ತಾರೆ. ಸ್ವಲ್ಪ ಬ್ಯೂಟಿಪಾರ್ಲರ್, ಗೆಳೆಯ/ಗೆಳತಿಯರ ಕ್ರಿಯಾತ್ಮಕ ಒಡನಾಟ, ಕೋಣೆಯ ಸ್ವಚ್ಛತೆ ಇವುಗಳ ಕಡೆ ಗಮನ ಕೊಡುತ್ತಾರೆ. ಆದರೆ ಇಲ್ಲೂ ಆಲಸ್ಯದ ಎಂತಹ ಪರಮಾವಧಿಯೆಂದರೆ ಕೆಲವರ ಸೋಂಬೇರಿತನಕ್ಕೆ ತಿಗಣೆಯಾದರೆ ಇಡೀ ಹಾಸ್ಟೆಲ್ಲು ಅನುಭವಿಸಬೇಕಾಗುತ್ತದೆ. ಗಂಡುಮಕ್ಕಳ ಹಾಸ್ಟೆಲ್ಲು ಇದಕ್ಕಿಂತಲೂ ಹೊರತಾಗೇನಿರುವುದಿಲ್ಲ ಎನ್ನುವುದು ನನ್ನ ತಮ್ಮನ ಹಾಸ್ಟೆಲ್ಲು ನೋಡಿ ತಿಳಿದಿದ್ದೇನೆ. ಅವರಲ್ಲಿ ಕೆಲವರು ವಾರಗಟ್ಟಲೆ, ತಿಂಗಳುಗಟ್ಟಲೆ ಸ್ನಾನವನ್ನೇ ಮಾಡುವುದಿಲ್ಲ ಎನ್ನುವುದನ್ನು ತಿಳಿದು, ಗಡ್ಡ ಮಾಡದಿದ್ದರೂ ಅಸಹ್ಯ ಹುಟ್ಟಿಸುವ ಹುಡುಗರು ನನ್ನ ಮಟ್ಟಿಗೆ ಸಹ್ಯರಾಗಿದ್ದು ಹಳೇ ಸುದ್ದಿ!

ಇಂತಿಪ್ಪ ಯುವ ಭಾರತದಲ್ಲಿ ಮೊನ್ನೆ ಪ್ರಧಾನಮಂತ್ರಿ ಮೋದಿಯವರು ಅಮೆರಿಕದಲ್ಲಿ ಭಾಷಣ ಮಾಡುತ್ತಿದ್ದಾಗ ನನಗೆ ನಗುವೋ ನಗು. ವಿಷಾದ ಮೂಡಲಿಲ್ಲ, ಯಾಕೆಂದರೆ ಯುವ ಭಾರತವನ್ನು ನೋಡಿ ನೋಡಿ ವಿಷಣ್ಣ ಮನಸ್ಸು ಸಣ್ಣವಾಗಿ ನಗು ದೊಡ್ಡದಾಗಿದೆ :) ತಮ್ಮ ವಸ್ತುಗಳನ್ನು ಸರಿಯಾಗಿ ಇಟ್ಟುಕೊಳ್ಳಲಾಗದ, ತಮ್ಮ ಬಾಯಿ, ದೇಹ, ತಲೆಯಂತಹ ಬಾಹ್ಯ ಜಗತ್ತಿಗೆ ಕಾಣುವ ಅಂಗಾಂಗಗಳನ್ನೂ ಸ್ವಚ್ಛವಾಗಿಟ್ಟುಕೊಳ್ಳಲಾಗದ, ಯಾರಿದ್ದಾರೆ ಇಲ್ಲ ಎನ್ನದೆ ಆಯ ಕಟ್ಟಿನ ಜಾಗದಲ್ಲಿ ಪರಪರ ಕೆರದುಕೊಳ್ಳುವ ಜನರು ಇಂದು ನೂರಕ್ಕೆ ಎಂಭತ್ತರಷ್ಟಿದ್ದಾರೆ. ಆ ಎಂಭತ್ತರಲ್ಲಿ ನಲವತ್ತರಷ್ಟು ಯುವ ಜನಾಂಗ ಮೋದಿಜೀ ಹೇಳಿದ 35ರ ಒಳಗಿದ್ದಾರೆ ಎನ್ನುವುದು ಇನ್ನೊಂದು ದುರಂತ.

