ಶನಿವಾರ, ಸೆಪ್ಟೆಂಬರ್ 14, 2013

ಮೋದಿಯನ್ನೇ ಆಯ್ದುಕೊಳ್ಳಲು ಏನಿರಬಹುದು ಕಾರಣ?

ಮೋದಿಯನ್ನೇ ಆಯ್ದುಕೊಳ್ಳಲು ಏನಿರಬಹುದು ಕಾರಣ?

ನಿನ್ನೆ ಮೋದಿ ರಾಷ್ಟ್ರೀಯ ಪಕ್ಷವೊಂದರ ಭಾವೀ ಪ್ರಧಾನಿ ಅಭ್ಯರ್ಥಿ ಎಂಬ ಘೋಷಣೆಯೊಂದಿಗೆ ಎಲ್.ಕೆ.ಅಡ್ವಾಣಿಯೆಂಬ ಹಿರಿಯ ಆಕಾಂಕ್ಷಿಗೆ ಅಂತಿಮ ಅವಕಾಶದ ಬಾಗಲು ಮುಚ್ಚಿಬಿಟ್ಟಿತು. ಯಾವುದೇ ಒಂದು ವ್ಯವಸ್ಥೆಯಲ್ಲಿ ಕೇವಲ ಹಿರಿಯತನ ಮಾತ್ರ ಚುಕ್ಕಾಣಿ ಹಿಡಿಯಲು ಮಾನದಂಡವಾಗುವುದಿಲ್ಲ. ಅದರೊಂದಿಗೆ ನಾಯಕತ್ವದ ಗುಣ, ನಿರ್ಧಾರಗಳನ್ನು ತೆಗೆದುಕೊಳ್ಳುವ, ತನ್ನನ್ನು ತಾನು ನಂಬುತ್ತಲೇ ಉಳಿದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ, ಹಾಗೆಯೇ ಒಂದು ವೇಳೆ ಅನಿವಾರ್ಯವಿದ್ದರೆ ಎಲ್ಲವನ್ನೂ ಪಕ್ಕಕ್ಕಿಟ್ಟು, ಎಲ್ಲರನ್ನೂ ಪಕ್ಕಕ್ಕಿಟ್ಟು ವ್ಯವಸ್ಥೆಯನ್ನು ಮುಂದುವರೆಸಿಕೊಂಡು ಹೋಗುವ ಚಾಕಚಕ್ಯತೆ ಬೇಕು. ಹೀಗೆ ಹಲವು ಗುಣಗಳನ್ನು ನೋಡಿದಾಗ  ಈ ಇಬ್ಬರೂ ನಾಯಕರಿಗೆ ಈ ಎಲ್ಲ ಗುಣಗಳಿವೆ. ಹಾಗಿದ್ದರೆ ತಪ್ಪಾಗಿದ್ದು ಎಲ್ಲಿ?

