ಭಾನುವಾರ, ನವೆಂಬರ್ 1, 2015

ಜಾತ್ಯಾತೀತ ರಾಷ್ಟ್ರದಲ್ಲಿ ‘ನಾನು’

ಅಕ್ಷರಶಃ ಕಂಗಾಲಾಗಿದ್ದೇನೆ. ಹಿಂದಿನ ನನ್ನ ಫೇಸ್ಬುಕ್ ಸ್ಟೇಟಸ್ ನಲ್ಲಿ ಹೇಳಿದಂತೆ ನನ್ನ ಬಾಲ್ಯದಲ್ಲಿ ಜಾತಿ ಪದ್ದತಿಯ ಗಂಧಗಾಳಿಯೇ ಇರಲಿಲ್ಲ. ಅಲ್ಲಿ ಹೋಗಬೇಡ, ಇವರನ್ನು ಮುಟ್ಟಿಸಿಕೊಳ್ಳಬೇಡ, ಅವರನ್ನು ಮುಟ್ಟಿಬಂದರೆ ಬಟ್ಟೆ ಬದಲಾಯಿಸು ಇಂತವನ್ನೆಲ್ಲ ಕೇಳಿಯೇ ಗೊತ್ತಿರಲಿಲ್ಲ. ಆ ನಂತರದ ಕೆಲವು ವರ್ಷ ಹವ್ಯಕ ಬ್ರಾಹ್ಮಣ ಸಮುದಾಯದ ಆಚಾರ, ವಿಚಾರಗಳು, ಪದ್ದತಿಗಳು, ಪುರಾಣ, ಶಾಸ್ತ್ರಗಳು, ಮಂತ್ರ, ಪೂಜೆಗಳು, ಅವುಗಳ ಹಿಂದಿನ ತತ್ವಗಳ ಅನ್ವೇಷಣೆ, ದೇವರು, ಭಕ್ತಿ, ಪ್ರೀತಿ ಇವುಗಳನ್ನು ಅರ್ಥ ಮಾಡಿಕೊಳ್ಳಲೇ ಕಳೆದವು. ಅಲ್ಲಿ ಹೊಲೆಯರ ಮನೆ, ನಾಯಕರ ಕೇರಿ, ಭಟ್ಟರ ಕೇರಿ, ಹೆಗಡೆ ಕೇರಿ, ಮೇಲಿನ ಕೇರಿ, ಕೆಳಗಿನ ಕೇರಿ, ಘಟ್ಟದ ಕೆಳಗಿನವರು, ಘಟ್ಟದ ಮೇಲಿನವರು, ತೋಟದ ಸೀಮೆಯವರು, ಗದ್ದೆ ಸೀಮೆಯವರು, ಆ ತಾಲೂಕು, ಈ ತಾಲೂಕು ಇಷ್ಟು ವಿಭಾಗಗಳಲ್ಲಿ ಜನರ ಮನಸ್ಸು ಹಂಚಿಹೋಗಿದ್ದು ಕಂಡೆ. ಈ ಪ್ರದೇಶಗಳ ಹಂಚಿಕೆ ಮತ್ತು ಅವುಗಳ ನಡುವಿನ ಮೌನ ಯುದ್ಧ ನನ್ನೊಳಗೆ ಹೊಸ ಯುದ್ಧವನ್ನು ಹುಟ್ಟುಹಾಕಿತ್ತು. ನಂತರ ನಮಸ್ತೆ ಮಾತೃಭೂಮೆಯ ಪರಿಚಯವಾದಾಗ ಓ ನಾವೆಲ್ಲ ಹಿಂದೂಗಳು, ಆ ಸಾಬಿಗಳು ಎಂಬಂತಹ ಮಾತುಗಳು ಕೇಳಿಬಂದವು. ಹುಟ್ಟಾ ಕ್ರಿಶ್ಚಿಯನ್ನರನ್ನು ನೋಡದ ನನಗೆ ಅವರ ಬಗ್ಗೆ ಕುತೂಹಲ. ಜೀವನ ಹುಬ್ಬಳ್ಳಿಗೆ ಕರೆದುಕೊಂಡು ಹೋಗಿ ಅಲ್ಲಿಯ ಚರ್ಚುಗಳಲ್ಲಿ ಪ್ರತಿ ಭಾನುವಾರ ನಡೆಯುವ ಪ್ರಾರ್ಥನಾ ಸಭೆಗಳ ಮೂಲಕ ಅವರ ಜನಜೀವನದ ಬಗ್ಗೆ ಅಲ್ಪ ಸ್ವಲ್ಪ ತಿಳುವಳಿಕೆ ನೀಡಿತು. ಮೈಸೂರಿಗೆ ಪ್ರವಾಸಕ್ಕೆ ಹೋದಾಗ ಶ್ರೀರಂಗಪಟ್ಟಣದ ದರ್ಗಾದ ಒಳಗೆ ನಮ್ಮನ್ನು ಬಿಡಲಿಲ್ಲ. ಮುಸ್ಲಿಂ ಅಲ್ಲದವರು, ಮುಸ್ಲಿಂರಾದರೂ ಹೆಣ್ಣುಮಕ್ಕಳಾದರೂ ಒಳಗೆ ಬಿಡುವುದಿಲ್ಲ ಎಂದು ಅಲ್ಲಿ ಗೊತ್ತಾಯಿತು. ಕಾರಣ ಕೇಳಿದ್ದಕ್ಕೆ ಅದೇ ಹಿಂದೂಗಳ ಮಾತು ‘ನಾಲ್ಕು ದಿನದ ಬಹಿಷ್ಕಾರ’. ಅದಾಗಲೇ ಅಪ್ಪನ ದೋಸ್ತಿ ಸಾಲೇ ಸಾಹೇಬರ ಮಗಳು ೧೬ ವರ್ಷಕ್ಕೆ ಮದುವೆಯಾದದ್ದೂ, ವರ್ಷ ತುಂಬುವುದರ ಒಳಗೆ ಅವಳ ಪುಟ್ಟ ಮಗುವನ್ನು ನೋಡಲು ನಾನು, ಅಮ್ಮ ಹೋಗಿದ್ದೂ ನೆನಪಿತ್ತು. ಈ ಪ್ರವಾಸದ ಹೊತ್ತಿಗೆ ಆಕೆಯ ಗಂಡ ಯಾವುದೋ ಅಪಘಾತದಲ್ಲಿ ತೀರಿಹೋದನೆಂದೂ ಆಕೆಗೆ ಮತ್ತೊಂದು ನಿಖಾ ಮಾಡುವ ತಯಾರಿ ನಡೆಯುತ್ತಿದೆಯೆಂದೂ ಕೇಳಲ್ಪಟ್ಟಿದ್ದೆ. ಜೀವನದಲ್ಲಿ ನಾನು ನೋಡಿದ ಮೊದಲ ಮದುವೆ, ಮೊದಲ ಹುಟ್ಟಿನ ಸಂಭ್ರಮ ಬಹುಶಃ ಆಶಾಬಿಯದ್ದೆ ಎಂದು ನೆನಪು. ನನಗೆ ಹಿಂದೂ ಧರ್ಮ ಮತ್ತು ಇಸ್ಲಾಂ ಧರ್ಮಗಳ ಆಶಯ, ದೌರ್ಬಲ್ಯಗಳ ನಡುವೆ ಅಂತಹ ವ್ಯತ್ಯಾಸ ಕಾಣಲಿಲ್ಲ. ವಯಸ್ಸಾದರೂ ತುಂಡುಲಂಗ ಧರಿಸಿ ಯಾವುದೋ ಮದುವೆ ಮನೆಗೆ ಹೋಗುವ ಸಂಭ್ರಮದಲ್ಲಿ ಪ್ರಾರ್ಥನಾ ಸಭೆಗಳಲ್ಲಿ ಅವರು ಪ್ರಾರ್ಥಿಸುತ್ತಿದ್ದ ರೀತಿ, ನಮ್ಮಲ್ಲಿನ ಪೂಜೆಯ ಕೊನೆಗೆ ಮಂತ್ರಪುಷ್ಪ ಹೇಳುವುದನ್ನು ನೆನಪಿಸಿತ್ತು. ಇವತ್ತಿಗೂ ಮಸೀದಿಯಿಂದ ಕೇಳುವ ಅಲ್ಲಾ ಹೋ ಅಕ್ಬರ್ ನಲ್ಲಿ ನನಗೆ ಓಂಕಾರದ ಧ್ವನಿ ಕೇಳಿಸುತ್ತದೆ. ನನ್ನ ಕಿವಿಯೇ ಸರಿಯಿಲ್ಲವೇನೋ ಅದು ಬೇರೆ ಮಾತು!!
              ಇಂತಿಪ್ಪ ನನಗೆ ಯಾವಾಗ ಸಾಬಿ ಎಂಬ ತಿರಸ್ಕಾರದ ಮಾತುಗಳು, ಹೆಣ್ಣುಮಕ್ಕಳ ನಡತೆ, ವಿಚಾರ, ಧೋರಣೆಯ ಮೇಲೆ ವಿಪರೀತ ನಿಯಂತ್ರಣದ ಅರಿವು ನನಗೆ ಅರ್ಥವಾಗತೊಡಗಿತೋ ಆಗ ಆರ್ ಎಸ್ ಎಸ್ ಎಂಬ ಭೂತ ತಲೆಯಿಂದ ಇಳಿಯಿತು! ಅಯ್ಯೋ ಇದೆಂತ ಧರ್ಮ, ಜಾತಿಯಪ್ಪ ಎಂದು ನಿಜಕ್ಕೂ ಕಂಗಾಲಾದ ನಾನು ನನ್ನದೇ ಅಧ್ಯಯನಕ್ಕೆ ತೊಡಗಿದೆ. ಈ ಸಮಾಜದಲ್ಲಿ ಜಾತಿ ಯಾಕೆ ಬೇಕು? ಯಾಕೆ ಬಂತು? ಇದರ ಹಿನ್ನೆಲೆ ಏನು? ಧರ್ಮ ಎಂದರೇನು? ಅದರ ನಿಜಾರ್ಥ ಏನು? ಹೀಗೆ ಹತ್ತು ಹಲವು ಪ್ರಶ್ನೆಗಳಿಗೆ ನಾನು ಉತ್ತರ ಕಂಡುಕೊಂಡೆ. ಅದನ್ನೆಲ್ಲ ನಿಮ್ಮೊಂದಿಗೆ ಹಂಚಿಕೊಳ್ಳಲು ಹೋದರೆ ದೊಡ್ಡ ಪುಸ್ತಕವೇ ಆದೀತು. ಆದರೆ ಸಂಕ್ಷಿಪ್ತ ರೂಪ ನೀಡಬಲ್ಲೆ.
             ಈ ಸಮಾಜದಲ್ಲಿ ಜಾತಿ, ಲಿಂಗ ಇವೆಲ್ಲದರ ತಾರತಮ್ಯ ಹುಟ್ಟು ಹಾಕಿದ್ದು ಶ್ರಮದ ವಿಂಗಡಣೆ. ಮನೆಕೆಲಸ ಮಾಡುವವಳು ಹೆಂಗಸು, ದುಡಿದು ತರುವವ ಗಂಡಸು, ಹೊಲದಲ್ಲಿ ಬಿಸಿಲಲ್ಲಿ ಕೆಲಸ ಮಾಡುವುದು, ಕಸ ಹೊಡೆಯುವುದು, ದೇವರ ಪೂಜೆ ಮಾಡುವುದು ಹೀಗೆ ಪ್ರತಿಯೊಬ್ಬರಿಗೂ ಒಂದೊಂದು ಕೆಲಸದ ವಿಂಗಡಣೆ ಮಾಡುತ್ತ ಹೋಗಿದ್ದು ಈ ದರಿದ್ರ ಜಾತಿ ಪದ್ಧತಿಗೆ ಮೂಲ. ಕೆಲಸಗಳನ್ನು ಸುಲಭಗೊಳಿಸಲು ಸಮುದಾಯವನ್ನು ವಿಂಗಡಿಸಿದ್ದು ಎತ್ತೆತ್ತಲೋ ದಾರಿ ಮಾಡಿಕೊಟ್ಟಿತು. ಸಾವಿನ ನಂತರದ ಬದುಕಿನ ಅನ್ವೇಷಣೆಗೆ ಬಿದ್ದ ಮನಸ್ಸು, ಪ್ರಕೃತಿಯನ್ನು ನಿಯಂತ್ರಿಸುವ ಶಕ್ತಿಯೊಂದಿದೆ, ಅದು ನಮಗಿಂತ ದೊಡ್ಡದಿದೆ ಎಂದು ಅರಿವಾದಾಗ ಬಂದಿದ್ದು ದೇವರ ಕಲ್ಪನೆ. ಈಗ ದೇವರನ್ನು ಮೆಚ್ಚಿಸಲು ಪೂಜೆ, ಬಲಿ, ಆತನೂ ಒಬ್ಬ ವ್ಯಕ್ತಿ ಎಂದು ತಮಗೆ ಏನೇನು ದೌರ್ಬಲ್ಯ, ಶಕ್ತಿಗಳಿವೆಯೋ ಅವುಗಳನ್ನು ಆರೋಪಿಸುತ್ತ ಹೋಗಿದ್ದು ಆ ಕೆಲಸಕ್ಕಾಗಿಯೇ ವ್ಯಕ್ತಿಯೊಬ್ಬನನ್ನು ನಿಯೋಜಿಸುವ ಹಂತ ತಲುಪಿತು. ಇದು ಆ ವ್ಯಕ್ತಿ ತನ್ನೊಳಗೆ ತಾನೇ ಹೊಕ್ಕು ನೋಡುವ ಅವಕಾಶ ಒದಗಿಸಿತು. ಅದರಂತೆ ಆತ ತನ್ನ ಒಳನೋಟದಿಂದ ಸಮುದಾಯದ ಹಿತಕ್ಕೆ ಸಲಹೆಗಳನ್ನು ನೀಡತೊಡಗಿದ. ಜನರು ಅವನನ್ನು ಪವಾಡ ಪುರುಷ, ದೇವಾಂಶ ಸಂಭೂತ ಎಂದು ಗೌರವಿಸತೊಡಗಿದರು. ನಿಧಾನವಾಗಿ ಅಹಂಕಾರ ಬೆಳೆದಂತೆ ದೌರ್ಜನ್ಯದ ಆರಂಭವಾಯಿತು. ಇದನ್ನು ಪ್ರಶ್ನಿಸಿ/ ಎದುರಿಸಲಾಗದೆ ಈ ವಿಭಾಗಿಸಲ್ಪಟ್ಟ ಶ್ರಮಜೀವಿಗಳು ತಮ್ಮದೇ ದೇವರನ್ನು ಸ್ಥಾಪಿಸಿಕೊಂಡರು. ಅದು ಮಾರಮ್ಮ, ಕೆಂಪಮ್ಮನಿಂದ ಮೊದಲ್ಗೊಂಡು, ಮೇರಿ, ಸಂತರು, ಸೂಫಿಗಳು, ಶಿಯಾ, ಸುನ್ನಿಗಳು, ಹೀನಾಯಾನ, ಮಹಾಯಾನ ಹೀಗೆ ಹೊಸ ಹೊಸ ದೇವರುಗಳು, ಅವರಿಗೆ ಆರೋಪಿಸಿದ ಅಗತ್ಯತೆಗಳನ್ನು ಪಾಲಿಸುವ ಹೊಸ ಪಂಥಗಳು, ಆ ಹೊಸ ಪಂಥಗಳಲ್ಲಿನ ದೌರ್ಜನ್ಯ ಪ್ರಶ್ನಿಸಿ ಇನ್ನೊಂದಿಷ್ಟು ಮತ, ಪಂಥಗಳು ಹೀಗೆ ಒಡೆದುಹೋಗುತ್ತ ಬಂತು. ಯಾವ ಧರ್ಮ ಜನರನ್ನು ಒಂದುಗೂಡಿಸಬೇಕಿತ್ತೋ ಯಾವ ದೇವರು, ಅವನ ಕಲ್ಪನೆ, ಆಚರಣೆಗಳು ಆತ್ಮಗಳನ್ನು ಯೋನಿ, ಮೊಲೆ, ಶಿಶ್ನಗಳ ಪ್ರಜ್ನೆಯಿಂದ ಮೇಲೆತ್ತಬೇಕಿತ್ತೋ ಅದೇ ಇವತ್ತು ಜನರನ್ನು ಅವನತಿಗೆ ಒಯ್ಯುತ್ತಿರುವುದು ದುರಂತ!
             ಇಲ್ಲಿ ಧರ್ಮ, ಕೆಲಸದ ವಿಂಗಡಣೆಯಂಥ ಕಲ್ಪನೆಗಳನ್ನೆಲ್ಲ ತಂದವರ ತಪ್ಪು ನನಗೆ ಕಾಣುತ್ತಿಲ್ಲ. ಆದರೆ ಮನುಷ್ಯನ ಗ್ರಹಿಕೆಯ ದೋಷ ಇದಕ್ಕೆಲ್ಲ ಮೂಲ ಕಾರಣ ಎಂದು ಮನಃಶಾಸ್ತ್ರದ ವಿದ್ಯಾರ್ಥಿಯಾಗಿ ಹೇಳಬಲ್ಲೆ. ಉದಾಹರಣೆಗೆ ನಮ್ಮ ಸುತ್ತಲಿನವರನ್ನೆ ತೆಗೆದುಕೊಳ್ಳಿ. ಪುರುಷರಾದರೆ ನಾನು ನನ್ನ ಅಪ್ಪನನ್ನು ಅನುಸರಿಸುತ್ತೇನೆ. ನಮ್ಮಪ್ಪ ಹಾಗಿದ್ದ, ಹೀಗಿದ್ದ ಅವನೇ ನನ್ನ ಪಾಲಿನ ಗುರು! ಯಾವುದಕ್ಕೆ? ಕುಡಿಯುವುದಕ್ಕೆ, ಹೆಂಡತಿಗೆ ಹೊಡೆಯುವುದಕ್ಕೆ, ಅವಳನ್ನು ನಿಯಂತ್ರಣದಲ್ಲಿ ಇಡುವುದಕ್ಕೆ ಹೀಗೆ ಅಪ್ಪನಿಗೆ ಯಾವ ಯಾವ ದೌರ್ಬಲ್ಯಗಳಿದ್ದವೋ ಅವು ಮಗನ ಗ್ರಹಿಕೆಯಲ್ಲಿ ಅನುಸರಿಸಲೇಬೇಕಾದ ಗುಣಗಳು. ಇನ್ನು ಹೆಣ್ಣಾದರೆ ಅವಳಿಗೆ ಅತ್ತೆ, ತಾಯಿ, ಸ್ವಂತ ತಂಗಿ, ಓರಗಿತ್ತಿಯರೇ ಅನುಕರಣೆ ಮಾಡಲು ಯೋಗ್ಯರು. ನನ್ನ ಅತ್ತೆ ನನಗೆ ಅಷ್ಟಿಷ್ಟು ಕಾಟ ಕೊಡಲಿಲ್ಲ, ನಾನು ಅನುಭವಿಸಿದ್ದನ್ನು ಸೊಸೆಯೂ ಅನುಭವಿಸಲಿ ಎಂಬಲ್ಲಿಂದ ಪಕ್ಕದ ಮನೆಯವಳೋ, ಗೆಳತಿಯೋ ಏನು ಮಾಡುತ್ತಾಳೆ ಅದನ್ನು ಇವರೂ ಮಾಡಬೇಕು. ಅವರಿಗೆ ಯಾವುದು ಶ್ರೇಷ್ಠವೆನಿಸುತ್ತದೆ? ಅವಳು ಬ್ಯೂಟಿಪಾರ್ಲರಿಗೆ ಹೋಗುವುದು, ಅವಳು ಗಂಡನ ಹಣವನ್ನು ಖುಷಿಯಾಗಿ ಖರ್ಚು ಮಾಡುವುದು, ಮಕ್ಕಳನ್ನು ಬಳಸಿಕೊಂಡು ಒಲ್ಲದ ಗಂಡನನ್ನು ಹಿಡಿತದಲ್ಲಿಡುವುದು/ ದೂರವಿಡುವುದು ಹೀಗೆ ಬೇಡದ್ದು, ಅದರ ಹಿನ್ನೆಲೆಯನ್ನು ಅರಿಯದೇ ಪಟ್ಟಿಯಾಗುತ್ತ ಹೋಗುತ್ತದೆ. ಸಾಮಾನ್ಯವಾಗಿ ಪುರುಷ / ಸ್ತ್ರೀ ತಮ್ಮ ದೌರ್ಬಲ್ಯಗಳಿಗೆ , ಅಹಂನ ಮಟ್ಟಕ್ಕೆ ಅನುಸಾರವಾಗಿ ಈ ಬೇಡದ ಪಟ್ಟಿಯನ್ನು ಬೆಳೆಸಿಕೊಳ್ಳುತ್ತ ಹೋಗುತ್ತಾರೆ. ಇದರಲ್ಲಿ ಬಾಲ್ಯ ಹಾಗೂ ಹದಿಹರೆಯದ ಬದುಕು ಬಹಳ ಮುಖ್ಯ ಪಾತ್ರವಹಿಸುತ್ತದೆ. ಸರಿಯಾದ ಪ್ರೀತಿ, ಸೂಕ್ತ ಮಾರ್ಗದರ್ಶನ, ಸಾಂತ್ವನ ಎಲ್ಲಕ್ಕಿಂತ ಹೆಚ್ಚು ದೊಡ್ಡವರೆಂದು ಅನಿಸಿಕೊಂಡವರ ದೊಡ್ಡತನದ ನಡವಳಿಕೆ ಸಮಾಜದ ಒಳಿತಿಗೆ ಅತ್ಯವಶ್ಯಕ. ಇವೆಲ್ಲ ಇವತ್ತಿನ ಬದುಕಿನಲ್ಲಿ ಎಷ್ಟರಮಟ್ಟಿಗೆ ಇವೆ ಎಂಬುದನ್ನು ನೋಡಿದರೆ ಯಾರಿಗಾದರೂ ನಾವೆತ್ತ ನಡೆಯುತ್ತಿದ್ದೇವೆ ಎಂಬುದು ಅರ್ಥವಾಗುತ್ತದೆ.
               ಗೋ ಮಾಂಸ ತಿನ್ನಬಾರದು ಎಂದು ಅದರ ವೈಜ್ಞಾನಿಕ ಕಾರಣ ಕೊಟ್ಟು ಅರ್ಥ ಮಾಡಿಸುವುದು ಬೇರೆ, ಅದನ್ನು ತಿನ್ನಲೇಬಾರದು ಎಂದು ಕಾನೂನು ಮಾಡುವುದು ಬೇರೆ. ಹೆಣ್ಣುಮಕ್ಕಳು ಗಂಡಿಗೆ ಸಮಾನ ಎಂದು ಕುಡಿಯಬಾರದು, ಸಿಗರೇಟು ಸೇದಬಾರದು ಎಂದು ನೈತಿಕತೆಯ ಪಾಠ ಹೇಳುವುದು ಬೇರೆ, ಅವಳಿಗೆ ನೋಡಮ್ಮ ನಿನ್ನ ಅಸ್ತಿತ್ವ ನನ್ನ ದೃಷ್ಟಿಯಿಂದ ಎರಡು ಮೊಲೆ, ಯೋನಿ (ಮತ್ತೆ ಮತ್ತೆ ಹೇಳುತ್ತಿದ್ದೇನೆ ಎಂದು ತಪ್ಪಾಗಿ ಭಾವಿಸಬಾರದು, ಇದು ಶೇ.೮೦ರಷ್ಟು ಜನರ ಸಮಸ್ಯೆ) ಗಿಂತಲೂ ದೊಡ್ಡದು. ನೀನು ನನ್ನ ಬದುಕಿಗೆ ಸ್ಪೂರ್ತಿ. ನಿನ್ನ ರಕ್ಷಣೆ, ನಿನ್ನ ಗೌರವ, ನಿನ್ನ ಭಾವನೆ ನನಗೆ ದೊಡ್ಡದು. ನೀನು ಅಧ್ಯಾತ್ಮ ಬದುಕಿಗೆ ತೆರೆದುಕೊಳ್ಳು. ಅದು ನಿನ್ನ ಆತ್ಮೋನ್ನತಿಗೂ, ನನ್ನ ಆತ್ಮೋನ್ನತಿಗೂ ಒಳ್ಳೆಯದು. ಈ ಸಮಾಜಕ್ಕೆ ಒಳ್ಳೆಯದು ಎಂದು ಪುರುಷರು ಹೇಳಲಿ ನೋಡೋಣ. ಬೆಟ್ಟು ಕಟ್ಟುತ್ತೇನೆ ೨೦ ವರ್ಷಗಳ ನಂತರ ಇಡೀ ಸಮಾಜದಲ್ಲಿ ಶಾಂತಿ, ನೆಮ್ಮದಿ, ಸಾಮರಸ್ಯ ಮತ್ತು ಪ್ರೀತಿ ತುಂಬುತ್ತದೆ.
              ಆದರೆ ನಾವು ಹೆದರುತ್ತೇವೆ. ಆಕೆಯನ್ನು ಸಂಸಾರಕ್ಕೆ ಕಟ್ಟಿಹಾಕಲು, ಮಕ್ಕಳು, ಮರಿ ಮಾಡಿ ನಮ್ಮ ಸುತ್ತಲೇ ಆಕೆ ಸುತ್ತುತ್ತಿರಬೇಕು ಎಂದು ಬಯಸುತ್ತೇವೆ. ಆಕೆ ಪೂಜೆ, ಪುನಸ್ಕಾರ, ಯೋಗ, ಧ್ಯಾನ ಎಂದು ಮಾತನಾಡತೊಡಗಿದರೆ ಬೆಚ್ಚಿ ಬೀಳುತ್ತೇವೆ. ಅವಳು ಸಂಸಾರ ಬಿಟ್ಟು ಸನ್ಯಾಸಿಯಾಗಿಬಿಟ್ಟರೆ ಎಂದು ಆತಂಕಕ್ಕೀಡಾಗುತ್ತೇವೆ. ಆಕೆಯ ಅಭಿಪ್ರಾಯ, ಭಾವನೆಗಳಿಗೆ ಬೇಲಿಹಾಕತೊಡಗುತ್ತೇವೆ. ಅದೇ ಸಮಯಕ್ಕೆ ಆಕೆಯ ಹಾರ್ಮೋನುಗಳು ವ್ಯತ್ಯಾಸಗೊಂಡು ತಾಯಿಯಂತೆ ಅರ್ಥ ಮಾಡಿಕೊಳ್ಳದೆ, ರಚ್ಚೆ ಹಿಡಿದು ಮಗುವಿನಂತಾದರೆ ಅಡಗಿಕೊಳ್ಳುವ ಮತ್ತೊಂದು ತಾಯ ಮಡಿಲು ಅರಸುತ್ತೇವೆ. ಆಕೆ ಕೂಡ ಭಾವನೆಗಳನ್ನು ನಿಯಂತ್ರಿಸಿಕೊಳ್ಳಲಾರದೆ, ಮುಚ್ಚಿಡಲಾಗದೆ ಪಲಾಯನವಾದವನ್ನು ರೂಢಿಸಿಕೊಳ್ಳುತ್ತಾಳೆ. ತನ್ನ ತಪ್ಪನ್ನು ಬೇರೆಯವರ ಮೇಲೆ ಹಾಕಿ ಕಣ್ಣೊರೆಸುವ ತಂತ್ರ ಮಾಡುತ್ತಾಳೆ. ಒಳಗಿನ ಸಿಟ್ಟಿಗೆ ಹೊರಪ್ರಜ್ಞೆಗೆ ಅರಿವಿಲ್ಲದೆ
ಬೇಲಿ ಮುರಿಯಲು ಬೇಜವಾಬ್ದಾರಿತನ, ಅನೈತಿಕ ವ್ಯವಹಾರ, ಪುರುಷರು ಮಾಡುವ ಎಲ್ಲ ಮಾಡಬಾರದ ಕೆಲಸಗಳನ್ನು ಮಾಡಲು ಹವಣಿಸುತ್ತಾಳೆ. ಇಂಥ ತಾಯಿ, ತಂದೆಗೆ ಹುಟ್ಟುವ ಮಕ್ಕಳು ಮತ್ತೆ ಯಥಾಪ್ರಕಾರ ಕಲಿಯಬೇಕಾದ್ದನ್ನು ಬಿಟ್ಟು ಉಳಿದವನ್ನೆ ಕಲಿಯುತ್ತವೆ.