ಇವರು ಸಂಘಟನೆ ಕೇಳಿ ಮುಂದು, ಭಾಷಣ ಕೇಳಿ ಮುಂದು, ಓದು, ವೃತ್ತಿ ದುಡಿಮೆ ಕೇಳಿ ಮುಂದು. ಆದರೆ ತಮ್ಮದೇ ಮನೆ, ತಮ್ಮದೇ ಪರಿಸರ, ತಮ್ಮದೇ ದೇಹ, ತಮ್ಮದೇ ವಸ್ತುಗಳು ಇವುಗಳಿಗೆ ಬಂದು ಬಿಟ್ಟರೆ ದೇವರಿಗೇ ಪ್ರೀತಿ. ಮನೆಯ ಕಸಗುಡಿಸಿ, ನೆಲ ಒರೆಸಲು ಇವರಿಗೆ ಆಳು ಬೇಕು. ಅಡುಗೆ ಮಾಡುವುದೆಂದರೆ ಬೇಜಾರು. ಹೊರಗೆ ಹೋಗಿ ಏನಾದರೂ ತಿಂದು ಬಂದು ಮಲಗಿದರೆ ಆಯ್ತು. ಇವರನ್ನು ಬೆಳೆಸಿದ ಆ ಅಮ್ಮ ಇನ್ನೊಂದು ಗೋಳು. ಎರಡು ದಿನದ ಹಿಂದೆ ಮಾಡಿದ್ದ ಒಂದು ಸಾರನ್ನೇ ಮನೆಯಲ್ಲಿ ತಿಂದಿಲ್ಲ, ಇನ್ನು ಎರಡು, ಮೂರು ಬಗೆ ಪದಾರ್ಥ ಎಂದು ದಬಾಯಿಸಲೇ ಬರಬಹುದು. 45 ದಾಟಿದ ಅಮ್ಮನಿಗೆ ಅತ್ತ ಮಕ್ಕಳು, ಗಂಡ ಯಾರೂ ಕೈಗೆ ಸಿಗದ ಅಬ್ಬೆಪಾರಿಯಾದ ಮನಃಸ್ಥಿತಿ. ಗಂಡನಿಗೆ ದಬಾಯಿಸಿ ಪಕ್ಕದ ಮನೆಯ ಆಂಟಿ ಅಡುಗೆ ಚೆನ್ನಾಗಿ ಮಾಡುತ್ತಾರೆ ಎಂದು ಹೇಳುವಂತಿಲ್ಲ, ಯಾಕೆಂದರೆ ಬಹುತೇಕ ಆಕೆಯೂ ಹಾಗೆಯೇ. ಇನ್ನು ಇಡೀ ಕಾಲನಿಯಲ್ಲಿ ಎಲ್ಲೊ ಒಬ್ಬ ಇಬ್ಬ ರುಚಿಕಟ್ಟಾಗಿ ಅಡುಗೆ ಮಾಡಿ, ಮನೆಯನ್ನು ಅಂದಚೆಂದವಾಗಿಟ್ಟುಕೊಂಡು, ತನ್ನದೂ ಎಂತ ಒಂದು ಬದುಕೂ ಇಟ್ಟುಕೊಂಡು, ಗಂಡ-ಮಕ್ಕಳೊಂದಿಗೆ ಖುಷಿಯಾಗಿದ್ದರೆಂತೂ ಆಕೆಯ ಪಾಡು ಯಾರಿಗೂ ಬೇಡ. ಅವಳೊಬ್ಬ ದೊಡ್ಡ ವಿಲನ್. ಅವಳ ಬಗ್ಗೆ ಕಾಲನಿಯ ಗಂಡಸರಿಗೆಲ್ಲ ಗೌರವ, ಸಿಕ್ಕರೆ ಒಂದು ಛಾನ್ಸ್ ನೋಡುವ ಆಸೆ. ತಮ್ಮ ಗಂಡನ ಕಣ್ಣಿನಲ್ಲಿ ಅವಳೆಡೆಗೊಂದು ಮೆಚ್ಚುಗೆಯ ನೋಟ ಕಂಡ ಹೆಣ್ಣುಮಕ್ಕಳಿಗೆಲ್ಲ ಅವಳನ್ನು ಕಂಡರೆ ಆಗುವುದಿಲ್ಲ.

ಇನ್ನು ಗಂಡ ಬೆಳಿಗ್ಗೆ ಆದ ಕೂಡಲೇ ಉಸ್ಸು ಉಸ್ಸು ಎನ್ನುತ್ತ ವಾಕಿಂಗ್ ಮಾಡುತ್ತಾನೆ. ಹೋಗುವಾಗ ನಾಯಿ ಇದ್ದರೆ ಅದನ್ನೂ ಕರೆದುಕೊಂಡು ಹೋಗಿ (ಅದು ರಸ್ತೆಯಲ್ಲೇ ಕಕ್ಕ ಮಾಡುತ್ತದೆ.) ಇವನು ತನ್ನ ಪಾಡಿಗೆ ತಾನು ವಾರ್ಮಅಪ್ ಮಾಡುತ್ತಾನೆ. ಇವನಿಗೆ ಮನೆಯಲ್ಲಿ ಸ್ವಲ್ಪ ಸ್ನಾನಕ್ಕೆ ನೀರು ಹಾಕು, ಸ್ವಿಚ್ಚು ಹಾಕು ಎಂದರೆ ಸಿಟ್ಟು ಬರುತ್ತದೆ. ಕಾಫಿ ಆಗಿದೆ ಬಂದು ತೆಗೆದುಕೊಂಡು ಕುಡಿದು ಹೋಗು ಎಂದರೆ ಸಿಡಿಮಿಡಿ. ತೊಳೆಯಲು ಬರ್ತಾರಲ್ಲ ಅವರಿಗೆ ನಿನ್ನ ತೊಳೆಯುವ ಬಟ್ಟೆ ಯಾವುದು, ನೋಡಿ ಹಾಕು ಎಂದರೆ ಮತ್ತೇನೋ ತರಲೆ. ಇವನೋ ಹೀಗೆ. ಇವನ ಮಕ್ಕಳು ಅಮ್ಮಾ ಶೂ ಕಾಣ್ತಿಲ್ಲ, ಇವತ್ತಿನ ಯುನಿಫಾರ್ಮ ಎಲ್ಲಿಟ್ಟಿದ್ದೀಯ, ಜಡೆ ಹಾಕು, ಹೀಗೆ ಸಾವಿರ ಕಿರಿಕಿರಿ. ಇವರೆಂತೂ ಶಾಲೆಗೆ ಹೋಗುವುದು, ಪಾಠ ಓದುವುದು, ಮನೆಯಲ್ಲಿ ಕೊಟ್ಟ ಊಟ ಹಿಡಿಸಿದರೆ ಮಾಡುವುದು, ಇಲ್ಲವಾದರೆ ಅಂಗಡಿ ತಿಂಡಿ ತಿನ್ನುವುದು, ಟ್ಯೂಷನ್, ಫ್ರೆಂಡ್ಸ್, ಆ ಕ್ಲಾಸು, ಈ ಕ್ಲಾಸು ಎಂದು ಓಡಾಡುವುದು ಇದರ ಮಧ್ಯೆ ಅಪ್ಪ, ಅಮ್ಮ ಇದ್ದಾರಾ, ಸತ್ತಿದ್ದಾರಾ ಎನ್ನುವ ಸ್ಪಂದನೆಯೂ ಇರುವುದಿಲ್ಲ. ತಿಂಡಿ ತಿಂದು ಎಸೆಯುವ ವ್ರ್ಯಾಪರ್ ಗಳನ್ನು ಅವರವರೇ ನಿಭಾಯಿಸುವುದನ್ನು ಕಲಿತಿದ್ದರಾದರೂ ಈ ದೇಶ ಇನ್ನಷ್ಟು ಸ್ವಚ್ಛವಾಗಿರುತ್ತಿತ್ತು. ಆದರೆ ಶಾಲೆಯಲ್ಲಿ ಪರಿಸರ ಪಠ್ಯಕ್ಕೆ 100ಕ್ಕೆ 100 ಅಂಕ ತೆಗೆಯುವ ಇವರು ಮಾಡುವ ಕಸವೇ (ಒಣತ್ಯಾಜ್ಯ) ದೇಶದಲ್ಲಿ ಉತ್ಪಾದನೆಯಾಗುವ ಕಾಲು ಭಾಗದಷ್ಟಿದೆಯೇನೋ.

