ಮಂಗಳವಾರ, ಜನವರಿ 19, 2016

ಮುರಿದ ಎದೆಯಲ್ಲಿ ಕಟ್ಟಬಹುದೆ ಗೂಡು?

               ೫ ವರ್ಷಗಳ ಹಿಂದಿನ ಮಾತು. ನನ್ನಲ್ಲೊಂದು ಪ್ರಕರಣ ಬಂದಿತ್ತು. ಮಧ್ಯವಯಸ್ಸಿನ ಗಂಡಸು ಆತ. ಮೂರು ಮಕ್ಕಳ ತಂದೆ. ಹೀಗಿದ್ದೂ ಯಾವುದೋ ಘಳಿಗೆಯಲ್ಲಿ ಹೊಸ ಸಂಬಂಧವೊಂದು ಬೆಳೆದಿತ್ತು. ವಾರಕ್ಕೊಮ್ಮೆ ಕೆಲಸ ಎಂದು ಹೋಗಿ ರಾತ್ರಿ ಉಳಿದು ಬೆಳಿಗ್ಗೆ ಬಂದು ಹೆಂಡತಿಯೊಂದಿಗೆ ಖುಷಿಯಿಂದ ಇರುವ ಜೀವನ!  ದೊಡ್ಡ ಮಗನಿಗೆ ಇದೆಲ್ಲ ಗೊತ್ತಾಗಿ ಖುದ್ದು ತಂದೆಯನ್ನು ಆಕೆಯೊಂದಿಗೆ ಮದುವೆ ಮಾಡಿಸಲು ಹೊರಟಿದ್ದ. ಅದಕ್ಕಾಗಿ ಆಕೆಯೊಂದಿಗೆ ಮಾತು ಕತೆಯೂ ಆಗಿತ್ತು. ಸೋ಼ಷಿಯಲ್ ಆದ ಸ್ಫುರದ್ರೂಪಿ ತಂದೆಗೂ ಆಕೆಗೂ ಹೇಳಿ ಮಾಡಿಸಿದ ಜೋಡಿ, ಗುಗ್ಗು, ಭಾವನಾ ಶೂನ್ಯ ತಾಯಿಯೊಂದಿಗೆ ಎಷ್ಟು ದಿನ ಹೆಣಗ್ಯಾಡ್ಯಾನು ಎಂದುಕೊಂಡು ತಂದೆಯ ಮದುವೆಯ ಮಾತು ಆಡಿದ್ದ. ಅದೊಂದು ದಿನ ವೃತ್ತಿಯ ಸೋಲು ಕಂಗೆಡಿಸಿ ಈ ಮಧ್ಯವಯಸ್ಸಿನ ತಂದೆ ಹಾಸಿಗೆ ಹಿಡಿದ. ದೊಡ್ಡ ಮಗ ತಂದೆಯನ್ನು ಹೇಗೋ ಬದುಕಿಸಿಕೊಂಡ. ಆದರೆ ಆಕೆಯ ನಡೆ ಇವನ ಮನಸ್ಸು ನೋಯಿಸಿತ್ತು. ಮದುವೆಗಾಗಿ ಮಾತನಾಡಿದ ಆಕೆ, ತಂದೆ ಮಲಗಿದ್ದಾನೆಂದು ಗೊತ್ತಾದ ಮೇಲೆ ಒಮ್ಮೆಯಾದರೂ ಕೊನೇಪಕ್ಷ ಕರೆ ಮಾಡಿ ಹೇಗಿದ್ದಾನೆ ಎಂದು ವಿಚಾರಿಸಿರಲಿಲ್ಲ. ಹೋಗಲಿ, ನೀವು ಹೇಗೆ ತಂದೆಯನ್ನು ನೋಡಿಕೊಳ್ಳುತ್ತೀರಿ, ನಗರದ ಆಸ್ಪತ್ರೆಯಲ್ಲಿ ಅಲ್ಲಿಯ ಜನಜೀವನ ಗೊತ್ತಿರುವ ನಾನು ಏನಾದರೂ ಸಹಾಯ ಮಾಡಲೆ? ಕೇಳಲಿಲ್ಲ. ಇವ ನನ್ನ ಬಳಿಗೆ ಬಂದ. ನಾನು ಹೇಳಿದೆ. ನೋಡು, ನಿನ್ನ ತಾಯಿ ಹಳ್ಳಿ ಗುಗ್ಗೇ ಇರಬಹುದು. ಆದರೆ ಆಕೆಗೆ ಬದ್ಧತೆ ಇದೆ. ಒಂದು ವೇಳೆ ಆಕೆ ಇಲ್ಲದಿದ್ದರೂ ನೀವು ಮಕ್ಕಳಿರುತ್ತೀರಿ. ಸಮಾಜ ಇರುತ್ತದೆ. ಒಂದು ವೇಳೆ ಆಕೆಯನ್ನು ನಂಬಿ ನೀನು ಅವಳೊಂದಿಗೆ ತಂದೆಯನ್ನು ಕಳಿಸಿಕೊಟ್ಟರೆ ಇಲ್ಲಿ ನಿನ್ನ ತಾಯಿ, ನಿಮ್ಮ ಬದುಕು ಬೀದಿಗೆ ಬರುತ್ತದೆ. ಅಲ್ಲಿ ಆಕೆ ಇವನನ್ನು ಜತನ ಮಾಡುತ್ತಾಳೆಂದು ಯಾವ ನಂಬಿಕೆ ಇದೆ? ಎಂದೆ. ಹೌದೆಂದ ಆತ ತಂದೆಯಿಂದ ಆಕೆಯನ್ನು ದೂರ ಮಾಡಿದ. ಇದಕ್ಕಾಗಿ ತಂದೆ ಈಗಲೂ ಈತನನ್ನು ಕಂಡರೆ ದ್ವೇಷ ಸಾಧಿಸುತ್ತಾನೆಂಬ ವಿಷಯ ಇತ್ತೀಚೆಗೆ ತಿಳಿಯಿತು. ಜೊತೆಗೆ ತಂದೆ ತಾಯಿಯ ಸಂಬಂಧ ಬಲವಂತದ ಮಾಘಸ್ನಾನ ಆಗಿದೆ ಎಂಬ ಸುದ್ದಿಯೂ ಬಂತು....
                ಹಾಗೇ ಸುಮಾರು ೧೩ ವರ್ಷಗಳ ಹಿಂದಿನ ಮಾತು. ಆತ ಬೆಳಿಗ್ಗೆ ಹೋದರೆ ರಾತ್ರಿ ಬರುವ ಕೆಲಸದಲ್ಲಿದ್ದ. ಬಹಳ ಜವಾಬ್ದಾರಿಯ ಕೆಲಸ. ಆತ ಹೆಚ್ಚೂ ಕಡಿಮೆ ವರ್ಕೊ ಹಾಲಿಕ್. ಮನೆಗೊಬ್ಬ ಕೈಯಲ್ಲಿ ಕೆಲಸವಿಲ್ಲದ ಗೆಳೆಯ ಬಂದ. ಆತ ಈತನ ಹೆಂಡತಿಯನ್ನು ಅಕ್ಕ ಅಕ್ಕ ಎಂದು ಸುತ್ತಿ ಕೆಲಸ ಮಾಡಿಕೊಟ್ಟು ಮನಗೆದ್ದು ಬಿಟ್ಟ. ಹೆಂಡತಿ ಸದಾ ಆತನ ಜಪ ಮಾಡತೊಡಗಿದಳು. ವಿಚಾರಿಸಿದರೆ ನಮ್ಮದು ತಾಯಿ, ಮಗನಂತ ಸಂಬಂಧ, ನನ್ನ ಮೇಲೇ ಅನುಮಾನ ಪಡುತ್ತೀಯಾ? ಎಂದಳು. ಈತನಿಗೆ ನುಂಗಲಾರದ ತುತ್ತಾದಾಗ ಬಾರುಗಳಿಗೆ ಅಲೆದಾಡತೊಡಗಿದ. ಕೊನೆಗೊಂದು ದಿನ ಗೆಳೆಯ ಬೇರೆ ಮದುವೆಯಾಗಿ ಹೋದ. ಈತ ಖುಷಿಯಾಗಿ ಹೆಂಡತಿಯ ಬಳಿಗೆ ಹೋದ. ಕತ್ತೆಯಂತಹ ನಿನಗೆ ಮೂರು ಹೊತ್ತು ಅದೇ ಧ್ಯಾನ ಎಂದು ದೂರವಿಡುವ ಪ್ರಯತ್ನ ಮೊದಲಾಯಿತು. ಆ ನಂತರ ಈತನೂ ಹೊರಗೆ ಕಾಲಿಟ್ಟ. ಆದರೂ ಇಬ್ಬರಲ್ಲಿ ಯಾರೂ ಎದ್ದು ಹೋಗಲಿಲ್ಲ. ಒಂದೇ ಸೂರಿನಡಿ ಸಾರವಿಲ್ಲದ ಸಂಸಾರ! ಇಬ್ಬರಲ್ಲಿ ಯಾರೂ ಎದ್ದು ಹೋಗದೇ ಒಬ್ಬರಿಗೊಬ್ಬರ ಖುಷಿಗೆ ಸ್ಪರ್ಧಿಗಳಂತೆ ವಿಘ್ನ ಸಂತೋಷಿಗಳಾಗಿ ಬದುಕುವುದು ನೋಡಿದಾಗ ನನಗೆ ‘ಅಯ್ಯೊ ಪಾಪ’ ಎನಿಸುತ್ತದೆ.