              ಇದು ಮೇಲ್ವರ್ಗದ ಬ್ರಾಹ್ಮಣರಿರಬಹುದು, ಕೆಳವರ್ಗದ ಶೂದ್ರರಿರಬಹುದು. ಎಲ್ಲಿಯವರೆಗೆ ಮಗುವಿಗಾಗಲೀ, ಹೆಣ್ಣಿಗಾಗಲೀ ಅಧ್ಯಾತ್ಮ ಜೀವನದ ಪರಿಕಲ್ಪನೆ ನೀಡದೆ ಕೇವಲ ಆಚಾರ, ವಿಚಾರಗಳನ್ನು ಹೇರುತ್ತ ಹೋಗುತ್ತೇವೋ ಅಲ್ಲಿಯವರೆಗೆ ಸಮಾಜಕ್ಕೆ ಜಾತಿ, ಅದರ ಪ್ರತಿಷ್ಠೆ, ಏಕಪಕ್ಷೀಯ ನೈತಿಕತೆ ಎಲ್ಲ ಬಹುಮುಖ್ಯವಾಗುತ್ತವೆ. ಅದನ್ನು ಪ್ರಶ್ನೆ ಮಾಡುವವರು ಧರ್ಮದ ಮೂಲ ಆಶಯವನ್ನು ಮರೆತು ಅದನ್ನು ತಾವು ಗ್ರಹಿಸಿದ ಪ್ರಜ್ಞೆಯ ಮಟ್ಟದಲ್ಲಿ ವಿಶ್ಲೇಷಿಸುತ್ತಾರೆ. ಧರ್ಮದ, ದೇವರುಗಳ ದೌರ್ಬಲ್ಯಗಳ ಪಟ್ಟಿ ಮಾಡುವ ಜನರು, ಪುಸ್ತಕಗಳು ಲೆಕ್ಕವಿಲ್ಲದಷ್ಟು ಬರುತ್ತವೆ. ಅದರ ಪರ ವಿರೋಧಿ ಬಣಗಳು ಮತ್ತಷ್ಟು ಕಿತ್ತಾಡುತ್ತವೆ.
                 ಎಲ್ಲಿಯವರೆಗೆ ಆಧ್ಯಾತ್ಮಿಕ ಕ್ರಾಂತಿ ಸಾಮಾಜಿಕವಾಗಿ ನಡೆಯುವುದಿಲ್ಲವೋ ಅಲ್ಲಿಯವರೆಗೆ ಹಿಂದೂ, ಇಸ್ಲಾಂ, ಕ್ರಿಶ್ಚಿಯನ್ ಮತ್ತಿತರ ಎಲ್ಲ ಧರ್ಮಗಳ ಮೂಲ ಆಶಯ ಸತ್ತು ಪ್ರಶ್ನಿಸುವ ಹೊಸ ಪಂಥ, ಪಂಗಡಗಳು ಹುಟ್ಟಿಕೊಳ್ಳುತ್ತವೆ. ಅವುಗಳ ತಾರತಮ್ಯ, ಒಳಹುಳುಕು, ಪ್ರತಿಷ್ಠೆಗಳಿಂದಾಗಿ ಅವೂ ಇಬ್ಬಾಗವಾಗುತ್ತವೆ. ಈ ಜಾತ್ಯಾತೀತ ರಾಷ್ಟ್ರ, ವಿಶ್ವದ ಪರಿಕಲ್ಪನೆ ವ್ಯಕ್ತಿಯ ಹೃದಯದಲ್ಲಿ ಆರಂಭವಾಗುತ್ತದೆ. ಈ ಹೃದಯ ಪರಿವರ್ತನೆ ಆಚರಣೆಗಳ ಮೂಲಕ  ಅದರ        ಹೊರತಾದ ವಿಧಾನಗಳಿಂದ ಆತ್ಮಾನ್ವೇಷಣೆಯಾದಾಗ ಮಾತ್ರ ಸಾಧ್ಯವಾಗುತ್ತದೆ. ಇದನ್ನು ನಮ್ಮನ್ನಾಳುವವರು, ಮಠಾಧಿಪತಿಗಳು, ಸಮಾಜದ ಮುಖಂಡರು ಅರ್ಥ ಮಾಡಿಕೊಂಡು ಅದಕ್ಕೇನಾದರೂ ವ್ಯವಸ್ಥೆ ತರಲು ಸಾಧ್ಯವಾದರೆ ನನ್ನ ಕಂಗಾಲು ಪರಿಸ್ಥಿತಿ ಸುಧಾರಿಸೀತು. ಇಲ್ಲದಿದ್ದರೆ ಇಬ್ಬಗೆಯ ನೀತಿ, ಸಂಘರ್ಷಗಳ ನಡುವೆ ‘ನಾನು’ ಸತ್ತೇ ಹೋಗುತ್ತೇನೇನೋ!

ಮಂಗಳವಾರ, ಅಕ್ಟೋಬರ್ 13, 2015

ಶರನ್ನವರಾತ್ರಿಯೆಂದರೆ ಕೇವಲ ಆಚರಣೆಯಲ್ಲ

ಆದ್ಯಾಶಕ್ತಿಯ ನವರೂಪಗಳನ್ನು ಆರಾಧಿಸುವ ಶರನ್‘ನವರಾತ್ರಿ’ . ಲೌಕಿಕರ ಕಣ್ಣಲ್ಲಿ ಪತ್ನಿಯೊಬ್ಬಳು ಪತಿಯನ್ನು ಹೊಂದುವ ಸಾಮಾನ್ಯ ಕಥೆ ಪಾರ್ವತಿ ಪರಮೇಶ್ವರರ ಮಿಲನ. ಅಧ್ಯಾತ್ಮ ಭಾವದಲ್ಲಿ ನೋಡಿದಾಗ ಶೈಲಪುತ್ರಿಯು ಸಿದ್ಧಿದಾತ್ರಿಯಾಗುವ ವರೆಗಿನ ಪ್ರಕ್ರಿಯೆ ಆತ್ಮ ಪರಮಾತ್ಮನನ್ನು ಸೇರುವ ಬಗೆಯ ನಿರೂಪಣೆ. ಸಕಲ ಚರಾಚರ ವಸ್ತುವಿನ ಅಸ್ತಿತ್ವ, ಅಸ್ಮಿತೆಗೆ ಕಾರಣವಾಗಿರುವ ಸರ್ವಶಕ್ತಿಗೆ ಶಿವನ ಪತ್ನಿಯಾಗಿ ಬಂದು ಅಷ್ಟೆಲ್ಲ ಕಷ್ಟ ಪಡುವ ಯಾವ ಅಗತ್ಯವೂ ಇಲ್ಲ. ಆದಾಗ್ಯೂ ನಮ್ಮ ಪುರಾಣಗಳು ಆಕೆಯನ್ನು ಮನುಷ್ಯ ಯೋನಿಯಲ್ಲಿ ಜನ್ಮ ತಾಳಿದ ಸಾಮಾನ್ಯ ಸ್ತ್ರೀಯಂತೆ ಚಿತ್ರಿಸಿ ಆಕೆಯ ಬದುಕು ಬರೆದಿವೆ. ಇದು ಆಕೆಯ ಬದುಕ ಬರಹವಲ್ಲ. ಬದಲಿಗೆ ಲಕ್ಷಾಂತರ ಜನ್ಮಗಳ ವಿಕಾಸದ ನಂತರ ಬಂದ ಮಾನವ ಜನ್ಮವನ್ನು ಮುಂದೆ ಹೇಗೆ ಒಯ್ಯಬೇಕು ಎನ್ನುವುದಕ್ಕೆ ಮಾರ್ಗದರ್ಶಿ. ಈ ಪ್ರಕ್ರಿಯೆಯನ್ನು ಮೆಲುಕು ಹಾಕಲೆಂದೇ ಪ್ರತಿವರ್ಷ ಮಳೆ, ಬೆಳೆ ಯಾವುದು ಬರಲಿ, ಬರದಿರಲಿ ಶರನ್ನವರಾತ್ರಿ ಬಂದೇ ಬರುತ್ತದೆ. ದೇವಿಯ ಒಂಭತ್ತು ರೂಪಗಳ ಆರಾಧನೆ ನಡೆಯುತ್ತದೆ.

          ಶಿವನನ್ನು ಹೊಂದಲು ದೇವಿ ಮೊದಲು ಸತಿಯಾಗಿ ಜನ್ಮಿಸುತ್ತಾಳೆ. ತೀರ ಬಾಲಿಷವಾದ, ಅಹಂಕಾರ, ಅಜ್ಞಾನ, ಸ್ವಕೇಂದ್ರಿತ ಸತಿ ತನ್ನ ಮಿತಿಯ ಅರಿವಾದಾಗ ತನ್ನನ್ನು ತಾನೇ ದಹಿಸಿಕೊಳ್ಳುತ್ತಾಳೆ. ಇದೂ ಸಹ ಸಾಂಕೇತಿಕ. ನಾವೆಲ್ಲ ಯಾವಾಗಲೂ ಸ್ವಕೇಂದ್ರಿತವಾಗಿರುತ್ತೇವೆ. ನಮ್ಮ ಅಹಂಮಿನ ಕೋಟೆಯೊಳಗೆ ಭದ್ರವಾಗಿದ್ದುಕೊಂಡು ಆನಂದ (ಶಿವ) ಸಿಗಬೇಕೆಂದು ಹಪಹಪಿಸುತ್ತೇವೆ. ನಮ್ಮ ಈ ಮಿತಿಯೇ ಆತ್ಮದ ಮಿತಿ. ಯಾವಾಗ ನಮ್ಮ ಅಹಂಮಿನ ಕೋಟೆಯೊಡೆದು ಸ್ವಕೇಂದ್ರಿತ ಮನಸ್ಸಿನಿಂದ ವಿಶ್ವದ ಬಟಾಬಯಲಿನಲ್ಲಿ ನಿಲ್ಲುತ್ತೇವೆಯೋ ಆಗ ಆನಂದದ ಅನುಭೂತಿ ನಮ್ಮದಾಗುತ್ತದೆ. ಇದನ್ನು ಪಾರ್ವತಿಯಾಗಿ, ಶೈಲಪುತ್ರಿಯಾಗಿ ಜನಿಸಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯಿನಿ, ಕಾಲರಾತ್ರೀ, ಮಹಾಗೌರಿಯ ಹಂತವನ್ನು ದಾಟಿ ಸಿದ್ಧಿದಾತ್ರಿಯಾಗುವ ಮೂಲಕ ಜನಸಾಮಾನ್ಯರಿಗೆ ಆಧ್ಯಾತ್ಮಿಕ ಪ್ರಗತಿಯ ಹಂತವನ್ನು ತೋರಿಸಿಕೊಡುತ್ತಾಳೆ. ಯಾವತ್ತು ಅಹಂಮಿನ ಕೋಟೆಯೊಳಗಿಂದ ಹೊರಬರುತ್ತಾಳೋ ಆಗ ಶಿವನಿಗೆ ಮತ್ತಷ್ಟು ಸಮೀಪದಲ್ಲಿ ಕೈಲಾಸಕ್ಕಿನ್ನು ಒಂದೇ ಮೆಟ್ಟಿಲಾಗಿ ಹಿಮಾಲಯದಲ್ಲಿ ಜನಿಸುತ್ತಾಳೆ. ತನ್ನ ಹಿಂದಿನ ದೈಹಿಕ, ಮಾನಸಿಕ ಎಲ್ಲ ಮಿತಿಗಳನ್ನು ಮೀರಿ ಶಿವನನ್ನು ಪಡೆಯುವ ಏಕೈಕ ಉದ್ದೇಶವನ್ನು ಹೊಂದುತ್ತಾಳೆ.
         ನಾವುಗಳೂ ಅಷ್ಟೆ. ನಮ್ಮ ಕನಸು, ನಮ್ಮ ಆಸೆ, ನಮ್ಮ ಭಾವನೆಗಳನ್ನು ಮೀರಿ ಪರಮಾತ್ಮನೆಡೆಗೆ ಅವನ ಆವಿರ್ಭಾವದ ಎಲ್ಲ ಚರಾಚರ ವಸ್ತುಗಳ ಹಿತದಲ್ಲಿ ತೊಡಗುತ್ತೇವೆಯೋ ಅಂದೇ ನಾವು ಹಿಮಾಲಯದಲ್ಲಿ ಹುಟ್ಟಿಬಿಡುತ್ತೇವೆ. ಆಗಾಗ ಶಿವನ ದರ್ಶನವಾದರೂ ಆತ್ಮದ ಮಿತಿ ಅಷ್ಟು ಸುಲಭವಾಗಿ ತೊಲಗುವಂತದ್ದಲ್ಲ. ಅದಕ್ಕೆ ಸಾಕ್ಷಾತ್ ಶಿವನ/ಪರಮಾತ್ಮನ ಅನುಗ್ರಹ ಮತ್ತು ಮಾರ್ಗದರ್ಶನ ಅತ್ಯಗತ್ಯ. ನಮ್ಮ ಲಕ್ಷ್ಯದಲ್ಲಿ ಸ್ವಲ್ಪ ಚಂಚಲತೆ ಇದ್ದರೂ ಪರಮಾತ್ಮನ ಅನುಗ್ರಹ ದೊರೆಯದು. ಯಾವ ಆಸೆ, ಆಮಿಷಗಳ ತೊಂದರೆ ಇದ್ದರೂ ಹಿಮಾಲಯದಿಂದ ಕನ್ಯಾಕುಮಾರಿಗೆ ಪತನ ನಿಶ್ಚಿತ!
       ಆತ್ಮ ಪರಮಾತ್ಮವನ್ನು ಸೇರಿದರೂ ಎಷ್ಟೋ ಸಲ ತನ್ನ ಮಿತಿಯನ್ನು ಮೀರದು. ಆಗಾಗ ತಾನು ಪರಮಾತ್ಮನಿಂದ ಭಿನ್ನ ಎನ್ನುವ ಭಾವನೆ ತಳೆಯಬಹುದು. ಹಾಗೆ ಭಿನ್ನತೆಯ ಅನುಭವ ಹೊಂದಿದಾಗಲೆಲ್ಲ ಅದು ಅಹಂಮಿನ ಭಾರಕ್ಕೆ ಪರಮಾತ್ಮನಿಂದ ಮತ್ತೆ ಬೇರ್ಪಟ್ಟು ಜನ್ಮ, ಮರಣದ ಚಕ್ರಕ್ಕೆ ಸಿಲುಕುತ್ತದೆ. ಇವೆಲ್ಲದರ ಸಾಂಕೇತಿಕ ಪುರಾಣವೇ ಶಿವ-ಶಕ್ತಿಯ ಮಿಲನ ಕಥೆ.
           ನವರಾತ್ರಿ ಕೇವಲ ಕಳಶ, ಘಟ ಸ್ಥಾಪನೆಯ , ಕುಮಾರಿ ಪೂಜೆಯ ಆಚರಣೆಯಲ್ಲ, ಜೀವನದಲ್ಲಿ ಆಧ್ಯಾತ್ಮಿಕ ಬದುಕಿನ ಮಹತ್ವವನ್ನು ಮುಂಬರುವ ಪೀಳಿಗೆಗೆ ದಾಟಿಸುವ ಸಂಪ್ರದಾಯ. ಈ ಸಮಯದಲ್ಲಿ ನಡೆಯುವ ಮಂತ್ರೋಚ್ಚಾರಣೆ, ಮುದ್ರೆ, ವಿಧಿ, ವಿಧಾನಗಳು ಮೂಲಾಧಾರದಿಂದ ಮಣಿಪೂರದವರೆಗಿನ ಚಕ್ರಗಳನ್ನು ಶುದ್ಧ ಮಾಡಿ, ಶಕ್ತಿಯುತಗೊಳಿಸುತ್ತವೆ. ತಮಗಿಂತ ಕಿರಿಯರಾದ ಹೆಣ್ಣುಮಕ್ಕಳ ಕುಮಾರಿ ಪೂಜೆ, ಬಂಧುಗಳಿಗೆಲ್ಲ ಊಟ ತಯಾರಿಸಿ ಬಡಿಸಿ, ಸುತ್ತಲಿನವರಿಗೆಲ್ಲ ಬನ್ನಿ ಕೊಟ್ಟು ಶತ್ರುತ್ವವನ್ನೂ ಮರೆತು ಆಲಂಗಿಸುವ ಪ್ರಕ್ರಿಯೆಯಂತಹ ಆಚರಣೆಗಳು ಅಹಂಮಿನ ಕೋಟೆಯೊಡೆದು ಪ್ರಜ್ಞೆ  ಅನಾಹತವನ್ನು ಮುಟ್ಟಲು ನೆರವಾಗುತ್ತವೆ. ಆನಂದದ ಸಣ್ಣ ಝಲಕ್ ಅನುಭವಿಸುವ ಪ್ರಕ್ರಿಯೆ ಆರಂಭಗೊಳ್ಳುತ್ತದೆ. ಎಲ್ಲೆಡೆ ನಡೆಯುವ ಕಲಾರಾಧನೆ ಅನಾಹತದಿಂದ ವಿಶುದ್ಧವನ್ನು ದಾಟಿ ಪ್ರಜ್ಞೆ ಆಜ್ಞಾಚಕ್ರವನ್ನು ತಲುಪಲು ಸಹಾಯ ಮಾಡುತ್ತದೆ. ಹೀಗೆ ಒಂದು ಆಚರಣೆಯ ಮೂಲಕ ಇಡೀ ಆಧ್ಯಾತ್ಮಿಕ ಜಾಗೃತಿಯ ಪ್ರಕ್ರಿಯೆಯನ್ನು ಪೀಳಿಗೆಯಿಂದ ಪೀಳಿಗೆಗೆ ತಲುಪಿಸುತ್ತ ಬಂದಿರುವ ನಮ್ಮ ದೇಶದ ಸಂಸ್ಕೃತಿಯ ಬಗ್ಗೆ ನಾವೆಲ್ಲ ಹೆಮ್ಮೆ ಪಡಬೇಕು. ಒಬ್ಬ ಸಾಮಾನ್ಯ ಸ್ತ್ರೀ/ ಪುರುಷ ಮಾನವ ಕುಲದ, ಜಗತ್ತಿನ ಒಳಿತಿಗಾಗಿ ಅಸಾಧಾರಣ. ಅಸಾಮಾನ್ಯ ತ್ಯಾಗ ಮಾಡಿದಾಗಲೆಲ್ಲ ದೇವಿ/ದೇವ ಸ್ಥಾನವನ್ನು ಕೊಟ್ಟು, ದೇವಾಲಯಗಳನ್ನು ಕಟ್ಟಿರುವ ಹಿನ್ನೆಲೆಯೂ ಇದೇ ಆಗಿದೆ. ವಿಪರ್ಯಾಸವೆಂದರೆ ಇಂದು  ಕೆಲವರಿಗೆ ಆಚರಣೆಗಳು, ಸಂಪ್ರದಾಯಗಳು ಅರಿವಿಲ್ಲದ ಸಂಭ್ರಮವಷ್ಟೇ. ಇನ್ನು ಕೆಲವರಿಗೆ ಇವೆಲ್ಲ ಬೂಟಾಟಿಕೆ/ಆಚರಣೆಗಳ ಹೆಸರಿನಲ್ಲ್ಲಿ ಶೋಷಣೆ ಎನಿಸುತ್ತಿದೆ.
ಯಾರಿಗೆ ಗೊತ್ತು? ಇದೂ ಆದ್ಯಾಶಕ್ತಿಯ ನಾಟಕದ ಒಂದು ಭಾಗವೇ ಇರಬಹುದೆನಿಸುತ್ತದೆ. ಯಾವುದು ಚರಮಸೀಮೆ ದಾಟುತ್ತದೆಯೋ ಆಗ ಬದಲಾವಣೆಯ ಪರ್ವ ಆರಂಭವಾಗುತ್ತದೆ. ಅಂತಹದೊಂದು ಹೊಸಪರ್ವದ ಮುನ್ನುಡಿಯೂ ನವರಾತ್ರಿಯಾಗಲಿ ಎಂದು ಆಶಿಸುತ್ತೇನೆ. 

