ಮಂಗಳವಾರ, ಜುಲೈ 16, 2013

ಆಲ್ವೇಸ್ ಐ ಆಮ್ ಫೈನ್...

          ಅಂತೂ ಇವತ್ತಿಗೆ ನನ್ನ ದುಃಖದ ದಿನಗಳು ಮುಗಿದವು. ಇನ್ನು ಏನಾದರೂ ನಾನು ನಾನಾಗಿಯೇ ಇರಬೇಕು. ಹೀಗೆಂದು ನಿರ್ಧಾರ ಮಾಡಿದ್ದೇನೆ. ಮೊನ್ನೆ ಒಬ್ಬ ಹಳೆಯ ಸಹೋದ್ಯೋಗಿ ಕೇಳಿದರು, ನೆಗಡಿಯಾದರೂ ಐ ಆಮ್ ಫೈನ್ ಎನ್ನುತ್ತೀಯಲ್ಲ? ಎಂದು. ಅದಕ್ಕೆ ಹೇಳಿದ್ದೆ, ನಾನು ಯಾವಾಗಲೂ ಹೀಗೆಯೇ ಅಲ್ವಾ, ಛಳಿ, ಬಿಸಿಲು ಏನಿದ್ದರೂ ನಗುನಗುತ್ತ ಸಂತೋಷವಾಗಿರುವುದು ನನ್ನ ಅಭ್ಯಾಸ.
          ಸುಮ್ಮನೆ ಕುಳಿತು ಯೋಚಿಸಿದರೆ ಕಳೆದ ಮೂವತ್ತೆರಡು ವರ್ಷಗಳಲ್ಲಿ ಎಲ್ಲರೂ ಹೇಳುವ ಹಾಗೆ ಕಷ್ಟಗಳು ಎಂದಿದ್ದರೆ ಅವೆಲ್ಲವೂ ನನ್ನನ್ನು ಭರಪೂರ ಕಿತ್ತು ತಿನ್ನಬೇಕಿತ್ತು. ಆದರೆ ಅವುಗಳ ದುರದೃಷ್ಟವೆಂದರೆ ಅವು ದಾಳಿ ಮಾಡಲು ಶಕ್ಯವಾದವೇ ಹೊರತು, ನನ್ನ ನಗುವನ್ನು ಕಿತ್ತು ತಿನ್ನಲು ಆಗಲಿಲ್ಲ. ಕಳೆದ ನಾಲ್ಕು ವರ್ಷಗಳೆಂತೂ ನನ್ನ ಪಾಲಿಗೆ ದೊಡ್ಡ ಸವಾಲೇ ಆಗಿದ್ದವು. ಮೊದಲು ಟೈಫಾಯಿಡ್, ಆಮೇಲೆ ಡಿಪ್ರೆಷನ್, ಡಿಪ್ರೆಷನ್ ಮಧ್ಯೆ ಸ್ಯೂಸೈಡ್ ಅಟೆಂಪ್ಟ್, ಡಿಪ್ರೆಷನ್ ನಿಂದ ಹೊರಬರುತ್ತಿದ್ದಂತೆಯೇ ಡೆಂಗ್ಯೂ, ಡೆಂಗ್ಯೂ ಮುಗಿದ ಮೇಲೆ ತೀವ್ರ ರಕ್ತಹೀನತೆ ಹೀಗೆ ಒಂದೆರಡೇ ಅಲ್ಲ. ಬುದ್ದಿ ಬಲ್ಲಾದಾಗಿನಿಂದ ನನ್ನ ಅನ್ನ ನಾನೇ ದುಡಿದು ತಿನ್ನುತ್ತಿದ್ದವಳಿಗೆ ಒಮ್ಮೆಲೇ ಪರಾವಲಂಬಿತನ. ಕೆಲಸಕ್ಕೆ ಹೋದರೂ ಕೆಲಸ ಮಾಡಲಾಗದ ಸ್ಥಿತಿ. ಸಹಜವಾಗೇ ಉಳಿದವರಿಗೆ ಭಾರವಾಗತೊಡಗಿದೆ.
          ಅಂತೂ ಇಂತು ಸುಧಾರಿಸಿಕೊಂಡು ಹೋದರೆ, ಈ ಮಾಧ್ಯಮ ಕ್ಷೇತ್ರದಲ್ಲಿ ಸ್ವಕೀಯರು, ಪರಕೀಯರು ಎಂಬ  ಎರಡು ಗುಂಪುಗಳಿವೆ ಮತ್ತು ನಾನು ಬಹುತೇಕ ಕಡೆಗಳಲ್ಲಿ ಪರಕೀಯಳಾಗಿದ್ದೇನೆ ಎಂಬ ವಾಸ್ತವದ ಅರಿವಾಯಿತು. ಮಾಧ್ಯಮಗಳಲ್ಲಿ ಉನ್ನತ ಹುದ್ದೆಯಲ್ಲಿ ಕುಳಿತ ಸಂಬಂಧಿಕರು ಚೆಂದ ನೋಡುತ್ತ ದೂರ ನಿಂತವರೇ ಹೊರತು ಎಂದೂ ನಾನಿದ್ದೇನೆ ಎಂದವರಲ್ಲ. ಇನ್ನೂ ಸ್ವಾಭಿಮಾನ ಬಿಟ್ಟು, ಜವಾಬ್ದಾರಿ ನೆನೆದು ಕೆಲಸಕ್ಕಾಗಿ ಕೇಳಿಕೊಂಡು ಹೋದರೆ, ಅವರ ವಿರೋಧಿಗಳ ಸ್ನೇಹಿತೆ, ಕೆಲಸ ಗೊತ್ತೆಂಬ ಸೊಕ್ಕು, ಕೈಗೆಟುಕದವಳು ಹೀಗೆ ಹಲವು ಕಾರಣಗಳಿಗೆ ನಿರಾಕರಣೆ...
          ಈ ಮಧ್ಯೆ ವೈಯಕ್ತಿಕ ಜೀವನದಲ್ಲೂ ಬಿರುಗಾಳಿ. ಮದ್ವೆಯ ಬಗ್ಗೆ ನನಗೆ ಇರುವ ಸ್ಪಷ್ಟತೆ ಮತ್ತು ಆಸೆಗಳು ಹೆತ್ತವರಿಗೆ, ಸಂಬಂಧಿಕರಿಗೆ, ಸ್ನೇಹಿತರಿಗೆ ಅರ್ಥವಾಗುತ್ತಲೇ ಇರಲಿಲ್ಲ. ಹುಡುಗರ ಮೇಲೆ ಹುಡುಗರನ್ನು ತೋರಿಸುವ, ಮದುವೆಗೆ ಒತ್ತಾಯ ಹೇರುವ ಭಾರ ಸಹಿಸಲಾಗುತ್ತಿರಲಿಲ್ಲ. ಎಲ್ಲರಂತೆ ಮದುವೆ, ಮನೆ, ನಿನ್ನದೂಂತ ಒಂದು ಸಂಸಾರ  ಬೇಡವೇ ಎಂದು ಆಯಿ, ಅಮ್ಮನ  ಆಸೆಯ ಹೊರೆ. ಸ್ನೇಹಿತರ ಹಾರೈಕೆಯ ಜವಾಬ್ದಾರಿ..ಅಬ್ಬಬ್ಬಾ! ಖಿನ್ನತೆಯ ಮಧ್ಯೆ ಇವುಗಳನ್ನು ನಿಭಾಯಿಸಬೇಕಾದರೆ ಅದಕ್ಕೆ ನಾನೇ ಸೈ ಅನ್ನಿಸಿರಬೇಕು!
        ಆರ್ಥಿಕ ಸಮಸ್ಯೆ ನನಗೆ ಒಂದು ಸಮಸ್ಯೆ ಎನಿಸಲೇ ಇಲ್ಲ. ಯಾಕೆಂದರೆ ಹಿಂದೆ ನಾನು ಮಾಡಿದ ಒಳ್ಳೆಯ ಕರ್ಮ  ಈಗ ಕೈಹಿಡಿದಿತ್ತು. ಅಪ್ಪ ನನ್ನ ಸಹಾಯಕ್ಕೆ ಬಂದರು. ಇಂಜನಿಯರಿಂಗ್ ಮುಗಿಸಿದ ತಮ್ಮ ಮನೆಯ ಜವಾಬ್ದಾರಿ ತನ್ನದು ಎಂದ. ತಂಗಿ ಅಕ್ಕನಿಗೆ ತೊಂದರೆಯಾಗಬಾರದೆಂದು ಮದುವೆ ಮಾಡಿಕೊಂಡಳು. ಹೀಗೆ ಒಂದೆಡೆ ಹೊಸ ಕಷ್ಟಗಳು ಕಿತ್ತು ತಿನ್ನುತ್ತಿದ್ದರೆ, ಹಳೆಯ ಪರಿಹಾರಗಳು ಕೈಹಿಡಿದಿದ್ದವು.