ಇನ್ನು ಅಮ್ಮಂದಿರೆಂತೂ ಕೇಳುವುದೇ ಬೇಡ. ಬೊಜ್ಜು, ಬೊಜ್ಜು ಎನ್ನುತ್ತ ಕಂಡ ಕಂಡ ಟ್ರೀಟ್ ಮೆಂಟ್, ಯೋಗ ತರಗತಿ, ಆ ಜ್ಯೂಸು, ಈ ವಿಟಮಿನ್ ತಿಂದು ತಿಂದೂ ಏನಾಗುತ್ತಾರೋ ನಾನರಿಯೆ. ಇವರಿಗೆ ತಮ್ಮ ಮನೆ ಕೆಲಸಕ್ಕೆ ಜನ ಇಲ್ಲವೆಂದರೆ ಪ್ರೆಸ್ಟೀಜ್ ಪ್ರಶ್ನೆ. ನಿಮ್ಮ ಮನೆಯಲ್ಲಿ ಕೆಲಸದವರು ಇಲ್ವಾ? ಎಂದು ಅವರು ಕೇಳುವುದನ್ನು ನೋಡುವುದೇ ನನಗೀಗ ಚೆಂದ. ಮೊದಮೊದಲು ಅವರ ವ್ಯಂಗ್ಯ, ಕುಹಕಕ್ಕೆ ಬೇಜಾರಾಗ್ತಾ ಇತ್ತು. ಈಗ ಎಂಜಾಯ್ ಮಾಡ್ತೇನೆ. ಅಂತೂ ತಿಂಡಿಯಾಯ್ತು ಎನ್ನುವಾಗ ಮಧ್ಯಾಹ್ನ 12 ಆಗಿರುತ್ತದೆ. ಅಂತೂ ಊಟವಾಯ್ತು ಎಂದಾಗ ಸಂಜೆ 4-5 ಗಂಟೆಯಾಗಿರುತ್ತದೆ. ಏನು ಮಾಡಿದ್ದೀರಿ ಎಂದರೆ ಬೆಳಿಗ್ಗೆ ಬಾತ್ ಮಾಡಿದ್ದೆ. ಅದೇ ಉಳಿದಿತ್ತು ತಿಂದೆ ಎನ್ನುತ್ತಾರೆ. ಒಂದು ಅನ್ನ, ಸಾರು ಮಾಡಲು ಬೆಳಿಗ್ಗೆ ತಿಂಡಿ, ಮಧ್ಯಾಹ್ನದ ಊಟ ಎರಡೂ ಅಲ್ಲದ 1-2 ಗಂಟೆ ಒಳಗೆ ತಿಂಡಿ, ಊಟ ಎರಡೂ ``ತಿನ್ನು''ವವರನ್ನು ಪ್ರತಿನಿತ್ಯ ಕಾಣುತ್ತೇನೆ. ಇಂತಹ ದಿನಚರಿಯಲ್ಲಿ ವಿವೇಕಾನಂದರ ದೈಹಿಕ ಗಟ್ಟಿತನ ಎಲ್ಲಿಂದ ಬರಬೇಕು?