                 ಇವೆರಡು ಉದಾಹರಣೆಗಳು ಮಾತ್ರ. ಕಸ್ತೂರಿ ವಾಹಿನಿಯಲ್ಲಿ  ‘ಇದು ಯಾರು ಬರೆದ ಕಥೆಯೋ’ ಮಾಡುವಾಗ ಇಂಥ ಸಾಕಷ್ಟು ಪ್ರಕರಣಗಳನ್ನು ನೋಡಿದ್ದ ನನಗೆ ಅರ್ಥವಾಗಿದ್ದಿಷ್ಟು. ಲವ್ ಮ್ಯಾರೇಜ್, ಅರೇಂಜ್ ಮ್ಯಾರೇಜ್, ಅಧಿಕೃತ, ಅನಧಿಕೃತ  ಯಾವುದೇ ಇರಲಿ, ಪ್ರೀತಿ ಇಲ್ಲದ ಮೇಲೆ ಯಾವ ಕಾನೂನು, ಸಮಾಜ, ಚಾನೆಲ್ಲು ಸಹ ಹೃದಯಗಳನ್ನು ಬೆಸೆಯಲಾರವು. ಬದಲಿಗೆ ವ್ಯಕ್ತಿಗೆ, ಆ ಮೂಲಕ ಸಮಾಜಕ್ಕೆ ಹೊಸ ಭಾರವನ್ನು ಮಾತ್ರ ಹುಟ್ಟುಹಾಕಬಲ್ಲವು.
                ಇಂತಹ ಸಮಸ್ಯೆ ಹುಟ್ಟಲು ಮೊದಲನೆಯ ಕಾರಣ ಸಂಗಾತಿಯ ತಪ್ಪು ಆಯ್ಕೆ. ತಾವೇನು, ತಮ್ಮ ಅಗತ್ಯತೆ ಏನು ಎಂಬ ಸ್ಪಷ್ಟ ಕಲ್ಪನೆ ಇಲ್ಲದೆ, ಎದುರಿನ ವ್ಯಕ್ತಿಯ ಸೌಂದರ್ಯ, ಸ್ಟೇಟಸ್, ತನ್ನಂತೆಯೇ ಆತ/ಆಕೆ ಎಂಬ ಸೆಲ್ಫ್ ಅಸ್ಯೂಮ್ಡ್ ಸಾಮ್ಯತೆ, ದೌರ್ಬಲ್ಯಗಳನ್ನು ಪರಿಗಣಿಸದೆ ಕೇವಲ ಗುಣಗಳನ್ನು ನೋಡಿ ತೆಗೆದುಕೊಳ್ಳುವ ತೀರ್ಮಾನಗಳು ಮುಂದೆ ಎರಡನೆಯ ಆಯ್ಕೆಗೆ ಮೊದಲ ಅಡಿಗಲ್ಲಾಗುತ್ತವೆ. ಮದುವೆಯಾದ ನಂತರ ಈ ಎಲ್ಲ ಭ್ರಮೆಗಳು ಕಳಚಿ ಬಿದ್ದರೆ ದೌರ್ಬಲ್ಯಗಳು ದೊಡ್ಡದಾಗಿ ಕಾಣಿಸುತ್ತವೆ. ಜೊತೆಗೆ ಬದುಕುವುದು ಅಸಾಧ್ಯವಾದಾಗ ಮನಸ್ಸು ಹೊಸ ಕನಸೊಂದನ್ನು ಕಾಣುವ ಆಸೆ ವ್ಯಕ್ತಪಡಿಸುತ್ತದೆ. ಈ ಹುಡುಕಾಟದಲ್ಲಿ ದೊಡ್ಡ ಸಮಸ್ಯೆಯೆಂದರೆ ಅದಾಗಲೆ ಸೆಕೆಂಡ್ ಹ್ಯಾಂಡ್ (ಈ ಶಬ್ದ ಯಾಕೆ ಬಳಸುತ್ತೇನೆ ಎಂದರೆ ನಮಗೆಲ್ಲ ನಾವು ಹೇಗೇ ಇರಲಿ, ಮೊದಲನೆಯ ಮದುವೆಯಾಗಬೇಕು, ಹುಡುಗ/ಹುಡುಗಿಗೆ ಮಕ್ಕಳಿರಬಾರದು, ನಮ್ಮ ವಯಸ್ಸಿನ ಆಸುಪಾಸು ಇರಬೇಕು, ಸುಂದರವಾಗಿರಬೇಕು, ವಿದ್ಯೆ, ರೂಪ, ಐಶ್ವರ್ಯಗಳಲ್ಲಿ ನಮಗಿಂತ ಮೇಲ್ಮಟ್ಟದಲ್ಲಿರಬೇಕು ಹೀಗೆ ಹತ್ತಾರು ಮನುಷ್ಯ ಸಹಜ ನಿರೀಕ್ಷೆಗಳು ಹಾಗೂ ಅದಕ್ಕೆ ನಾನು ತಕ್ಕವ ಎಂಬ ಸುಳ್ಳು ಅಹಮಿಕೆಯೂ ಇರುತ್ತದೆ.)

ಆಗಿರುವ, ಸಮಾಜದ ಭದ್ರಕೋಟೆಯಿಂದ ಎದ್ದು ಬರುತ್ತಾನೋ/ ಇಲ್ಲವೋ ಎಂಬ ಅನುಮಾನದಿಂದಾಗಿ ಮೂರನೆಯ ವ್ಯಕ್ತಿಯ ಪ್ರೀತಿಯೂ ಅರ್ಧಸತ್ಯವೇ ಆಗಿಬಿಡುತ್ತದೆ. ಈ ಅರ್ಧಸತ್ಯದ ಬದುಕು ಕೊನೆಯಾದಾಗ ವ್ಯಕ್ತಿ ಮೊದಲ ಸಂಗಾತಿಯ ಹತ್ತಿರವೇ ಹೋಗುವುದು ಅನಿವಾರ್ಯವಾಗುತ್ತದೆ. ಹಾಗೆ ಹೋದಾಗ ಬಹುತೇಕ ಸಂದರ್ಭಗಳಲ್ಲಿ ಈ ವ್ಯಕ್ತಿಗೆ ಪ್ರೀತಿಯಲ್ಲಿ ಕಳೆದ ನೆನಪುಗಳು ಪ್ಯಾಚ್ ಅಪ್ ಮಾಡಿಕೊಳ್ಳಲು ಬಿಡಲಾರವು. ಅದೇ ವೇಳೆ ಬೇರೆ ಎದೆ ಗೂಡಿನಿಂದ ಹಾರಿ ಬಂದ ಹಕ್ಕಿಯನ್ನು ಒಳಸೇರಿಸಲು ಅದಾಗಲೇ ಇರುವ ಹಕ್ಕಿಯ ಮನಸ್ಸೊಪ್ಪದು.