ಮಂಗಳವಾರ, ಸೆಪ್ಟೆಂಬರ್ 1, 2015

ಪಡೆದುಕೊಂಡ ಅಹಮಿಕೆಯೂ, ಕಳೆದುಕೊಳ್ಳುವ ಭಯವೂ

             ಕಳೆದ ವಾರ ಪೂರ್ತಿ ಬೇಡದ ವಿಚಾರಗಳಾದರೂ ತಲೆಯಲ್ಲಿ ಹೊಕ್ಕು ಸಮಯ ಹಾಳುಮಾಡಿದ್ದು ಎರಡು ವಿಷಯಗಳು. ರಾಮಚಂದ್ರಾಪುರ ಮಠದ ಪ್ರಕರಣ-೨ ಮತ್ತು ಶೀನಾ ಬೋರಾ ಪ್ರಕರಣ. ಇವೆರಡೂ ಸಹ ನಮ್ಮ ಪರಂಪರಾಗತ ನಂಬಿಕೆಗಳನ್ನು ಪ್ರಶ್ನೆ ಮಾಡುತ್ತ, ನನ್ನಂತಹ ಸಾಮಾನ್ಯರನ್ನು ಅಲುಗಾಡಿಸಿದ್ದು ಸುಳ್ಳಲ್ಲ. ಆದರೆ ಇವೆರಡೂ ಪ್ರಕರಣಗಳಲ್ಲಿ ನನಗೆ ಬಂದ ಪ್ರಶ್ನೆಗಳು ಬೇರೆ ಯಾರಿಗೂ ಬಂದಿಲ್ವಾ? ಎಂದು ಯೋಚಿಸುತ್ತಿರುವಾಗಲೇ ಇವತ್ತಿನ ಹಿಂದೂ ಪತ್ರಿಕೆಯ ಸಂಪಾದಕೀಯ ಪುಟದಲ್ಲಿ ಹಸನ್ ಸುರೂರ್ ಮತ್ತು ಮೈಥಿಲಿ ಸುಂದರ್ ಬರೆದಿದ್ದಾರೆ. ಹಸನ್ ಸುರೂರ್ ಹೇಳುತ್ತಾರೆ, ಅಪರಾಧ ವ್ಯಕ್ತಿಯೊಬ್ಬ ತನ್ನ ವೈಯಕ್ತಿಕ ಕಾರಣಗಳಿಂದ ಮಾಡುವಂಥದು. ಅದಕ್ಕೆ ಶ್ರೀಮಂತ, ಬಡವ, ಜಾತಿಯಂತಹ ಮಿತಿಯಿಲ್ಲ. ಆದಾಗ್ಯೂ ರಾಷ್ಟ್ರೀಯ ಸುದ್ದಿವಾಹಿನಿಗಳು ಶ್ರೀಮಂತರು, ಮುಂದುವರಿದವರು, ನಾಗರಿಕರು, ಜನಪ್ರಿಯರಾದವರು, ವೈಚಾರಿಕ ದೃಷ್ಟಿಕೋನವುಳ್ಳವರು ಹೀಗೆ ಮಾಡುವುದೆ? ಎಂದು ದಿನಗಟ್ಟಲೆ ಚರ್ಚೆ ಮಾಡುತ್ತಾರೆ. ಇದೊಂಥರ ಸಾಂಸ್ಕೃತಿಕ ತಾರತಮ್ಯ ಎಂದು. ಹಾಗೆಯೇ ಮೈಥಿಲಿ ಸುಂದರ್ ಕೇಳುತ್ತಾರೆ, ಇಂದ್ರಾಣಿ ಮುಖರ್ಜಿಗೆ ನಿಜವಾಗಿಯೂ ಮಕ್ಕಳು ಬೇಡವಾಗಿದ್ದರೆ ಹೊಟ್ಟೆಯಲ್ಲಿರುವಾಗಲೇ ಸಾಯಿಸಬಹುದಿತ್ತು. ಅವರನ್ನು ಹೊತ್ತು, ಹೆತ್ತು ಹೆಸರು ನೀಡಲಾಗದ ಪರಿಸ್ಥಿತಿಯಲ್ಲೂ ತನ್ನ ತಂದೆ-ತಾಯಿಗೇ ದತ್ತು ನೀಡಿದ್ದು ಯಾಕೆ? ವಯಸ್ಸಾದ ತಂದೆ-ತಾಯಿಗೆ ಕೋಟ್ಯಾಂತರ ರೂ. ಹಣವನ್ನು ಜೀವನ ನಿರ್ವಹಿಸಲು ವ್ಯಯಸಿದ್ದು ಯಾಕೆ? ಬೆಳೆದ ಮಗಳನ್ನು ಮುಂಬೈಗೆ ಕರೆತಂದು ಓದಿಸಿ, ಕೆಲಸ ಗಿಟ್ಟಿಸಿ ಕಾಲೂರುವಂತೆ ಮಾಡಿದ್ದು ಯಾಕೆ? ಆಕೆಗೆ ನಿಜವಾಗಿಯೂ ಮಕ್ಕಳನ್ನು ಕೊಲ್ಲುವ ಉದ್ದೇಶವಿದ್ದರೆ ಇದನ್ನೆಲ್ಲ ಯಾಕೆ ಮಾಡಬೇಕಿತ್ತು? ಇಂತಹ ಸಹಜ ಪ್ರಶ್ನೆಗಳು ನನಗೆ ಅಂದು ಮೂಡಿದ್ದನ್ನು ಇಂದು ಮೈಥಿಲಿ ತುಂಬ ಚೆನ್ನಾಗಿ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳು ಒಬ್ಬ ಹೆಣ್ಣಿನ ವೈಯಕ್ತಿಕ ಬದುಕನ್ನು ಇಷ್ಟು ಅಪಸವ್ಯಗಳಿಂದ, ತಮ್ಮ ಘನತೆಯನ್ನೂ ಪಕ್ಕಕ್ಕಿಟ್ಟು ಪ್ರತ್ಯೇಕ ತನಿಖೆಯನ್ನೇ ಮಾಡಿದ್ದು ಸರಿಯಲ್ಲ ಎಂದಿದ್ದಾರೆ. ಈ ವಿಚಾರದಲ್ಲಿ ನಾನು ಸಂಪೂರ್ಣ ಸಹಮತವನ್ನು ಹೊಂದಿದ್ದೇನೆ.
               ಜೀವನದಲ್ಲಿ ಏನು ಬೇಕಾದರೂ ಪಡೆಯಬಹುದು. ಆದರೆ ಪಡೆದ ನಂತರ ಅದನ್ನು ಕಳೆದುಕೊಳ್ಳುವ ಭಯ ಇದೆಯಲ್ಲ, ಅದನ್ನು ಯಾವ ಹುಲು ಮಾನವನೂ ಮೀರಿಲ್ಲ. ಅದು ಹಣ, ರೂಪ, ವಿದ್ಯೆ, ಯೌವನ, ಅಸ್ತಿತ್ವ, ಅಧಿಕಾರ ಹೀಗೇ ಏನು ಬೇಕಾದರೂ ಆಗಬಹುದು, ಅದು ನಮ್ಮ ನಮ್ಮ ಪಟ್ಟಿಯಲ್ಲಿ ನಾವು ಯಾವುದಕ್ಕೆ ಪ್ರಾಶಸ್ತ್ಯ ನೀಡುತ್ತೇವೆ ಎಂಬುದನ್ನು ಅವಲಂಬಿಸಿದೆ. ವ್ಯತ್ಯಾಸವೆಂದರೆ ಹಿಂದೆಲ್ಲ ತಮ್ಮ ತಪಸ್ಸಿನ ದಾರಿ, ಧರ್ಮ, ಸತ್ಯ, ಪ್ರತಿಜ್ಞೆ ಇಂತಹವುಗಳನ್ನು ತಾವು ಪಡೆದ ಹಮ್ಮಿಕೆಯನ್ನು ಹೊಂದಿದ್ದರು. ಈಗ ಅದೇ ಹಣ, ಅಧಿಕಾರ, ಪ್ರಭಾವ ಇತ್ಯಾದಿಗಳನ್ನು ಪಡೆದ ಹಮ್ಮಿಕೆ ಹೆಚ್ಚಾಗಿದೆ. ಮೊದಲೆಲ್ಲ ತಾವು ನಂಬಿದ ಮೌಲ್ಯಗಳಿಗೆ ಹಾನಿಯಾಗುತ್ತದೆ ಎಂದರೆ ತಮ್ಮದೇ ಜೀವ ಬಲಿ ಕೊಡುತ್ತಿದ್ದರು. ಈಗ ಪಡೆದುಕೊಂಡದ್ದನ್ನು ಉಳಿಸಿಕೊಳ್ಳುವ ಹೋರಾಟದಲ್ಲಿ ಮಂದಿಯ ಜೀವ ತೆಗೆಯುತ್ತಿದ್ದಾರೆ.
              ಪಡೆದುಕೊಂಡ ಅಹಂ ಇದೆಯಲ್ಲ, ಅದು ಹಣ, ರೂಪ, ವಿದ್ಯೆ, ಯೌವನ, ಅಧಿಕಾರ, ಮನುಷ್ಯ ಪ್ರೀತಿ ಇವೆಲ್ಲವುಗಳಿಗಿಂತ ದೊಡ್ಡ ನಿಯಂತ್ರಕ. ಹೆಚ್ಚಿನಸಲ ನಾವು ಪಡೆದುಕೊಂಡಿದ್ದಕ್ಕೆ ನಾವು ಅರ್ಹರೇ ಆಗಿರುವುದಿಲ್ಲ. ಆದರೂ ನಮ್ಮ ಅಹಂ ನಮಗೇ ಸಮಜಾಯಿಷಿ ನೀಡುತ್ತದೆ, ನಿನಗಲ್ಲದೇ ಬೇರೆ ಯಾರಿಗೆ ಸಿಗಬೇಕಿತ್ತು? ಆಗೆಲ್ಲ ನಮ್ಮನ್ನು ನಾವು ಅವಲೋಕನ ಮಾಡಿಕೊಂಡು ಯಾವ ಹೊತ್ತಿನಲ್ಲೂ ಕಳೆದುಕೊಳ್ಳಲು ಸಿದ್ಧರಾಗಿದ್ದರೆ ಸಮಸ್ಯೆ ಇರುವುದಿಲ್ಲ. ಆದರೆ ನಮ್ಮ ಅಹಂ ಇಷ್ಟು ದೊಡ್ಡ, ಬಲವಾದ ಕೋಟೆಯೊಳಗೆ ಬಂಧಿಸಿ ಬಿಟ್ಟಿರುತ್ತದೆ. ನಮಗೆ ಪಡೆದುಕೊಂಡಿದ್ದು ಕಳೆದುಹೋಗುವ ಸನ್ನಿವೇಶವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿರುವುದಿಲ್ಲ. ಹಾಗಿದ್ದಾಗ ನಿಜವಾಗಿಯೂ ಕಳೆದುಕೊಳ್ಳುವ ಸಂದರ್ಭ ಬಂದರೆ? ಇಂದ್ರಾಣಿ ಮುಖರ್ಜಿ ಒಂದು ಉದಾಹರಣೆಯಾಗುತ್ತಾಳೆ.
               ಹಣ, ಅಧಿಕಾರ, ಎಲ್ಲಕ್ಕಿಂತ ಹೆಚ್ಚು ಪ್ರೀತಿಸುವ ಪೀಟರ್ ಮುಖರ್ಜಿಗೆ ತನ್ನ ಹುಳುಕುಗಳೆಲ್ಲ ಗೊತ್ತಾಗಿಬಿಟ್ಟರೆ ಎಲ್ಲಿ ಎಲ್ಲವನ್ನೂ ಕಳೆದುಕೊಳ್ಳುತ್ತೇನೋ ಎಂಬ ಭಯ ಒಂದೆಡೆ. ಇನ್ನೊಂದೆಡೆ ತನ್ನ ಹರೆಯದಲ್ಲಿ ಕಳೆದುಕೊಂಡ ಆತ್ಮಗೌರವವನ್ನು ತಾನು ಮರಳಿ ಪಡೆಯಲು ಪಟ್ಟ ಹೋರಾಟದ ನೆನಪೂ ಇರಬಹುದು.  ಒಬ್ಬ ತಾಯಿಯಾಗಿ ತಾನು ಮಾಡಿದ್ದನ್ನು ತನ್ನ ಮಗಳು ಮುಂದುವರಿಸಬಾರದು ಎಂಬ ಪ್ರಜ್ಞೆಯೂ ಇರಬಹುದು. ಯಾವೊಬ್ಬ ವೇಶ್ಯೆ ಕೂಡ ತನ್ನ ಮಗಳು ತನ್ನ ದಾರಿ ತುಳಿಯಲಿ ಎಂದು ಆಶಿಸುವುದಿಲ್ಲ. ಈ ಕಾರಣಗಳು, ಅಸಹಾಯಕತೆಯೇ ಈ ಪ್ರಕರಣದಲ್ಲಿ ನನಗೆ ಕಾಣುವಂತದ್ದು. ಇನ್ನು ತನ್ನ ಕಾರ್ಯಸಾಧನೆಗೆ ಏನು ಬೇಕಾದರೂ ಮಾಡಬಲ್ಲವಳು, ಸುತ್ತಲಿನವರ ಎಲ್ಲ ದೌರ್ಬಲ್ಯಗಳನ್ನು ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳುತ್ತ ಹೋಗಿದ್ದರೆ ಆಶ್ಚರ್ಯವೇನಿಲ್ಲ.
             ಬಡವನಿಗೆ ಅಪರಾಧ ಮಾಡಲೂ ಅದೇ ಕಾರಣ, ಶ್ರೀಮಂತನಿಗೆ ಅಪರಾಧ ಮಾಡಲೂ ಅದೇ ಕಾರಣ. ಪಡೆದುಕೊಂಡ ಅಹಮಿಕೆ ಮತ್ತು ಕಳೆದುಕೊಳ್ಳುವ ಭಯ. ಹಾಗೆ ನೋಡಿದರೆ ಹೆಚ್ಚು ಪಡೆದ ಶ್ರೀಮಂತನಿಗೇ ಈ ಎರಡೂ ದೌರ್ಬಲ್ಯಗಳು ಹೆಚ್ಚು ಎನ್ನುವುದು ವಾಸ್ತವ.
                

ಶನಿವಾರ, ಆಗಸ್ಟ್ 29, 2015

ಹವ್ಯಕ ಸಮಾಜದ ಹೆಣ್ಣುಮಕ್ಕಳಿಗೇನಾಗಿದೆ?

ಹವ್ಯಕ ಸಮಾಜದ ಹೆಣ್ಣುಮಕ್ಕಳಿಗೇನಾಗಿದೆ? ಇಂತದೊಂದು ಪ್ರಶ್ನೆಗೆ ಉತ್ತರ ಹುಡುಕುತ್ತ ಹೋದಾಗ ಸಿಕ್ಕ ಅಂಶಗಳನ್ನು ಇಲ್ಲಿ ಚರ್ಚಿಸಬಯಸುತ್ತೇನೆ. ಕಳೆದ ವರ್ಷ ರಾಘವೇಶ್ವರ ಶ್ರೀಗಳ ಮೇಲೆ ಮೊದಲ ಪ್ರಕರಣ ದಾಖಲಾದಾಗಲೂ ಈ ಪ್ರಶ್ನೆ ಎದ್ದಿತ್ತು. ಈಗಲೂ ಎದ್ದಿದೆ. ಇಂತಹ ಸಾಕಷ್ಟು ಪ್ರಕರಣಗಳು ಹೊರಗೆ ಬರದೇ ಬೂದಿಮುಚ್ಚಿಕೊಂಡು ಕುಳಿತಿವೆ ಎಂಬುದನ್ನೂ ಕೇಳಿದ್ದೇನೆ. ಆಗೆಲ್ಲ ನನಗೆ ಒಂದೇ ಪ್ರಶ್ನೆ - ಹವ್ಯಕ ಹೆಣ್ಣುಮಕ್ಕಳು ಕುರಿಗಳೆ? ಒಮ್ಮೆ ಏನೋ ದೌರ್ಜನ್ಯ ನಡೆಯಿತು ತಿಳಿದೋ, ತಿಳಿಯದೆಯೋ. ನಂತರವೂ!? ವರ್ಷಾನುಗಟ್ಟಲೆ!?
ಈ ಸಮಾಜದಲ್ಲಿ ಹೆಣ್ಣುಮಕ್ಕಳು ಸುಲಭವಾಗಿ ಹ್ಞೂಂ ಎನ್ನುತ್ತಾರೆ ಎಂದು ಅನಿಸಿದರೆ ದೇವಮಾನವನಿರಲಿ, ಈ ಲೋಕವನ್ನೆಲ್ಲ ಉದ್ಧಾರ ಮಾಡುವ ಪತ್ರಕರ್ತರಿರಲಿ ಎಲ್ಲರೂ ಒಂದು ಕೈ ನೋಡಲು ಸಿದ್ಧರೇ. ಇನ್ನು ಹುಲುಮಾನವರನ್ನೆಂತೂ ಕೇಳಲೇಬೇಡಿ. ಇದು ನಮ್ಮ ಹೆಣ್ಣುಮಕ್ಕಳಿಗೆ ಗೊತ್ತಾಗುತ್ತಿಲ್ಲವೆ? ಗೊತ್ತಾದರೂ ಪೋಷಕರ ಹತ್ತಿರ ಹೇಳಿಕೊಳ್ಳಲು ಆಗುತ್ತಿಲ್ಲವೆ? ನಮ್ಮ ಮೇಲೆ ದೌರ್ಜನ್ಯ ನಡೆಯುತ್ತಿದೆ, ನಮ್ಮನ್ನು ಭಾವನಾತ್ಮಕವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿಯದಷ್ಟು ಅಬೋಧತೆಯೆ? ನಾನು ಗಮನಿಸಿರುವ ಹಾಗೆ ಈ ಪ್ರಕರಣಕ್ಕೆ ತೇಪೇ ಹಚ್ಚುತ್ತಿರುವ ಬಹುತೇಕರು ಮಠದಿಂದ ಪ್ರತ್ಯಕ್ಷ/ ಅಪ್ರತ್ಯಕ್ಷ ಸಹಾಯ ಪಡೆದವರು ಹಾಗೂ ಪಡೆಯುತ್ತಿರುವವರು. ಇನ್ನು ಕೆಲವರಲ್ಲಿ ಕುರುಡು ಭಕ್ತರೂ ಇದ್ದಾರೆ, ಅವರ ಸಂಖ್ಯೆ ನಗಣ್ಯ. ಲೆಕ್ಕಾಚಾರವಿಲ್ಲದೆ ಒಪ್ಪಿಕೊಳ್ಳುವವರು ಯಾರಿಗೂ ಅಪಾಯವಲ್ಲ.
                ಕನ್ಯಾಸಂಸ್ಕಾರ ಮಾಡಿಸುವುದು ಎಂಬುದನ್ನೇ ನಾನು ಒಪ್ಪುವುದಿಲ್ಲ. ಅಪ್ಪ, ಅಮ್ಮ ಸಂಸ್ಕಾರವಂತರಾಗಿದ್ದರೆ ಮಗಳಿಗೇನು ವಿಶೇಷ ಸಂಸ್ಕಾರ? ಮಂತ್ರದೀಕ್ಷೆ ಕೊಡಿಸುವ ಆಲೋಚನೆಯಿದ್ದರೆ ಮಂತ್ರದೃಷ್ಟಾರರು, ಕುಲಪುರೋಹಿತರು ಇರುವುದಿಲ್ಲವೆ? ಜಾತಕ ನೋಡಿ, ಸ್ವಭಾವ, ಗುಣಗಳನ್ನು ತಿಳಿದು ಮಂತ್ರ ಕೊಡುತ್ತಾರೆ. ಅದೂ ಸಾಕಾಗದೆ  ಮುಂದುವರಿದು ಏಕಾಂತ ಸೇವೆಗೆ ಕಳಿಸುವ ತಂದೆ ತಾಯಿಗಳೆಂತೂ ನಿಜವಾಗಿಯೂ ಶತದಡ್ಡರೂ, ಮೂರ್ಖರೂ ಆಗಿರುತ್ತಾರೆ ಎಂದು ಹೇಳಲು ನನಗೆ ಹೆದರಿಕೆಯೇನಿಲ್ಲ.
                 ನಮ್ಮಲ್ಲಿ ಎಂತಹ ತಂದೆ ತಾಯಿ ಇರುತ್ತಾರೆ ಎಂದರೆ, ಕೆಲವು ತಿಂಗಳುಗಳ ಹಿಂದೆ ಒಬ್ಬರ ಮನೆಗೆ ಹೋಗುವ ಸಂದರ್ಭ ಬಂತು. ಅವರ ಮಗಳಿನ್ನೂ ೩-೪ ವರ್ಷದವಳು.  ನಾನು ಭೇಟಿ ಮುಗಿಸಿ ಹೊರಗೆ ಬಂದಾಗ ಪಕ್ಕದ ಮನೆಯ ಅಂಕಲ್ ಒಬ್ಬರು ಆ ಮಗುವಿನ ತಲೆಗೂದಲನ್ನು ಎಳೆದು, “ಏನೇ ನನ್ನತ್ರ ಬರೊಲ್ವ, ಮುದ್ದು ಮಾಡಿಸಿಕೊಳಲ್ವಾ? ”ಎಂದು ಕೇಳುತ್ತಿದ್ದರು. ಅದಕ್ಕೆ ನಾನು ಅಲ್ಲಿ ಕಂಡ ತಕ್ಷಣ ಹೇಳಿದೆ, “ನೀವು ಈ ರೀತಿ ತಲೆಗೂದಲು ಎಳೆದು ಹಿಂಸೆ ಮಾಡಿದರೆ ಯಾರು ನಿಮ್ಮತ್ರ ಬರುತ್ತಾರೆ, ಅಲ್ವಾ ಮರಿ?” ಎಂದು ಸಮಾಧಾನ ಮಾಡಿದೆ. ಅಲ್ಲೇ ಆಕೆಯ ತಾಯಿಯೂ ನಿಂತಿದ್ದಳು. ಮಗುವಿನ ಕಪ್ಪಿಟ್ಟ ಮುಖ , ಆ ಅಂಕಲ್ ಎಂದರೆ ನನಗೆ ಭಯ ಎಂದು ಹೇಳುತ್ತಿದ್ದರೆ, ಕೂದಲೆಳೆದ ಅಂಕಲ್ ನಡೆ ತನ್ನನ್ನು ಒಪ್ಪಿಕೊಳ್ಳದ, ಮುಂದುವರಿಯಲಾಗದ ಅಸಹಾಯಕತೆಯನ್ನು ಪ್ರದರ್ಶಿಸಿತ್ತು. ನನಗೆ ಒಳಗೊಳಗೇ ಅಪಾಯದ ಗಂಟೆ ಬಾರಿಸಿದ ಹಾಗಾಯಿತಾದರೂ ಅವಳ ತಾಯಿಗೆ ಏನೂ ಹೇಳಹೋಗಿಲ್ಲ. ಯಾಕೆ ಬೇಕು ಉಸಾಬರಿ?
                 ಹಾಗೇ ನನ್ನ ಬಾಲ್ಯದ ಅನುಭವಕ್ಕೆ ಬಂದಾಗ ನನ್ನ ಗೆಳತಿಯೊಬ್ಬಳು ಪಕ್ಕದ ಮನೆಗೆ ದಿನಾಲೂ ಹೋಗಬೇಕಾದ ಸಂದರ್ಭ ಇರುತ್ತಿತ್ತು. ಹಾಗೆ ಹೋದಾಗ ಒಮ್ಮೆ ಅವಳ ಸ್ಕರ್ಟನ್ನು ತನ್ನ ಹೆಂಡತಿಯೆದುರಿಗೇ ಮಾಮಾ ಕೆಳಗೆ ಎಳೆದು ನಕ್ಕಿದ್ದರು. ಅವಳು ಮನೆಗೆ ಬಂದು ಅಮ್ಮ, ಮಾಮಾ ಸರಿಯಿಲ್ಲ, ನಾನು ಅವರ ಮನೆಗೆ ಹೋಗುವುದಿಲ್ಲ, ಅವರು ಹೀಗೆಲ್ಲ ಮಾಡಿದರು ಎಂದು ಘಟನೆಯನ್ನು ವಿವರಿಸಿದರೆ, ಅವಳಮ್ಮ “ಇಲ್ಲ, ಮರಿ. ಮಾಮ ಅಲ್ವ, ಜೋಕು ಮಾಡುತ್ತಾರೆ. ನೀನೇನು ಹಾಗೆಲ್ಲ ಯೋಚಿಸಬೇಡ” ಎಂದು ಬಿಡುವುದೆ? ಕೊನೆಗೊಂದು ದಿನ ಅಮ್ಮನ ಮೇಲೆ ಅವ ನಿದ್ದೆ ಮಾತ್ರೆ ಹಾಕಿ ಅತ್ಯಾಚಾರ ನಡೆಸಿದಾಗ ನನ್ನ ಗೆಳತಿ ಮೂಕವಾಗಿ ಅತ್ತಿದ್ದು ನನ್ನ ಮನಃಪಟಲದ ಮೇಲೆ ಇನ್ನೂ ಹಸಿರಾಗಿದೆ.
                ಇದು ಮಕ್ಕಳಿದ್ದಾಗಿನ ಹೆಣ್ಣುಮಗುವಿನ ಸ್ಥಿತಿಯಾದರೆ, ಅಬೋಧ ವಯಸ್ಸಿಗೆ ಪ್ರೀತಿಯ ಬಲೆ ಹೆಣೆಯಲಾಗುತ್ತದೆ. ಪ್ರೀತಿಸುತ್ತೇನೆ ಎನ್ನುತ್ತಲೇ ಅತ್ಯಾಚಾರ ನಡೆಯುತ್ತಿರುತ್ತದೆ. ಈಗಿನ ಪ್ರಕರಣ ನೋಡಿದರೆ ಈ ಎರಡೂ ಅಸಹಾಯಕತೆಯನ್ನು, ಅಬೋಧತೆಯನ್ನು ಬಳಸಿಕೊಂಡಂತೆ ಕಾಣುತ್ತದೆ.
                ಇಂಥ ಸಮಸ್ಯೆಗೆ ನಾವು ಹೇಗೆ ಸ್ಪಂದಿಸಬೇಕು ಎನ್ನುವುದು ನಮ್ಮ ಸಮಸ್ಯೆ. ಹೆಣ್ಣುಮಗುವೊಂದು ತನ್ನ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದಾಗ ಮೊದಲು ಸುಮ್ಮನಿರಿಸುವವಳೇ ತಾಯಿ! ಮಗಳನ್ನು ಸರಿಯಾಗಿ ನೋಡಿಕೊಳ್ಳದೇ ಇರುವ ಬಗ್ಗೆ ಗಂಡ ತನ್ನನ್ನು ಜರಿದರೆ! ಸಮಾಜ ನಾಳೆ ಇವಳಿಗೆ ಮದುವೆಯಾಗದೇ ಹೋಗುವಂತೆ ಮಾಡಿದರೆ!? ಅವರು ಹಾಗೆಲ್ಲ ಅಲ್ಲ, ನಿನ್ನದೇ ತಪ್ಪು ಕಲ್ಪನೆ!? ಇನ್ನೊಮ್ಮೆ ಅಂತಹುದಕ್ಕೆ ಅವಕಾಶ ಕೊಡಬೇಡಾ, ನಾನು ನೋಡು ನಿಮ್ಮ ತಂದೆಗೆ ಎಷ್ಟು ನಿಷ್ಠಳಾಗಿದ್ದೇನೆ!? ಇಂತಹ ಉತ್ತರಗಳನ್ನು ತಾಯಿ ಎನಿಸಿಕೊಂಡವಳಿಂದಲೇ ಪಡೆದಾಗ ಮುಜುಗರ, ದುಃಖ, ಹತಾಶೆ, ನೋವು, ಅವಮಾನ, ಆತ್ಮಗೌರವವನ್ನೇ ಕಳೆದುಕೊಂಡ ಹೀನಭಾವ ಇವುಗಳಿಂದ ಕುಗ್ಗಿಹೋದ ಮಗಳು ಮುಂದೆ ಯಾರಲ್ಲಿ ಏನನ್ನು ಹೇಳಿಕೊಳ್ಳಬೇಕು?
                 ಇನ್ನು ಸಮಾಜ! ಸಮಾಜದಲ್ಲಿ ದೊಡ್ಡವ್ಯಕ್ತಿಗಳು ಎನಿಸಿಕೊಂಡವರ ವಿರುದ್ಧ ದೂರು ಕೊಟ್ಟಾಗ ಮೊದಲು ಬರುವ ಪ್ರಶ್ನೆ ಇಷ್ಟು ದಿನ ಯಾಕೆ ಸುಮ್ಮನಿದ್ದರು? ಈಗ ದುಡ್ಡೆಳೆಯುವ ಹುನ್ನಾರ, ಹೆಸರು ಕೆಡಿಸುವ ಷಡ್ಯಂತ್ರ ಎಂಬ ಮಾತು ಧಾರಾಳವಾಗಿ ಬಂದೇ ಬರುತ್ತದೆ. ಅದರಲ್ಲೂ ಪೋಷಕರು ಅಸಹಾಯಕರಾಗಿ ವ್ಯಕ್ತಿ/ವ್ಯವಸ್ಥೆಯಿಂದ ಹಣಕಾಸು ಅಥವಾ ಇನ್ನಾವುದೇ ಲಾಭವನ್ನು ಪಡೆದುಕೊಂಡರೆ ಅದಕ್ಕಿಂತ ಬಲವಾದ  ಪುರಾವೆ ಪ್ರಕರಣ ಬಿದ್ದು ಹೋಗಲು ಬೇರೆ ಸಿಗದು. ಹಾಗಾದರೆ ಪ್ರತಿಭಟಿಸುವ ದಾರಿ ಯಾವುದು?
                   ಒಂದು ಯಾರ್ಯಾರಿಗೆ ಅನ್ಯಾಯವಾಗಿದೆಯೋ ಅವರೆಲ್ಲ ಒಟ್ಟಾಗಿ/ಒಬ್ಬೊಬ್ಬರಾಗಿ ಬಂದು ದೂರು ದಾಖಲಿಸುವುದು, ಕಾನೂನಾತ್ಮಕ ಹೋರಾಟಕ್ಕೆ ಸೂಕ್ತ ದಾಖಲೆಗಳೊಂದಿಗೆ ಇಳಿಯುವುದು, ಸೂಕ್ತ ಮಾರ್ಗದರ್ಶನ ಹಾಗೂ ಮನಃಸ್ಥಿತಿಯ ಹೇಳಿಕೆಗಾಗಿ ಮನೋವೈದ್ಯರು, ಮನೋಚಿಂತಕರ ಬೆಂಬಲ ಪಡೆಯುವುದು ಆಗಬೇಕು. ಇನ್ನು ಮಾನ, ಮರ್ಯಾದೆಗಾಗಿ ಇಲ್ಲಿಯವರೆಗೆ ಸುಮ್ಮನೆ ಕುಳಿತಿದ್ದರೆ ಮತ್ತೆ ಯಾಕೆ ಅದೇ ಸ್ಥಳಕ್ಕೆ, ಅದೇ ವರ್ತುಲಕ್ಕೆ ಹೋಗಬೇಕು? ಇಂಥ ಒಂದು ಘಟನೆ ಒಮ್ಮೆ ನಡೆದಾಗ ಅಲ್ಲಿಗೆ ಮತ್ತೊಮ್ಮೆ ಹೋಗುವುದೇ ತಪ್ಪು. ಹಾಗಿದ್ದೂ ಪೋಷಕರ ಒತ್ತಾಯ, ಭಾವನಾತ್ಮಕ ಸಂಬಂಧ, ಮಠದ ಮೇಲಿನ ಭಕ್ತಿ, ಬೇರೆ ಯಾರದ್ದೋ ಒತ್ತಾಯ ಅಥವಾ ಬೆದರಿಕೆ ಇವುಗಳಿಂದ ಹೋಗಬೇಕಾಗಿ ಬರಬಹುದು. ಆಗೆಲ್ಲ ಒಂದೇ ದಾರಿ ‘ಉಪಾಯ’.
                  ನಮಗೆ ಒಗ್ಗದ್ದನ್ನು ಅಲ್ಲಗಳೆಯಲು ಸಾವಿರ ದಾರಿಗಳಿರುತ್ತವೆ. ಹಾಗೆ ಬಿಡಿಯಕ್ಕೆ ಬಸಿರಾಗದೆ, ನಯವಾಗಿ ಎದ್ದುಬರುವ ದಾರಿಯನ್ನು ಹೆಣ್ಣುಮಕ್ಕಳು ಕಂಡುಕೊಳ್ಳಬೇಕು. ಯಾವ ಸೂತ್ರ ನಮ್ಮನ್ನು ಕೂಪಕ್ಕೆ ಮತ್ತೆ ಮತ್ತೆ ತಳ್ಳುತ್ತಿದೆಯೋ ಆ ಸೂತ್ರ ಯಾವುದು ಎಂಬುದನ್ನು ಕಂಡುಹಿಡಿದು ಅದರ ಬೇರು ಸಮೇತ ಕಿತ್ತು ಹಾಕುವ ಕೆಲಸ ಮಾಡಬೇಕು. ನಮ್ಮ ದೌರ್ಬಲ್ಯವನ್ನೇ ಶಕ್ತಿಯಾಗಿ ಉಪಯೋಗಿಸಬೇಕು. ಇಂತಹ ಗಟ್ಟಿತನ  ಈ ರೀತಿ ಮಠ, ಮಾನ್ಯರುಗಳ ದೌರ್ಜನ್ಯಕ್ಕೆ ಒಳಗಾದ ಪ್ರತಿ ಹೆಣ್ಣುಮಗಳೂ ರೂಡಿಸಿಕೊಳ್ಳಬೇಕು. ನಾವು ಶಾಂತಗೌರಿಯರು ಹೇಗೋ, ಕಾಳಿಯ ಅವತಾರವೂ ಹೌದಲ್ಲವೆ?
                 ಇನ್ನು ಸಮುದಾಯದ ಭಕ್ತರು! ಇದು ಶಿರಸಿಯ ಪಾದುಕಾಶ್ರಮದಂತೆ ಕೆಲವು ವರ್ಷಗಳ ಬಂಧವಲ್ಲ. ತಲೆತಲಾಂತರದಿಂದ ಬಂದ ಬಂಧ. ಗುರು ಶಿಷ್ಯನ ಬಂಧ ತಾಯಿ, ಮಗುವಿನಷ್ಟೇ ಗಾಢವಾಗಿರುತ್ತದೆ. ಪ್ರಶ್ನಿಸದೇ, ಯೋಚಿಸದೇ ಒಪ್ಪಿಕೊಳ್ಳುವ ಜನರೆಂತೂ ಈ ಬಂಧಕ್ಕೆ ಸುಲಭವಾಗಿ ಸಿಕ್ಕಿಬೀಳುತ್ತಾರೆ. ಅಮ್ಮ ಎನ್ನುವ ಶಬ್ಧ ಎಷ್ಟು ಜನಪ್ರಿಯವೋ , ಗುರು ಎನ್ನುವ ಶಬ್ಧವೂ ಅಷ್ಟೇ ಜನಪ್ರಿಯ. ಕೆಟ್ಟ ಮಕ್ಕಳು ಹುಟ್ಟಬಹುದು, ಆದರೆ ಕೆಟ್ಟ ತಾಯಿ ಇರಲಾರಳು ಎಂದು ನಂಬಿದವರು ನಾವು. ಸನಾತನ ಹಿಂದೂ ಸಮುದಾಯದಲ್ಲಿ ಗುರುವಿಗಿರುವ ಸ್ಥಾನ ಕೆಲವೊಮ್ಮೆ ತಾಯಿಗೂ ಇರಲಾರದು. ಹಾಗಾಗಿ ಕೆಟ್ಟ ಶಿಷ್ಯ ಇರಬಹುದು, ಆದರೆ ಕೆಟ್ಟ ಗುರು ಎಂದೂ ಇರಲಾರ ಎಂಬುದು ನಮ್ಮ ನಂಬಿಕೆ. ಇಂತಹ ಸಂದರ್ಭದಲ್ಲಿ ನೆರವಾಗುವುದು ಗುರುವಿನ ಗುರುಗಳೆನಿಸಿಕೊಂಡ ಗುರುಚರಿತ್ರೆ ಮೊದಲಾದ ಶಾಸ್ತ್ರಗ್ರಂಥಗಳು. ಅದರಲ್ಲಿ ಹೇಳುವಂತೆ ಕಲಿಯುಗದಲ್ಲಿ ಸಂನ್ಯಾಸಿಗಳನ್ನು ಜನರು ನಂಬುವುದಿಲ್ಲ. ಸ್ತ್ರೀ ಕಾಮದಿಂದ ಹಾಳಾದರೆ, ಸಂನ್ಯಾಸಿ ಸುಖಭೋಗಗಳಿಂದ ಹಾಳಾಗುತ್ತಾನೆ, ಹೀಗೆ ಹತ್ತು ಹಲವು ಮಾರ್ಗಗಳು ಇಂಥ ಸಂದರ್ಭಗಳಲ್ಲಿ ನಾವು ಯಾವುದನ್ನು ನೋಡಬೇಕು ಎಂಬುದನ್ನು ತೋರಿಸುತ್ತವೆ. ಶ್ರೀರಾಮಕೃಷ್ಣರಂತೂ ಪರೀಕ್ಷೆ ಮಾಡದೆ ಒಪ್ಪಿಕೊಳ್ಳಬೇಡ, ದೊಡ್ಡ ಹಾವಾಗಿದ್ದರೆ ನಿನ್ನ ಕಾಮ, ಕಾಮನೆಗಳನ್ನು ನುಂಗಿ ಆತ್ಮವೆತ್ತರಿಸುತ್ತದೆ. ಇಲ್ಲದಿದ್ದರೆ ನಿನ್ನ ಕಾಮ, ಕಾಮನೆಗಳನ್ನು ಹೆಚ್ಚಿಸಿ ನೀನೂ ಸುಖದ ಸಾವು ಸಾಯದಂತೆ, ತಾನೂ ಸುಲಭವಾಗಿ ದಕ್ಕಿಸಿಕೊಳ್ಳಲಾಗದಂತೆ ಒದ್ದಾಟವಾಗುತ್ತದೆ. ಹುಷಾರಿ! ಎಂದಿದ್ದಾರೆ.
ಇದನ್ನೆಲ್ಲ ಪರಿಗಣಿಸಿ ಸಮುದಾಯದ ಭಕ್ತರು ಇನ್ನಾದರೂ ಮೌಢ್ಯದಿಂದ ಹೊರಬರಲಾರರೆ?  