ಊಟದ ಸಂಸ್ಕಾರವಿಲ್ಲ, ಮಾತು, ನಡತೆಯ ಸಂಸ್ಕಾರವಿಲ್ಲ, ಧಾರ್ಮಿಕತೆಯ ಸಂಸ್ಕಾರವಿಲ್ಲ, ನಂಬುಗೆಯ ದಾರಿಯಿಲ್ಲ, ಕೆಲಸ, ವೈಯಕ್ತಿಕ ಸ್ವಚ್ಛತೆ, ಪರಿಸರದ ಓರಣ, ಇನ್ನೊಬ್ಬರ ಮನಃಸ್ಥಿತಿ, ಪರಿಸ್ಥಿತಿಯನ್ನು ಅರಿತು ಸಹಾನುಭೂತಿ, ಸಹಾಯ ಒದಗಿಸುವಿಕೆ ಇವೆಲ್ಲ ದೂರದ ಮಾತಾಗಿವೆ. ಬಹುಷಃ ಇದನ್ನು ಓದಿದವರು ನನ್ನನ್ನು 80 ವರ್ಷದ ಮುದುಕಿ ಎಂದುಕೊಂಡರೂ ಆಶ್ಚರ್ಯವಿಲ್ಲ. ಆದರೆ ಇವೆಲ್ಲ ಸತ್ಯ . ಈಗೇನಿದ್ದರೂ ಬರೇ ಓದು, ಓದು, ಓದು. ಕಾರು ಕೊಳ್ಳು, ವಿದೇಶ ತಿರುಗು, ಸರ್ಕಾರಿ/ಖಾಸಗಿ ಯಾವುದಾದರೂ ಸರಿ, ಒಂದು ಕೆಲಸ ಮಾಡಿ (ಲಂಚ ತೆಗೆದುಕೊಂಡಾದರೂ ಸರಿ, ಹೆದರಿಸಿ, ಕೊಳ್ಳೆಹೊಡೆದು, ಕೊನೆಗೆ ನಿನ್ನನ್ನೇ ಮಾರಿಯಾದರೂ ಸರಿ), ಮೊದಲು ದುಡ್ಡು ಮಾಡು ಎನ್ನುದನ್ನು ಮಾತ್ರ ಮುಂದಿನ ಪೀಳಿಗೆಗೆ ತಪ್ಪದೆ ತಲುಪಿಸಲಾಗುತ್ತಿದೆ. ಬೇರೆಯವರ ಕೆಲಸಕ್ಕೂ ತಾನೇ ಕ್ರೆಡಿಟ್ ತೆಗೆದುಕೊಳ್ಳುವುದು ಹೇಗೆ ಎನ್ನುವುದನ್ನು, ತಪ್ಪು ಹುಡುಕಿ ಜರಿಯುವುದನ್ನು, ತನ್ನ ತಪ್ಪಿಗೆ ಇನ್ಯಾರೋ ಕಾರಣ ಎನ್ನುವ ಪಲಾಯನವಾದವನ್ನು ಮಕ್ಕಳು ಮನೆಯಲ್ಲೇ ಕಲಿಯುತ್ತಿವೆ. ಪಾಪ, ಮೋದೀಜೀಗೆ ಇವುಗಳ ಅರಿವಿದ್ದಂತಿಲ್ಲ.

ಅಪ್ಪ, ಅಮ್ಮನಿಗೇ ಯಾರಾದರೂ ಪೂಜೆ, ಪ್ರಾರ್ಥನೆ, ಭಜನೆ, ಬಾಯಿಪಾಠದಂತಹ ಸಂಸ್ಕಾರದ ಪಾಠ ಯಾರಾದರೂ ಮಾಡಲೇಬೇಕಾದ ತುರ್ತು ಅನಿವಾರ್ಯತೆ ಇದೆ. ಹೀಗಿರುವಾಗ ಯುವಪೀಳಿಗೆಗೆ ಯಾರು, ಏನು ಹೇಳಿಕೊಟ್ಟಾರು? ಸೋಮಾರಿ (ಜಡಭರತ ಎನ್ನುವುದಿಲ್ಲ, ಆ ಲೇವಲ್ಲಿನ ಜಡತೆ ಇದಲ್ಲ) ಜಡ್ಡು ಗಟ್ಟಿದ ಜನರು ಅದೇನು ಸ್ವಚ್ಛ ಭಾರತ ಮಾಡುತ್ತಾರೋ ನನಗೆಂತೂ ಅನುಮಾನ. ಮೋದಿ ಅದೇನು ಕಂಡು ಇಡೀ ಜಗತ್ತಿಗೆಲ್ಲ ಇಲ್ಲಿನ ಯುವ ಜನರ ಬಗ್ಗೆ ಭರವಸೆ ನೀಡಿದರೋ ಗೊತ್ತಾಗ್ತಾ ಇಲ್ಲ. ಯಾಕೆಂದರೆ ಅತ್ಯಂತ ಆಶಾವಾದಿಯಾದ ನನಗೂ ಈ ವಿಷಯದಲ್ಲಿ ನಿರಾಶೆಯಿದೆ. ಬಹುಷಃ ಅವರು ಮಹಾ ಆಶಾವಾದಿಯಾಗಿರಬೇಕು!!

ಹಾಂ. ಇಷ್ಟೆಲ್ಲದರ ನಡುವೆ ಅಲ್ಲಲ್ಲಿ ಕೆಲವು ಅಮ್ಮಂದಿರು ಗಂಡ, ಮಕ್ಕಳನ್ನು ಹೋಟೆಲ್ಲಿಗೆ ಅಡಿಕ್ಟ್ ಮಾಡದೆ, ಶುಚಿ, ರುಚಿಯಾಗಿ ಮಾಡಿಹಾಕುತ್ತಿದ್ದಾರೆ. ತಮ್ಮ ಧಾರ್ಮಿಕತೆ, ಅಧ್ಯಾತ್ಮಿಕತೆಯಲ್ಲಿ ಮಕ್ಕಳನ್ನೂ ತೊಡಗಿಸಿಕೊಳ್ಳುತ್ತಿದ್ದಾರೆ. ಕೆಲವು ಮಕ್ಕಳು ಮನೆಯಲ್ಲಿ ವಾತಾವಾರಣ ಸರಿ ಇಲ್ಲದಿದ್ದರೂ ಓದಿ, ತಿಳಿದು ಸಕಾರಾತ್ಮಕವಾಗಿ ಬೆಳೆಯುತ್ತಿದ್ದಾರೆ, ಗಂಡ ತನ್ನ ಉಸಿರು ನಿಲ್ಲುತ್ತದೆ ಎಂದು ತಿಳಿದಂದಿನಿಂದ ಹೆಂಡತಿ ಗುಡಿಸಿ, ಒರೆಸದಿದ್ದರೂ ತಾನು ವ್ಯಾಕ್ಯೂಮ್ ಕ್ಲೀನರ್ ಹಾಕಿ ಮನೆ ಸ್ವಚ್ಛವಾಗಿಟ್ಟುಕೊಳ್ಳುತ್ತಿದ್ದಾನೆ....ಇಂತಹ ಎಲ್ಲ ಸಕಾರಾತ್ಮಕ, ಬದುಕಿನ ಬಗ್ಗೆ ತುಸು ಶ್ರದ್ಧೆಯಿರುವ ಮನಸ್ಸುಗಳಿಗೆ, ವ್ಯಕ್ತಿಗಳಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು. 

