ಮಂಗಳವಾರ, ಅಕ್ಟೋಬರ್ 13, 2015

ಶರನ್ನವರಾತ್ರಿಯೆಂದರೆ ಕೇವಲ ಆಚರಣೆಯಲ್ಲ

ಆದ್ಯಾಶಕ್ತಿಯ ನವರೂಪಗಳನ್ನು ಆರಾಧಿಸುವ ಶರನ್‘ನವರಾತ್ರಿ’ . ಲೌಕಿಕರ ಕಣ್ಣಲ್ಲಿ ಪತ್ನಿಯೊಬ್ಬಳು ಪತಿಯನ್ನು ಹೊಂದುವ ಸಾಮಾನ್ಯ ಕಥೆ ಪಾರ್ವತಿ ಪರಮೇಶ್ವರರ ಮಿಲನ. ಅಧ್ಯಾತ್ಮ ಭಾವದಲ್ಲಿ ನೋಡಿದಾಗ ಶೈಲಪುತ್ರಿಯು ಸಿದ್ಧಿದಾತ್ರಿಯಾಗುವ ವರೆಗಿನ ಪ್ರಕ್ರಿಯೆ ಆತ್ಮ ಪರಮಾತ್ಮನನ್ನು ಸೇರುವ ಬಗೆಯ ನಿರೂಪಣೆ. ಸಕಲ ಚರಾಚರ ವಸ್ತುವಿನ ಅಸ್ತಿತ್ವ, ಅಸ್ಮಿತೆಗೆ ಕಾರಣವಾಗಿರುವ ಸರ್ವಶಕ್ತಿಗೆ ಶಿವನ ಪತ್ನಿಯಾಗಿ ಬಂದು ಅಷ್ಟೆಲ್ಲ ಕಷ್ಟ ಪಡುವ ಯಾವ ಅಗತ್ಯವೂ ಇಲ್ಲ. ಆದಾಗ್ಯೂ ನಮ್ಮ ಪುರಾಣಗಳು ಆಕೆಯನ್ನು ಮನುಷ್ಯ ಯೋನಿಯಲ್ಲಿ ಜನ್ಮ ತಾಳಿದ ಸಾಮಾನ್ಯ ಸ್ತ್ರೀಯಂತೆ ಚಿತ್ರಿಸಿ ಆಕೆಯ ಬದುಕು ಬರೆದಿವೆ. ಇದು ಆಕೆಯ ಬದುಕ ಬರಹವಲ್ಲ. ಬದಲಿಗೆ ಲಕ್ಷಾಂತರ ಜನ್ಮಗಳ ವಿಕಾಸದ ನಂತರ ಬಂದ ಮಾನವ ಜನ್ಮವನ್ನು ಮುಂದೆ ಹೇಗೆ ಒಯ್ಯಬೇಕು ಎನ್ನುವುದಕ್ಕೆ ಮಾರ್ಗದರ್ಶಿ. ಈ ಪ್ರಕ್ರಿಯೆಯನ್ನು ಮೆಲುಕು ಹಾಕಲೆಂದೇ ಪ್ರತಿವರ್ಷ ಮಳೆ, ಬೆಳೆ ಯಾವುದು ಬರಲಿ, ಬರದಿರಲಿ ಶರನ್ನವರಾತ್ರಿ ಬಂದೇ ಬರುತ್ತದೆ. ದೇವಿಯ ಒಂಭತ್ತು ರೂಪಗಳ ಆರಾಧನೆ ನಡೆಯುತ್ತದೆ.