ಶುಕ್ರವಾರ, ಜುಲೈ 17, 2015

ರೈತರ ಆತ್ಮಹತ್ಯೆ, ಎಡವಿದ್ದೆಲ್ಲಿ?

ಇತ್ತೀಚೆಗೆ ಪ್ರತಿದಿನ ರೈತರ ಸಾವಿನ ಸಂಖ್ಯೆಯನ್ನು ಓದುವುದರಿಂದ ಬೆಳಗಾಗುತ್ತಿದೆ. ಪ್ರತಿನಿತ್ಯ ನನ್ನ ಕಣ್ಣೆದುರು ನಾ ಕಂಡ ಹಲವು ಸತ್ಯಗಳ ನಿಜಜೀವನದ ಸಿನೇಮಾ ರೀಲು ಮನಃಪಟಲದ ಮೇಲೆ ಒಮ್ಮೆ ಸುತ್ತಿ ಹೋಗುತ್ತದೆ.
ಅದು ಹೆಚ್ಚು ಕಡಿಮೆ 1991 ದಶಕ. ನನ್ನ ತಂದೆಯವರ ಪಾಲಿಗೆ 3 ಎಕರೆ ಚಿಲ್ಲರೆ ಭೂಮಿ ಬಂದಿತ್ತು. ಅದರಲ್ಲಿ ಅರ್ಧ ಅಡಿಕೆ ತೋಟದ ಜಾಗ, ಇನ್ನುಳಿದಿದ್ದು ಭತ್ತ, ಧಾನ್ಯಗಳನ್ನು ಬೆಳೆಯಬಹುದಾದ ಫಲವತ್ತಾದ ಗದ್ದೆ. ನಮ್ಮ ಮನೆಯಲ್ಲಿ ತಂದೆ ಸ್ವಂತ ಹೂಟಿ, ನಾಟಿ ದೇಖರೈಖಿ ನೋಡಿಕೊಳ್ಳುತ್ತಿದ್ದರು. ಧಾನ್ಯ ಕೀಳುವುದು, ಕಳೆ ಕೀಳುವಂತಹ ಕೆಲಸಗಳಲ್ಲಿ ನಾನು, ಅಮ್ಮ ಜೊತೆಗೆ ಕೆಲಸ ಮಾಡುತ್ತಿದ್ದೆವು. ಹಾಗಾಗಿ ಊಟಕ್ಕೆ ಅಕ್ಕಿ, ಬೆಲ್ಲ, ತರಕಾರಿ, ಖರ್ಚಿಗೆ ಅಡಿಕೆ ಬೆಳೆ, ಸಣ್ಣಪ್ರಮಾಣದಲ್ಲಿ ತೆಂಗು ಹೀಗೆ ಯಾವುದಕ್ಕೂ ಬೇರೆಯವರನ್ನು ಅವಲಂಬಿಸದ ಸ್ವಾವಲಂಬಿ, ಪರಿಶ್ರಮದ ಬದುಕು. ನಮ್ಮ ದುಡಿಮೆಯ ಬಗ್ಗೆ ನಮಗೆ ಪಶ್ಚಾತ್ತಾಪವಿರಲಿಲ್ಲ. ಸ್ವಾನುಕಂಪವಿರಲಿಲ್ಲ. ಬದಲಿಗೆ ನನ್ನ ತಾಯಿಗೆ ತನ್ನ ಗಂಡ ದುಡಿದು ಬರುತ್ತಾನೆಂಬ ಹೆಮ್ಮೆ. ಆತನಿಗೆ ಬಿಸಿನೀರು ಕಾಯಿಸಿ, ಎಣ್ಣೆ ಹಚ್ಚಿ ಸ್ನಾನ ಮಾಡಿಸಿ ರುಚಿ ರುಚಿಯಾದ, ಪೌಷ್ಟಿಕವಾದ ಅಡುಗೆಯನ್ನು ಮಾಡಿ ಹಾಕಿ ಖುಷಿ ಪಡುತ್ತಿದ್ದ ಅಮ್ಮ, ಅಮ್ಮನ ಕಣ್ಣಲ್ಲಿ ತನ್ನ ಮೇಲಿನ ಪ್ರೀತಿ, ಆದರವನ್ನು ಕಂಡು ಕರಗಿ ಹೋಗುತ್ತಿದ್ದ ಅಪ್ಪ... ಎಂತಹ ಸುಂದರ ದೃಶ್ಯ.... ಧಾನ್ಯ ಕೀಳುವುದು ಸರಿಯಾಗಿ ಬಿಸಿಲೇರುವ ಕಾಲಕ್ಕೆ ಇರುತ್ತಿತ್ತು. ನನಗೆ ಶಾಲೆಗೆ ರಜ ಇರುತ್ತಿದ್ದ ದಿನಗಳಾದ್ದರಿಂದ ನಾವು ಆಳುಗಳನ್ನು ತೆಗೆದುಕೊಳ್ಳದೇ ಮೂವರೂ ಸೇರಿ ದಿನವೂ ಅಷ್ಟಷ್ಟಾಗಿ ಕೀಳುತ್ತಿದ್ದೆವು. ನನಗಿನ್ನೂ 10-12 ವಯಸ್ಸು. ಆದರೆ ಶಾಲೆಗೆ ಹೋಗುವ ಮಗು ಹೊಲದಲ್ಲಿ ಅದೂ ಬಿಸಿಲಲ್ಲಿ ದುಡಿಯಬಾರದು ಎಂಬ ಉತ್ಪ್ರೇಕ್ಷೆಯ ಪ್ರೀತಿ ಇರಲಿಲ್ಲ. ಬದಲಿಗೆ ಹಕ್ಕಿಯೊಂದು ಮರಿಗೆ ಕಾಳು ಹೆಕ್ಕುವುದನ್ನು ಹೇಳಿಕೊಡುವ ರೀತಿಯಲ್ಲಿ ಆ ಕೆಲಸ ನನ್ನದಾಗಿತ್ತು. ನಾನಂತೂ ಬಹಳ ಖುಷಿಯಿಂದ ಎಲ್ಲ ಕೆಲಸ ಮಾಡುತ್ತಿದ್ದೆ. ಆ ಶುಭ್ರವಾದ ಆಕಾಶ, ತುಂಬಿ ನಿಂತ ಫಸಲು, ಅದಕ್ಕಾಗಿ ಬರುವ ಹಕ್ಕಿಗಳ ದಂಡು, ಚಿಟ್ಟೆಗಳು, ಬಗೆಬಗೆಯ ಜೀವರಾಶಿಗಳೊಂದಿಗೆ ಮುಖಮುಖಿಯಾಗುತ್ತಿದ್ದೆ ನಾನು. ಆಗಷ್ಟೆ ಜಗತ್ತಿನೆಡೆಗೆ ಕಣ್ಣು ಬಿಡುತ್ತಿದ್ದ ಮಗುವಿಗೆ ಇಂತಹ ಸುಂದರ ದೃಶ್ಯ ವರವೇ ಸರಿ.
ಆದರೆ, ಬಾಲ್ಯದಿಂದಲೂ ಕಷ್ಟವನ್ನೇ ಕಂಡ, ಹೆಚ್ಚು ಓದು ಬರಹ ಬಾರದ ನನ್ನ ತಂದೆಗೆ ಸ್ವಾನುಕಂಪ ಜಾಸ್ತಿ ಅಥವಾ ತನ್ನ ತನಗೆ ನಂಬಿಕೆ ಕಡಿಮೆ ಎಂದು ಹೇಳಬಹುದು. ಮನೆ ಬಿಟ್ಟು ಹೊರಗೆ ಹೋಗಲಿಕ್ಕಿಲ್ಲ, ಎಲ್ಲರೂ ನಿಮ್ಮ ಮನೆಯಲ್ಲಿ ಎಷ್ಟೆಕರೆ ಅಡಿಕೆ ತೋಟ ಇದ್ದು? ಅಡಿಕೆ ಎಷ್ಟಾಕ್ತು? ಅಯ್ಯೋ ನಿಂಗಳೇ ದುಡಕತ್ತಿ? ಪಾಪ! ನಿಂಗಾದ್ರೂ ಎಂತಾ ಸ್ಥಿತಿ ಬಂತೋ ಮಾರಾಯ!? ಈ ವಯಸ್ಸಲ್ಲಿ ದುಡಿಯಂಗಾಗೋಯ್ತಲ್ಲೋ? ಒಂದೇ ಮಗಳಲ್ದನ ನಿನ್ನ ಹೆಂಡ್ತಿ? ಏನಾದ್ರೂ ಮಾಡ್ಲಾಗಿತ್ತೋ ನಿನ್ನ ಮಾವನ ಮನೆಯವರು ಹೀಗೆ ಹೇಳಿ ಹೇಳಿ ಅಪ್ಪನಿಗೆ ಸ್ವಾನುಕಂಪ ಇನ್ನೂ ಜಾಸ್ತಿಯಾಗತೊಡಗಿತು. ಇನ್ನೊಂದೆಡೆ ಒಂದು ಮಳೆಗಾಲದಲ್ಲಿ ಭತ್ತ ಬೆಳೆಯಲು ನೀರು ಕೊಡಬಾರದೆಂದು ಮೇಲ್ಗದ್ದೆಯ ಮಾಲೀಕ ನನ್ನ ದೊಡ್ಡಪ್ಪ. ಅಸೂಯೆಗೆ ಮತ್ತೊಂದು ಹೆಸರೇ ಆತ. ತನ್ನ ಗದ್ದೆ ಕೊಳೆತರೂ ತೊಂದರೆಯಿಲ್ಲ, ಇವ ಭತ್ತ ಬೆಳೆಯಬಾರದೆಂದು ಒಡ್ಡು ಹಾಕಿ ನಿಲ್ಲಿಸಿಬಿಟ್ಟ. ಪರಿಣಾಮ ಭತ್ತದ ಫಸಲು ಆ ಸಲ ಕಡಿಮೆ ಆಯಿತಾದರೂ ಹಾನಿಯೇನಾಗಿರಲಿಲ್ಲ. ಇದು ಅಪ್ಪನಿಗೆ ಭರಿಸಲಾಗಲಿಲ್ಲ. ಅಣ್ಣನೆದುರು ಜಿದ್ದಿಗೆ ಬಿದ್ದ ಈ ತಮ್ಮ ಅವನಂತೆಯೇ ತಾಲೂಕು ಭೂ ಅಭಿವೃದ್ಧಿ ಬ್ಯಾಂಕಿನಿಂದ ಸಾಲ ಪಡೆದು ಗದ್ದೆ ಸೀಳಿಸಿ, ಅಡಿಕೆ ತೋಟದ ಜಾಗ ಮಾಡಿಯೇ ಬಿಟ್ಟ. ಗೆದ್ದಿದ್ದು ಅಪ್ಪನಾಗಿರಲಿಲ್ಲ, ಬದಲಿಗೆ ಅವನ ಅಣ್ಣನಾಗಿದ್ದ. ನಮ್ಮ ಸ್ವಾವಲಂಬಿ ಸುಖೀ ಕುಟುಂಬದ ಸುಂದರ ದೃಶ್ಯಗಳು ಒಮ್ಮೆಗೇ ಛಿದ್ರವಾದವು. ಊಟಕ್ಕೂ ಬರವಾಗುವಂತಾಯಿತು. ಸಾಲದ ಬಡ್ಡಿ ತುಂಬಲು ಸಾಲ ಎಂದು ಹುಲಿ ಹುಣ್ಣಾಯಿತು. ಅಂಗಡಿ, ಅಡಿಕೆ ತೋಟ, ಆಳು ಕಾಳುಗಳ ನೆಚ್ಚಿಕೆ, ಮೈಮುರಿದು ದುಡಿಯುವುದು ಎಂದರೆ ಅವಮಾನ ಎಂದು ತಿಳಿದ ಸಮಾಜ, ಸರಿಕರು, ಅವರ ಹಂಗಿಸುವಿಕೆ, ಕೀಳಾಗಿ ಕಾಣುವಿಕೆ ಇಡೀ ಜೀವನವನ್ನು, ಅದರೆಡೆಗಿನ ದೃಷ್ಟಿಕೋನವನ್ನು ಯಾವ ರೀತಿ ಬದಲಾಯಿಸಿತೆಂದರೆ 2001ರ ಹೊತ್ತಿಗೆ ಬ್ಯಾಂಕ್ ಜಮೀನಿನ ಲಿಲಾವು ನೋಟಿಸು ಮನೆಗೆ ಕಳಿಸಿತ್ತು! ಮನೆಯಲ್ಲಿ ಎಲ್ಲ ಅನುಕೂಲವೂ ಇತ್ತು! ಆದರೆ ಮೈತುಂಬ ಸಾಲದ ಹುಣ್ಣಿರುವಾಗ ಯಾವ ಅನುಕೂಲ ಏನು ಸುಖ ತಂದೀತು!? ಮುಂದೆ ನಾವೆಲ್ಲ ಸೇರಿ ಅಪ್ಪನನ್ನೂ, ಜಮೀನನ್ನೂ, ಕುಟುಂಬವನ್ನೂ ಉಳಿಸಿಕೊಂಡೆವು ಅದು ಬೇರೆ ಮಾತು. ಆದರೆ ಎಷ್ಟು ಮನೆಯಲ್ಲಿ ಅದು ಸಾಧ್ಯ? ಹೆಚ್ಚಿನ ಮನೆಯಲ್ಲಿ ಅಪ್ಪ, ಅಮ್ಮ ನಮ್ಮನ್ನು ನೋಡಿಕೊಳ್ಳುವುದು, ನಮ್ಮೆಡೆಗೆ ಅವರು ಮಾಡಬೇಕಾದ ಕರ್ತವ್ಯದ ಅರಿವು ಮಕ್ಕಳಿಗಿದೆಯೇ ಹೊರತು ಅವರೆಡೆಗೆ ತಮ್ಮ ಕರ್ತವ್ಯ ಏನು ಎಂಬುದು ಗೊತ್ತಿಲ್ಲ. ಮಕ್ಕಳಿಗೆ ತಮ್ಮದೇ ಲೋಕ. ಅದರ ಬಗ್ಗೆ ಇನ್ನೆಂದಾದರೂ ಚರ್ಚಿಸುತ್ತೇನೆ.