             ಪ್ರಾಮಾಣಿಕ, ಉತ್ಕಟ, ನಿರಪೇಕ್ಷ ಪ್ರೀತಿ ಇಲ್ಲದಿದ್ದರೆ ಉಸಿರುಗಟ್ಟಿಸುವ ವಾತಾವರಣದಿಂದ ಹೊರಬರುವ ಶಕ್ತಿ ಇರುವುದಿಲ್ಲ. ಯಾಕೆಂದರೆ ಅಲ್ಲೊಂದು ಲೆಕ್ಕಾಚಾರ ಇರುತ್ತದೆ. ಇಬ್ಬರಿಗೂ ಸ್ವ ರಕ್ಷಣೆಯ ಪ್ರಜ್ಞೆ ಇರುತ್ತದೆ.  ತಪ್ಪಿಲ್ಲದ ನಾನು ಏಕೆ ಎದ್ದು ಬರಬೇಕು? ಮದುವೆ ಕೊಟ್ಟ ನನ್ನ ಹಕ್ಕನ್ನು ನಾನು ಚಲಾಯಿಸಿಯಾದರೂ ಆತ/ಆಕೆಯನ್ನು ನಿಯಂತ್ರಣ ದಲ್ಲಿಟ್ಟುಕೊಳ್ಳುತ್ತೇನೆ, ಸಂಸಾರ ಉಳಿಸಿಕೊಳ್ಳುತ್ತೇನೆ ಎಂದು ಒಬ್ಬರು ಒದ್ದಾಡುತ್ತಾರೆ. ಇನ್ನೊಬ್ಬರು ಮೂರನೆಯ ವ್ಯಕ್ತಿ ಕೈಕೊಟ್ಟರೆ ಇದೆಂತೂ ಇದ್ದೇ ಇರುತ್ತದೆಯಲ್ಲ ಎಂಬುದು, ತನಗೇ ಸರಿಯಾಗಿ ಗೊತ್ತಿಲ್ಲ, ತಾನು ಮೂರನೆಯ ವ್ಯಕ್ತಿಯನ್ನು ಪ್ರೀತಿಸುತ್ತೇನೋ/ಆಕರ್ಷಣೆಯಲ್ಲಿದ್ದೇನೋ ಎಂಬುದು, ಸಮಾಜ, ಮಕ್ಕಳು, ದೊಡ್ಡವರು ಏನಂತಾರೆ ಗೊತ್ತಾದರೆ?,  ತಾವೇ ಕಟ್ಟಿಕೊಂಡ ಪ್ರತಿಷ್ಠೆ ಹಾಳಾಗುತ್ತದೆ ಎಂಬ ಮನೋಭಾವ ಹೀಗೆ ಸಾಕಷ್ಟು ಕಾರಣಗಳಿಂದ ಬೇಡದ ಮದುವೆಯಿಂದ ಎದ್ದು ಬರಲಾರರು. ಇಂತಹ ಹೇತಲಾಂಡಿಗಳು ಗಂಡ/ಹೆಂಡತಿಯನ್ನು ಟ್ರಂಪ್ ಕಾರ್ಡ್ ನಂತೆ ಉಪಯೋಗಿಸುವುದು ಹೊಸ ಟ್ರೆಂಡೇನಲ್ಲ. ನನ್ನ ಹೆಂಡತಿಗೆ ಹುಷಾರಿಲ್ಲ, ಅವಳೇನೋ ಒಳ್ಳೆಯವಳೇ, ಆದರೆ ಪಾಪ ಹಳ್ಳಿ ಗುಗ್ಗು, ಅವಳು ಸರಿಯಿಲ್ಲ, ನನಗೆ ಸ್ಪಂದಿಸುವುದಿಲ್ಲ ಹೀಗೆ ಹತ್ತಾರು ಕತೆಗಳನ್ನು ಪುರುಷರು, ಅವನು ನನಗೆ ತಕ್ಕವನಲ್ಲ, ಬೇಜವಾಬ್ದಾರಿ, ಸಮಯ ಕೊಡುವುದಿಲ್ಲ, ಅರಸಿಕ, ವಯಸ್ಸಾದವ, ನೋಡಲು ಚೆನ್ನಾಗಿಲ್ಲ ಎಂಬಿತ್ಯಾದಿಗಳಿಂದ ಮಹಿಳೆಯರು ಕಥೆ ಕಟ್ಟುತ್ತಲೇ ಮೂರನೆಯವರಿಗೆ ಗಾಳ ಹಾಕುತ್ತಾರೆ. ಬಿದ್ದರೆ ಅರ್ಧಸತ್ಯದ ಬದುಕು ಸತ್ಯವೆಂಬಂತೆ ಬದುಕುತ್ತಾರೆ. ಅರ್ಧಸತ್ಯ ಪೂರ್ತಿಯಾಗುವುದಿಲ್ಲ ಎಂಬ ಅರಿವಾದಾಗ ಟ್ರಂಪ್ ಕಾರ್ಡ್ ಬಳಸಿ ಸ್ವಲ್ಪ ವಿಶ್ರಾಂತಿ....ಹಾಗೆ ಮತ್ತೆ ಗಾಳ ಹಾಕುವುದು ಶುರು.