        ಈ ಎಲ್ಲ ಸಂದರ್ಭಗಳಲ್ಲೂ ನನ್ನ ಕೈಹಿಡಿದವ ನನ್ನ ಗೆಳೆಯ, ನನ್ನ ದೇವರು. ಆತ  ಇಲ್ಲದಿದ್ದರೆ ಬಹುಷಃ ನಾನಿವತ್ತು ಇರುತ್ತಿರಲಿಲ್ಲ. ಆತ ನೀಡಿದ ಬೆಂಬಲ ಕಳೆದ 9 ವರ್ಷಗಳಿಂದ ನನ್ನನ್ನು ಉಳಿಸಿತು, ಬೆಳೆಸಿತು. 
        ದೈಹಿಕ, ಆರ್ಥಿಕ ಹಾಗೂ ಸಾಮಾಜಿಕ ಕಾರಣಗಳಿಗೆ ಮದುವೆಯಾಗುವ ಯಾವ  ಇರಾದೆಯೂ ನನಗಿಲ್ಲ. ಮದುವೆ, ಪ್ರೀತಿ ನನ್ನ ವೈಯಕ್ತಿಕ ವಿಚಾರ. ಇದರಲ್ಲಿ ಯಾರೂ ತಲೆಹಾಕಬಾರದು ಎಂಬ ಸಾಮಾನ್ಯ ಪ್ರಜ್ಞೆ ಕೂಡ ನನ್ನನ್ನು ಹತ್ತಿರದಿಂದ ಬಲ್ಲವರಿಗೆ ಇರಲಿಲ್ಲ. ಎಲ್ಲರನ್ನೂ ಪ್ರೀತಿಸಿದರೂ, ಯಾರಿಂದಲೂ ಬೈಗುಳ ತಪ್ಪಲಿಲ್ಲ. ಇನ್ನು ಗಂಡ, ಮಕ್ಕಳ ಕೈಲಿ ಕೂಡ ಮಾಡುವ ಸೇವೆಯೆಲ್ಲ ಮಾಡಿ ಬೈಸಿಕೊಳ್ಳುವ ಹಣೆಬರಹ ಬೇಡ ಎಂದರೆ ಕೇಳುತ್ತಲೇ ಇರಲಿಲ್ಲ. ಒಂದೇ ಸಮನೆ ಮದುವೆಯ ಹಠ. ಭಾರವಾಗತೊಡಗಿದ್ದ ಮಗಳೆಂಬ ಜವಾಬ್ದಾರಿಯನ್ನು ಕಳಚಿಕೊಳ್ಳುವ ತುಡಿತ. ಸ್ನೇಹಿತರಿಗೆ ತಾವು ಬಿದ್ದ ಹಳ್ಳಕ್ಕೆ ನನ್ನನ್ನೂ ನೂಕಿ ಚೆಂದ ನೋಡುವ ತವಕ. ನಿಮ್ಮ ಸಮಸ್ಯೆ ಇದು ಎಂದು ಅವರಿಗೆ ಅವರ ಸಮಸ್ಯೆಯನ್ನು ತೋರಿಸಿ, ಸುಮ್ಮನೆ ಸಾಂತ್ವನ ಹೇಳಿದರೆ, ಏನೋ ಕಳಕಳಿಯಿಂದ ಮಾತಾಡಿದರೆ ಅದೂ ತಪ್ಪಾಗತೊಡಗಿದ್ದವು. ಹಗ್ಗವೂ ಹಾವಾಗತೊಡಗಿತ್ತು. 
      ಆಗಲೇ ನಾನು ನನ್ನ ಹಳೆಯ ಜೈಲುವಾಸದ ಬಯಕೆಯನ್ನು ಈಡೇರಿಸಿಕೊಂಡಿದ್ದು.  ಈ ಸಂದರ್ಭವನ್ನು ನಾನು ನನ್ನ ಜೈಲಿನಲ್ಲಿರುವಂತೆ ಭಾವಿಸಿ ಬದುಕಲು ಉಪಯೋಗಿಸಿದೆ. ಯಾಕೆಂದರೆ ಗರ್ಭಧಾರಣೆ, ಹೆರಿಗೆ ಮತ್ತು ಮಾರಣಾಂತಿಕ ಕಾಯಿಲೆಗಳ ಅನುಭವವೊಂದು ಬಿಟ್ಟು ಉಳಿದೆಲ್ಲವನ್ನೂ ನಾನು ಅನುಭವಿಸಿಯಾಗಿತ್ತು.  ರಾಜಮರ್ಯಾದೆ, ಕೀರ್ತಿ, ಅಪಕೀರ್ತಿ, ಹಣ, ನಷ್ಟ, ಸೋಲು, ಗೆಲವು ಎಲ್ಲವನ್ನೂ ಅನುಭವಿಸಿಯಾಗಿತ್ತು. ನನ್ನ ಗೆಳೆಯನ ಪ್ರೀತಿ ಜನ್ಮಕ್ಕಾಗುವಷ್ಟು ಜೊತೆಗಿತ್ತು. ಹಾಗಾಗಿ ಜೈಲುವಾಸ ಹೇಗಿರಬಹುದೆಂಬ ಕಲ್ಪನೆಯಂತೆಯೇ ಅಕ್ಷರಶಃ ಎಲ್ಲರ ಸಂಪರ್ಕ ಬಿಟ್ಟೆ, ಸದಾ ಚಟುವಟಿಕೆ, ಕೆಲಸದಲ್ಲಿ ತೊಡಗಿಕೊಳ್ಳುವ ನಾನು ಜಡಭರತನಂತೆ ಬದುಕಿದೆ. ನಿಜವಾಗಿ ನನಗೆ ಜೈಲು ಇಷ್ಟವಾಗತೊಡಗಿತು. ಅಂತರ್ಮುಖಿಯಾಗಿ ನನ್ನೊಳಗೆ ನಾನು ಪಯಣಿಸುವ  ಆನಂದ ನನ್ನದಾಯಿತು. ಒಂದು ದಿನ ಇಡೀ ಬದುಕು ಕೈಕೊಟ್ಟರೂ ನಾನು ಇನ್ನೂ ಹೆಚ್ಚು ಆನಂದವಾಗಿರುತ್ತೇನೆ ಎಂಬ ಆತ್ಮವಿಶ್ವಾಸ ಮೂಡಿತು. ಮಾನ, ಅವಮಾನಗಳ ಭಯವಿಲ್ಲದ ನನಗೆ ಕೀರ್ತಿಯ ವ್ಯಾಮೋಹ ಹೊರಟುಹೋಯಿತು. ದಿನಕಳೆದಂತೆ ಆನಂದವಾಗಿ ಬದುಕುವುದು ಅಭ್ಯಾಸವಾಗಿಹೋಯಿತು. 
       ಿಇದರಿಂದಾಗಿ ನನಗೆ ಕಾಯಿಲೆಗಳು ಹೆದರಿ ಓಡತೊಡಗಿದವು. ಮನೆಯಲ್ಲಿ ಕೆಲಸ ಮಾಡಿದರೆ ಕಚೇರಿಯಲ್ಲಿ, ಕಚೇರಿಯಲ್ಲಿ ಕೆಲಸ ಮಾಡಿದರೆ ಮನೆಯಲ್ಲಿ ಕೆಲಸ ಮಾಡಲು ಆಗದಿದ್ದ ನಾನು, ನಿಧಾನವಾಗಿ ಹಿಂದಿನಂತೆಯೇ ಎಲ್ಲ ಕಡೆ ಕೆಲಸ ನಿಭಾಯಿಸುವ ಸಾಮರ್ಥ್ಯವನ್ನು ಒಗ್ಗೂಡಿಸಿಕೊಂಡೆ. ನನಗೆ ನಾನೇ ವಿಧಿಸಿಕೊಂಡಿದ್ದ ಜೈಲುವಾಸಕ್ಕೆ ಅಂತ್ಯ ಹಾಡಿದೆ. ಸ್ವಚ್ಛಂದ  ಆಕಾಶದಲ್ಲಿ ಹಕ್ಕಿಯಂತೆ ಹಾರತೊಡಗಿದೆ. ಮನಸ್ಸು ಬಿಡುಗಡೆಯಾದಾಗ ಬದುಕಿನ ಬಂಧನದ ಭಯ ಅದಕ್ಕಿರಲಿಲ್ಲವಷ್ಟೆ!