ಮಂಗಳವಾರ, ಜೂನ್ 17, 2014

ಅಧೋಗತಿಯಲ್ಲಿ ಬ್ರಾಹ್ಮಣರು - ಹೀಗೊಂದು ವಿಶ್ಲೇಷಣೆ

ಪೌರೋಹಿತ್ಯ ಅಥವಾ ಪುರದ ಹಿತವನ್ನು ಕಾಯುವ, ಪುರದ / ರಾಜ್ಯದ/ ಕುಲದ ಮಾರ್ಗದರ್ಶನ ಮಾಡುವ ಪೌರೋಹಿತ್ಯ ಎಂಬ ಶಬ್ದಕ್ಕೇ ಒಂದು ಘನತೆ ಇದೆ. ಈ ಪೌರೋಹಿತ್ಯ ಮಾಡುವ ಜನರು ಸಾಮಾನ್ಯರಿಗಿಂತಲೂ ಹೆಚ್ಚು ತಿಳುವಳಿಕೆ ಉಳ್ಳವರೂ, ವೇದ, ಶಾಸ್ತ್ರ, ಆಗಮ, ಉಪನಿಷತ್ತುಗಳನ್ನು ಓದಿಕೊಂಡವರೂ, ಜೀವನಾನುಭವವನ್ನು ಧನಾತ್ಮಕವಾಗಿ ಸಮಾಜದ ಒಳಿತಿಗೆ ಹಂಚಬಲ್ಲವರೂ ಆಗಿರಬೇಕು. ಈ ಎಲ್ಲ ಗುಣಗಳು ಸಾಮಾಜಿಕವಾಗಿ ಒಂದು ವರ್ಗಕ್ಕೆ ಮಾತ್ರ ಸೀಮಿತವಾಗಿವೆ ಎಂಬ ನಂಬಿಕೆ ಕಾಲಕ್ರಮದಲ್ಲಿ ಬೆಳೆದುಬಂತು. ಸಾಮಾನ್ಯವಾಗಿ ಒಬ್ಬ ವ್ಯಕ್ತಿಗೆ ತನ್ನ ಅಧಿಕಾರ ಹಾಗೂ ಅಸ್ತಿತ್ವವನ್ನು ಯಾರೂ ಪ್ರಶ್ನೆ ಮಾಡದೆ ಒಪ್ಪಿಕೊಳ್ಳುತ್ತಾರೆ ಎಂದಾಗ ಅತಿ ಆತ್ಮವಿಶ್ವಾಸ ಮತ್ತು ದರ್ಪ ಬಂದೇ ಬರುತ್ತದೆ. ಹೀಗೆ ತನಗೆ ಎಲ್ಲರಿಗಿಂತ ಹೆಚ್ಚು ಬುದ್ದಿ, ತಿಳುವಳಿಕೆ, ಜ್ಞಾನ ಇದೆ ಎಂಬ ಅಹಂಕಾರ ಒಂದು ವರ್ಗಕ್ಕೆ ಹೆಚ್ಚುತ್ತಾ ಹೋಯಿತು. ಮತ್ತು ಅದೇ ಕಾಲಕ್ರಮೇಣ (ಅವರದೇ ಭಾಷೆಯಲ್ಲಿ ಹೇಳಲು ಹೋದರೆ) ಅರಿಷಡ್ವೈರಿಗಳ ದಾಳಿಗೆ ಕಾರಣವಾಗುತ್ತದೆ. ಇಂತಹ ಒಂದು ಅವನತಿಯತ್ತ ಇಂದಿನ ಸಮಾಜದ ಒಂದು ವರ್ಗ ಬಂದು ನಿಂತಿದೆ.
ನಾನು ಪೌರೋಹಿತ್ಯದ ಔನ್ನತ್ಯಕ್ಕೆ ಸಾಕ್ಷಿಗಳನ್ನು ಇತಿಹಾಸದಲ್ಲಿ ಓದಿದ್ದೇನೆಯೇ ಹೊರತು, ಪ್ರತ್ಯಕ್ಷವಾಗಿ ಕಂಡಿದ್ದು ಅಪರೂಪ. ಅವನತಿಯ ಹಾದಿಯನ್ನು ಹಿಡಿದಿದ್ದಕ್ಕೆ ಸಾಕ್ಷಿಯಾಗಿದ್ದೇನೆ ಎಂಬುದು ವಾಸ್ತವ.