ಇದು ಕೇವಲ ನಮ್ಮ ಮನೆಯ ಕಥೆಯಲ್ಲ ಎನ್ನುವುದು ನನಗೆ ಪತ್ರಿಕೋದ್ಯಮಕ್ಕೆ ಬಂದಾಗ ತಿಳಿಯಿತು. ನಮ್ಮ ರಾಜ್ಯವಿರಲಿ, ಬೇರೆ ರಾಜ್ಯವಿರಲಿ ರೈತರ ಆತ್ಮಹತ್ಯೆಗೆ ನಿಜವಾದ ಕಾರಣಗಳನ್ನು ನಾನು ಹೇಳುತ್ತೇನೆ.
1. ಸಮಾಜ, ಸರೀಕರು ಸ್ವಂತ ದುಡಿಮೆ ಮಾಡುವ ಜನರನ್ನು ಕೀಳಾಗಿ ಕಾಣುವುದು.
2. ಆಳುಗಳನ್ನಿಟ್ಟು ದುಡಿಸಿದರೇ ಆ ವ್ಯಕ್ತಿಗೊಂದು ಕಿಮ್ಮತ್ತು.
3. ಹೊರಗೆ ಬೆವರು ಸುರಿಸಿ ದುಡಿದು ಒಳಗೆ ಶ್ರೀಮಂತನಾದ ರೈತನಿಗಿಂತಲೂ, ಹೊರಗೆ ಶುಭ್ರವಾದ ಗರಿಗರಿ ಬಟ್ಟೆ ತೊಟ್ಟು, ಒಳಗೆ ಬರಿದಾದ ವ್ಯಕ್ತಿ ಹೆಚ್ಚು ಆಕರ್ಷಣೀಯವಾಗತೊಡಗಿದ್ದು.
4. ಇವತ್ತು ಭೂಮಿಯೆಂದರೆ ದೇವರಲ್ಲ, ಬದಲಿಗೆ ಹಗಲಿರುಳೂ ನಿರ್ವಹಿಸಬೇಕಾದ ಶಾಪ! ಅದಕ್ಕಾಗಿ ಹೇಗಾದರೂ ಸರಿ, ಬೆಳೆ ತೆಗೆದುಬಿಡುವ ತವಕದಲ್ಲಿ ದಡ್ಡಿಗೊಬ್ಬರದ ಬದಲು, ರಸಗೊಬ್ಬರಗಳ ಮಿತಿಮೀರಿದ ಬಳಕೆ. ಹಿಂದೆ ರಸಗೊಬ್ಬರಗಳನ್ನೂ ಬಳಸುತ್ತಿದ್ದರು. ಆದರೆ ದಡ್ಡಿಗೊಬ್ಬರ 4 ಲೋಡ್ ಹಾಕಿದ್ರೆ, 1 ಚೀಲದಷ್ಟು ಯೂರಿಯಾ ಹಾಕಬಹುದಿತ್ತು. ಅದೂ ತೀರ ಅಗತ್ಯ ಎನಿಸಿದಾಗ. ಇವತ್ತು ಹಾಗಿಲ್ಲ. ದಡ್ಡಿಗೊಬ್ಬರ ಮಾಡಲು ಹಸುಗಳನ್ನೇ ಸಾಕುವವರಿಲ್ಲ. ಅದರ ಕಾಲ್ತುಳಿತಕ್ಕೆ ಸೊಪ್ಪು, ಸದೆ ಹಾಕಿ, ಅದನ್ನು ಒಟ್ಟು ಸೇರಿಸಿ ದಡ್ಡಿಗೊಬ್ಬರ ಮಾಡುವವರು ಕಡಿಮೆಯಾಗಿದ್ದಾರೆ. ಹಾಗಾಗಿ ಈಗ ಸಾವಯವ ಕೃಷಿ ಮಾಡುತ್ತೇನೆಂದರೆ ಎರೆಹುಳುಗೊಬ್ಬರ, ಕುರಿಗೊಬ್ಬರಗಳನ್ನು ನೆಚ್ಚಿಕೊಳ್ಳಬೇಕೇ ಹೊರತು ಮೊದಲಿನ ದಡ್ಡಿಗೊಬ್ಬರ ಸಿಗುತ್ತಿಲ್ಲ. ಸಿಕ್ಕರೂ ಅದು ಬಂಗಾರಕ್ಕಿಂತಲೂ ಹೆಚ್ಚು ಬೆಲೆಬಾಳುತ್ತಿದೆ. ಅದನ್ನು ಕೊಂಡುಕೊಳ್ಳುವವರಿಲ್ಲ!
5. ವೈಜ್ಞಾನಿಕ, ಯೋಜಿತ ಕಾರ್ಯತಂತ್ರ ಎಂದರೇನು? ಎಂಬುದು ಸಣ್ಣ ಮಟ್ಟದ, ಸಾಕಷ್ಟು ವಿದ್ಯಾವಂತರು, ಬುದ್ದಿವಂತರಲ್ಲದ ರೈತರಿಗೆ ಗೊತ್ತಿಲ್ಲ. ಪಕ್ಕದ ಮನೆಯಲ್ಲಿ ವೆನಿಲ್ಲಾ ಬೆಳೆದರಂತೆ ಹಣ ಬಂತಂತೆ, ನಾನೂ ಬೆಳೆಯುತ್ತೇನೆ. ಪಕ್ಕದ ರೈತ ಏನು ಮಾಡಿದನೋ ಅದು ತನ್ನ ಭೂಮಿಯಲ್ಲೂ ಬೆಳೆಯಬಹುದು ಎಂಬ ನಂಬಿಕೆ. ಅದಕ್ಕೆ ತನ್ನ ಜಮೀನಿನ ಇತಿಮಿತಿಗಳ ಅರಿವಾಗಲೀ, ಎಲ್ಲರೂ ಒಂದೇ ಬೆಳೆಯನ್ನು ಅಷ್ಟು ಪ್ರಮಾಣದಲ್ಲಿ ಬೆಳೆದರೆ ದರದ ಗತಿ ಏನಾಗಬಹುದು? ದೊಡ್ಡ ಪ್ರಮಾಣದಲ್ಲಿ ಬೆಳೆ ಇದ್ದಾಗ ರೈತರೆಲ್ಲ ಒಟ್ಟಾಗಿ ಬೆಳೆಯ ವೈಜ್ಞಾನಿಕ ಮಾರಾಟಕ್ಕೆ ಪ್ರಯತ್ನಿಸಬಹುದೆಂಬ ಅರಿವಾಗಲೀ, ಇನ್ನೊಬ್ಬ ರೈತ ಎದುರಾಳಿಯಾಗದೆ, ಸ್ನೇಹಿತನಂತೆ ಪರಿಗಣಿಸುವುದಾಗಲೀ ಕಡಿಮೆ.
6. ಬ್ಯಾಂಕುಗಳು, ಹಣ ಕೊಡುವವರು. ಇವರು ನಿಜವಾಗಿ ರೈತರ ಪರವೋ, ಅಭಿವೃದ್ಧಿಯ ಪರವೋ ಇಲ್ಲ. ಸ್ವಲ್ಪ ದುಡ್ಡಿದ್ದರೂ ಬಡ್ಡಿ ವ್ಯವಹಾರ ಮಾಡುವವರು ಬಹಳ ಜನ. ಹಾಗೆಂದು ಅವರ ಬಳಿಯೂ ಒಂದು ದಿನ ಬಡ್ಡಿ ಬಂದಿಲ್ಲ ಎಂದರೆ ಬದುಕುವ ತಾಕತ್ತೇನೂ ಇರುವುದಿಲ್ಲ, ಕೂತು ಉಂಡರೆ ಕುಡಿಕೆ ಹೊನ್ನು ಎಷ್ಟು ದಿನ? ಹಾಗಾಗಿ ಅವರು ದಿನ ಬಂದು ಸಾಲ ತೆಗೆದುಕೊಂಡವರನ್ನು ಕಾಡಿಸುತ್ತಾರೆ. ನಮ್ಮ ಉತ್ತರಕನ್ನಡದಲ್ಲಿ ಇದು ಅಷ್ಟಾಗಿ ಇಲ್ಲ. ರಾಜ್ಯದ ಉತ್ತರದ ಜಿಲ್ಲೆಗಳಲ್ಲಿ, ದಕ್ಷಿಣದ ಹಳ್ಳಿಗಳಲ್ಲಿ ಇದು ವ್ಯಾಪಕವಾಗಿದೆ. ಬ್ಯಾಂಕುಗಳು ಸಾಲ ಕೊಡುವಾಗ ರೈತ ಸುಲಭವಾಗಿ ತೀರಿಸುವ ಸಾಧ್ಯತೆಗಳು ಅಂದರೆ ಬೆಳೆಯ ರೀತಿ, ಪ್ರಮಾಣ, ಅದರ ಮಾರುಕಟ್ಟೆ ಇವುಗಳನ್ನು ನೋಡಿ ಸಾಲ ಕೊಡುವುದಿಲ್ಲ. ಬದಲಾಗಿ ಜಮೀನು, ಅದರ ಅಳತೆ, ಅಲ್ಲಿ ಸಾಮಾನ್ಯವಾಗಿ ಏನು ಬೆಳೆ ಬೆಳಯುತ್ತಾರೆ ಎಂದು ನೋಡಿಕೊಂಡು, (ಆಗಲೇ ಜಮೀನಿನ ಮೇಲೆ ಕಣ್ಣಿಟ್ಟಂತೆ) ಅವರಿಗೆ ಬಡ್ಡಿ ಕಟ್ಟಲು ಮಿಕವೊಂದು ಬಲೆಗೆ ಬಿದ್ದ ರೀತಿಯಲ್ಲಿ ಅಷ್ಟು ವಿದ್ಯಾವಂತನಲ್ಲದ ರೈತನನ್ನು ನಡೆಸಿಕೊಳ್ಳುತ್ತವೆ. ಸಾಲದ ಕಾಗದಪತ್ರ ಮಾಡಿಸುವಲ್ಲಿಂದ ಹಿಡಿದು ಸಾಲ ಮಂಜೂರಾತಿ ಬರುವವರೆಗೆ ರೈತನಿಂದ ಪೀಕುತ್ತವೆ. ನಂತರ ಸರ್ಕಾರದ ಸಬ್ಸಿಡಿ ಬಂದಾಗ ರೈತನಿಗೆ ಹೇಳುವುದಿಲ್ಲ. ಅಂತೂ ಇಂತು ಯಾರದ್ದೊ ಮುಖಾಂತರ ಗೊತ್ತಾದರೂ ಕಾಗದಪತ್ರ ಸ್ವಂತವಾಗಿ ಮಾಡಲಾಗದ ರೈತ ಕೆಲವೊಮ್ಮೆ ಕೈಚೆಲ್ಲಿಬಿಡುತ್ತಾನೆ. ಇನ್ನೂ ಕೆಲವೊಮ್ಮೆ ಕಾಗದಪತ್ರ ಮಾಡಿಸಿಕೊಟ್ಟರೂ ಬ್ಯಾಂಕಿನ ಸಿಬ್ಬಂದಿ ಸಕಾಲದಲ್ಲಿ ಸಬ್ಸಿಡಿಗೆ ಅರ್ಜಿ ಸಲ್ಲಿಸದೇ ರೈತನಿಗೆ ಆ ಬಗ್ಗೆ ಮಾಹಿತಿಯನ್ನೂ ನೀಡದೆ ಕತ್ತಲೆಯಲ್ಲಿಡುತ್ತವೆ. ಅಲ್ಲಿಗೆ ಕಾಗದಪತ್ರಕ್ಕಾಗಿ ಮಾಡಿದ ಕೈಸಾಲ, ಬ್ಯಾಂಕಿನ ಅಧಿಕೃತ ಸಾಲ, ಸಬ್ಸಿಡಿ ಸಿಗದೆ ಇದ್ದಾಗ ಚಕ್ರಬಡ್ಡಿಯ ಹೆಚ್ಚಳ ಹೀಗೆ ರೈತ ಚಕ್ರವ್ಯೂಹದಲ್ಲಿ ಸಿಕ್ಕ ಅಭಿಮನ್ಯುವಾಗುತ್ತಾನೆ.
7. ನೀರಾವರಿ ಕೊರತೆ- ಸಮಸ್ಯೆಯ ಮೂಲದ ಮೊದಲನೆ ಪಟ್ಟಿ ಇದಾಗಬೇಕಿತ್ತು. ಮೊದಲು ಹರಿಯುವ ನೀರು, ಸುರಿಯುವ ಮಳೆಯನ್ನೇ ನಂಬಿದ್ದಾಗ ಇದು ಪ್ರಮುಖ ವಿಷಯವಾಗಿತ್ತು. ಇಂದು ಹಾಗಿಲ್ಲ. ಪಂಪ್ಸೆಟ್, ಕೊಳವೆಬಾವಿಗಳಿವೆ. ಸಾಕಷ್ಟಲ್ಲದಿದ್ದರೂ ಮಳೆ ಸುರಿಯುತ್ತಿದೆ. ಸರ್ಕಾರ ಸಾಕಷ್ಟು ನಾಲೆಗಳು, ಅಣೆಕಟ್ಟುಗಳು ಎಂದು ವ್ಯವಸ್ಥೆ ಮಾಡುತ್ತಿದೆ. ಆದರೂ ನೀರಾವರಿಯ ಸಮಸ್ಯೆ ಇದೆ ಎಂದರೆ ರೈತರ ಅಜ್ಞಾನ ಮತ್ತು ಅಸಹಾಯಕತೆಯೇ ಕಾರಣ ಎಂದು ನನ್ನ ಅನಿಸಿಕೆ. ಕಾಡುಗಳಲ್ಲಿ ಉರುವಲು ಸಿಕ್ಕುತ್ತದೆ ಎಂದು ಸಿಕ್ಕಾಪಟ್ಟೆ ಕಡಿದು ಹಾಕುವುದು, ಅಡ್ಡಕಸುಬು ದೊಡ್ಡ ದುಡ್ಡು ತರುತ್ತದೆ ಎಂದು ನಾಟಾ ಕಳ್ಳಸಾಗಣಿಕೆ ಮಾಡುವುದು, ತಮಗೆ ತಿನ್ನಲು ಆಹಾರವಿಲ್ಲವೆಂದ ಕಾಡಂಚಿಗೆ ಬರುವ ಬೆಳೆ ರಕ್ಷಕ ಪ್ರಾಣಿಗಳನ್ನು ಇವರೇ ಹೊಡೆದುಕೊಂಡು ತಿನ್ನುವುದು, ಮಳೆಯ ನೀರು ಇಂಗಿಸುವ ಯಾವುದೇ ಸಾಂಪ್ರದಾಯಿಕ ಚಟುವಟಿಕೆಗೆ ತಿಲಾಂಜಲಿ ಇತ್ತಿರುವುದು, ಕೃಷಿ ಇಲಾಖೆ ಹೇಳುತ್ತಿರುವ ನೀರು ಇಂಗಿಸಿ, ಅಂತರಜಲ ಹೆಚ್ಚಿಸುವ ಆಧುನಿಕ ಉಪಾಯಗಳನ್ನು ಕಡೆಗಣಿಸಿರುವುದು ಇವೆಲ್ಲ ನೆಲಮೂಲದ ಜಲದ ಬತ್ತುವಿಕೆಗೆ ಕಾರಣವಾಗಿವೆ. ಇದು ಸ್ವಯಂಕೃತ ಅಪರಾಧ ಎನ್ನುವುದನ್ನು ರೈತರಷ್ಟೇ ಅಲ್ಲ ಉಳಿದವರೂ ಅರಿತುಕೊಳ್ಳಬೇಕು.
8. ವೈಜ್ಞಾನಿಕ ಮಾರುಕಟ್ಟೆಯ ಕೊರತೆ. ಬೆಳೆಗೆ ವೈಜ್ಞಾನಿಕ ಬೆಲೆ ಎಂಬುದಿಲ್ಲ. ಇದನ್ನು ರೈತರು, ಮಾಧ್ಯಮಗಳು, ಸರ್ಕಾರ ಅರ್ಥ ಮಾಡಿಕೊಳ್ಳಬೇಕು. ಆದರೆ ವೈಜ್ಞಾನಿಕ ಮಾರುಕಟ್ಟೆ ಎನ್ನುವುದಿದೆ, ಇರಬೇಕು. ಯಾವುದೇ ಉತ್ಪನ್ನಕ್ಕೆ ಉತ್ಪಾದನೆ, ಸಾಗಾಣಿಕೆ ವೆಚ್ಚದ ಜೊತೆಗೆ ಲಾಭದ ಅಂಶವೂ ಸೇರಿ ಮಾರುವ ಬೆಲೆ ನಿರ್ಧಾರವಾಗುತ್ತದೆ. ನಮ್ಮ ರೈತರು ಅದನ್ನು ಮಾಡುತ್ತಿದ್ದಾರೆ. ಆದರೆ ಒಂದೇ ಬೇಳೆಯನ್ನು ಹೆಚ್ಚು ಪ್ರಮಾಣದಲ್ಲಿ ಸಣ್ಣ ರೈತರು ಬೆಳೆದಾಗ ಅದನ್ನು ಸೂಕ್ತ ರೀತಿಯಲ್ಲಿ ಮಾರುವ ಅವಕಾಶ ಕಲ್ಪಿಸಬೇಕು. ಸಕ್ಕರೆಯ ವಿಷಯಕ್ಕೆ ಬಂದಾಗ ಕಾರ್ಖಾನೆಗಳು ನಿಗದಿತ ಮೊತ್ತವನ್ನು ರೈತ ಬೆಳೆ ತಂದು ಕೊಟ್ಟ ತಕ್ಷಣ ಪಾವತಿಸುವಂತೆ ಮಾಡಬೇಕು. ಪದೇ ಪದೇ ಬೆಳೆ ವೈಫಲ್ಯ ಕಾಣುವ ರೈತನಿದ್ದರೆ ಅವನ ವೈಫಲ್ಯಕ್ಕೆ ಕಾರಣಗಳೇನು ಎಂದು ತಾಲೂಕು ಮಟ್ಟದಲ್ಲಿ/ ಪಂಚಾಯಿತಿ ಮಟ್ಟದಲ್ಲಿ ಗುರುತಿಸಿ ಆತನಿಗೆ ತನ್ನ ವೈಫಲ್ಯ ಸರಿಮಾಡಿಕೊಳ್ಳುವ / ಪರ್ಯಾಯ ಬೆಳೆಗಳ ಸೂಕ್ತ ಅವಕಾಶಗಳ ಹಾದಿ ತೋರಿಸಬೇಕು. ಇದ್ಯಾವುದೂ ಆಗುತ್ತಿಲ್ಲ. ಬದಲಿಗೆ ಸಾವಿರಾರು ಟನ್ ಗಟ್ಟಲೆ ಬೆಳೆ ಬಂದಾಗ ಸರ್ಕಾರ ಬೆಲೆ ನಿಗದಿ ಮಾಡಿ, ಕೊಂಡುಕೊಳ್ಳಬೇಕು ಎಂಬುದು ನನಗೇಕೋ ಸರಿಕಾಣುತ್ತಿಲ್ಲ. ಎಲ್ಲವನ್ನೂ ಸರ್ಕಾರವೇ ಮಾಡುವುದಾದರೆ ರೈತರು ಸ್ಪರ್ಧೆ, ವ್ಯವಹಾರ ಎಲ್ಲ ಕಲಿಯುವುದು ಯಾವಾಗ? ಸ್ಪೂನ್ ಫೀಡಿಂಗ್ ಎಷ್ಟು ದಿನ ಮಾಡುತ್ತೀರಿ?
ರೈತರ ಆತ್ಮಹತ್ಯೆಗೆ ಮೇಲ್ನೋಟದ ಕಾರಣಗಳಿಷ್ಟಾದರೂ, ಉಳಿದಂತೆ ಅದ್ದೂರಿಯಲ್ಲದಿದ್ದರೂ ಸರಿಕರ ಮುಂದೆ ಸೈ ಎನಿಸಿಕೊಳ್ಳಲೇ ಬೇಕಾದ ಸಾಂಪ್ರದಾಯಿಕ ಮದುವೆ, ವರದಕ್ಷಿಣೆ, ಎಲ್ಲರಂತೆ ಬದುಕುವ ಹುಕಿಯಲ್ಲಿ ಮನೆಯವರೆಲ್ಲರ ಕೈಲಿ ಮೊಬೈಲು, ಗಾಡಿ, ಟಿ.ವಿ, ಆರ್.ಸಿ.ಸಿ ಮನೆ, ಹೋಟೆಲ್ ಊಟ, ಸಿನಿಮಾ, ಚಿಂತೆ ಹಾಗೂ ದೈಹಿಕ ದುಡಿಮೆ ಕಡಿಮೆ/ಅತಿಹೆಚ್ಚು ಆದಾಗ ಬರುವ ಕಾಯಿಲೆಗಳ ಖರ್ಚು ಇವೆಲ್ಲ ಆತನಿಗೆ ಭುಜದ ಮೇಲಿನ ಭಾರ ಹೆಚ್ಚು ಮಾಡುತ್ತವೆ. ಸಂಸಾರದಲ್ಲಿ ಒಬ್ಬನೇ ದುಡಿಯುವುದು, ನಾಲ್ಕು ಮಂದಿ ಖರ್ಚು ಮಾಡುವುದು ಎಂದಾದಾಗ ಅವನ ಮಾನಸಿಕ ಭಾರವೂ ಹೆಚ್ಚಾಗತೊಡಗುತ್ತದೆ. ಸರಿಯಾದ ಸಾಂತ್ವಾನ, ಸಹಕಾರ ಸಿಗದೇ ಮನೆಯವರೂ ಅಸಡ್ಡೆ ಮಾಡಿದರೆ, ಅವನೊಂದಿಗೆ ತಾವೂ ಕಂಗಾಲಾಗಿ ಬಿಟ್ಟರೆ ರೈತನೆಂದು ಅಲ್ಲ, ಉದ್ಯೋಗ ಕಳೆದುಕೊಂಡ ಬಿಳಿಕಾಲರ್ ಉದ್ಯೋಗಿ, ವ್ಯಾಪಾರದಲ್ಲಿ ನಷ್ಟವಾದ ವ್ಯಾಪಾರಿ ಹೀಗೆ ಸೋತ ಯಾರೇ ಆದರೂ ಆತ್ಮಹತ್ಯೆ ಮಾಡಿಕೊಳ್ಳಬಹುದು. ಆದ್ದರಿಂದ ರೈತರಾದರೆ ಆತ್ಮಹತ್ಯೆಯೇ ಗ್ಯಾರಂಟಿ ಎನ್ನುವಂತೆ ಹೊಸ ಬ್ಯಾನರ್ ನ್ನು ರೈತಾಪಿ ಕಸುಬಿಗೆ ಅಂಟಿಸುವುದು ಬೇಡ.

ಕೊನೆಯ ಮಾತು : ಆಮೇಲೆ ಮುಗ್ಧ, ಅಜ್ಞಾನಿ ಹೆಣ್ಣುಮಕ್ಕಳು ಅಪ್ಪ, ಅಮ್ಮನ ಅಸಹಾಯಕತೆಗೆ ರೈತ ಮಗನನ್ನು ಮದುವೆಯಾದರೂ, ಆತನನ್ನು ಜರಿದು, ಕುಗ್ಗಿಸಿ ಇನ್ನೊಂದು ಅನಾಹುತಕ್ಕೆ ಕಾರಣವಾಗುತ್ತದೆ. ನನಗಂತೂ ನಾನೊಬ್ಬ ರೈತನ ಮಗಳೆಂದು ಹೇಳಿಕೊಳ್ಳಲು ಇಂದಿಗೂ ಹೆಮ್ಮೆಯಿದೆ. ಪ್ರೀತಿಯಾಗದಿದ್ದರೆ ಖಂಡಿತವಾಗಿಯೂ ರೈತನನ್ನೇ ಮದುವೆಯೂ ಆಗುತ್ತಿದ್ದೆ. ರೈತರಿಗೆ ಹೇಳೋಣ ನಾವೆಲ್ಲ ನಿಮ್ಮನ್ನು ಗೌರವಿಸುತ್ತೇವೆ. ನಿಮ್ಮ ಕೆಲಸ ನಮ್ಮೆಲ್ಲರ ಕೆಲಸದಷ್ಟೇ ಮೇಲ್ಮಟ್ಟದ್ದು. ಸಾಲ ಮಾಡಬೇಡಿ, ಹಾಸಿಗೆ ಇದ್ದಷ್ಟು ಕಾಲು ಚಾಚುತ್ತ ಬೆಳೆಯಿರಿ. ನಿಮಗೆ ಯಾವ ರೀತಿಯ ಸಹಾಯ ಬೇಕು, ನಮ್ಮನ್ನು ಕೇಳಿ. ಸಾಧ್ಯವಿದ್ದರೆ ಸಹಾಯ ಮಾಡುತ್ತೇವೆ. ಆಗದಿದ್ದರೆ ಸುಮ್ಮನಿರುತ್ತೇವೆ. ನಿಮ್ಮನ್ನು ಕೀಳಾಗೆಂತೂ ಕಾಣುವುದಿಲ್ಲ... ನಿಮ್ಮ ಕೊಳಕು ಬಟ್ಟೆ, ಬೆವರಿದ ದೇಹ, ಬರಿಗಾಲು, ಕೆದರಿದ ಕೂದಲು, ಎಂಜಾಯ್ ಮಾಡುವ ಎಲೆಅಡಿಕೆ, ಕೈಯಲ್ಲಿ ಮೊಬೈಲ್ ಇರಲಿ, ಇಲ್ಲದಿರಲಿ ನಿಮ್ಮ ಹೃದಯದಲ್ಲಿರುವ ಸಂವಹನ, ಸಹೃದಯತೆ, ಆತ್ಮಾಭಿಮಾನದಿಂದ, ಆತ್ಮವಿಶ್ವಾಸದಿಂದ ಹೊಳೆಯುವ ಕಣ್ಣುಗಳು ನಮಗಿಷ್ಟ.

