ಗುರುವಾರ, ಅಕ್ಟೋಬರ್ 30, 2014

ದೈಹಿಕ ಆಸೆ ಹಣ ತರುವ ವಿಧಾನಗಳಲ್ಲೊಂದಾದಾಗ....

ನನ್ನ ದೃಷ್ಟಿಯಲ್ಲಿ ದೈಹಿಕ ಕಾಮನೆ ಬಹಳ ಉನ್ನತವಾದದ್ದು. ಇದರ ಬಗ್ಗೆ ಸ್ವಲ್ಪ ಹೆಚ್ಚಿನ ಗೌರವವನ್ನೇ ಇಟ್ಟುಕೊಂಡಿದ್ದೇನೆ. (ನನ್ನನ್ನು ಮಡಿವಂತೆ ಎಂದು ಹೀಗಳೆಯುವ ಮಂದಿಯೂ ಇದ್ದಾರೆ, ಅದರಿಂದ ನನಗೇನೂ ತೊಂದರೆಯಿಲ್ಲ, ಆ ವಿಷಯ ಬೇರೆ) ಆದ್ದರಿಂದ ನನಗೆ ಈ ತಲೆಬರಹ ಯಾವಾಗಲೂ ಹೆಚ್ಚು ಕಾಡುತ್ತದೆ.

ದೈಹಿಕ ಕಾಮನೆಗಳು ಮಾರಾಟಕ್ಕೂ ಇರುತ್ತವೆ ಎಂದು ನನಗೆ ಅರಿವಾದಾಗ ೧೯ ವರ್ಷ. ಆ ನಂತರ ಹೆಚ್ಚು ಹೆಚ್ಚು ಜಗತ್ತನ್ನು ನೋಡಿದಂತೆಲ್ಲ ನನಗೆ ಈ ವಿಷಯ ಹೆಚ್ಚು ಹೆಚ್ಚು ಅರ್ಥವಾಗುತ್ತ ಮತ್ತು ಸದಾ ಮನುಷ್ಯರ ಬಗ್ಗೆ ಒಂದು ರೀತಿಯ ಅನುಮಾನ ಕಾಡತೊಡಗಿತು. ಈ ವಿಷಯದಲ್ಲಿ ಮನು ಹೇಳುವ ಮಾತನ್ನು ನಾನು ಒಪ್ಪಿಕೊಳ್ಳುತ್ತೇನೆ, ಹೆಣ್ಣಿಗೆ ಬಾಲ್ಯದಲ್ಲಿ ತಂದೆಯೂ, ವಯಸ್ಸಿನಲ್ಲಿ ಗಂಡನೂ ಮತ್ತು ವೃದ್ಧಾಪ್ಯದಲ್ಲಿ ಮಕ್ಕಳೂ ರಕ್ಷಣೆಗೆ ಇರಬೇಕು. ಆದರೆ ಇಂದು ಇದು ದೈಹಿಕ ಯಾ ಸಾಮಾಜಿಕ ರಕ್ಷಣೆಯಲ್ಲ, ಬದಲಿಗೆ ಹಣದ ಬಲ. ಯಾವ ಹೆಣ್ಣುಮಕ್ಕಳ ತಂದೆ/ಗಂಡ/ಮಗ ಇವರಲ್ಲಿ ಹಣವಿರುವುದಿಲ್ಲವೋ ಅವರು ಅಕ್ಷರಶಃ ಬೀದಿಗೆ ಬಂದು ಬಿಡುತ್ತಾರೆ. ಈ ಪುರುಷರು ಯಾವ ಮಟ್ಟದ ಜೀವನವನ್ನು ನಡೆಸುತ್ತಾರೆ ಎನ್ನುವುದನ್ನು ಈ ದಂಧೆ ಅವಲಂಬಿಸಿರುತ್ತದೆ. ಬಡ ತಂದೆಯ ಮಗಳಾದರೆ ರಾಜಾರೋಷವಾಗಿ ಮಾರಾಟವಾಗುತ್ತಾಳೆ. ಮಧ್ಯಮ ವರ್ಗದ ತಂದೆ/ಪತಿಯಾಗಿದ್ದರೆ ಅವ ತನ್ನದೇ ರೀತಿಯಲ್ಲಿ ಈ ವಿಷಯವನ್ನು ನಿಭಾಯಿಸುತ್ತಾನೆ. ಮಗನಾದರೂ ಉದ್ದೇಶ ಪೂರ್ವಕವಾಗಲ್ಲದಿದ್ದರೂ ಬೇಜವಾಬ್ದಾರಿಯಾದಾಗ ಅವನೂ ತಾಯಿಯ ಮಾರಾಟಕ್ಕೆ ಕಾರಣವಾಗುತ್ತಾನೆ. ಹೆಚ್ಚಿನ ಸಂದರ್ಭದಲ್ಲಿ ಪುರುಷರು ಉದ್ದೇಶಪೂರ್ವಕವಾಗಿ ಮಾರಾಟ ಮಾಡುವುದಿಲ್ಲ, ಬದಲಿಗೆ ತಮ್ಮ ಮೇಲಿನ ಜವಾಬ್ದಾರಿಯ ಒತ್ತಡವನ್ನು ಹೀಗೂ ಇಳಿಸಿಕೊಳ್ಳುತ್ತಾರೆ ಎನ್ನಬಹುದು. ಒಟ್ಟಿನಲ್ಲಿ ಇಲ್ಲಿ ಮಾರಾಟ ಮಾಡುವ ಮತ್ತು ಕೊಳ್ಳುವ ಇಬ್ಬರೂ ಪುರುಷರೇ ಆಗಿರುತ್ತಾರೆ. ಇಲ್ಲಿ ಮಾರಾಟ ಮಾಡುವವ ಅತಿ ಆಸೆ ಉಳ್ಳ, ಆದರೆ ಏನೂ ಮಾಡಲು ಅಸಹಾಯಕನಾಗಿರುವ ಬಡ ರೈತ, ವ್ಯಾಪಾರಿ, ಮೇಷ್ಟ್ರು ಹೀಗೆ ಯಾರೂ ಆಗಬಹುದು. ಹಾಗೆಯೇ ಇಲ್ಲಿ ಕೊಂಡುಕೊಳ್ಳುವವರು ಧನಿಕರು, ಪ್ರಭಾವಿಗಳು, ಜನಬೆಂಬಲ ಇರುವವರೂ ಆಗಿರುತ್ತಾರೆ. ಯಾರದ್ದು ತಪ್ಪು, ಯಾರದ್ದು ಸರಿ? ನಿರ್ಧಾರ ನಿಮಗೆ ಬಿಟ್ಟದ್ದು.