          ಶಿವನನ್ನು ಹೊಂದಲು ದೇವಿ ಮೊದಲು ಸತಿಯಾಗಿ ಜನ್ಮಿಸುತ್ತಾಳೆ. ತೀರ ಬಾಲಿಷವಾದ, ಅಹಂಕಾರ, ಅಜ್ಞಾನ, ಸ್ವಕೇಂದ್ರಿತ ಸತಿ ತನ್ನ ಮಿತಿಯ ಅರಿವಾದಾಗ ತನ್ನನ್ನು ತಾನೇ ದಹಿಸಿಕೊಳ್ಳುತ್ತಾಳೆ. ಇದೂ ಸಹ ಸಾಂಕೇತಿಕ. ನಾವೆಲ್ಲ ಯಾವಾಗಲೂ ಸ್ವಕೇಂದ್ರಿತವಾಗಿರುತ್ತೇವೆ. ನಮ್ಮ ಅಹಂಮಿನ ಕೋಟೆಯೊಳಗೆ ಭದ್ರವಾಗಿದ್ದುಕೊಂಡು ಆನಂದ (ಶಿವ) ಸಿಗಬೇಕೆಂದು ಹಪಹಪಿಸುತ್ತೇವೆ. ನಮ್ಮ ಈ ಮಿತಿಯೇ ಆತ್ಮದ ಮಿತಿ. ಯಾವಾಗ ನಮ್ಮ ಅಹಂಮಿನ ಕೋಟೆಯೊಡೆದು ಸ್ವಕೇಂದ್ರಿತ ಮನಸ್ಸಿನಿಂದ ವಿಶ್ವದ ಬಟಾಬಯಲಿನಲ್ಲಿ ನಿಲ್ಲುತ್ತೇವೆಯೋ ಆಗ ಆನಂದದ ಅನುಭೂತಿ ನಮ್ಮದಾಗುತ್ತದೆ. ಇದನ್ನು ಪಾರ್ವತಿಯಾಗಿ, ಶೈಲಪುತ್ರಿಯಾಗಿ ಜನಿಸಿ, ಬ್ರಹ್ಮಚಾರಿಣಿ, ಚಂದ್ರಘಂಟಾ, ಕೂಷ್ಮಾಂಡಾ, ಸ್ಕಂದಮಾತಾ, ಕಾತ್ಯಾಯಿನಿ, ಕಾಲರಾತ್ರೀ, ಮಹಾಗೌರಿಯ ಹಂತವನ್ನು ದಾಟಿ ಸಿದ್ಧಿದಾತ್ರಿಯಾಗುವ ಮೂಲಕ ಜನಸಾಮಾನ್ಯರಿಗೆ ಆಧ್ಯಾತ್ಮಿಕ ಪ್ರಗತಿಯ ಹಂತವನ್ನು ತೋರಿಸಿಕೊಡುತ್ತಾಳೆ. ಯಾವತ್ತು ಅಹಂಮಿನ ಕೋಟೆಯೊಳಗಿಂದ ಹೊರಬರುತ್ತಾಳೋ ಆಗ ಶಿವನಿಗೆ ಮತ್ತಷ್ಟು ಸಮೀಪದಲ್ಲಿ ಕೈಲಾಸಕ್ಕಿನ್ನು ಒಂದೇ ಮೆಟ್ಟಿಲಾಗಿ ಹಿಮಾಲಯದಲ್ಲಿ ಜನಿಸುತ್ತಾಳೆ. ತನ್ನ ಹಿಂದಿನ ದೈಹಿಕ, ಮಾನಸಿಕ ಎಲ್ಲ ಮಿತಿಗಳನ್ನು ಮೀರಿ ಶಿವನನ್ನು ಪಡೆಯುವ ಏಕೈಕ ಉದ್ದೇಶವನ್ನು ಹೊಂದುತ್ತಾಳೆ.