              ನಿಯತ್ತಿಲ್ಲದ, ವಿಶ್ವಾಸವಿಲ್ಲದ, ದೃಢನಿರ್ಧಾರ, ಯಾತರ ಮೇಲೂ ನಂಬಿಕೆಯಿಲ್ಲದ ಇಂತಹ ಮಂದಿ ಹೆಚ್ಚಾಗುತ್ತಿರುವುದು ಇಂದಿನ ಸಾಮಾಜಿಕ ದುರಂತವೆಂದು ನಾನು ಭಾವಿಸುತ್ತೇನೆ. ೧೪ ವರ್ಷಗಳ ಹಿಂದೆ ಇಂತಹ ಸುಳಿಯೊಳಗೆ ನಾನು ಸಿಕ್ಕಿಕೊಂಡಾಗ ನನ್ನನ್ನು ಉಳಿಸಿದ್ದು ನನ್ನ ಉತ್ಕಟ ಮತ್ತು ಪ್ರಾಮಾಣಿಕ, ನಿಸ್ವಾರ್ಥ ಪ್ರೀತಿ. ಇಂದೂ ಸಹ ಸತ್ಯದ ಮೇಲೆ ಕಟ್ಟಿಕೊಂಡ ನನ್ನ ಖಾಸಗಿ ಬದುಕು ಅದರ ಆಧಾರದ ಮೇಲೇ ನಿಂತಿದೆ. ನನ್ನವನ ಮತ್ತೆ, ನನ್ನ ನಡುವಿನ ಅಲಿಖಿತ ಒಪ್ಪಂದಗಳಲ್ಲಿ ಪ್ರೀತಿಯ ಪ್ರಾಮಾಣಿಕತೆಯೂ ಒಂದು. ಅವನಿಗಾಗಲಿ, ನನಗಾಗಲಿ ಪರಸ್ಪರರಿಗಿಂತ ಬೇರೆಯವರ ಮೇಲೆ ಹೆಚ್ಚು ಪ್ರೀತಿ ಉಂಟಾದರೆ ಪ್ರಾಮಾಣಿಕವಾಗಿ ಹೇಳುವ ಸ್ವಾತಂತ್ರ್ಯ ಮತ್ತು ಬಿಡುಗಡೆಗೆ ಮುಕ್ತ ಅವಕಾಶವಿದೆ. ಅಂತಹದೊಂದು ಸಂದರ್ಭ ಬಂದು ಆತನ ಕಣ್ಣಿನಲ್ಲಿ ನನ್ನ ಬಿಂಬ ಕಾಣಿಸದಿದ್ದರೆ ನಾನು ಸದ್ದಿಲ್ಲದೆ ಎದ್ದು ಹೋಗುವವಳು ಎಂಬುದೂ ಆತನಿಗೆ ಅರಿವಿದೆ. ನನ್ನ ಹೊರತು ಇನ್ಯಾವ ಹೆಣ್ಣೂ ನನ್ನವನ ಪ್ರೀತಿ ಗಳಿಸಿಕೊಳ್ಳುವುದು ಸುಲಭದ ಮಾತಲ್ಲ ಎಂಬ ವಿಶ್ವಾಸ ನನ್ನ ದೇವರು ನನಗಾಗಿ ಮಾಡಿದ ಆಯ್ಕೆಯ ಮೇಲಿದೆ. ಅದೊಂದು ಆತ್ಮಬಲದಿಂದ ನಾನು ವಿನಂತಿಸುತ್ತೇನೆ, ಸುಂದರ ಬದುಕಿಗಾಗಿ ನೀವು ಹಂಬಲಿಸುತ್ತಿದ್ದರೆ ಪ್ರಾಮಾಣಿಕರಾಗಿರಿ, ಕೊನೇಪಕ್ಷ ನಿಮ್ಮ ಹೃದಯಕ್ಕಾದರೂ. ಏನನ್ನೋ ಕಳೆದುಕೊಳ್ಳುವ ಭೀತಿಯಿಂದ ಅಪ್ರಮಾಣಿಕರಾಗುತ್ತ ಹೋದಂತೆ ನಿಮ್ಮ ಬದುಕು, ಮನಃಶಾಂತಿಯೊಂದೇ ಅಲ್ಲ, ಉಳಿದ ಎರಡು ಜೀವಗಳ ಬದುಕು, ಮನಃಶಾಂತಿಯನ್ನು ಸಹ ನಾಶ ಮಾಡುತ್ತೀರಿ. ನೆನಪಿರಲಿ.