ಇನ್ನೊಂದೆಡೆ ದೈಹಿಕ ಹಂಬಲವನ್ನು ಮಾರಾಟ ಮಾಡಿ ತಮ್ಮ ಮಹತ್ವಾಕಾಂಕ್ಷೆಗಳನ್ನು ಈಡೇರಿಸಿಕೊಳ್ಳುವ ಹೆಣ್ಣುಮಕ್ಕಳೂ ಇದ್ದಾರೆ. ಈ ಮಾರಾಟ ಯಾವ ಬಗೆಯಲ್ಲೇ ಇರಲಿ, ಇದು ನಮ್ಮದೇ ಆತ್ಮಕ್ಕೆ ಮಾಡಿಕೊಳ್ಳುವ ಆಘಾತ.  ಅಂತರ್ ವಿದ್ಯೆಯ ಶ್ರೇಷ್ಠ ಅಧ್ಯಯನಕಾರ ಮತ್ತು ಗುರು ಮಾಸ್ಟರ್ ಚಾ ಕೊ ಕ್ಸಿ ಒಂದೆಡೆ ಬರೆಯುತ್ತಾರೆ, ಸಂಭೋಗ ಎನ್ನುವುದು ಕೇವಲ ದೈಹಿಕ ಆಸೆಯಲ್ಲ, ಅದು ಆತ್ಮೋದ್ಧಾರದ ಸಾಧನವೂ ಹೌದು. ಎಲ್ಲಿಯವರೆಗೆ? ಇದು ಮುಖ್ಯವಾದ ಪ್ರಶ್ನೆ. ಎಲ್ಲಿಯವರೆಗೆ ಎಂದರೆ ಎರಡು ಸಂಪೂರ್ಣ ಒಪ್ಪಿತ ದೇಹಗಳು ಒಂದಾಗುವುದು ಮಾತ್ರವಲ್ಲ, ಎರಡು ಪರಿಶುದ್ಧ ಆತ್ಮಗಳ ಪ್ರಭಾವಲಯಗಳ ವರ್ಗಾವಣೆಯೂ ಈ ಕ್ರಿಯೆಯಲ್ಲಿ ನಡೆಯುತ್ತದೆ. ಹಾಗಾಗಿ ಇಲ್ಲಿ ನಮ್ಮ ವ್ಯಕ್ತಿತ್ವದ ಪರಿಶುದ್ಧತೆಯ ಜೊತೆಗೆ ಒಂದಾಗುವ ವ್ಯಕ್ತಿತ್ವದ ಪರಿಶುದ್ಧತೆಯೂ ಮುಖ್ಯ. ಆತ/ಆಕೆ ಕಳ್ಳ, ಸುಳ್ಳ, ಅಪ್ರಮಾಣಿಕ, ದುಷ್ಟಬುದ್ಧಿಯುಳ್ಳವ, ಕೇಡು ಬಗೆಯುವ, ಈರ್ಷ್ಯೆ ಪಡುವವ ಹೀಗೆ ಯಾವುದೇ ಬಗೆಯ ಅಶುದ್ಧತೆಯಿದ್ದರೂ ಅದು ಇಬ್ಬರನ್ನೂ ನಾಶಮಾಡುತ್ತದೆ. ಅದಕ್ಕಾಗಿಯೇ ದೇಹದ ಆಸೆಯನ್ನು ಹಂಚಿಕೊಳ್ಳುವ ಮುನ್ನ ಎರಡೂ ಕಡೆಯಿಂದ ಒಪ್ಪಿಗೆಗಿಂತಲೂ ಪರಸ್ಪರ ಪ್ರೀತಿ, ಪ್ರೇಮ, ಗೌರವಗಳು ಮೂಡಬೇಕು. ಹಾಗೆ ಒಳ್ಳೆಯ ಭಾವನೆಗಳು ಪರಸ್ಪರರೆಡೆಗೆ ಮೂಡುವ ವ್ಯಕ್ತಿತ್ವಗಳು ಒಂದಾದರೆ ಅದು ಪೂಜೆಯಾಗುತ್ತದೆ. ಇಲ್ಲದಿದ್ದರೆ ಅಧಃಪತನ ನಿಶ್ಚಿತ.