         ನಾವುಗಳೂ ಅಷ್ಟೆ. ನಮ್ಮ ಕನಸು, ನಮ್ಮ ಆಸೆ, ನಮ್ಮ ಭಾವನೆಗಳನ್ನು ಮೀರಿ ಪರಮಾತ್ಮನೆಡೆಗೆ ಅವನ ಆವಿರ್ಭಾವದ ಎಲ್ಲ ಚರಾಚರ ವಸ್ತುಗಳ ಹಿತದಲ್ಲಿ ತೊಡಗುತ್ತೇವೆಯೋ ಅಂದೇ ನಾವು ಹಿಮಾಲಯದಲ್ಲಿ ಹುಟ್ಟಿಬಿಡುತ್ತೇವೆ. ಆಗಾಗ ಶಿವನ ದರ್ಶನವಾದರೂ ಆತ್ಮದ ಮಿತಿ ಅಷ್ಟು ಸುಲಭವಾಗಿ ತೊಲಗುವಂತದ್ದಲ್ಲ. ಅದಕ್ಕೆ ಸಾಕ್ಷಾತ್ ಶಿವನ/ಪರಮಾತ್ಮನ ಅನುಗ್ರಹ ಮತ್ತು ಮಾರ್ಗದರ್ಶನ ಅತ್ಯಗತ್ಯ. ನಮ್ಮ ಲಕ್ಷ್ಯದಲ್ಲಿ ಸ್ವಲ್ಪ ಚಂಚಲತೆ ಇದ್ದರೂ ಪರಮಾತ್ಮನ ಅನುಗ್ರಹ ದೊರೆಯದು. ಯಾವ ಆಸೆ, ಆಮಿಷಗಳ ತೊಂದರೆ ಇದ್ದರೂ ಹಿಮಾಲಯದಿಂದ ಕನ್ಯಾಕುಮಾರಿಗೆ ಪತನ ನಿಶ್ಚಿತ!
       ಆತ್ಮ ಪರಮಾತ್ಮವನ್ನು ಸೇರಿದರೂ ಎಷ್ಟೋ ಸಲ ತನ್ನ ಮಿತಿಯನ್ನು ಮೀರದು. ಆಗಾಗ ತಾನು ಪರಮಾತ್ಮನಿಂದ ಭಿನ್ನ ಎನ್ನುವ ಭಾವನೆ ತಳೆಯಬಹುದು. ಹಾಗೆ ಭಿನ್ನತೆಯ ಅನುಭವ ಹೊಂದಿದಾಗಲೆಲ್ಲ ಅದು ಅಹಂಮಿನ ಭಾರಕ್ಕೆ ಪರಮಾತ್ಮನಿಂದ ಮತ್ತೆ ಬೇರ್ಪಟ್ಟು ಜನ್ಮ, ಮರಣದ ಚಕ್ರಕ್ಕೆ ಸಿಲುಕುತ್ತದೆ. ಇವೆಲ್ಲದರ ಸಾಂಕೇತಿಕ ಪುರಾಣವೇ ಶಿವ-ಶಕ್ತಿಯ ಮಿಲನ ಕಥೆ.
           ನವರಾತ್ರಿ ಕೇವಲ ಕಳಶ, ಘಟ ಸ್ಥಾಪನೆಯ , ಕುಮಾರಿ ಪೂಜೆಯ ಆಚರಣೆಯಲ್ಲ, ಜೀವನದಲ್ಲಿ ಆಧ್ಯಾತ್ಮಿಕ ಬದುಕಿನ ಮಹತ್ವವನ್ನು ಮುಂಬರುವ ಪೀಳಿಗೆಗೆ ದಾಟಿಸುವ ಸಂಪ್ರದಾಯ. ಈ ಸಮಯದಲ್ಲಿ ನಡೆಯುವ ಮಂತ್ರೋಚ್ಚಾರಣೆ, ಮುದ್ರೆ, ವಿಧಿ, ವಿಧಾನಗಳು ಮೂಲಾಧಾರದಿಂದ ಮಣಿಪೂರದವರೆಗಿನ ಚಕ್ರಗಳನ್ನು ಶುದ್ಧ ಮಾಡಿ, ಶಕ್ತಿಯುತಗೊಳಿಸುತ್ತವೆ. ತಮಗಿಂತ ಕಿರಿಯರಾದ ಹೆಣ್ಣುಮಕ್ಕಳ ಕುಮಾರಿ ಪೂಜೆ, ಬಂಧುಗಳಿಗೆಲ್ಲ ಊಟ ತಯಾರಿಸಿ ಬಡಿಸಿ, ಸುತ್ತಲಿನವರಿಗೆಲ್ಲ ಬನ್ನಿ ಕೊಟ್ಟು ಶತ್ರುತ್ವವನ್ನೂ ಮರೆತು ಆಲಂಗಿಸುವ ಪ್ರಕ್ರಿಯೆಯಂತಹ ಆಚರಣೆಗಳು ಅಹಂಮಿನ ಕೋಟೆಯೊಡೆದು ಪ್ರಜ್ಞೆ  ಅನಾಹತವನ್ನು ಮುಟ್ಟಲು ನೆರವಾಗುತ್ತವೆ. ಆನಂದದ ಸಣ್ಣ ಝಲಕ್ ಅನುಭವಿಸುವ ಪ್ರಕ್ರಿಯೆ ಆರಂಭಗೊಳ್ಳುತ್ತದೆ. ಎಲ್ಲೆಡೆ ನಡೆಯುವ ಕಲಾರಾಧನೆ ಅನಾಹತದಿಂದ ವಿಶುದ್ಧವನ್ನು ದಾಟಿ ಪ್ರಜ್ಞೆ ಆಜ್ಞಾಚಕ್ರವನ್ನು ತಲುಪಲು ಸಹಾಯ ಮಾಡುತ್ತದೆ. ಹೀಗೆ ಒಂದು ಆಚರಣೆಯ ಮೂಲಕ ಇಡೀ ಆಧ್ಯಾತ್ಮಿಕ ಜಾಗೃತಿಯ ಪ್ರಕ್ರಿಯೆಯನ್ನು ಪೀಳಿಗೆಯಿಂದ ಪೀಳಿಗೆಗೆ ತಲುಪಿಸುತ್ತ ಬಂದಿರುವ ನಮ್ಮ ದೇಶದ ಸಂಸ್ಕೃತಿಯ ಬಗ್ಗೆ ನಾವೆಲ್ಲ ಹೆಮ್ಮೆ ಪಡಬೇಕು. ಒಬ್ಬ ಸಾಮಾನ್ಯ ಸ್ತ್ರೀ/ ಪುರುಷ ಮಾನವ ಕುಲದ, ಜಗತ್ತಿನ ಒಳಿತಿಗಾಗಿ ಅಸಾಧಾರಣ. ಅಸಾಮಾನ್ಯ ತ್ಯಾಗ ಮಾಡಿದಾಗಲೆಲ್ಲ ದೇವಿ/ದೇವ ಸ್ಥಾನವನ್ನು ಕೊಟ್ಟು, ದೇವಾಲಯಗಳನ್ನು ಕಟ್ಟಿರುವ ಹಿನ್ನೆಲೆಯೂ ಇದೇ ಆಗಿದೆ. ವಿಪರ್ಯಾಸವೆಂದರೆ ಇಂದು  ಕೆಲವರಿಗೆ ಆಚರಣೆಗಳು, ಸಂಪ್ರದಾಯಗಳು ಅರಿವಿಲ್ಲದ ಸಂಭ್ರಮವಷ್ಟೇ. ಇನ್ನು ಕೆಲವರಿಗೆ ಇವೆಲ್ಲ ಬೂಟಾಟಿಕೆ/ಆಚರಣೆಗಳ ಹೆಸರಿನಲ್ಲ್ಲಿ ಶೋಷಣೆ ಎನಿಸುತ್ತಿದೆ.
ಯಾರಿಗೆ ಗೊತ್ತು? ಇದೂ ಆದ್ಯಾಶಕ್ತಿಯ ನಾಟಕದ ಒಂದು ಭಾಗವೇ ಇರಬಹುದೆನಿಸುತ್ತದೆ. ಯಾವುದು ಚರಮಸೀಮೆ ದಾಟುತ್ತದೆಯೋ ಆಗ ಬದಲಾವಣೆಯ ಪರ್ವ ಆರಂಭವಾಗುತ್ತದೆ. ಅಂತಹದೊಂದು ಹೊಸಪರ್ವದ ಮುನ್ನುಡಿಯೂ ನವರಾತ್ರಿಯಾಗಲಿ ಎಂದು ಆಶಿಸುತ್ತೇನೆ.