ಶನಿವಾರ, ಏಪ್ರಿಲ್ 25, 2015

ನನ್ನ ಮದುವೆ



ನನಗೆ ಹೆಣ್ಣು ಗಂಡಿನ ಸಂಬಂಧದ ಪ್ರೀತಿ ಗೊತ್ತಾಗಿದ್ದು 6ನೇ ತರಗತಿಯಲ್ಲಿ. ಅಲ್ಲಿಯವರೆಗೂ ಸಹಪಾಠಿಗಳು ಲವ್ ಚಿನ್ಹೆ, ಲೈಂಗಿಕತೆ ಕುರಿತು ಮಾತನಾಡುವಾಗ ಅದೆಂತದ್ದು ಎಂದು ತಿಳಿದುಕೊಳ್ಳಲು ಕಂಡ ಕಂಡ ಪುಸ್ತಕ, ಧಾರವಾಹಿಗಳು, ಸಿನೇಮಾಗಳನ್ನೆಲ್ಲ ಗಲಬರಿಸಿದ್ದೆ. ಸುಟ್ಟುಕೊಂಡು ತಿನ್ನುತ್ತೇನೆಂದರೂ ಅರ್ಥವಾಗಿರಲಿಲ್ಲ. ಇದೇ ಸಂದರ್ಭದಲ್ಲಿ ಹುಬ್ಬಳ್ಳಿಗೆ 15 ದಿನ ಹೋಗುವ ಸಂದರ್ಭ ಬಂತು. ಅಲ್ಲಿಗೆ ಹೋದಾಗ ಸಂಬಂಧಿಕರ ಸ್ನೇಹಿತರ ಮಗಳೊಬ್ಬಳು ಕೇಳಿದಳು. ನಿನಗೆ ಬಾಯ್ ಫ್ರೆಂಡ್ ಇಲ್ಲವಾ? ಅದೇನದು ಬಾಯ್ಫ್ರೆಂಡು? ಎಂದು ವಿವರ ಕೇಳಿ ತಿಳಿದುಕೊಂಡೆ. ಅದು ನನಗೆ ಚಿಕ್ಕಂದಿನಿಂದಲೂ ಕಂಡರಾಗದ `ಮದುವೆ’ ಎನ್ನುವ ಶಬ್ಧದ ಆರಂಭ ಎನ್ನುವುದು ಗೊತ್ತಾದಾಗ ಸಿಕ್ಕಾಪಟ್ಟೆ ಬೇಜಾರಾಗಿಹೋಯಿತು.
ಯಾಕೋ ಏನೋ ನನಗೆ `ಮದುವೆ’ ಎನ್ನುವ ಮಾತು ಕೇಳಿದ್ರೆ ಸಾಕು ಉರಿದುಹೋಗುತ್ತಿತ್ತು. ಬಾಲ್ಯದಲ್ಲಿ ಸುಂದರವಾಗಿದ್ದ ನನ್ನನ್ನು ನೋಡಿ ಅಪ್ಪನ ಅಂಗಡಿಗೆ ಬರುವವರೆಲ್ಲ ನಿಮಗೆ ಹೆಣ್ಣುಮಗಳ ಮದುವೆ ಮಾಡಲು ಕಾಸು ಖರ್ಚಿಲ್ವಲ್ಲ ಭಟ್ರೆ, ಯಾರಾದ್ರೂ ಅವರೇ ಖರ್ಚು ಹಾಕ್ಕೊಂಡು ಮದ್ವೆ ಆಕ್ತ ಇಲ್ಲ ಇವಳೆ ರೆಜಿಸ್ಟರ್ ಮದುವೆ ಆಕ್ತ ಎನ್ನುತ್ತಿದ್ದರು. ಆಗ ನನ್ನ ತಂದೆಗೆ ಅದೇನೋ ಹೆಮ್ಮೆ ಎನಿಸುತ್ತಿತ್ತು. ಅಷ್ಟಕ್ಕೂ ನಿಲ್ಲದೆ ದಾರಿಯಲ್ಲಿ ಹೋಗುವವರು, ಸಂಬಂಧಿಕರು ನಾನಕ್ಕೊ, ಅವ ಅಕ್ಕೋ ಎಂದು ನನ್ನ ಸಂಗಾತಿಯಾಗಲು/ಆಗಿಸಲು ರೇಗಿಸುತ್ತಿದ್ದರು. ನನಗೆ ಎಲ್ಲ ಸಂದರ್ಭದಲ್ಲಿ ಖುಷಿಯಾಗುವ ಬದಲು ಕೆಂಡಾಮಂಡಲ ಸಿಟ್ಟು ಬರುತ್ತಿತ್ತು. ಈ ಜಗತ್ತಿನಲ್ಲಿ ಮಾಡಲು ಬೇರೆ ಕೆಲಸವೇ ಇಲ್ಲವೆ ಮದುವೆಯಂತೆ, ಮಕ್ಕಳಂತೆ. ಥೂ! ಎನಿಸುತ್ತಿತ್ತು. ಇನ್ನೂ ನೆನಪಿದೆ. ಅಜ್ಜನ ಮನೆಯಲ್ಲಿರುವಾಗ ಹೆಚ್ಚಿನ ದಿನ ದೇವರ ಪೂಜೆ ನನ್ನ ಪಾಲಿಗೇ ಬರುತ್ತಿತ್ತು. ನಾನು ಗಂಡಸರಂತೆ ಕಚ್ಚೆ ಹಾಕಿ ಮಡಿ ಉಡುವುದನ್ನು ಕಲಿತಿದ್ದೆ. ಅದೊಂದು ದಿನ ಯಾವುದೋ ದೇವಕಾರ್ಯದಲ್ಲಿ ನನ್ನ ದೊಡ್ಡಮ್ಮ ಮದುವೆಯ ಸುದ್ದಿ ಎತ್ತಿದಳು, ನನ್ನಮ್ಮ ನನ್ನ ಮದುವೆ ಮಾಡುವ ಬಗ್ಗೆ ಏನೋ ಹೇಳಿದಳು. ನನಗೆ ಎಷ್ಟು ಸಿಟ್ಟು ಬಂತೆಂದರೆ ಅಮ್ಮನಿಗೇ ಕೈಯೆತ್ತಿ ಹೊಡೆದುಬಿಟ್ಟೆ. ಅಷ್ಟು ಚಿಕ್ಕ ವಯಸ್ಸಿನಲ್ಲಿ ನನಗೆ ಮದುವೆ ಅಂದರೆ ಯಾಕೆ ಅಷ್ಟು ಸಿಟ್ಟು ಬರುತ್ತಿತ್ತೋ ಗೊತ್ತಿಲ್ಲ. ನನಗೆ ದೇವರು, ದೇವರು, ದೇವರು ಬಿಟ್ಟರೆ ಮತ್ತೊಂದು ಗೊತ್ತಿಲ್ಲ. ಅಡುಗೆ ಆಟ ಆಡುತ್ತಿದ್ದೆ, ದೇವರ ಆಟ ಆಡುತ್ತಿದ್ದೆ , ಆದರೆ ಗಂಡ, ಹೆಂಡತಿ ಆಟಕ್ಕೆ ಮಾತ್ರ ಒಲ್ಲೆ ಎನ್ನುತ್ತಿದ್ದೆ. ಒಮ್ಮೆ ಅಮ್ಮ ತನಗೆ ಬೇಜಾರಾದಾಗ ನಿನಗೆ ಮದುವೆ ಗೋಜು ಬೇಡ, ಬ್ರಹ್ಮಕುಮಾರಿ ಮಾಡಿಬಿಡುತ್ತೇನೆ ಎಂದು ಹೇಳಿದಾಗ ಅದೇಕೋ ಅಷ್ಟು ಸಂತೋಷವಾಗಿತ್ತು.
ಇದೇ ವೇಳೆ ಜಗನ್ನಾಟಕ ಸೂತ್ರದಾರಿಯ ಲೀಲೆ ಆರಂಭವಾಗಿತ್ತು. ವಯಸ್ಸು ಹದಿಹರೆಯಕ್ಕೆ ಕಾಲಿಟ್ಟಿತ್ತು. ಮನೆಯಲ್ಲಿ ಹಿಂಸೆ ಮುಗಿಲು ಮುಟ್ಟಿತ್ತು. ಆಗ ನಿಜವಾಗಿಯೂ ಮದುವೆ ಬೇಕಾಗಿತ್ತು! ಈ ಎಲ್ಲ ಹಿಂಸೆಗಳಿಂದ ತಪ್ಪಿಸಿಕೊಂಡು ಹೋಗಲು ನನಗೊಂದು ಅಲ್ಟಿಮೇಟ್ ಆಸರೆ ಬೇಕಿತ್ತು. ಅದಕ್ಕಾಗಿ ನಾನು ನನ್ನ ಶಾಲೆಯ ಹೀರೋ (!?) ಒಬ್ಬನನ್ನು ಆಯ್ಕೆ ಮಾಡಿಕೊಂಡೆ. ಆತನ ಹೆಸರಲ್ಲಿ ನನ್ನ ಕಷ್ಟ ತೋಡಿಕೊಳ್ಳುವ ಒಂದು ಉದ್ದನೆಯ ಪತ್ರ ಬರೆದೆ. ಆ ನಂತರ ನನ್ನ ಮನೆಗೆ ಬಂದು ಹೈಸ್ಕೂಲಿಗೆ ಸೇರುವ ಹೊತ್ತಿಗೆ ಆತ ಮರೆತೂ ಹೋದ, ಆ ಪತ್ರವೂ ಮರೆತು ಹೋಯ್ತು. ಆ ಪತ್ರ ಮಾತ್ರ ಶಾಲೆಯ ಶಿಕ್ಷಕರಿಗೆ ಸಿಕ್ಕು ದೊಡ್ಡ ಗೌಜೆಬ್ಬಿಸಿತು. ಅಷ್ಟೊತ್ತಿಗಾಗಲೆ ನನ್ನ ಸಾಚಾತನದ ಅರಿವಾಗಿದ್ದ ಶಿಕ್ಷಕರು ಪತ್ರದ ವಿಷಯ ಬಿಟ್ಟು ಮುಂದೆ ವೈವಾಹಿಕ ಬದುಕಿನ ಸ್ವಾರಸ್ಯವನ್ನು ಉಪ್ಪು, ಕಾರ ಹಚ್ಚಿ ಆಸೆ ಹುಟ್ಟಿಸಲು ಸಾಕಷ್ಟು ಯತ್ನ ಮಾಡಿದರು. ಕೊನೆಗೂ ಆಗದೆ ನೀನು ಯಾರನ್ನು, ಹೇಗೆ ಮದುವೆಯಾಗುತ್ತೀ ಎಂದು ನೋಡುವ , ಮದುವೆಗೆ ಮುದ್ದಾಂ ಕರಿ ಎಂದು ಬೀಳ್ಕೊಟ್ಟರು.
ಅಯ್ಯಬ್ಬ ಈ ಮದುವೆಯೆ! ಆ ಭಗವಂತ ನನ್ನನ್ನು ಪರೀಕ್ಷೆ ಮಾಡಲೆಂದೇ ಈ ಜಗತ್ತಿಗೆ ತಂದು ಬಿಸಾಕಿದ್ದಾನೆಂದು ಅನಿಸುವುದು ಮಾತ್ರ ಈ ಮದುವೆಯ ವಿಷಯದಲ್ಲೇ.
ಯಾಕೆಂದರೆ ನನ್ನ ಮನಸ್ಸು ದೇವರ ದಯದಿಂದ ಸದಾ ಅವನ ಸ್ಮರಣೆಯಲ್ಲೇ ಇರುತ್ತದೆ. ಚಿಕ್ಕಂದಿನಿಂದ ನನ್ನ ಗೆಳೆಯ, ಮಗು, ತಂದೆ, ತಾಯಿ ಪ್ರತಿಯೊಂದೂ ಅದೆ. ನನಗೆ ಮದುವೆ ವಿಷಯ ಬಂದಾಗ ನನಗೆ ನಾನು, ನನ್ನ ಪತಿ ಪ್ರೀತಿಯ ಉತ್ಕಟತೆಯಲ್ಲೂ ಒಂದೇ ಹಾಸಿಗೆಯಲ್ಲಿದ್ದರೂ ದೈಹಿಕ ಕಾಮನೆಗಳು ಕೆರಳದಿರುವ ಉನ್ನತ ಮಟ್ಟದ ದಾಂಪತ್ಯದ ಕನಸು. ಮುಂದೆ ಹದಿಹರೆಯದ ವಯೋಸಹಜ ಕಾಮನೆಗಳು ಬಂದಾಗ ನಾನು ದೇವರಲ್ಲಿ ಮೊರೆಯಿಡುತ್ತಿದ್ದೆ, ಹೇ ಭಗವಂತ ನನ್ನ ಈ ಕಾಮನೆಗಳು ನಿನ್ನ ಕಾಮನೆಗಳಾಗಲಿ ಎಂದು. 9ನೇ ತರಗತಿಯಲ್ಲಿ ಅಮ್ಮನಿಗಾಗಿ ತಂದ ಮಹಾಭಾರತದ ಸಂಪುಟವೊಂದರಲ್ಲಿ ಧರ್ಮರಾಯನನ್ನು ಯಾರೋ ಪ್ರಶ್ನೆ ಕೇಳುವ ಸಂದರ್ಭ. ಬಹುಷಃ ಯಕ್ಷಪ್ರಶ್ನೆ ಇರಬೇಕು. ಅದರಲ್ಲಿ ಆತನನ್ನು ಕೇಳುತ್ತಾರೆ, ಜೀವನ ಪರ್ಯಂತ ಇರುವ ಗೆಳೆತನ ಯಾವುದು ಎಂದು. ಅದಕ್ಕೆ ಧರ್ಮರಾಯ ಉತ್ತರಿಸುತ್ತಾನೆ `` ಅದು ಪತ್ನಿ ಅಥವಾ ಪತಿಯೊಂದಿಗಿನ ಸಂಬಂಧ’’. ಅಂದಿಗೆ ನನ್ನ ಮುಂದೊಂದು ಹೊಸ ಸಾಧ್ಯತೆಯ ಬಾಗಿಲು ತೆರೆದುಕೊಂಡಿತು. ಈಗ ಅಪ್ಪ, ಅಮ್ಮನ ಕೆಲಸವನ್ನು ಹೇಗೆ ದೇವರ ಸೇವೆ ಎಂದು ಮಾಡುತ್ತೇನೋ ಹಾಗೇ ಮದುವೆಯಾದರೆ ಅತ್ತೆ,ಮಾವ, ಪತಿ ದೇವರ ಸೇವೆ ಮಾಡಿಕೊಂಡು ಜನ್ಮ ಸಾರ್ಥಕ ಮಾಡಿಕೊಳ್ಳುತ್ತೇನೆ!
ಇಂತಹ ನನಗೆ ಮದುವೆಯ, ಒಂದು ಸಾಂಗತ್ಯದ ಅವಶ್ಯಕತೆ ಬೆಂಗಳೂರಿಗೆ ಹದಿನೈದು ಚಿಲ್ಲರೆ ವರ್ಷಕ್ಕೆ ಒಬ್ಬಂಟಿಯಾಗಿ ಬಂದಾಗ ಕಂಡುಬಂತು. ಧರ್ಮರಾಯ ಹೇಳಿದ್ದನಲ್ಲ ಜೀವನ ಪರ್ಯಂತದ ಗೆಳೆತನ! ಹಾಗಾಗಿ ಮದುವೆಯ ಯೋಚನೆ ಬಂತು. ಆಗ ಕಳೆದುಹೋದ ಹೀರೋನನ್ನು ಪತ್ತೆ ಹಚ್ಚಿದೆ. ಅಷ್ಟರಲ್ಲಾಗಲೇ ಆತ ಬೇರೊಂದು ಕಡೆ ನಿಲುಕಿಯಾಗಿತ್ತು. ಸರಿ ಎಂದು ನಾಲ್ಕು ಕಣ್ಣೀರು ಹಾಕಿ ಮಾಡಬೇಕಾದ ಕರ್ತವ್ಯಗಳ ಕಡೆ ಗಮನ ಹರಿಸಿದೆ. ಈ ಸಂದರ್ಭದಲ್ಲಿ ನನ್ನ ಆನಂದಮಯ ಜೀವನ ವಿಸ್ತಾರಗೊಂಡು ಎಲ್ಲೆಡೆ ವ್ಯಾಪಿಸಿತ್ತು. ಹಾಸ್ಟೆಲ್ಲಿನ ಏಕಾಂತ, ನಿತ್ಯ ಯೋಗಾಸನ, ವಿಷ್ಣುಸಹಸ್ರನಾಮ ಪಠನೆ, ಕೃಷ್ಣನೊಂದಿಗೆ ಸಖ್ಯ, ಸುಂದರ ವಾತಾವರಣದಲ್ಲಿ ನನ್ನನ್ನೆ ನಾನು ಮರೆತು ಎಲ್ಲೋ ಹೋಗುವ ಆ ಆನಂದ ಯಾವ ಮಟ್ಟಕ್ಕೆ ಹೋಗಿಬಿಟ್ಟಿತು ಎಂದರೆ ರಸ್ತೆ ಯಾವುದು, ಚರಂಡಿ ಯಾವುದು ಎಂದು ಗೊತ್ತಾಗದ ಸ್ಥಿತಿ. ಎಲ್ಲವೂ, ಎಲ್ಲರೂ ಆನಂದಮಯರು. ನನಗೆ ಈ ಸಾಂಸಾರಿಕ ಜವಾಬ್ದಾರಿಯೊಂದು ಇಲ್ಲದಿದ್ದರೆ ಬಹುಷಃ ಅಂದೇ ಎಲ್ಲ ಬಿಟ್ಟು ಹೊರಟುಹೋಗುತ್ತಿದ್ದೆ. ಇಂದಿಗೂ ಅಷ್ಟೆ, (ನನ್ನ ಮನಸ್ಸು ಆನಂದವಾಗಿ ತೇಲಿ ಹೊರಟುಹೋದಾಗ ನಾನು ಹೆಚ್ಚು ಹೆಚ್ಚು ಲೌಕಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತೇನೆ. ಮತ್ತೆ ಅದು ಸಣ್ಣ ಸಣ್ಣ ವಿಷಯಕ್ಕೂ ಮುನಿಸಿಕೊಂಡು ತನ್ನ ಮೂಲಸ್ಥಿತಿಗೇ ಹೊರಟುಹೋಗುತ್ತದೆ, ಆ ವಿಷಯ ಬೇರೆ.)
ಆದರೆ ಆಂತರ್ಯದಲ್ಲಿ ಸ್ವಲ್ಪ ಅಹಂ ಪ್ರಜ್ಞೆ ಉಳಿದಿತ್ತು. ಅದು ಸಂಸಾರವೆಂಬುದು ಲೀಲಾನಾಟಕವೇ ಹೊರತು ಮತ್ತೇನಲ್ಲ, ಇಲ್ಲೇ ನಿನ್ನ ಕೆಲಸ ಸರಿಯಾಗಿ ಮಾಡದವಳು ಎಲ್ಲೋ ಹೊರಟುಹೋಗಿ ಏನು ಮಾಡುತ್ತೀಯ, ಇಲ್ಲೇ ಭಗವಂತನನ್ನು ಕಾಣು ಎಂದು ಆದೇಶ ನೀಡಿತ್ತು. ಅದಕ್ಕಾಗಿ ಮತ್ತೆ ಪಯಣ ಶುರುವಿಟ್ಟುಕೊಂಡಿತು. ಉಹೂಂ, ಆದರೂ ನನ್ನ ಬುದ್ಧಿ, ಹೃದಯ, ಮನಸ್ಸು ಯಾವುದೂ ಕೈಗೆ ಸಿಗುತ್ತಿಲ್ಲ. ಎಲ್ಲವೂ ಆನಂದಮಯ. ಎಲ್ಲರೂ ಚೈತನ್ಯ ಸ್ವರೂಪಿಗಳು. ಈ ಹಂತದಲ್ಲೇ ನನ್ನ ದೇವರು ಜೀವನದಲ್ಲಿ ಮರೆಯದ ಪಾಠವೊಂದನ್ನು ಹೃದಯದಲ್ಲಿ ಜಾಗೃತಗೊಳಿಸಿದ. ರಸ್ತೆ ಯಾವುದು, ಚರಂಡಿ ಯಾವುದು ಎಂದು ಗೊತ್ತಾಗದ ಸ್ಥಿತಿಯಲ್ಲಿ ಅನಿವಾರ್ಯವಾಗಿ ಚರಂಡಿಗೆ ಬೀಳುವಂತಾಯಿತು. ನನಗೆ ನನ್ನ ಪ್ರೇಮದಿಂದ, ಪಾವಿತ್ರ್ಯದಿಂದ ಚರಂಡಿಯನ್ನೂ ಶುದ್ಧ ಮಾಡುವ ಹುಕಿ ಶುರುವಿಟ್ಟುಕೊಂಡಿತು. ಅದು ಅಹಂಕಾರವಲ್ಲದೆ ಮತ್ತೇನಲ್ಲ, ನನ್ನ ಮಟ್ಟಿಗೆ ಆನಂದ ಮಯವಾಗಿರುವ ಈ ಜಗತ್ತು ನಿಜವಾಗಿ ಆನಂದಮಯವಲ್ಲ. ಇಲ್ಲಿ ಆತ್ಮ, ಪರಮಾತ್ಮಗಳ ನಡುವೆ ಜೀವಾತ್ಮನೊಬ್ಬನಿದ್ದಾನೆ ಎಂಬ ಸತ್ಯದ ಅರಿವಾಯಿತು. ಅಂದಿನಿಂದ ನಾನು ಆತ್ಮದಲ್ಲಿ ಆನಂದದಿಂದಲೂ ಅಂದರೆ ಯಾವ ನಿರೀಕ್ಷೆ, ಭಯ, ಭ್ರಮೆ, ಸಿಟ್ಟು, ನೋವುಗಳಿಲ್ಲದೆ ಖುಷಿಯಿಂದ ಇದ್ದೇನೆ. ನಿತ್ಯವೂ ಪ್ರತಿಕ್ಷಣವೂ ಪರಮಾತ್ಮನೊಂದಿಗೆ ಜೀವಿಸುತ್ತೇನೆ. ಜೀವಾತ್ಮಗಳನ್ನು ಈ ಲೀಲಾನಾಟಕದಲ್ಲಿ ಎಷ್ಟು ಬೇಕೋ ಅಷ್ಟು ಮಾತ್ರ ಹತ್ತಿರ ಬಿಟ್ಟುಕೊಡು ಎಂದು ಅವನಲ್ಲೇ ಪ್ರಾರ್ಥಿಸುತ್ತೇನೆ.
ಜೀವನ ಎಷ್ಟು ಸುಂದರ ಎಂದರೆ ನನಗೆ ಏನೇನು ಬೇಕೊ ಎಲ್ಲವೂ ಸಿದ್ದವಾಗಿರುತ್ತದೆ. ನನಗೆ ಯಾರೂ ಮದುವೆ ಮಾಡುತ್ತಿಲ್ಲ, ಈ ಗಂಡಸರ ಕಾಟದಿಂದ ಬಿಡುಗಡೆ ಹೊಂದಲು ಅದೊಂದೇ ದಾರಿ ಎನಿಸಿದಾಗ ನನಗೆ ಹುಡುಕಿದರೂ ಸಿಗದ ಸಂಗಾತಿಯನ್ನು ದೊರಕಿಸಿಕೊಟ್ಟ. ಆತ ಸಿಕ್ಕಿದ ಮೇಲೆ ನಾನು ತತ್ತ್ವಜ್ಞಾನದಲ್ಲಿ ಪದವಿ ಓದಿದೆ. ಆಗಲೇ ಶಂಕರ, ಮಧ್ವ ಹಾಗೂ ರಾಮಾನುಜರ ತತ್ತ್ವಗಳನ್ನು ಆಚರಣೆಯಲ್ಲಿ ತರುವಂತೆ ಭಗವಂತ ನನ್ನನ್ನು ತಿದ್ದಿ ತೀಡಿದ ಎಂದು ತಿಳಿಯಲ್ಪಟ್ಟೆ. ಆ ಖುಷಿಗೆ ನನ್ನ ಅಧ್ಯಾತ್ಮ ಸಾಧನೆ ಇನ್ನೂ ಹೆಚ್ಚಾಯಿತು. ಜೊತೆಗೆ ನನ್ನ ಭವ ಬಂಧನಗಳನ್ನು ಬಿಡಿಸಿಕೊಳ್ಳಲು ದೇವತಾರಾಧನೆಯೂ ಹೆಚ್ಚಾಯಿತು. ಆ ನಂತರದ ಹತ್ತು ವರ್ಷಗಳು ಬರೆದರೆ 10 -20 ಕಾದಂಬರಿಯಾಗುವಷ್ಟು ಅನುಭವ ನೀಡಿದವು.
ಪತಿಯ ಬಗ್ಗೆ ಇರುವ ನನ್ನ ಅಷ್ಟೂ ಕನಸುಗಳೂ ಈಡೇರಿದವು, ಒಂದನ್ನು ಬಿಟ್ಟು. ಆತ ನನಗೆ ತಂದೆಯಾಗಿ ಕಾಲೇಜು ಫೀಸು ಕಟ್ಟುವುದರಿಂದ ಪರೀಕ್ಷೆಗೆ ದಿನಾಲೂ ಕರೆದುಕೊಂಡು ಹೋಗಿಬಂದ. ಗೆಳೆಯನಾಗಿ ನನ್ನ ಪ್ರತಿ ಜರೂರತ್ತುಗಳಿಗೆ ನನ್ನೊಂದಿಗಿದ್ದ, ಇದ್ದಾನೆ. ನನ್ನ ಮೊದಲ ಮಗುವೂ ಆತನೇ ಆಗಿದ್ದಾನೆ. ನನ್ನ ಭಯಂಕರ ಸಿಟ್ಟು, ಅಹಂಕಾರಗಳನ್ನು ಭರಿಸುವ ಶಕ್ತಿ ಅವನಿಗಿದೆ. ನಾನು ಯಾವ ದೈವಿಕ ವ್ಯಕ್ತಿತ್ವವನ್ನು ಅಪೇಕ್ಷಿಸಿದ್ದೆನೋ ಅದಕ್ಕಿಂತ ಹೆಚ್ಚು ದೈವೀಗುಣಗಳು ನನ್ನ ಸಂಗಾತಿಯಲ್ಲಿವೆ. ನಾನು ತಾಯಿಯಾದರೆ ಯಶೋದೆ, ದೇವಕಿ, ಕೌಸಲ್ಯೆ, ಅನಸೂಯೆ, ಸುಮತಿ, ಕಯಾದುವಿನಂತೆ ಆಗಬೇಕು. ಬರುವುದಾದರೆ ದೇವಶಿಶುವೇ ನನ್ನ ಮಡಿಲು ತುಂಬಬೇಕು ಎಂಬುದು ನನ್ನ ಕನಸು, ಆಸೆ. ಅದನ್ನು ಈಡೇರಿಸುವ ಸಾಮರ್ಥ್ಯ ನನ್ನ ಪತಿಯಲ್ಲಿದೆ. ಇದಕ್ಕಿಂತ ಹೆಚ್ಚಿಗೆ ಹೇಳಲಾರೆ. (ಈ ವಿಷಯಗಳ ಮುಂದೆ ಅವ ಯಾವ ಕೆಲಸದಲ್ಲಿದ್ದಾನೆ, ಎಷ್ಟು ಸಂಬಳ ಬರುತ್ತದೆ, ಅವನ ಹೆಸರೇನು, ಎಲ್ಲಿಯವ, ಯಾವ ಜಾತಿಯವ, ಅಪ್ಪ, ಅಮ್ಮ ಏನು ಮಾಡುತ್ತಾರೆ ಇದೆಲ್ಲ ನನಗೆ ನಗಣ್ಯ. ನನ್ನ ಮಗು ಡಾಕ್ಟರೋ ಇಂಜಿನಿಯರೋ ಆಗಿ ಸಿಕ್ಕಾಪಟ್ಟೆ ದುಡ್ಡು ಸಂಪಾದಿಸಿ, ನನ್ನ ಕೊನೆಕಾಲದಲ್ಲಿ ನೋಡಿಕೊಳ್ಳಲಿ ಎಂಬ ಆಸೆಗಳೂ ಇಲ್ಲ. ಹಾಗಾಗಿ ಈ ವಿಷಯಗಳನ್ನು ಬಹಿರಂಗವಾಗಿ ಹಂಚಿಕೊಳ್ಳುವ ಇಚ್ಚೆ ಇಲ್ಲ. ಕುತೂಹಲಿಗಳು ಪತ್ತೆ ಹಚ್ಚಿ ತಿಳಿದುಕೊಳ್ಳಬಹುದು, ಅವರವರ ಭಾವಕ್ಕೆ, ಭಕುತಿಗೆ ತಕ್ಕಂತೆ)
ಮದುವೆಗೆ ಯಾರನ್ನೂ ಕರೆದಿಲ್ಲ ಎಂದು ಸಿಟ್ಟುಮಾಡಿಕೊಳ್ಳಬೇಡಿ. 9ನೇ ತರಗತಿಯಲ್ಲಿದ್ದಾಗ ನನ್ನ ಅಕ್ಕನ ಮದುವೆ ಶಿರಸಿಯ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ನಡೆಯಿತು. ಅಂದು ಬಿಸಾಡಿದ ಊಟದ ಎಲೆಯ ಮೇಲಿರುವ ಅನ್ನಕ್ಕೆ ಭಿಕ್ಷುಕ ಮಕ್ಕಳು ನಾಯಿಗಳೊಂದಿಗೆ ಗಲಾಟೆ ಮಾಡಿದ್ದು ನನಗೆ ಮರೆಯುವುದೇ ಇಲ್ಲ. ಅಂದೇ ತೀರ್ಮಾನಿಸಿದ್ದೆ, ನನ್ನ ಮದುವೆಯಾದರೆ ಅತೀ ಸರಳವಾಗಿ ಆಗಿ ಇಂತಹ ಬಡಬಗ್ಗರಿಗೆ ಊಟ ಹಾಕುತ್ತೇನೆ ಎಂದು. ನನ್ನ ತಮ್ಮನ ಉಪನಯನ, ತಂಗಿಯ ಮದುವೆಯನ್ನು ಬಹಳ ಕಷ್ಟದಲ್ಲಿ ಮಾಡಿದೆವು. ಆಗ ತೀರ ಹತ್ತಿರದವರೆಂದು ನಂಬಿದ ನೆಂಟರೇ ಚೆಂದ ನೋಡಿದ್ದು ಮನಸ್ಸಿಗೆ ಇನ್ನಷ್ಟು ಘಾಸಿಯಾಯಿತು. ಬಡವರಾಗಿದ್ದರೂ ಶ್ರೀಮಂತರಂತೆ ಖುಷಿಯಿಂದ, ಹೆಮ್ಮೆಯಿಂದ ಬದುಕುವವರ ಮನೆಯಲ್ಲಿ ಮದುವೆಗೆ ಜನ ಚೆಂದ ನೋಡಲು ಬರುತ್ತಾರೆಯೇ ಹೊರತು ಹರಸಲಲ್ಲ ಎಂಬ ಅರಿವಾಯಿತು. ಹಾಗಾಗಿ ತಂದೆ-ತಾಯಿ ಕೊನೆಗೆ ಯಾರೆಂದರೆ ಯಾರಿಗೂ ತೊಂದರೆಯಾಗದಂತೆ ಎರಡು ವರ್ಷಗಳ ಹಿಂದೆ ನನ್ನ ಮದುವೆ ನನ್ನಿಚ್ಚೆಯಂತೆ ನಡೆಯಿತು. ಇಷ್ಟಕ್ಕೂ ಇವ ನನ್ನ ಗಂಡ, ನಾನು ಫ್ರೀಯಾಗಿಲ್ಲ , ನಾನು ಭದ್ರವಾಗಿದ್ದೇನೆ ಎಂದು ಹೇಳಿಕೊಳ್ಳುವ ಆಸೆ ಮೊದಲಿನಿಂದಲೂ ಇರಲಿಲ್ಲ. ತಾಳಿ, ಕಾಲುಂಗುರದ ಆಸೆ ಇತ್ತು, ಅದು ನೆರವೇರಿದೆ. :) 

ಸೋಮವಾರ, ಏಪ್ರಿಲ್ 6, 2015

ನಾನೇಕೆ ನಟಿಯೋ, ನಿರೂಪಕಿಯೋ ಆಗಲಿಲ್ಲ?

                ಇದು ಫೇಸ್ಬುಕ್ ನ ನನ್ನ ಫೋಟೊ ನೋಡಿ ಕೆಲವರಿಗಾದರೂ ಉದ್ಭವವಾಗಿರುವ ಪ್ರಶ್ನೆ. ಇದೇ ಪ್ರಶ್ನೆಯನ್ನು ನಾನು ಕೇಳಿಕೊಂಡಿದ್ದು 10 ವರ್ಷಗಳ ಹಿಂದೆ. ಅಂದು ಮಾಧ್ಯಮಕ್ಕೆ ಬರುವಾಗ ಒಂದು ಫೋಟೊ ಹಿಡಿದುಕೊಂಡು ಸುಧಕ್ಕನ ಬಳಿ ಹೋಗಿದ್ದೆ. ಈ ಟಿ.ವಿಯಲ್ಲಿ ಆ್ಯಂಕರ್ ಆಗುವುದಕ್ಕೆ. ಆ ಫೋಟೊ ಇವತ್ತಿಲ್ಲ. ಅದನ್ನು ನೋಡಿ ಬಿಟ್ಟರೆ ಸಾಕು, ಯಾರೂ ನನ್ನನ್ನು ಆ್ಯಂಕರ್ ಮಾಡಲು ಸಾಧ್ಯವಿರಲಿಲ್ಲ. ಅಷ್ಟು ಕೆಟ್ಟದಾದ ಫೋಟೊ. ಯಾಕೆಂದರೆ ಶುದ್ಧ ಹಳ್ಳಿಯಿಂದ, ಅತೀ ಬಡತನ, ಆಧುನಿಕತೆಯ ಗಂಧಗಾಳಿಯೇ ಇಲ್ಲದ ಹಿನ್ನೆಲೆಯಿಂದ ಬಂದ ನನಗೆ ಆ್ಯಂಕರ್ ಆಗಬೇಕೆಂಬ ಹುಚ್ಚು ಬಂದಿದ್ದಾದರೂ ಹೇಗೆ? ಹುಚ್ಚೇನಲ್ಲ, ಅನಿವಾರ್ಯತೆ. ಆ ಹೊತ್ತಿಗೆ ನನಗೆ ಹೆಚ್ಚು ಸಂಬಳ ತರುವ ಕೆಲಸವೊಂದು ಬೇಕಿತ್ತು. ಬಿ.ಪಿ.ಓನಲ್ಲಿ ಅರ್ಧ ಸಂಬಳ ಕೊಟ್ಟು ಮೋಸ ಮಾಡಿದ್ದರು. ನನ್ನ ಜವಾಬ್ದಾರಿಗೆ ಅದು ಸಾಲುತ್ತಿರಲಿಲ್ಲ. ಪ್ರತಿಷ್ಠಿತ ಕಂಪನಿಯಲ್ಲಿ ಕೆಲಸ ಸಿಕ್ಕಾಗ ಎಸ್.ಎಸ್.ಎಲ್.ಸಿ ಮೇಲೆ ಪಿಯುಸಿ ಮಾಡಿ, ಆ ನಂತರ ಡಿಪ್ಲೋಮಾ ಓದಿದ್ದರೆ ಮಾತ್ರ ಎಂದು ಕೆಲಸಕ್ಕೆ ಸೇರುವ ದಿನ ಹೇಳಿದ್ದರು. ವಿವಿಧ ಜವಾಬ್ದಾರಿಗಳು, ನಿರೀಕ್ಷೆಗಳ ಭಾರದ ನಡುವೆ ಐಟಿಪಿಎಲ್ ನ ಹೊರ ಅಂಗಳದಲ್ಲಿ ನಿರಾಸೆಯಿಂದ ಬಂದು ನಿಂತಾಗ ಮೊಟ್ಟಮೊದಲ ಬಾರಿಗೆ ಸ್ವಪ್ರಯತ್ನದ ಬದಲು ಒಮ್ಮೆ ದೇವರ ಕೈಯಲ್ಲಿ ಕೆಲಸದ ಜವಾಬ್ದಾರಿ ಕೊಟ್ಟು ನೋಡಬೇಕು ಅನಿಸಿತು. ಹಾಗೆ ನಾನು ಪ್ರತಿ ಸಾಧ್ಯತೆಯೆಡೆ ಯೋಚಿಸಿ ದೇವರ ಮೇಲೆ ಭಾರ ಹಾಕಿ ಕೆಲಸದ ಹುಡುಕಾಟ ಆರಂಭಿಸಿದ್ದೆ. ನಿಜವಾಗಿಯೂ ನಾನು ಎಂದೆಂದಿಗೂ ನೆನೆಯುವ ವ್ಯಕ್ತಿ ಸುಧಕ್ಕ, ಶಬ್ಧಗಳನ್ನು ಮೀರಿದ ಕೃತಜ್ಞತೆ ಸುಧಕ್ಕಂಗೆ. ಅವಳು ಅಂದು ಹೀಗೆ ಈ ಟಿ.ವಿದೇನೋ ನಂಗೊತ್ತಿಲ್ಲ. ಅಲ್ಲಿ ನೀನು ನಿರೀಕ್ಷಿಸುವ ಸಂಬಳ ಇದ್ದಂತಿಲ್ಲ ಎಂದು ಹೇಳಿ, ಯೋಚಿಸಿ, ಹೀಗೊಬ್ಬರು ನನ್ನತ್ರ ಅಸಿಸ್ಟೆಂಟ್ ಬೇಕು ಹೇಳ್ತಿದ್ರು ಎಂದು ಶಶಿಧರ್ ಭಟ್ಟರ ನಂಬರ್ ಕೊಟ್ಟು, ಅವರಿಗೊಂದು ಫೋನ್ ಮಾಡಿ ನೋಡಿ, ಹೀಗೊಬ್ಬರನ್ನು ಕಳಿಸುತ್ತಿದ್ದೇನೆ. ನಿಮಗೆ ಸೂಕ್ತವಾಗಿದ್ದರೆ ಕೆಲಸಕ್ಕೆ ತೆಗೆದುಕೊಳ್ಳಬಹುದೆಂದಿದ್ದರು. ಅದಾದ ಮೇಲೆ ನಾನು ಮಾಧ್ಯಮಕ್ಕೆ ಬಂದೆ. ಅಲ್ಲಿಯೇ ನನಗೆ ಮಾಧ್ಯಮದ ಎ, ಬಿ, ಸಿ, ಡಿ ತಿಳಿಯಿತು. ಮಾಧ್ಯಮ ಕ್ಷೇತ್ರ ನನ್ನದಾಯಿತು.
ನಂತರ ಆ್ಯಂಕರ್ ಆಗುವ ಆಲೋಚನೆ ಇರಲಿಲ್ಲ. ಅದರ ಅವಶ್ಯಕತೆಯೂ ನನಗಿರಲಿಲ್ಲ. ಹಾಗಾಗಿ ಅಲ್ಲಿಗೇ ಬಿಟ್ಟೆ. 2009ರಲ್ಲಿ ಜಾಗೃತಿ ಕಾರ್ಯಕ್ರಮ ಮಾಡುವಾಗ ಶ್ರೀ ಹೇಳಿಕೆಯ ಮೇಲೆ ಆ್ಯಂಕರಿಂಗ್ ಮಾಡಿದ್ದೆ. ಅದೂ ಇದೇ ಪ್ರೊಫೈಲ್ ಸೀರೆಯ ಮೇಲೆ, ದಿನವೆಲ್ಲ ಸುತ್ತಾಡಿ ಆ ಸಂಚಿಕೆಯ ಶೂಟಿಂಗ್ ಮಾಡಿದಾಗ ಬಸವಳಿದು, ಬಾಡಿ ಹೋಗಿದ್ದೆ. ಆದ್ರೂ ಕೆಲಸ ಮಾಡುವವನಿಗೆ ಯಾವುದಾದರೇನು ಎಂದು ಇದ್ದ ಬದ್ದ ಶಕ್ತಿ ಹಾಕಿ, ಒಲ್ಲದ ಮನಸ್ಸಿನಿಂದ ಆ್ಯಂಕರಿಂಗ್ ಮಾಡಿದ್ದೆ. ಮುಂದೊಮ್ಮೆ ನಾನೂ ಆ್ಯಂಕರಿಂಗ್ ಮಾಡುತ್ತೇನೆ ಎಂದಾಗ ನಿನಗೆ ಟಿ.ಆರ್.ಪಿ ಇಲ್ಲವೆಂಬ ಮಾತು ಕೇಳಿಬಂದಿತ್ತು.
            ಇದೇ ವೇಳೆ `ಸಮಯ' ವಾಹಿನಿಯಲ್ಲಿ ಸೇರಲು ಸಂದರ್ಶನಕ್ಕೆ ಹೋಗಿದ್ದೆ. ಆಗ ಪ್ರಕಾಶ್ ಬೆಳವಾಡಿ ಇದ್ದರು. ಅವರು ನೀನು ಪ್ರೊಡಕ್ಷನ್ ಗಿಂತಲೂ ಆ್ಯಂಕರಿಂಗ್ ಗೆ ಸೂಟ್ ಆಗುತ್ತಿ. ನಿನ್ನ ಭಾಷೆ, ಆಂಗಿಕ ಭಾಷೆ ಮತ್ತು ಮುಖ ಚಲನೆ ಅದಕ್ಕೆ ಸೂಕ್ತವಾಗಿದೆ ಎಂದು ಹೇಳಿದ್ದರು. ವಿಪರ್ಯಾಸವೆಂದರೆ ನನ್ನನ್ನು ಕೆಲಸಕ್ಕೆ ಕರೆಯುವ ಮೊದಲೇ ಅವರು ಕೆಲಸ ಬಿಟ್ಟಾಗಿತ್ತು!
             ಇನ್ನು ಧ್ವನಿ ನೀಡುವ ಅವಕಾಶ `ಭಾನಾಮತಿ'ಯಲ್ಲಿ ಬಂದಿತ್ತು. ಆಗ ನಾನದನ್ನು ಅಷ್ಟು ಗಂಭೀರವಾಗಿ ಪರಿಗಣಿಸಲಿಲ್ಲ. ಮುಂದೆ ನಾನು ಆಸಕ್ತಿ ತೋರಿದಾಗ ಸಂಬಂಧಿಸಿದ ಜನರಿಗೆ ನನ್ನ ಧ್ವನಿ ಇಷ್ಟವಾಗಲಿಲ್ಲ. `ಇದು ಯಾರು ಬರೆದ ಕಥೆಯೋ' ಮುಗಿದ ಮೇಲೆ ಖಿನ್ನತೆಯಿಂದ ಬಳಲುತ್ತಿದ್ದಾಗ ಜನರಲ್ಲಿ ಬೆರೆತು ಸರಿಯಾಗಬಹುದೆಂದು ಸಂಬಂಧಪಟ್ಟವರನ್ನು ರಿಪೋರ್ಟಿಂಗ್ ಗೆ ಕಳಿಸಲು ಕೋರಿಕೊಂಡೆ. ಯಥಾಪ್ರಕಾರ `ಇಲ್ಲ' ಎನ್ನುವ ಉತ್ತರ ಬಂತು. ಹಾಗೇ ಒಂದೆಡೆ ಕೂತು ಕೆಲಸ ಮಾಡಲು ಸಾಧ್ಯವೇ ಇಲ್ಲದಾಗ ಎಲ್ಲಾದರೂ ಧಾರಾವಾಹಿಗೆ ನಟಿಸೋಣ ಎಂದುಕೊಂಡೆ. ಅದೂ ಸಾಧ್ಯವಾಗಲಿಲ್ಲ.
             ಹೈಸ್ಕೂಲಿನಲ್ಲಿ ಚಂದ್ರಶೇಖರ್ ಕಂಬಾರರ ನಾಟಕ `ಬೆಪ್ಪು ತಕ್ಕಡಿ ಬೋಳೇ ಶಂಕರ' ಆಡಿದ್ದೆವು. ಅದರಲ್ಲಿ ಅಂತಹ ಮುಖ್ಯ ಸ್ತ್ರೀ ಪಾತ್ರವಿರದಿದ್ದರಿಂದಲೂ, ಹಿನ್ನೆಲೆ ಸಂಗೀತಕ್ಕೆ ಅವಶ್ಯಕತೆ ಇದ್ದಿದ್ದರಿಂದಲೂ ನಾನು ಪಾತ್ರ ವಹಿಸದೆ ಹಿನ್ನೆಲೆ ಹೇಳಿದೆ. ಶಿರಸಿ ತಾಲೂಕು ಗೋಳಿ ನಾಟಕ ಮಂದಿರದ ಉದ್ಘಾಟನೆ ನನ್ನ ನೃತ್ಯದೊಂದಿಗೇ ಆಗಿತ್ತು. ಆದರೆ ಅದರ ಒಂದು ನಾಟಕದಲ್ಲಿ ಪಾತ್ರ ಮಾಡಬೇಕೆಂಬ ಆಸೆ ಆಸೆಯಾಗಿಯೇ ಉಳಿಯಿತು.
           ಬಹುಷಃ ನನ್ನ ಆಧ್ಯಾತ್ಮಿಕ ಜೀವನಕ್ಕೆ, ನಾನು ಇಟ್ಟುಕೊಂಡ ಮೌಲ್ಯ, ಆದರ್ಶಗಳಿಗೆ ಚ್ಯುತಿ ಬಂದುಬಿಡಬಹುದೆಂಬ ಕಾಳಜಿ ನನ್ನ ತಾಯಿ, ತಂದೆ ಎರಡೂ ಆಗಿರುವ ದೇವರಿಗೆ. ಆದ್ದರಿಂದಲೇ ನನಗೆ ಆ ಬಗ್ಗೆ ಗಂಭೀರ ಆಸಕ್ತಿ ಮೂಡಿಲ್ಲ ಎಂದುಕೊಳ್ಳುತ್ತೇನೆ. ಗಂಭೀರ ಆಸಕ್ತಿ ಇದ್ದರೆ ಮಾತ್ರ ಪ್ರೊಫೈಲ್ ಶೂಟ್ ಮಾಡಿ, ಹೇಗೆ ಅಭಿವ್ಯಕ್ತಿಸಬೇಕೆಂಬ ಎಲ್ಲ ಆಲೋಚನೆ ಬರಲು ಸಾಧ್ಯ. ಇಷ್ಟಕ್ಕೂ ನಾನು ಇಷ್ಟಪಡದ ವೃತ್ತಿಯೇನಾದರೂ ಇದ್ದರೆ ಅದು ನಟನೆ ಮತ್ತು ರಾಜಕೀಯವೇ ಸರಿ. ಪ್ರತಿ ಹಂತದಲ್ಲೂ ಹೊಂದಾಣಿಕೆ ಮಾಡಿಕೊಳ್ಳುತ್ತ, ಒಪ್ಪಿಕೊಳ್ಳೂತ್ತ, ನಮ್ಮತನವನ್ನೇ ಕಳಚಿಕೊಳ್ಳುತ್ತ ಹೋಗಬೇಕಾದ ವೃತ್ತಿ ಅವು. ಅವಕ್ಕೂ ನನಗೂ ಎಣ್ಣೆ, ಸೀಗೆಕಾಯಿ ಸಂಬಂಧವಾಗುತ್ತದೆಂಬುದು ನನಗೆ ಚೆನ್ನಾಗಿ ಗೊತ್ತು. ಹಾಗಾಗಿ ಈಗ ಅವಕಾಶ ಸಿಕ್ಕರೂ ನನ್ನ ಕೆಲಸ ಮುಗಿದ ಹೊರತು ಸಾಧ್ಯವೇ ಇಲ್ಲ. ಇಷ್ಟಕ್ಕೂ ಊಟಕ್ಕಿಲ್ಲದ ಉಪ್ಪಿನಕಾಯಿ ಆಮೇಲೆ ಬಂದರೆ ಏನು ಪ್ರಯೋಜನ?

ಬುಧವಾರ, ಮಾರ್ಚ್ 25, 2015

ಮಾನಸಿಕ ಆರೋಗ್ಯ, ಆತ್ಮಹತ್ಯೆ ಮತ್ತು ಅಧ್ಯಾತ್ಮಿಕ ಪರಿಹಾರ

           ಬಹುಷಃ ಈ ವಿಷಯದಲ್ಲಿ ನನ್ನಷ್ಟು ಅಥೆಂಟಿಕ್ ಆಗಿ ಹೇಳಬಲ್ಲವರು ಕಡಿಮೆ ಎಂದೇ ಹೇಳಬಹುದು. ಯಾಕೆಂದರೆ ಮಾನಸಿಕ ಆರೋಗ್ಯದ ಮೇಲೆ ಅಧ್ಯಯನ ಮಾಡುತ್ತ, ಅಧ್ಯಾತ್ಮಿಕ ಸಾಧನೆ ಮಾಡುತ್ತಿದ್ದ ನನಗೆ ಆತ್ಮಹತ್ಯೆಯ ಒಳ ಸುಳಿವು ಅರ್ಥವಾಗಿದ್ದು ಆಕಸ್ಮಿಕವೇ ಸರಿ. ಆದಾಗ್ಯೂ ನನ್ನದೇ ಅನುಭವ ಮತ್ತು ನಾನು ಕಂಡು ಕೊಂಡ ಕೆಲವು ಸತ್ಯಗಳು (ಅದು ನನ್ನ ಮಟ್ಟಿಗೆ ಮಾತ್ರ ನಿಜವೂ ಆಗಿರಬಹುದು, ಗೊತ್ತಿಲ್ಲ) ಸದ್ಯದಲ್ಲೇ ಪುಸ್ತಕ ರೂಪದಲ್ಲಿ ಬರಲಿವೆ.
ದಕ್ಷ ಅಧಿಕಾರಿ ಡಿ.ಕೆ.ರವಿ ಸಾವಿನ ಸುತ್ತ ಸುತ್ತುತ್ತಿದ್ದ ಮನಸ್ಸು 2009ಕ್ಕೆ ಹೋಗಿ ನಿಂತಿತು. ಅಂದಿಗೆ ನಾನು ನನ್ನದೇ ರೀತಿಯಲ್ಲಿ ಮಾನಸಿಕ ಆರೋಗ್ಯದ ಮೇಲೆ ಅಧ್ಯಯನ ಮಾಡಲು ಆರಂಭಿಸಿ 7 ವರ್ಷ, ಅಧ್ಯಾತ್ಮಿಕ ಜೀವನದಲ್ಲಿ ಪ್ರಯೋಗಗಳನ್ನು ಮಾಡಲು ತೊಡಗಿ 15+ ವರ್ಷಗಳೇ ಆಗಿತ್ತು. ಆದರೆ ಅದೊಂದು ದಿನ ನಾನೂ ವಿಷ ಕುಡಿದೆ. ನನಗೆ ಸಾಯಲು ಬಲವಾದ ಕಾರಣ ನನ್ನ ಮಟ್ಟಿಗೆ ಇತ್ತು. ನನಗೆ ನನ್ನ ಸುತ್ತಲಿನವರ ಒತ್ತಡದಿಂದ ಬಿಡುಗಡೆ ಬೇಕಿತ್ತು. ನನ್ನ ಆತ್ಮಸಾಕ್ಷಿಯಂತೆ, ಕೊಟ್ಟ ಮಾತಿಗೆ ತಪ್ಪದೇ ಇರಬೇಕಾಗಿತ್ತು. ಅದು ಸಾಧ್ಯವಿಲ್ಲದೇ ಹೋದರೆ ಸಾವೇ ಮೇಲೆಂದು ನಂಬಿದವಳು ನಾನು. ಅತ್ಯಂತ ಸ್ವಚ್ಛಂದವಾಗಿ ಹಾರಾಡುತ್ತಿರುವ ಹಕ್ಕಿಗೆ ಇದ್ದಕ್ಕಿದ್ದಂತೆ ಉರುಳು ಹಾಕಿ ಎಳೆದರೆ ಯಾವ ಸ್ಥಿತಿಯೋ ಅದೇ ನನ್ನ ಸ್ಥಿತಿಯಾಗಿತ್ತು. ಆದರೆ ಆ ಹೊತ್ತಿಗೆ ನನ್ನ ಆಧ್ಯಾತ್ಮಿಕ ಅನುಭವವೊಂದು ನನ್ನ ಸಾವಿನ ಕಾಲ ಬಂದಿಲ್ಲವೆಂಬುದನ್ನು ತಿಳಿಸಿತು. ಹಾಗಾಗಿ ಒಂದು ದೃಢವಾದ ನಿರ್ಧಾರದೊಂದಿಗೆ ನಾನೇ ಆಸ್ಪತ್ರೆಗೆ ತಲುಪಿ ಕಚೇರಿಗೆ ವಿಷಯ ತಿಳಿಸಿ ಅಡ್ಮಿಟ್ ಆದೆ. ಅಂದು ನನಗೆ ಗೊತ್ತಾಯಿತು, ಜೀವನದ ಮೌಲ್ಯವೆಷ್ಟು, ಒಂದು ಯಕಶ್ಚಿತ್ ಉಸಿರಿಗಾಗಿ ನಾವು ಎಷ್ಟು ಹೋರಾಡುತ್ತೇವೆ, ಅದು ಹೊರಟುಹೋದರೆ ಏನಿದೆ? ಸುಮ್ಮನೆ ಈ ಯುದ್ಧ, ಸಂಘರ್ಷ, ಸ್ಪರ್ಧೆ ಎಲ್ಲ ಎನ್ನುವುದು ನನ್ನೊಳಗೆ ಮತ್ತಷ್ಟು ದೃಢವಾಯಿತು.

            ಈ ಹೊತ್ತಿನಲ್ಲಿ ಮಾನಸಿಕ ಆರೋಗ್ಯಕ್ಕೆ ನಾನು ವೈದ್ಯಕೀಯ ಚಿಕಿತ್ಸೆಯೊಂದೇ ಎಂದು ನಂಬಿಕೊಂಡ ಕಾಲವದು. ಯಾಕೆಂದರೆ ವಯಸ್ಸು ಸಣ್ಣದು, ಅನುಭವ ಸಣ್ಣದು, ಬಿರುಗಾಳಿಗೆ ಎದೆಯೊಡ್ಡಬಲ್ಲೆ, ಇವರೆಲ್ಲ ಎಷ್ಟು ದುರ್ಬಲರು ಎಂದು ತಿಳಿದು ಮೆರೆಯುವ ಉಡಾಪೆ ಕಾಲವದು. ಹಾಗಾಗಿಯೇ ಭಾನಾಮತಿಯ ಶೂಟಿಂಗ್ ಗೆ ಗಾಣಗಾಪುರಕ್ಕೆ ಹೋದಾಗ ಅಲ್ಲಿಯ ಹೆಂಗಸರನ್ನು, ಜೋತಾಡುವ ದೆವ್ವಗಳನ್ನು ನೋಡಿ ಶರಪಂಜರದ ಉದಾಹರಣೆ ಕೊಟ್ಟು ದೊಡ್ಡ ಭಾಷಣವನ್ನೇ ಬಿಗಿದಿದ್ದೆ. ಮನೆಯ ಕಷ್ಟಗಳನ್ನು ಇಲ್ಲಿ ಬಿಡುಗಡೆಗೊಳಿಸುತ್ತಿದ್ದಾರೆ ಎಂದು ನಕ್ಕಿದ್ದೆ. ಇನ್ನು ಗಾಳಿ ಬಂದಿದೆ ಅದು ಇದು ಎಂದು ಬೆಟ್ಟ, ಗುಡ್ಡಗಳಲ್ಲಿ ಬೇರೆ ಬೇರೆ ರೀತಿಯಲ್ಲಿ ತಲೆ ಕುಣಿಸುತ್ತ ಕೂಗುವವರನ್ನು ನೋಡಿಯಂತೂ ನಕ್ಕೂ ನಕ್ಕೂ ಸುಸ್ತಾಗಿದ್ದೆ. ಇನ್ನೂ ನೆನಪಿದೆ, ಅದು ಭಾನಾಮತಿಯ ಶೂಟಿಂಗ್. ಗದಗ ಹತ್ತಿರದ ಯಾವುದೋ ಆಂಜನೇಯ ಹಾಗೂ ನರಸಿಂಹ ದೇವಸ್ಥಾನಗಳಲ್ಲಿದ್ದೆವು. ಅಂದು ಅಲ್ಲಿ ಜನರು ತಮ್ಮ ತಲೆ ಆಡಿಸುವ ರೀತಿಯನ್ನು ನೋಡಿ ನಗಲು ಆರಂಭಿಸಿದವಳು ಬಹುಷಃ ಪ್ಯಾಕಪ್ ಅಂದಾಗ ಸುಮ್ಮನಾಗಿದ್ದೆ. ನನಗೆ ಅದೊಂದು ಸಮೂಹ ಸನ್ನಿಯಂತೆ, ದುರ್ಬಲ ಮನಸ್ಸಿನಂತೆ ಅನ್ನಿಸಿತ್ತು.
              ಈ ಮಧ್ಯೆ ದೇವರ ಮೇಲಿನ ಪ್ರೀತಿ, ನನ್ನ ಅಧ್ಯಾತ್ಮಿಕ ಸಾಧನೆ  ದಿನಗಳೆದಂತೆ ಹೆಚ್ಚಾಗುತ್ತ ಹೋಯಿತು. ನನಗೆ ವಿಚಿತ್ರ ಅನುಭವಗಳೂ ಆಗತೊಡಗಿದವು. ಅಷ್ಟೇ ಅಲ್ಲ, ಯಾವು ಯಾವುದನ್ನು ನಾನು ಅಲ್ಲಗಳೆದಿದ್ದೆನೋ ಮತ್ತು ನನಗೆ ಸತ್ಯ ಗೊತ್ತಾಗಬೇಕು ಎಂದು ಪ್ರಾರ್ಥಿಸುತ್ತಿದ್ದೆನೋ ಅವೆಲ್ಲ ನನಗೆ ಸತ್ಯವಾಗಿ ತೋರತೊಡಗಿದವು. ಒಂದು ಸಮಸ್ಯೆ ಬಿಡಿಸಲು ವರ್ಷಗಟ್ಟಲೆ ಹೆಣಗಾಡಿದ್ದ ನನಗೆ ಪರಿಹಾರಗಳು ನಿಮಿಷಗಳಲ್ಲಿ ದೊರಕತೊಡಗಿದವು. ಒಬ್ಬ ವ್ಯಕ್ತಿಯ ಸಾಮರ್ಥ್ಯದ ಬದಲು ಹತ್ತಿಪ್ಪತ್ತು ಜನರಿಗಾಗುವಷ್ಟು ಶಕ್ತಿ ನನ್ನಲ್ಲಿ ಪ್ರವಹಿಸತೊಡಗಿತು. ಈ ಶಕ್ತಿಯನ್ನು ಭರಿಸಲಾಗದೇ ನನ್ನ ದೇಹ ದಿನದಿಂದ ದಿನಕ್ಕೆ ದುರ್ಬಲವಾಗತೊಡಗಿತು. ಆದರೂ ನನ್ನೊಳಗಿನ ಸಂಶಯ, ವಿಮರ್ಶಾತ್ಮಕ ಬುದ್ದಿ ಕಡಿಮೆಯಾಗಲಿಲ್ಲ. ಸತ್ಯವೆಂದು ಹೃದಯ ಹೇಳಿದರೂ ಬುದ್ಧಿಯ ಮೂಲೆಯಲ್ಲಿದ್ದ ಸಂಶಯ ಒಪ್ಪಲು ಸಿದ್ಧವಿರಲಿಲ್ಲ. ಈ ಶಕ್ತಿಯ ಸಂಚಲನಕ್ಕೆ ಹಗಲು, ರಾತ್ರಿ ಕೆಲಸ ಮಾಡಬಲ್ಲವಳಾದೆ. ಕೊನೆ ಕೊನೆಗೆ ನನಗೆ ಏನಾಗಿದೆ ಎಂದು ಚಿವುಟಿ ನೋಡಿಕೊಳ್ಳುವಷ್ಟು ಆನಂದ. ಈ ಜಗತ್ತಿನಲ್ಲಿ ಯಾರೂ ನನಗಿಂತ ಮೇಲಿಲ್ಲ, ಇದ್ದರೆ ದೇವರೊಬ್ಬನೆ. ಅವನಿಗೆ ಕೇರ್ ಮಾಡಿದರೆ ಸಾಕು, ಇವರಿಗೆಲ್ಲ ಅಲ್ಲ ಎನ್ನುವ ಮನಃಸ್ಥಿತಿ. ಯಾರನ್ನು ನೋಡಿದರೂ ಕಣ್ಣೀರು ಉಕ್ಕಿ ಹರಿಯುತ್ತಿತ್ತು. ತಡೆಯಲಾಗದ ಕಣ್ಣೀರು. ಯಾಕೆ, ಏನು ಗೊತ್ತಿಲ್ಲ. ದುಃಖದ್ದೂ ಅಲ್ಲ, ಖುಷಿದೂ ಅಲ್ಲ. ದೇವರ ಹೆಸರು ಹೇಳಿದರೇ ಸಾಕು ಆನಂದದ ಮೈಮರೆತ. ಹೀಗೆ ತಿಂಗಳಾನುಗಟ್ಟಲೆ ಕಳೆದವು. ಇವುಗಳ ಮಧ್ಯದಲ್ಲೇ ನನ್ನ ಕೆಲಸ, ಮನೆಯ ಜವಾಬ್ದಾರಿ, ಒತ್ತಡಗಳನ್ನು ನಿಭಾಯಿಸುತ್ತಿದ್ದೆ. ಹೀಗೆ ಕೊನೆಗೊಮ್ಮೆ ಮನೋವೈದ್ಯರನ್ನು ಸಂಪರ್ಕಿಸಿ ಅಲೋಪತಿ ಮಾತ್ರೆಗಳನ್ನು ನುಂಗತೊಡಗಿದೆ. ಪರಿಣಾಮವಾಗಿ ಅತಿನಿದ್ದೆ, ಜಡತ್ವ, ತೂಕ ಹೆಚ್ಚಳದಂತಹ ಅಡ್ಡಪರಿಣಾಮಗಳು ಕಾಣಿಸಿಕೊಂಡವು. ಈ ಮಾತ್ರೆಗಳನ್ನು ನುಂಗದೇ ಇದ್ದರೆ ಚೆನ್ನಾಗಿತ್ತೇನೋ ಎಂದು ಈಗ ಅನ್ನಿಸುವುದಿದೆ. ಯಾಕೆಂದರೆ ನನಗೆ ನಿಜವಾಗಿಯೂ ಖಿನ್ನತೆಯಾಗಿರಲಿಲ್ಲ. ಬದಲಿಗೆ ನಾನು ನನ್ನ ಅಧ್ಯಾತ್ಮಿಕ ಸಾಧನೆಯ ಫಲಶೃತಿಯನ್ನು ಅರ್ಥಮಾಡಿಕೊಳ್ಳುವ ಅವಶ್ಯಕತೆಯಿತ್ತು. ಅಧ್ಯಾತ್ಮಿಕ ಗುರುವಿನ ಪ್ರತ್ಯಕ್ಷ ಪ್ರಮಾಣ ಬೇಕಿತ್ತು. ಯಾಕೆಂದರೆ ಇಲ್ಲದ್ದನ್ನು ನಂಬುವವಳಲ್ಲ ನಾನು ಎನ್ನುವ ಹಟ! ಈ ಆಧುನಿಕ ಮನಸ್ಥಿತಿ, ವಿಮರ್ಶಾತ್ಮಕ ಬುದ್ಧಿ ಎಷ್ಟೊಂದು ಆಳವಾಗಿದೆಯೆಂದರೆ ನನ್ನನ್ನೆ ಅಲ್ಲಗಳೆಯಲೂ ಅವು ಹಿಂದು ಮುಂದು ನೋಡುವುದಿಲ್ಲ!
                ಸರಿ; ಮಾತ್ರೆ ತೆಗೆದುಕೊಂಡ ತಿಂಗಳಿಗೆ ನಿದ್ದೆ ಸರಿಯಾಯಿತು ಓಕೆ ಎಂದು ಖುಷಿ ಪಟ್ಟೆ. ಆದರೆ ಮುಂದಿನ ಒಂದು ವಾರದಲ್ಲಿ ನಿದ್ದೆ ಮತ್ತೆ ಹದಗೆಟ್ಟು ಈಗ ನಿಜವಾಗಿಯೂ ಖಿನ್ನತೆ ಆವರಿಸಿತು. ಪರಿಣಾಮ ಆತ್ಮಹತ್ಯೆಯ ಪ್ರಯತ್ನ.
ಇಷ್ಟಾದರೂ ನನ್ನ ಅಜ್ಞಾನ ಕಡಿಮಯಾಗಲಿಲ್ಲ. ಬದಲಿಗೆ ಇನ್ನೂ ಹೆಚ್ಚೇ ಆಯಿತು. ಮತ್ತೆ ಮಾತ್ರೆಗಳ ಮೊರೆಹೋದೆ.
ಆದರೆ ಈ ನಡುವೆ ನಾನು ದೇವರನ್ನು, ಅವನಿಗೆ ಶರಣಾಗುವುದನ್ನು ಮಾತ್ರ ಬಿಡಲಿಲ್ಲ. ಬದಲಿಗೆ ಇನ್ನಷ್ಟು ಹೆಚ್ಚು ಭಕ್ತಿಯ ದಾರಿ ಹಿಡಿದೆ. ಜ್ಞಾನ, ಕರ್ಮ, ಯೋಗ ಎಲ್ಲವೂ ನನ್ನ ಪಾಲಿಗೆ ಎಟುಕದ ಕುಸುಮವಾದಾಗ ಭಕ್ತಿಯೊಂದೇ ಉಳಿದಿತ್ತು ಪುಣ್ಯಕ್ಕೆ. ಅದರ ಫಲವಾಗಿ ಯಾರೋ ಹೇಳಿದ ದೇವಸ್ಥಾನಗಳಿಗೆ ಹೋದೆ. ಜಾಗೃತವಾಗಿವೆಯೆಂಬ ದೇವಸ್ಥಾನಗಳು ನಿಜವಾಗಿಯೂ ನನ್ನ ಮಟ್ಟಿಗೆ ಆಸ್ಪತ್ರೆಯಂತೆ ಕೆಲಸ ಮಾಡತೊಡಗಿದವು. ದಿನದಿಂದ ದಿನಕ್ಕೆ ನನ್ನ ಖಿನ್ನತೆ ನೀಗುತ್ತ ಬಂತು. ನಿದ್ದೆಯೂ ಸರಿಯಾಗುತ್ತ ಬಂತು. ಜೊತೆಗೆ ಹಿಂದೆ ನನಗೆ ಒತ್ತಡ ನೀಡುತ್ತಿದ್ದ ವಾಸ್ತವ ಜಡಕುಗಳೆಲ್ಲ ಬಿಡುಗಡೆಯಾಗುತ್ತ ಬಂದವು. ಆದರೆ ಆತ್ಮಹತ್ಯೆಯ ಯೋಚನೆ ಮಾತ್ರ 2012ರ ಕೊನೆಯ ತನಕ ಮನದಾಳದಲ್ಲಿ ಎಲ್ಲೋ ಇತ್ತು. ಬಹುಷಃ ನಾನು ದೇವರ ದಾರಿಯನ್ನು ಬಿಟ್ಟು ಪ್ರಾಪಂಚಿಕಳಾಗಿ ಮಾತ್ರೆಗಳನ್ನೇ ಅವಲಂಬಿಸಿದ್ದರೆ ಮತ್ತೊಮ್ಮೆ ಆತ್ಮಹತ್ಯೆ ಪ್ರಯತ್ನ ಮಾಡಿ ಸಫಲಳಾಗುತ್ತಿದ್ದೆನೋ ಏನೊ! ಆದರೆ ಸುದೈವವಶಾತ್ ಭಕ್ತಿಯ ಮಾರ್ಗ ನನ್ನನ್ನು ಕೈಬಿಡಲಿಲ್ಲ. ಬದಲಿಗೆ ಒಬ್ಬ ಖ್ಯಾತ ಆಯುರ್ವೇದ ವೈದ್ಯರ ಬಳಿಗೆ ಕೊಂಡೊಯ್ಯಿತು. ಅವರು ಅಲೊಪತಿಯ ಜೊತೆಗೆ ತಮ್ಮ ಮಾತ್ರೆಯನ್ನೂ ತೆಗೆದುಕೊಳ್ಳಿ ಎಂದರು. ಆದರೆ ನನಗೆ ಅಲೊಪತಿ ಬಿಟ್ಟರೆ ಸಾಕಾಗಿತ್ತು. ಆಗಲೆ 3 ವರ್ಷ ಮಾತ್ರೆ ನುಂಗಿ ಮಾತ್ರೆಗಳನ್ನು ಕಂಡರೆ ಸಿಟ್ಟು ಬರುವ ಹಂತಕ್ಕೆ ಹೋಗಿದ್ದೆ. ಇರಲಿ ಇದೊಂದು ನೋಡೋಣ ಎನ್ನುತ್ತಲೇ ದೇವರು ತೋರಿಸಿದ ದಾರಿ ಎಂದು ನಂಬಿಕೊಂಡು ಆ ಮಾತ್ರೆಗಳನ್ನು ನುಂಗುತ್ತ ಬಂದೆ. ನಂಬಿ, ಬಿಡಿ ಕೇವಲ 1-2 ವಾರಗಳಲ್ಲಿ ನನ್ನ ಆಂತರ್ಯದಲ್ಲಿದ್ದ ಸಾಯುವ ಭಾವನೆ ಹೊರಟುಹೋಯಿತು!
                 ಆ ನಂತರ ಸಣ್ಣಪುಟ್ಟ ಕಾಯಿಲೆಗಳು ಬಂದವು. ಅವುಗಳಿಗೆ ಚಿಕಿತ್ಸೆ ಮಾಡುವಾಗ ರಕ್ತಹೀನತೆ ಇರುವುದು ಕಂಡುಬಂತು. ಅದಕ್ಕೂ ಔಷಧಿ ಮಾಡಿದಾಗ ನನಗೆ ಅಕ್ಷರಶಃ ಮಾತ್ರೆಗಳಿಂದ ಮುಕ್ತಿ ಸಿಕ್ಕಿತು. ಯಾವ ಅಲೋಪತಿಯ ವೈದ್ಯರು ಸಾವಿರ ಸಾವಿರ ಬುದ್ಧಿ ಹೇಳಿ, ಕ್ವಿಂಟಾಲ್ ಗಟ್ಟಲೆ ಮಾತ್ರೆ ಕೊಟ್ಟು ಏನಿಲ್ಲ ಅಂದ್ರೂ 4-6 ವರ್ಷ ಬಿಡದೇ ಮಾತ್ರೆ ತೆಗೆದುಕೊಳ್ಳಬೇಕೆಂದು ಸಲಹೆ ನೀಡಿದ್ದರೋ, ಅಂತಹ ಕಾಯಿಲೆಯೊಂದು ಆಧ್ಯಾತ್ಮಿಕ ಪರಿಹಾರಗಳು, ಆಯುರ್ವೇದದಿಂದ ಕೇವಲ 1-2 ವರ್ಷಗಳಲ್ಲಿ ಸಂಪೂರ್ಣ ಗುಣವಾಯಿತು. ಇಂದು ಒಂದೇ ಒಂದು ಮಾತ್ರೆ ಸಹ ತೆಗೆದುಕೊಳ್ಳುವುದಿಲ್ಲ ಎಂದರೆ ನಂಬುತ್ತೀರಾ?
                ಅಲ್ಲದೇ ನನಗೆ ಅಂಟಿಕೊಂಡಿತ್ತಲ್ಲ ದೊಡ್ಡ ರೋಗ - ಅದೇ ಸಂಶಯ ಪ್ರವೃತ್ತಿ ಅದೂ ನಿವಾರಣೆಯಾಯಿತು. ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ನಾನು ಮಾಡಿದ್ದ ಟ್ರಸ್ಟ್ ರೋಗಿಗಳಿಗೆ ಉಚಿತ ಔಷಧಿ ನೀಡುವ ಹುಚ್ಚು ಗುರಿಯನ್ನು ಹೊಂದಿತ್ತು. ಯಾಕೆಂದರೆ ಅಲೋಪತಿಯ ಔಷಧಿಗಾಗಿ ಪ್ರತಿ ತಿಂಗಳು ಏನಿಲ್ಲವೆಂದರೂ ಸಾವಿರ ರೂ. ಇಡಬೇಕಾಗಿತ್ತು. ನನ್ನಂತೆ ಬೇರೆಯವರಿಗೆ ಆಗದಿರಲಿ ಎಂದೇ ಈ ಟ್ರಸ್ಟ್ ಮೂಲಕ ಸಹಾಯ ಮಾಡುವ ಇರಾದೆ ನನ್ನದಾಗಿತ್ತು.
ಆದರೆ ಈಗ ನನ್ನ ಟ್ರಸ್ಟ್ ನ ಬೈಲಾಗೆ ಇನ್ನಷ್ಟು ಸೇರಿಸಿ ಮತ್ತೊಮ್ಮೆ ನೋಂದಾಯಿಸುತ್ತಿದ್ದೇನೆ. ಅದೇನೆಂದರೆ ಮಾನಸಿಕ ರೋಗಿಗಳಿಗೆ, ಆತ್ಮಹತ್ಯೆಯ ಕುರಿತು ಯೋಚಿಸುವವರಿಗೆ ಉಚಿತವಾಗಿ ಆಧ್ಯಾತ್ಮಿಕ ಪರಿಹಾರ ಸೂಚಿಸುವುದು ಮತ್ತು ಮಕ್ಕಳಲ್ಲಿ ಕೆಲಸ, ಭಕ್ತಿ, ಶ್ರದ್ಧೆ, ಪ್ರೀತಿಸುವ ಗುಣವನ್ನು ಬೆಳೆಸುವುದು ಮುಖ್ಯವಾಗಿವೆ. ಯಾಕೆಂದರೆ ಈ ಗುಣಗಳನ್ನು ನಾನು ಹೊಂದಿದ್ದರಿಂದಲೇ ನನಗೆ ಈ ಕೆಟ್ಟ ಕಾಯಿಲೆಯಿಂದ ಹೊರಬರಲು ಸಾಧ್ಯವಾಯಿತು ಮತ್ತು ದೇವರಿದ್ದಾನೆ, ಅವನು ಎಲ್ಲೆಲ್ಲೂ ಇದ್ದಾನೆ, ಎಲ್ಲರಲ್ಲೂ, ಎಲ್ಲದರಲ್ಲೂ ಇದ್ದಾನೆ ಎಂಬ ನನ್ನದು ಕೇವಲ ನಂಬಿಕೆಯಲ್ಲ, ಸತ್ಯವೆಂಬುದು ನನಗೇ ಅರಿವಾಯಿತು.  ಈ ಅರಿವು ಬಂದ ನಂತರ ಕಷ್ಟ, ನೋವು, ದುಃಖಗಳನ್ನೆಲ್ಲ ಈ ಪ್ರಪಂಚಕ್ಕೆ ನಮ್ಮನ್ನು ಹಿಡಿದಿಟ್ಟುಕೊಳ್ಳಲು ನಾವೇ ಸೃಷ್ಟಿಸಿಕೊಳ್ಳಬೇಕಾದ ನಾಟಕಗಳೇ ಹೊರತು, ಅಸಲು ನಮಗೆ ದುಃಖವೇ ಇಲ್ಲ ಎಂಬುದು ಗೊತ್ತಾಗುತ್ತದೆ. ನಾವೆಲ್ಲ ಆನಂದಮಯರೆಂದು ಗೊತ್ತಾಗುತ್ತದೆ.
                 ಆದ್ದರಿಂದ ದಯವಿಟ್ಟು ಯಾರೇ ಆದರೂ ಮಾನಸಿಕ ತೊಂದರೆ, ದುಃಖ, ವಿಷಾದ, ನೋವು, ಜಿಗುಪ್ಸೆ, ಸೋಲು, ಆತ್ಮಹತ್ಯೆಯ ಯೋಚನೆ ನಿಮಗೆ ಕಾಡುತ್ತಿದ್ದರೆ ದಯವಿಟ್ಟು ಮತ್ತೊಮ್ಮೆ ವಿನಂತಿಸಿಕೊಳ್ಳುತ್ತೇನೆ ದಯವಿಟ್ಟು ಆಧ್ಯಾತ್ಮಿಕ ಪರಿಹಾರಗಳಿಗೆ ಆದ್ಯತೆ ಕೊಡಿ. ಅಲೋಪತಿಯ ಔಷಧಿಗಳ ಜೊತೆಗೆ ಪರ್ಯಾಯ ಆಧ್ಯಾತ್ಮಿಕ ಚಿಕಿತ್ಸೆಗಳಿಗೂ ಒಳಪಡಿ. ಅದಕ್ಕಿಂತ ಹೆಚ್ಚು ದೇವರಲ್ಲಿ ಹೆಚ್ಚು ಭಕ್ತಿಯನ್ನು ಬೆಳೆಸಿಕೊಳ್ಳಿ, ಪ್ರೀತಿ ಬೆಳೆಸಿಕೊಳ್ಳಿ. ದೇವರೆಂದರೆ ಭಯ ಬೇಡ, ಬದಲಿಗೆ ನಿಮ್ಮ ಅತ್ಯಂತ ಆಪ್ತಸಖ ಅವನೇ ಎಂಬುದನ್ನು ಮರೆಯಬೇಡಿ.

ಶನಿವಾರ, ಫೆಬ್ರವರಿ 21, 2015

ನಿಜವಾದ ಪತ್ರಕರ್ತರು ಕಾಣೆಯಾಗಿದ್ದಾರೆಯೆ?

ಹೀಗೊಂದು ಅನುಮಾನ ಇತ್ತೀಚೆಗೆ ನನ್ನನ್ನು ಕಾಡುತ್ತಿದೆ. ಕಾರಣ ಇಷ್ಟೆ. ಕಳೆದ ವಾರ ಹೀಗೊಂದು ಮಠದಲ್ಲಿದ್ದೆ. ಅದು ಬೇರೆ ಕೋಮಿನ ಮಠ. ಆದರೂ ಅಲ್ಲಿಯೂ ಹವ್ಯಕ ಸಮುದಾಯದ ಸನ್ಯಾಸಿಗಳಿದ್ದಾರೆ. ಅವರು ಹೇಳಿದರು, ಪಾಪ, ನಮ್ಮ ಸ್ವಾಮಿಗಳಿಗೆ ಹೀಗಾಗಬಾರದಿತ್ತು ಎಂದು. ನನಗೆ ಉರಿದುಹೋಯಿತು. ಅವರಿಗೆ ವಿವರಿಸಿದ್ದನ್ನು ನಾನಿಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಕರ್ನಾಟಕದ ಇತ್ತೀಚಿನ ಇತಿಹಾಸದಲ್ಲಿ ಸೇರಿರುವ ಪ್ರಮುಖ ಆರೋಪಗಳು ಎರಡು. ಒಂದು ಬಿಡದಿಯ ನಿತ್ಯಾನಂದ ಸ್ವಾಮಿ ಪ್ರಕರಣ ಹಾಗೂ ಇನ್ನೊಂದು ರಾಘವೇಶ್ವರ ಭಾರತಿ ಪ್ರಕರಣ. ಈ ಎರಡೂ ಪ್ರಕರಣಗಳಲ್ಲಿ ಪ್ರಮುಖ ಮಾಧ್ಯಮಗಳ ನಡೆಯನ್ನು ಅವಲೋಕಿಸುತ್ತ ಬಂದಿದ್ದೇನೆ.
ಯಾವ ನಿತ್ಯಾನಂದ ಸ್ವಾಮೀಜಿ ವಿರುದ್ದ ಸಾಕ್ಷಿಗಳನ್ನು ತಂದು ಅವುಗಳನ್ನು ಹಗಲು ರಾತ್ರಿ ವಾರಗಟ್ಟಲೆ ತೋರಿಸಿ ಆ ಸ್ವಾಮೀಜಿ ದೂರುದಾರರು ಇಲ್ಲದ ದೂರಿನ ಮೇಲೆ ವಿಚಾರಣೆಯಿಲ್ಲದೆ ಜೈಲಿಗೆ ಹೋಗಿ ಬರುವಂತೆ ಮಾಡುತ್ತಾರೆ. ಇನ್ನೊಂದೆಡೆ ರಾಘವೇಶ್ವರ ಸ್ವಾಮೀಜಿ ಪ್ರಕರಣದಲ್ಲಿ ದೂರುದಾರರು, ಸಾಕ್ಷಿ , ಆ ಸಾಕ್ಷಿ ಮೇಲ್ನೋಟಕ್ಕೇ ಸಾಬೀತಾಗಿದ್ದರೂ ಅದರ ಸತ್ಯಾಸತ್ಯತೆಯನ್ನು ಇನ್ನಷ್ಟು ಪರೀಕ್ಷಿಸಲು ಸಮಯ ತೆಗೆದುಕೊಂಡು ಬಂಧನವಿರಲಿ, ಚಾರ್ಜ್ ಶೀಟ್ ಹಾಕಲೂ ಹಿಂದೆ ಮುಂದೆ ನೋಡುವಂತಾಗುತ್ತದೆ. ಗಮನಿಸಬೇಕಾದ ಅಂಶವೆಂದರೆ ಈ ಎರಡೂ ಪ್ರಕರಣಗಳ ಹಿಂದೆ ಒಂದೇ ಪತ್ರಕರ್ತರ ಗುಂಪಿನ ಕೈವಾಡ! ಇದು ಜಗಜ್ಜಾಹೀರು ವಿಷಯವೇ ಆಗಿದ್ದರೂ ಉಳಿದ ಪತ್ರಕರ್ತರಿಗೆ ಸತ್ಯ ಹೇಳಲು ಅದನೋ ಹೆದರಿಕೆ!
ಇದೊಂದೇ ಪ್ರಕರಣವಲ್ಲ. ಇಂತಹ ಸಾಕಷ್ಟು ಪ್ರಕರಣಗಳು, ಉದಾಹರಣೆಗಳು ನನ್ನಲ್ಲಿವೆ.
ನನಗೆ ಪತ್ರಕರ್ತರು, ಬರಹಗಾರರು, ಕವಿಗಳು, ಸಾಮಾಜಿಕ ಕಾರ್ಯಕರ್ತರು, ಆಧ್ಯಾತ್ಮಿಕ ವ್ಯಕ್ತಿಗಳು ಇವರ ಬಗ್ಗೆ ಎಲ್ಲರಂತೆ ಅಥವಾ ಎಲ್ಲರಿಗಿಂತ ಹೆಚ್ಚು ಅದೇನೋ ಗೌರವ. ಈ ಎಲ್ಲರೂ ಯಾವ ಜಾತಿ, ಪಕ್ಷ, ಬಡವ, ಬಲ್ಲಿದ, ಸ್ವರತಿ, ಸ್ವಾರ್ಥಗಳನ್ನು ಮೀರಿರುತ್ತಾರೆ ಎಂಬುದು ನನ್ನ ನಂಬಿಕೆ. ಈ ನಂಬಿಕೆಯ ಬುನಾದಿ, ಗೋಡೆ ಎಲ್ಲವೂ ಇಂದು ಶಿಥಿಲವಾಗಿದ್ದು ನನ್ನ ದುರಾದೃಷ್ಟ. ಇವತ್ತಿನ ಬಹುತೇಕ ಪತ್ರಕರ್ತರು ಸಮಾಜಕ್ಕಿಂತಲೂ ಸ್ವಹಿತಾಸಕ್ತಿಗೆ ಹೆಚ್ಚು ಒತ್ತುಕೊಡುತ್ತಿರುವುದು ನನಗೆ ಆದ ಮೊದಲ ಆಘಾತ. ನಂತರ ಸತ್ಯವಲ್ಲದೆ ಉಳಿದಿದ್ದನ್ನೆಲ್ಲ ಸುದ್ದಿಯೆಂದು ಸಾರುತ್ತಿರುವುದು ಎರಡನೆಯ ಆಘಾತ. ಮೂರನೆಯದು ದಿನವಿಡೀ ಅಪರಾಧ ಸುದ್ದಿಗಳು, ಪೇಜ್ 3 ವಿಷಯಗಳನ್ನು ಬರೆದು, ಹೇಳಿ ಇಡೀ ಸಮಾಜದ ವೈಚಾರಿಕತೆಯನ್ನೇ ಕೊಂದು ಹಾಕುತ್ತಿರುವುದು, ನಂಬಿಕೆ ಎಂದರೆ ಮನುಷ್ಯರನ್ನು ನಂಬಬೇಡ, ಯಾವುದಾದರೂ ಜ್ಯೋತಿಷಿಯನ್ನು ನಂಬು, ಪ್ರೀತಿಸಲೇಬೇಡ, ಪ್ರೀತಿಸಿದರೆ ಕೊಲೆಯಾಗುತ್ತೀಯ, ಇಲ್ಲವೆ ಕೊಲೆ ಮಾಡಿಸುತ್ತೀಯ ಎನ್ನುವಂತಹ ಸಂದೇಶಗಳನ್ನು ದಿನವಿಡೀ ಬಿತ್ತರಿಸಿ ಬಿತ್ತರಿಸಿ ಜನಸಾಮಾನ್ಯರು ನಿಜಕ್ಕೂ ದಿಕ್ಕು ತಪ್ಪಿಹೋಗಿರುವುದು.
ಒಂದೆಡೆ ಎಲ್ಲಿಂದಲೋ ಆಸೆಯಿಂದ, ಪ್ಯಾಷನ್ ಆಗಿ ವೃತ್ತಿ ಮಾಡಲು ಬಂದು ತಿಂಗಳ ಸಂಬಳವೂ ಇಲ್ಲದೆ, ರೂಮಿನ ಬಾಡಿಗೆಯನ್ನೂ ಕೊಡಲಾಗದೆ ಒದ್ದಾಡುತ್ತಿರುವ ಹೊಸ ಪೀಳಿಗೆ. ಆಗಲೇ ವೃತ್ತಿಯ ಅನಿಶ್ಚಿತತೆಯನ್ನು ಮನಗಂಡು ಸೈಡ್ ಬಿಸಿನೆಸ್ ಗೆ ಕೈಯಲ್ಲಿರುವ ಪೆನ್ನೋ, ಮೈಕೋ, ಕ್ಯಾಮರಾವನ್ನೋ ಬಳಸಿಕೊಳ್ಳುತ್ತಿರುವ ಏಣಿ ಮಧ್ಯದವರು, ಏಣಿಯ ತುದಿಯಲ್ಲಿರುವ ಕೆಲವೇ ಕೆಲ ಮಂದಿಯಲ್ಲಿ ಬಹುತೇಕರು ಈ ಮಧ್ಯದ ಗುಂಪಿನಿಂದಲೇ ಎದ್ದು ಬಂದವರು. ಇಂತಹ ಸಂದರ್ಭದಲ್ಲಿ ಪತ್ರಕರ್ತ ತನ್ನ ಹೊಟ್ಟೆಪಾಡು ನೋಡಿಕೊಳ್ಳಬೇಕೇ ಅಥವಾ ಸಮುದಾಯದ ಹಿತಾಸಕ್ತಿ ಕಾಪಾಡಬೇಕೆ ಎನ್ನುವುದು ಮಹತ್ವದ್ದೆನಿಸುತ್ತದೆ. ದಿನದಿಂದ ದಿನಕ್ಕೆ ಏರುತ್ತಿರುವ ಬೆಲೆ, ಜನರ ಹೊರನೋಟದಿಂದ ಗುರುತಿಸುವ, ಆಡಂಬರದ ಓಲೈಕೆಯ ಸ್ವಭಾವ, ಎಲ್ಲರಂತೆ ನಾವೂ ಆಗುವ ಹೆಬ್ಬಯಕೆ ಇವುಗಳ ನಡುವೆ ಪತ್ರಕರ್ತ ಕಾಣೆಯಾಗಿದ್ದಾನೆ. ಪ್ರಜಾಪ್ರಭುತ್ವದ ಕಾವಲು ನಾಯಿ ಇಂದು ಭೂಗಳ್ಳರು, ರಾಜಕಾರಣಿಗಳು, ರೌಡಿಗಳು, ಮೌಲ್ಯವಿಲ್ಲದ ವ್ಯಾಪಾರಿಗಳು ಹಾಕುವ ತುಂಡು ಬಿಸ್ಕತ್ತಿನ ಆಸೆಗೆ ಜೊಲ್ಲು ಸುರಿಸುತ್ತ ನಡೆದಂತೆ ನನಗೆ ಭಾಸವಾಗುತ್ತದೆ. ಸಮಾಜದ ಕನ್ನಡಿಯಂತಹ ಪತ್ರಿಕಾ ಮನೆಗಳಲ್ಲಿ ಎಲ್ಲವೂ ವ್ಯಾಪಾರವಾಗಿದೆ. ಹೆಣ್ಣು, ಹೊನ್ನು, ಮಣ್ಣು ಈ ಮೂರರ ಆಸೆಗೆ ಬಿದ್ದ ಪತ್ರಕರ್ತನೇ ದೊಡ್ಡ ಮನುಷ್ಯನೆಂದು ಸಮಾಜ ಗುರುತಿಸತೊಡಗಿದಾಗ ನನ್ನಂತಹವರ ನಂಬಿಕೆಯ ಬುಡ ಅಲ್ಲಾಡತೊಡಗುತ್ತದೆ. ಸರ್ವೇ ಗುಣಾಃ ಕಾಂಚನಮಾಶ್ರಯಂತಿ ಎಂಬ ಮಾತು ಇಲ್ಲಿಯೂ ಸತ್ಯವೆಂದು ಅರಿವಾದಾಗ ಯಾವ ಚಾನೆಲ್ಲು, ಯಾವ ಪತ್ರಿಕೆಯೂ ನಂಬಿಕೆಗೆ ಅರ್ಹವಲ್ಲ ಎಂಬಂತಾಗುತ್ತದೆ. ಒಂದು ದಿನ ಪತ್ರಕರ್ತರು ಯಾರು ಎಂದು ನನ್ನ ಮುಂದಿನ ಅತ್ಯಂತ ಕಿರಿಯ ಜನಾಂಗ ನನ್ನನ್ನು ಕೇಳಿದರೆ,  ನಾನು ಏನು ಉತ್ತರ ಕೊಡಬಲ್ಲೆ? ಪತ್ರಕರ್ತರೆಂದರೆ ಅದೇ ಸುದ್ದಿ ವಾಹಿನಿಗಳಲ್ಲಿ ದಿನವೆಲ್ಲ ಸುದ್ದಿಯನ್ನು ನೀಡುತ್ತಾರಲ್ಲ, ಪತ್ರಿಕೆಗಳಲ್ಲಿ ಪ್ರತಿದಿನ ಸುದ್ದಿ ಬರುವಂತೆ ನೋಡಿಕೊಳ್ಳುತ್ತಾರಲ್ಲ ಅವರೆಂದೇ? ಹಾಗೆಂದರೆ ಯಾವುದಾದರೂ ಬುದ್ಧಿವಂತ ಮಗು ನಿಜವಾಗಿ ಯಾರು ಪತ್ರಕರ್ತ ಎಂದು ತಿಳಿದುಕೊಂಡು ನೀನು ಹೇಳುವುದೆಲ್ಲ ಡೋಂಗಿ ಎಂದರೆ ನಾನೂ ಕೂಡ.....!?