ಆದರೆ ಇಂದು ತಾಂತ್ರಿಕ ಸೆಕ್ಸ್ ಹೆಸರಲ್ಲಿ, ನಾನು ಹಣ ಕೊಡುತ್ತೇನೆ, ನಿನ್ನನ್ನು ಯಶಸ್ವಿ ಮಾಡುತ್ತೇನೆ, ಹೀಗೆ ಹತ್ತು ಹಲವು ಆಮಿಷಗಳಿಂದ, ಆಸೆಗಳಿಂದ, ದುರಾಸೆಯಿಂದ ನಡೆಯುವ, ಹೆಂಡತಿ/ಗಂಡ ಪರಿಶುದ್ಧರಾಗಿಲ್ಲದಿದ್ದರೆ/ಒಳ್ಳೆಯವರಲ್ಲದಿದ್ದರೆ ನಡೆಯುವ ಭೋಗ ನಿಜವಾಗಿಯೂ ಮನುಷ್ಯನಿಗೆ ಶಾಪ.  ಈ ಬಗ್ಗೆ ಪ್ರತಿ ತಂದೆ-ತಾಯಿ, ಗಂಡ - ಹೆಂಡತಿ ಅರಿಯಬೇಕು. ಮದುವೆಯಾಗುವ ಹುಡುಗ, ಹುಡುಗಿಯರು ಅರಿಯಬೇಕು. ಎಲ್ಲಕ್ಕಿಂತಲೂ ಹೆಚ್ಚು ಎಲ್ಲರೂ ದೈಹಿಕ ಕಾಮನೆಯೆಂಬುದು ಹಣ ಕೊಡಿಸುವ ದಂಧೆಯಲ್ಲ, ಸ್ಥಾನ ಕೊಡಿಸುವ, ಆಸೆ ತೀರಿಸುವ ಒಂದು ಸಾಧನವಲ್ಲ ಎನ್ನುವುದನ್ನು ತಿಳಿಯಬೇಕು. ಹೀಗೆ ಅರಿಯುವ ಆಸೆ ಮೂಡಬೇಕಿದ್ದರೆ ಅದಮ್ಯ ಜೀವನಪ್ರೀತಿ ಮತ್ತು ಸ್ವಲ್ಪ ಪಾರಮಾರ್ಥಿಕತೆ ಬೇಕು. ಎಲ್ಲದಕ್ಕೂ ಮೊದಲು `ಹೆಜ್ಜೆ ಹೆಜ್ಜೆಗೂ ಹೊನ್ನೆ ಸುರಿಯಲಿ., ಗೆಜ್ಜೆಪೂಜೆಯ ಉರುಳಿಗೆ ಕೊರಳನೆಂದೂ ನೀಡೆನು' ಎನ್ನುವ ಹಠ ಪ್ರತಿ ಹೆಣ್ಣಿಗೆ ಹುಟ್ಟಬೇಕು. ಇದು ಎಲ್ಲಿಯವರೆಗೆ ಸಾಧ್ಯವಿಲ್ಲವೋ ಅಲ್ಲಿಯವರೆಗೆ ಈ ದೈಹಿಕ ವ್ಯಾಪಾರಕ್ಕೆ ಕೊನೆಯಿಲ್ಲ...... ಕಾಮಿಣೀ, ಕಾಮರೂಪಿಣಿಯಾದ ಶ್ರೀರಾಜರಾಜೇಶ್ವರಿ ಎಲ್ಲ ಹೆಣ್ಣುಮಕ್ಕಳಿಗೂ ಈ ಬಗೆಯ ಹಠ ನೀಡಲಿ, ಎಲ್ಲರೂ ದೌರ್ಜನ್ಯಗಳಿಂದ ಮುಕ್ತರಾಗಲಿ, ಎಲ್ಲ ಹೆಣ್ಣುಮಕ್ಕಳ ಮುಖದಲ್ಲೂ ನಿಜಸಂತೋಷ ಅರಳಲಿ.. 

ಕಾಮೆಂಟ್‌ಗಳಿಲ್ಲ: