ಮಂಗಳವಾರ, ಸೆಪ್ಟೆಂಬರ್ 1, 2015

ಪಡೆದುಕೊಂಡ ಅಹಮಿಕೆಯೂ, ಕಳೆದುಕೊಳ್ಳುವ ಭಯವೂ

             ಕಳೆದ ವಾರ ಪೂರ್ತಿ ಬೇಡದ ವಿಚಾರಗಳಾದರೂ ತಲೆಯಲ್ಲಿ ಹೊಕ್ಕು ಸಮಯ ಹಾಳುಮಾಡಿದ್ದು ಎರಡು ವಿಷಯಗಳು. ರಾಮಚಂದ್ರಾಪುರ ಮಠದ ಪ್ರಕರಣ-೨ ಮತ್ತು ಶೀನಾ ಬೋರಾ ಪ್ರಕರಣ. ಇವೆರಡೂ ಸಹ ನಮ್ಮ ಪರಂಪರಾಗತ ನಂಬಿಕೆಗಳನ್ನು ಪ್ರಶ್ನೆ ಮಾಡುತ್ತ, ನನ್ನಂತಹ ಸಾಮಾನ್ಯರನ್ನು ಅಲುಗಾಡಿಸಿದ್ದು ಸುಳ್ಳಲ್ಲ. ಆದರೆ ಇವೆರಡೂ ಪ್ರಕರಣಗಳಲ್ಲಿ ನನಗೆ ಬಂದ ಪ್ರಶ್ನೆಗಳು ಬೇರೆ ಯಾರಿಗೂ ಬಂದಿಲ್ವಾ? ಎಂದು ಯೋಚಿಸುತ್ತಿರುವಾಗಲೇ ಇವತ್ತಿನ ಹಿಂದೂ ಪತ್ರಿಕೆಯ ಸಂಪಾದಕೀಯ ಪುಟದಲ್ಲಿ ಹಸನ್ ಸುರೂರ್ ಮತ್ತು ಮೈಥಿಲಿ ಸುಂದರ್ ಬರೆದಿದ್ದಾರೆ. ಹಸನ್ ಸುರೂರ್ ಹೇಳುತ್ತಾರೆ, ಅಪರಾಧ ವ್ಯಕ್ತಿಯೊಬ್ಬ ತನ್ನ ವೈಯಕ್ತಿಕ ಕಾರಣಗಳಿಂದ ಮಾಡುವಂಥದು. ಅದಕ್ಕೆ ಶ್ರೀಮಂತ, ಬಡವ, ಜಾತಿಯಂತಹ ಮಿತಿಯಿಲ್ಲ. ಆದಾಗ್ಯೂ ರಾಷ್ಟ್ರೀಯ ಸುದ್ದಿವಾಹಿನಿಗಳು ಶ್ರೀಮಂತರು, ಮುಂದುವರಿದವರು, ನಾಗರಿಕರು, ಜನಪ್ರಿಯರಾದವರು, ವೈಚಾರಿಕ ದೃಷ್ಟಿಕೋನವುಳ್ಳವರು ಹೀಗೆ ಮಾಡುವುದೆ? ಎಂದು ದಿನಗಟ್ಟಲೆ ಚರ್ಚೆ ಮಾಡುತ್ತಾರೆ. ಇದೊಂಥರ ಸಾಂಸ್ಕೃತಿಕ ತಾರತಮ್ಯ ಎಂದು. ಹಾಗೆಯೇ ಮೈಥಿಲಿ ಸುಂದರ್ ಕೇಳುತ್ತಾರೆ, ಇಂದ್ರಾಣಿ ಮುಖರ್ಜಿಗೆ ನಿಜವಾಗಿಯೂ ಮಕ್ಕಳು ಬೇಡವಾಗಿದ್ದರೆ ಹೊಟ್ಟೆಯಲ್ಲಿರುವಾಗಲೇ ಸಾಯಿಸಬಹುದಿತ್ತು. ಅವರನ್ನು ಹೊತ್ತು, ಹೆತ್ತು ಹೆಸರು ನೀಡಲಾಗದ ಪರಿಸ್ಥಿತಿಯಲ್ಲೂ ತನ್ನ ತಂದೆ-ತಾಯಿಗೇ ದತ್ತು ನೀಡಿದ್ದು ಯಾಕೆ? ವಯಸ್ಸಾದ ತಂದೆ-ತಾಯಿಗೆ ಕೋಟ್ಯಾಂತರ ರೂ. ಹಣವನ್ನು ಜೀವನ ನಿರ್ವಹಿಸಲು