ಮೂಲತಃ ಈ ಅವನತಿಯ ಪಥದಲ್ಲಿರುವ ಸಮುದಾಯಕ್ಕೇ ಸೇರಿದವಳಾದ ನಾನು ಪುರೋಹಿತರನ್ನು ಹತ್ತಿರದಿಂದ ನೋಡಿದ್ದೇನೆ. ಹಿಂದಿನ ಲೇಖನವೊಂದರಲ್ಲಿ ಹೇಳಿದಂತೆ ನನ್ನಜ್ಜಿಯ ಮನೆ ಧಾರ್ಮಿಕ ಕೇಂದ್ರವಾಗಿತ್ತು. ಅಲ್ಲಿ ಹಬ್ಬ, ಹರಿದಿನಗಳು ಜೋರಾಗಿ ನಡೆಯುತ್ತಿದ್ದವು. ಇಂತಹ ಸಂದರ್ಭಗಳಲ್ಲಿ ಮನೆಗೆ ಪುರೋಹಿತರ ಬದಲು ಅರ್ಚಕರು ಬರುವುದು ವಾಡಿಕೆಯಾಗಿತ್ತು. ಕುಲಪುರೋಹಿತರು ಮದುವೆ, ಮುಂಜಿ, ಶ್ರಾದ್ಧಗಳಿಗೆ ಮಾತ್ರ ಬರುತ್ತಿದ್ದರು. ಹಾಗೆ ಪುರೋಹಿತರು, ಅರ್ಚಕರು ಯಾರೇ ಬರಲಿ ಸಂಸ್ಕೃತದಲ್ಲಿ ಪೂಜೆ ಮುಗಿಸಿ ಹೋಗುವುದು ಸಾಮಾನ್ಯವಾಗಿತ್ತು. ಹೆಂಗಸರು ಮಡಿಯಲ್ಲಿ ನೈವೇದ್ಯ ತಯಾರಿಸುವುದು, ಹೆಣ್ಣುಮಕ್ಕಳು ಹಾಡು, ಹಸೆ, ಆರತಿ ತಟ್ಟೆ, ಹೂವಿನ ಮಾಲೆ ಮಾಡುವುದು ಇವುಗಳಿಗೆ ಸೀಮಿತವಾಗಿದ್ದರೆ, ಮಡಿ ಉಟ್ಟ ಯಜಮಾನ ಅರ್ಚಕರು/ಭಟ್ಟರು/ಪುರೋಹಿತರು/ಸ್ವಾಮಿಗಳು/ ಹೀಗೆ ಯಾವುದೇ ಹೆಸರಿನಿಂದ ಕರೆಯಲ್ಪಡುತ್ತಿದ್ದವರ ಮಾರ್ಗದರ್ಶನದಲ್ಲಿ ಕೈಕರಣ ಮಾಡುತ್ತಿದ್ದರು. ಪೂಜೆಯ ಕೊನೆಯಲ್ಲಿ ಮಂಗಳಾರತಿಗೆ ಎಲ್ಲರೂ ಸೇರುವುದು ಸಂಪ್ರದಾಯ. ಯಾರೂ ಕೂಡ ಮಾಡುವ ಕೈಕರಣ, ಸಂಸ್ಕೃತದಲ್ಲಿರುವ ಮಂತ್ರಗಳ ಭಾವ, ಭಾವನೆ, ಪ್ರತ್ಯೇಕ ಪೂಜೆಗಳ ಮಹತ್ವವನ್ನು ಪ್ರಶ್ನಿಸಿದ್ದಾಗಲಿ/ ದೊಡ್ಡವರು ತಿಳಿಸಿಕೊಟ್ಟಿದ್ದಾಗಲಿ ಕಂಡಿಲ್ಲ. ಪರಿಣಾಮ ಒಂದು ಆಧ್ಯಾತ್ಮಿಕ ಆಚರಣೆ ಪೀಳಿಗೆಯಿಂದ ಪೀಳಿಗೆಗೆ ಮಹತ್ವ ಕಳೆದುಕೊಳ್ಳುತ್ತ ಕೇವಲ ಧಾರ್ಮಿಕ ಆಚರಣೆ ಮತ್ತು ಸಂಪ್ರದಾಯವಾಗಿ ಮುಂದುವರೆಯಿತು.
            ಇನ್ನು ಈ ಅರ್ಚಕರು/ಪುರೋಹಿತರು ಎಂದರೆ ಅತಿ ಗೌರವದಿಂದ ನೋಡುತ್ತಿದ್ದ ಜನ ಅವರಲ್ಲಿ ವಿಶ್ವಾಸ, ಗೌರವ ಕಳೆದುಕೊಳ್ಳಲೂ ಕಾರಣವಿದೆ. ಹಗಲಲ್ಲಿ ಪೂಜೆ ಮಾಡಿಸಿ ಸಂಜೆಯಾದ ಕೂಡಲೇ ಸಾರಾಯಿ ಅಂಗಡಿಗೋ, ವೇಶ್ಯೆಯರ ಮನೆಗಳಿಗೋ ಇವರುಗಳು ಹೋಗಿಬರತೊಡಗಿದರು. ದಕ್ಷಿಣೆ ಪೀಕುವುದು, ಅಕ್ಕಿ, ಕಾಯಿ, ದುಡ್ಡು ಹೀಗೆ ಪ್ರತಿಯೊಂದರಲ್ಲೂ ಹೆಚ್ಚಿಗೆ ಕೊಡಿ ಎಂಬ ಲೋಭಕ್ಕೆ ಬಿದ್ದರು. ವೈಯಕ್ತಿಕ ಸ್ವಚ್ಛತೆ, ಮಾತು, ನಡೆ, ನುಡಿ ಹೀಗೆ ಪ್ರತಿಯೊಂದರಲ್ಲೂ ತಮ್ಮ ಘನತೆ, ಸ್ಥಾನವನ್ನು ಮರೆತರು. ತಾವು ಏನು ಮಾಡಿದರೂ ಜನರು ತಮ್ಮ ಕಾಲಿಗೆ ಬೀಳುತ್ತಾರೆ ಎಂದುಕೊಂಡರು. ಇಲ್ಲೇ ಇವರು ಎಡವಿದ್ದು.
           ಅದೇ ರೀತಿ  ಗಾಯತ್ರಿ ಮಂತ್ರೋಪದೇಶವೆಂತೂ ಬ್ರಾಹ್ಮಣನಾಗಿ ಹುಟ್ಟಿದ ತಪ್ಪಿಗೆ, ಸರಿಕರಲ್ಲಿ ಘನತೆ ಉಳಿಸಿಕೊಳ್ಳಲು ತೆಗೆದುಕೊಳ್ಳುವ ಒಂದು ಕರ್ಮದಂತೆ ಭಾಸವಾಗತೊಡಗಿತ್ತು. ಬಹುಶಃ ಇಂದು ನನ್ನ ಸಮುದಾಯದಲ್ಲಿ ಶೇ.95 ರಷ್ಟು ಜನರು ಗಾಯತ್ರಿ ಮಾಡುತ್ತಿಲ್ಲ. ಉಳಿದ 5ರಲ್ಲಿ ಶೇ.3ರಷ್ಟು ಜನರು ಅನಿವಾರ್ಯವಾಗಿಯೂ, ಶೇ.1ರಷ್ಟು ಯಾಂತ್ರಿಕವಾಗಿಯೂ ಮತ್ತು ಶೇ. 1ರಷ್ಟು ಜನ ಮಾತ್ರ ಶ್ರದ್ಧಾಪೂರ್ವಕವಾಗಿ ಮಾಡುತ್ತಿದ್ದಾರೆ! ಪೌೆರೋಹಿತ್ಯವು ಕುಲಕಸುಬಾಗಿದ್ದಾಗ ತೆಗೆದುಕೊಂಡ ದಾನವನ್ನು ದಕ್ಕತ್ತು ಮಾಡಿಕೊಳ್ಳಲು ಪ್ರತಿದಿನ ಇಂತಿಷ್ಟು ಗಾಯತ್ರಿ ಮಂತ್ರ ಜಪ ಮಾಡುವುದು ಕಡ್ಡಾಯವಾಗಿತ್ತು. ಕ್ರಮೇಣ ಇದು ಕುಲಕಸುಬಿನ ಬದಲು ಅನಿವಾರ್ಯ ಕರ್ಮವಾದಾಗ ತೆಗೆದುಕೊಂಡ ದಾನಕ್ಕೆ ಪ್ರತಿ ಜಪ ಮಾಡುವುದು ನಿಂತುಹೋಯಿತು. ಈಗ ಬ್ರಾಹ್ಮಣರೆಂದು ಕರೆದುಕೊಳ್ಳುವವರೇ ಅರ್ಚಕರನ್ನು ಗೇಲಿ ಮಾಡುವ ಪರಿಸ್ಥಿತಿ ಬಂದಿದೆ.
            ನಾನು ಮನೆ ಶಿಫ್ಟ್ ಮಾಡುವ ಸಂದರ್ಭ. ಶಿರಸಿಯಿಂದ ಮೈಸೂರಿಗೆ ಬರುವಾಗ ಒಬ್ಬ ಮುಸಲ್ಮಾನನ ಗಾಡಿಯಲ್ಲಿ ಬಂದೆವು. ಆಗ ಆತ ತಪ್ಪದೇ ಮಧ್ಯಾಹ್ನ ಮತ್ತು ಸಂಜೆ ನಮಾಜ್ ಮಾಡಿದ. ನಾನು ಕಾಲೇಜಿನ ಹಾಸ್ಟೆಲ್ ನಲ್ಲಿರುವಾಗ ಇದ್ದೊಬ್ಬ ಮುಸ್ಲಿಂ ಹುಡುಗಿ ಪ್ರತಿನಿತ್ಯ ತಪ್ಪದೇ ನಮಾಜ್ ಮಾಡುತ್ತಿದ್ದಳು, ರಂಜಾನ್ ಉಪವಾಸವನ್ನು ಆಚರಿಸುತ್ತಿದ್ದಳು. ಇದನ್ನೆಲ್ಲ ನೋಡಿದಾಗ ನಾವ್ಯಾಕೆ ನಮ್ಮ ಕರ್ತವ್ಯವನ್ನು ಮರೆತಿದ್ದೇವೆ ಎಂದೆನಿಸದೇ ಇರಲಿಲ್ಲ.
            ಎಂತಹ ಸ್ಥಿತಿ ಬಂದಿದೆ ಎಂದರೆ ಪೂಜೆ ಎಂದರೆ ಧಾರ್ಮಿಕ ಆಚರಣೆ ಮಾತ್ರ ಎಂಬ ಭಾವನೆ ಬಹುತೇಕರಲ್ಲಿದೆ. ಎಡಪಂಥೀಯ ವಿಚಾರಧಾರೆಗಳು ಮತ್ತು ಬಲಪಂಥೀಯ ವಿಚಾರಧಾರೆಗಳು ಎಂಬ ಭೇದ ಬಹಳ ಕ್ಲಿಷ್ಟವಾಗಿದೆ. ಭಾಷಣಗಳಲ್ಲಿ, ಮಾಧ್ಯಮಗಳಲ್ಲಿ ಮೂಢನಂಬಿಕೆ, ಆಚರಣೆ, ಸಂಪ್ರದಾಯ, ಅಧ್ಯಾತ್ಮ, ಜ್ಯೋತಿಷ್ಯ ಇವುಗಳನ್ನೆಲ್ಲ ವಿರೋಧಿಸುವ ಎಷ್ಟೋ ಜನರು ವೈಯಕ್ತಿಕವಾಗಿ ತೀರ ಖಾಸಗಿಯಾಗಿ ಜ್ಯೋತಿಷಿಗಳನ್ನು ಆಸ್ಥಾನಿಕರನ್ನಾಗಿಟ್ಟುಕೊಂಡಿರುವುದನ್ನು ನೋಡಿದ್ದೇನೆ. ಕದ್ದು ಮುಚ್ಚಿ ಪೂಜೆ, ಬಲಿಯಂತಹ ಆಚರಣೆಗಳನ್ನು ಮಾಡುವುದೂ ಗೊತ್ತು. ಹೀಗೆ ಒಳಗೊಂದು ಹೊರಗೊಂದರ ನಡುವೆ ಸತ್ಯ ಕಳೆದುಹೋಗಿದೆ. ಇದಕ್ಕೆಲ್ಲ ಇನ್ನೊಂದು ಸೇರಿದಂತೆ ಸ್ವತಃ ಮುಖ್ಯಮಂತ್ರಿಯಾದವರೇ ಬ್ರಾಹ್ಮಣ ವಿರೋಧಿಯಾಗಿರುವುದು.
           ದೇವಸ್ಥಾನಗಳೆಂದರೆ ಹಿಂದೆಲ್ಲ ಉಂಬಳಿ ಇರುತ್ತಿತ್ತು. ದೇವಸ್ಥಾನದ ಪೂಜೆಗಾಗಿ, ಅರ್ಚಕ ಕುಟುಂಬದ ಉದರಂಭರಣಕ್ಕಾಗಿ ಸ್ವತಃ ರಾಜಾಶ್ರಯವಿರುತ್ತಿತ್ತು. ಹಳ್ಳಿಗಳಲ್ಲಿ ದೇವಸ್ಥಾನ ಊರಿನದ್ದಾದರೂ ದಿನಕ್ಕೆ ಒಂದು ಪೂಜೆ ಮತ್ತು ಸಾಯಂಕಾಲ ಸಣ್ಣದೊಂದು ಹಾಲು ನೈವೇದ್ಯ ಬಿಟ್ಟರೆ ಅರ್ಚಕರಿಗೆ ಬೇರೆ ಕೆಲಸವಿರುತ್ತಿರಲಿಲ್ಲ. ಹಾಗಾಗಿ ಅವರು ಕೃಷಿಯಲ್ಲಿ, ಪೌರೋಹಿತ್ಯದಲ್ಲಿ ತೊಡಗಿಕೊಂಡಿರುತ್ತಿದ್ದರು/ಇದ್ದಾರೆ. ಆದರೆ ಈಗ ದೇವಸ್ಥಾನಗಳು ಧಾರ್ಮಿಕ ಪ್ರವಾಸಿ ಕೇಂದ್ರಗಳಾಗಿವೆ. ಭಕ್ತರು ಎಷ್ಟೊತ್ತಿಗೆ ಬಂದರೂ ದೇವರಿಗೆ ಆರತಿ ಎತ್ತಿಕೊಡಬೇಕಾದ, ಅರ್ಚನೆ ಮಾಡಬೇಕಾದ ಸ್ಥಿತಿ ಇದೆ. ದೇವಾಲಯಕ್ಕೆ ಹೋಗುವ ಜನರು ಅರ್ಚಕರ ಆಯಾಸ, ಆರೋಗ್ಯದ ಬಗ್ಗೆ ಯೋಚನೆ ಮಾಡುವುದಿಲ್ಲ. ಅವರಿಗೇನು ತಟ್ಟೆ ಕಾಸು, ದಾನ ಎಂದು ಚೆನ್ನಾಗಿ ದುಡ್ಡು ಮಾಡ್ತಾರೆ ಎಂದು ಮೂದಲಿಸುತ್ತಾರೆ. ದೇವಸ್ಥಾನ ಮಾಡಿ ಒಬ್ಬ ಅರ್ಚಕರನ್ನಿಟ್ಟು, ಮನ ಬಂದಂತೆ ದುಡಿಸಿ,  ಆಯಾ ಟ್ರಸ್ಟ್ ಗಳ ಹೆಸರಿನಲ್ಲಿ ಆಸ್ತಿ ಮಾಡುವುದೂ ಒಂದು ದೊಡ್ಡ ಉದ್ಯಮವಾಗಿದೆ. ಅರ್ಚಕರ ಕಷ್ಟ ಏನು ಎಂದು ಮುಖ್ಯಮಂತ್ರಿಗಳಿಗೂ ಅರಿವಿದ್ದಂತಿಲ್ಲ. ಈ ಕೆಲಸವನ್ನು ಅವರ ಆಪ್ತವಲಯದಲ್ಲಿರುವ ಬ್ರಾಹ್ಮಣರು ಮಾಡಬೇಕಿದೆ.
           ಜೊತೆಗೆ ಅಳಿದುಳಿದ ಅರ್ಚಕ ವೃತ್ತಿಯಲ್ಲಿರುವ ಬ್ರಾಹ್ಮಣರು ಪುರೋಹಿತರ ಗುಣಗಳನ್ನು ಪುನರ್ ಅಳವಡಿಸಿಕೊಂಡು ಇಡೀ ಸಮುದಾಯದ ಘನತೆ ಹೆಚ್ಚಿಸುವ ಕೆಲಸ ಮಾಡಬೇಕಿದೆ.  ಸಂಸ್ಕೃತ ಮಂತ್ರಗಳನ್ನು ಕನ್ನಡೀಕರಣಗೊಳಿಸುವ ಮತ್ತು ದೇವರನ್ನು ಸಾಮಾನ್ಯ ಜನರ ಬಳಿಯೂ ತರುವ ಅಭಿಯಾನ ಆಗಬೇಕಿದೆ. ಟಿ.ವಿಯಲ್ಲಿ ಹೇಳುವ ಅಂಧ ಆಚರಣೆಗಳ ಬದಲಿಗೆ ದೇವರ ಜೊತೆಗೆ ನಿಜ ಸಂಧಾನ ಮಾಡಿಸುವ ಭಕ್ತಿಯ ಹೊಸ ಅಧ್ಯಾಯ ಶುರುವಾಗಬೇಕಿದೆ. ಸಾಮಾನ್ಯ ಜನರನ್ನು ಲಾಭ, ನಷ್ಟಗಳ ವ್ಯಾಪಾರ ಬುದ್ಧಿಯಿಂದ ನಿಜಕರ್ಮ, ಕರ್ತವ್ಯ, ಜವಾಬ್ದಾರಿ ಮತ್ತು ಸಮರ್ಪಣೆಯಂತಹ ಉನ್ನತ ಭಾವನೆಗಳೆಡೆ ಕರೆದೊಯ್ಯಬೇಕಿದೆ. ಅಂದಾಗ ಮಾತ್ರ ಸನಾತನ ಹಿಂದೂ ಧರ್ಮದ ಬೇರುಗಳು ಮತ್ತೆ ಚಿಗಿತುಕೊಳ್ಳುತ್ತವೆ. ಭಾರತ ಮತ್ತೊಮ್ಮೆ ಆಧ್ಯಾತ್ಮಿಕ ಶಕ್ತಿಯಾಗುತ್ತದೆ.