ವ್ಯಯಸಿದ್ದು ಯಾಕೆ? ಬೆಳೆದ ಮಗಳನ್ನು ಮುಂಬೈಗೆ ಕರೆತಂದು ಓದಿಸಿ, ಕೆಲಸ ಗಿಟ್ಟಿಸಿ ಕಾಲೂರುವಂತೆ ಮಾಡಿದ್ದು ಯಾಕೆ? ಆಕೆಗೆ ನಿಜವಾಗಿಯೂ ಮಕ್ಕಳನ್ನು ಕೊಲ್ಲುವ ಉದ್ದೇಶವಿದ್ದರೆ ಇದನ್ನೆಲ್ಲ ಯಾಕೆ ಮಾಡಬೇಕಿತ್ತು? ಇಂತಹ ಸಹಜ ಪ್ರಶ್ನೆಗಳು ನನಗೆ ಅಂದು ಮೂಡಿದ್ದನ್ನು ಇಂದು ಮೈಥಿಲಿ ತುಂಬ ಚೆನ್ನಾಗಿ ವ್ಯಕ್ತಪಡಿಸಿದ್ದಾರೆ. ಮಾಧ್ಯಮಗಳು ಒಬ್ಬ ಹೆಣ್ಣಿನ ವೈಯಕ್ತಿಕ ಬದುಕನ್ನು ಇಷ್ಟು ಅಪಸವ್ಯಗಳಿಂದ, ತಮ್ಮ ಘನತೆಯನ್ನೂ ಪಕ್ಕಕ್ಕಿಟ್ಟು ಪ್ರತ್ಯೇಕ ತನಿಖೆಯನ್ನೇ ಮಾಡಿದ್ದು ಸರಿಯಲ್ಲ ಎಂದಿದ್ದಾರೆ. ಈ ವಿಚಾರದಲ್ಲಿ ನಾನು ಸಂಪೂರ್ಣ ಸಹಮತವನ್ನು ಹೊಂದಿದ್ದೇನೆ.
               ಜೀವನದಲ್ಲಿ ಏನು ಬೇಕಾದರೂ ಪಡೆಯಬಹುದು. ಆದರೆ ಪಡೆದ ನಂತರ ಅದನ್ನು ಕಳೆದುಕೊಳ್ಳುವ ಭಯ ಇದೆಯಲ್ಲ, ಅದನ್ನು ಯಾವ ಹುಲು ಮಾನವನೂ ಮೀರಿಲ್ಲ. ಅದು ಹಣ, ರೂಪ, ವಿದ್ಯೆ, ಯೌವನ, ಅಸ್ತಿತ್ವ, ಅಧಿಕಾರ ಹೀಗೇ ಏನು ಬೇಕಾದರೂ ಆಗಬಹುದು, ಅದು ನಮ್ಮ ನಮ್ಮ ಪಟ್ಟಿಯಲ್ಲಿ ನಾವು ಯಾವುದಕ್ಕೆ ಪ್ರಾಶಸ್ತ್ಯ ನೀಡುತ್ತೇವೆ ಎಂಬುದನ್ನು ಅವಲಂಬಿಸಿದೆ. ವ್ಯತ್ಯಾಸವೆಂದರೆ ಹಿಂದೆಲ್ಲ ತಮ್ಮ ತಪಸ್ಸಿನ ದಾರಿ, ಧರ್ಮ, ಸತ್ಯ, ಪ್ರತಿಜ್ಞೆ ಇಂತಹವುಗಳನ್ನು ತಾವು ಪಡೆದ ಹಮ್ಮಿಕೆಯನ್ನು ಹೊಂದಿದ್ದರು. ಈಗ ಅದೇ ಹಣ, ಅಧಿಕಾರ, ಪ್ರಭಾವ ಇತ್ಯಾದಿಗಳನ್ನು ಪಡೆದ ಹಮ್ಮಿಕೆ ಹೆಚ್ಚಾಗಿದೆ. ಮೊದಲೆಲ್ಲ ತಾವು ನಂಬಿದ ಮೌಲ್ಯಗಳಿಗೆ ಹಾನಿಯಾಗುತ್ತದೆ ಎಂದರೆ ತಮ್ಮದೇ ಜೀವ ಬಲಿ ಕೊಡುತ್ತಿದ್ದರು. ಈಗ ಪಡೆದುಕೊಂಡದ್ದನ್ನು ಉಳಿಸಿಕೊಳ್ಳುವ ಹೋರಾಟದಲ್ಲಿ ಮಂದಿಯ ಜೀವ ತೆಗೆಯುತ್ತಿದ್ದಾರೆ.
              ಪಡೆದುಕೊಂಡ ಅಹಂ ಇದೆಯಲ್ಲ, ಅದು ಹಣ, ರೂಪ, ವಿದ್ಯೆ, ಯೌವನ, ಅಧಿಕಾರ, ಮನುಷ್ಯ ಪ್ರೀತಿ ಇವೆಲ್ಲವುಗಳಿಗಿಂತ ದೊಡ್ಡ ನಿಯಂತ್ರಕ. ಹೆಚ್ಚಿನಸಲ ನಾವು ಪಡೆದುಕೊಂಡಿದ್ದಕ್ಕೆ ನಾವು ಅರ್ಹರೇ ಆಗಿರುವುದಿಲ್ಲ. ಆದರೂ ನಮ್ಮ ಅಹಂ ನಮಗೇ ಸಮಜಾಯಿಷಿ ನೀಡುತ್ತದೆ, ನಿನಗಲ್ಲದೇ ಬೇರೆ ಯಾರಿಗೆ ಸಿಗಬೇಕಿತ್ತು? ಆಗೆಲ್ಲ ನಮ್ಮನ್ನು ನಾವು ಅವಲೋಕನ ಮಾಡಿಕೊಂಡು ಯಾವ ಹೊತ್ತಿನಲ್ಲೂ ಕಳೆದುಕೊಳ್ಳಲು ಸಿದ್ಧರಾಗಿದ್ದರೆ ಸಮಸ್ಯೆ ಇರುವುದಿಲ್ಲ. ಆದರೆ ನಮ್ಮ ಅಹಂ ಇಷ್ಟು ದೊಡ್ಡ, ಬಲವಾದ ಕೋಟೆಯೊಳಗೆ ಬಂಧಿಸಿ ಬಿಟ್ಟಿರುತ್ತದೆ. ನಮಗೆ ಪಡೆದುಕೊಂಡಿದ್ದು ಕಳೆದುಹೋಗುವ ಸನ್ನಿವೇಶವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿರುವುದಿಲ್ಲ. ಹಾಗಿದ್ದಾಗ ನಿಜವಾಗಿಯೂ ಕಳೆದುಕೊಳ್ಳುವ ಸಂದರ್ಭ ಬಂದರೆ? ಇಂದ್ರಾಣಿ ಮುಖರ್ಜಿ ಒಂದು ಉದಾಹರಣೆಯಾಗುತ್ತಾಳೆ.
               ಹಣ, ಅಧಿಕಾರ, ಎಲ್ಲಕ್ಕಿಂತ ಹೆಚ್ಚು ಪ್ರೀತಿಸುವ ಪೀಟರ್ ಮುಖರ್ಜಿಗೆ ತನ್ನ ಹುಳುಕುಗಳೆಲ್ಲ ಗೊತ್ತಾಗಿಬಿಟ್ಟರೆ ಎಲ್ಲಿ ಎಲ್ಲವನ್ನೂ ಕಳೆದುಕೊಳ್ಳುತ್ತೇನೋ ಎಂಬ ಭಯ ಒಂದೆಡೆ. ಇನ್ನೊಂದೆಡೆ ತನ್ನ ಹರೆಯದಲ್ಲಿ ಕಳೆದುಕೊಂಡ ಆತ್ಮಗೌರವವನ್ನು ತಾನು ಮರಳಿ ಪಡೆಯಲು ಪಟ್ಟ ಹೋರಾಟದ ನೆನಪೂ ಇರಬಹುದು.  ಒಬ್ಬ ತಾಯಿಯಾಗಿ ತಾನು ಮಾಡಿದ್ದನ್ನು ತನ್ನ ಮಗಳು ಮುಂದುವರಿಸಬಾರದು ಎಂಬ ಪ್ರಜ್ಞೆಯೂ ಇರಬಹುದು. ಯಾವೊಬ್ಬ ವೇಶ್ಯೆ ಕೂಡ ತನ್ನ ಮಗಳು ತನ್ನ ದಾರಿ ತುಳಿಯಲಿ ಎಂದು ಆಶಿಸುವುದಿಲ್ಲ. ಈ ಕಾರಣಗಳು, ಅಸಹಾಯಕತೆಯೇ ಈ ಪ್ರಕರಣದಲ್ಲಿ ನನಗೆ ಕಾಣುವಂತದ್ದು. ಇನ್ನು ತನ್ನ ಕಾರ್ಯಸಾಧನೆಗೆ ಏನು ಬೇಕಾದರೂ ಮಾಡಬಲ್ಲವಳು, ಸುತ್ತಲಿನವರ ಎಲ್ಲ ದೌರ್ಬಲ್ಯಗಳನ್ನು ಅವಕಾಶವನ್ನಾಗಿ ಪರಿವರ್ತಿಸಿಕೊಳ್ಳುತ್ತ ಹೋಗಿದ್ದರೆ ಆಶ್ಚರ್ಯವೇನಿಲ್ಲ.
             ಬಡವನಿಗೆ ಅಪರಾಧ ಮಾಡಲೂ ಅದೇ ಕಾರಣ, ಶ್ರೀಮಂತನಿಗೆ ಅಪರಾಧ ಮಾಡಲೂ ಅದೇ ಕಾರಣ. ಪಡೆದುಕೊಂಡ ಅಹಮಿಕೆ ಮತ್ತು ಕಳೆದುಕೊಳ್ಳುವ ಭಯ. ಹಾಗೆ ನೋಡಿದರೆ ಹೆಚ್ಚು ಪಡೆದ ಶ್ರೀಮಂತನಿಗೇ ಈ ಎರಡೂ ದೌರ್ಬಲ್ಯಗಳು ಹೆಚ್ಚು ಎನ್ನುವುದು ವಾಸ್ತವ.