ಅಡ್ವಾನಿ ಮಧ್ಯಮವರ್ಗದ (ಬಹುತೇಕ ಶ್ರೀಮಂತ) ಹಿನ್ನೆಲೆಯಿಂದ ಬಂದವರು. ಆದರೆ ಮೋದಿ ಸಮಾಜದ ಕೆಳವರ್ಗದಿಂದ ಪ್ರತಿ ಕಷ್ಟಗಳನ್ನು ಕಂಡು, ಉಂಡು ಕಷ್ಟಗಳಿಗೆ ಪಕ್ವವಾದವರು. ಯಾರು ಹೆಚ್ಚು ಕಷ್ಟಗಳನ್ನು ಕಂಡಿರುತ್ತಾರೋ ಅವರಿಗೆ ಎಂತಹ ಅಡೆತಡೆಗಳನ್ನೂ ದಾಟಿ ಓಡುವ ಸಾಮರ್ಥ್ಯ  ಬರುತ್ತದೆ. ಇದು ಒಂದು. ಇನ್ನೊಂದು ಡಾರ್ಕ್ ನೈಟ್ ರೈಡರ್ಸ್ ನಲ್ಲಿ ತೋರಿಸುವಂತೆ ಬಡತನದಲ್ಲಿ ಬೆಳೆದ ಮೋದಿ ಹಗ್ಗವಿಲ್ಲದೇ ಬಾವಿಯನ್ನು ಹತ್ತಬಲ್ಲವರು. ಅಂದರೆ ಕಂಫರ್ಟ್ ಜೋನ್ನಿಂದ ಹೊರಗೆ ಬಂದು ಎದ್ದು ನಿಲ್ಲುವವರು. ಇದಕ್ಕೆ ಸರಿಯಾಗಿ ಅವರನ್ನು ಹೆದರಿಸಲು ಹೆಂಡತಿ, ಮಕ್ಕಳು ಎಂಬ ಮೋಹವೂ ಇಲ್ಲ. ಇದರ ಜೊತೆಗೆ ಮೋದಿಗೊಂದು ಆಧ್ಯಾತ್ಮಿಕ ಮುಖವಿದೆ. ಅಡ್ವಾನಿಯವರಿಗೆ ಸಿಟ್ಟು ಬಂದರೆ ಅದನ್ನು ನೇರವಾಗಿ ಹೇಳಿ ವಿರೋಧ ಕಟ್ಟಿಕೊಳ್ಳುವ ಮನಸ್ಥಿತಿ ಇದೆ. ಮೋದಿ ತಮ್ಮ ಹೊರಗಿನ ಜಗತ್ತಿನಲ್ಲಿ ಇದ್ದೂ ಇಲ್ಲದಂತೆ ಇದ್ದು ತಂತ್ರವನ್ನು ಹೆಣೆಯುತ್ತಾರೆ. ಆದ್ದರಿಂದಲೇ ಅವರು ಸದ್ದಿಲ್ಲದೇ ಕೆಲಸದಲ್ಲಿ ನಿರತರಾಗುತ್ತಾರೆ. ಅಡ್ವಾಣಿ ವಿರೋಧವಿದೆ, ಅಸಹನೆ ಇದೆ. ಆದಾಗ್ಯೂ ಅವರೊಂದಿಗೆ ಮಾತನಾಡಿ ಆಶೀರ್ವಾದ ಪಡೆಯುತ್ತಾರೆ. ಒಂದೆಡೆಗೆ ತನ್ನನ್ನು ಬೆಳೆಸಿದ ಅಡ್ವಾನಿಯವರನ್ನೇ ಹಿಂದಿಕ್ಕಿ ಬೆಳೆದ ತಾನು ಮತ್ತು ಅಡ್ವಾನಿ ಇವರಿಬ್ಬರ ನಡುವಿನ ಅಂತರವನ್ನು ಮೋದಿ ಕಾಣಬಲ್ಲವರಾಗಿದ್ದಾರೆ.

ಮೋದಿ ಕೇವಲ  ಆರ್.ಎಸ್. ಎಸ್ ಕಾರ್ಯಕರ್ತರಾಗಲಿಲ್ಲ. ತಾನು ಕಾರ್ಯಕರ್ತನಾಗುವುದಕ್ಕಿಂತ ಜನಸೇವೆ ಮಾಡಬೇಕೆಂದು ತಪಿಸಿದರು. ಫಲವಾಗಿ ರಾಜಕಾರಣ  ಆರಂಭವಾಯಿತು. ಕೇವಲ ರಾಜಕಾರಣಿಯಾದರೆ ಸಾಲದು. ಮಂತ್ರಿ, ಮುಖ್ಯಮಂತ್ರಿಯಾಗಬೇಕೆಂದರು. ಆದರು. ಅಲ್ಲಿ ಹಿಂದೂವಾದಿ ಎಂಬ ಹಣೆಪಟ್ಟಿ ತಗುಲಿಕೊಂಡಾಗ ಮುಸ್ಲಿಂರನ್ನೂ ಗೌರವಿಸುತ್ತೇನೆ ಎಂದರು. ಹಾಗೆಯೇ ನಡೆದುಕೊಂಡು ಎಲ್ಲರ ವಿಶ್ವಾಸ ಗಳಿಸಿದರು. ಇಷ್ಟೇ ಆಗಿದ್ದರೆ ಅವರೂ ಎಲ್ಲ ಮಹತ್ವಾಕಾಂಕ್ಷಿ ರಾಜಕಾರಣಿಯಂತೆ ಆಗುತ್ತಿದ್ದರು. ಆದರೆ ಮೋದಿ ಎಂದೂ ತಾವು ಬಂದ ಹಿನ್ನೆಲೆಯನ್ನು ಮರೆಯಲಿಲ್ಲ. ತಾವು ಒಬ್ಬ ಆಡಳಿತಗಾರ ಮತ್ತು ಜನಪರ ಎಂಬುದನ್ನು ಪ್ರತಿಹಂತದಲ್ಲಿ ನಿರೂಪಿಸಿದರು. ತಮ್ಮ ತಪ್ಪುಗಳನ್ನು ಮನಗಂಡು ತಿದ್ದಿಕೊಂಡರು. ತಮ್ಮದೇ ಸರಿ ಎಂದೋ, ಅಥವಾ ಇನ್ಯಾರನ್ನೋ ಬೈದೋ ತಪ್ಪುಗಳನ್ನು ಮುಚ್ಚಿಹಾಕಲು ಪ್ರಯತ್ನಿಸಲಿಲ್ಲ. ಬದಲಿಗೆ ತಿದ್ದಿಕೊಳ್ಳುತ್ತ ನಡೆದರು.  ಗೋದ್ರಾ ಹತ್ಯಾಕಾಂಡದಲ್ಲಿ ಮುಸ್ಲಿಂರನ್ನು ಹತ್ಯೆ ಮಾಡಿದ ಬಲವಾದ ಆರೋಪಕ್ಕೆ ಮಣೆ ಹಾಕಲಿಲ್ಲ. ಬದಲಿಗೆ ರೈಲಿನಲ್ಲಿ ಬರುತ್ತಿದ್ದ ಹಿಂದೂ ಯಾತ್ರಿಕರನ್ನು ಕೊಂದಿದ್ದಕ್ಕೆ ನಿಮಗೆ ಈ ಶಿಕ್ಷೆ ಎಂದರು (ಪರೋಕ್ಷವಾಗಿ).  ಇಡೀ ಅಧಿಕಾರಾವಧಿಯಲ್ಲಿ ತಾವು ಯಾರೊಂದಿಗೂ ರಾಜಿಯಾಗುವುದಿಲ್ಲವೆಂಬ ಸ್ಪಷ್ಟ ಸಂದೇಶವನ್ನು ನೀಡುತ್ತ ಹೋದರು.

ಆದರೆ ಅಡ್ವಾಣಿ ಬಾಬ್ರಿಮಸೀದಿ ವಿವಾದದ ನಂತರ ತಮ್ಮೆಲ್ಲ  ಉತ್ಸಾಹ ಕಳೆದುಕೊಂಡವರಂತೆ ಹಿಂದಕ್ಕೆ ಸರಿಯತೊಡಗಿದರು. ಅಂಗಳ ಹಾರಿ ಗಗನ ಹಾರುವ ಜಾಣ್ಮೆ ತೋರಲಿಲ್ಲ. ಯಾವ ಕ್ಷೇತ್ರದಲ್ಲಿಯೂ ನಿಂತು ಜನರೊಂದಿಗೆ ತಮ್ಮನ್ನು ಗುರುತಿಸಿಕೊಳ್ಳಲಿಲ್ಲ. ಒಂದು ರಾಜ್ಯದ ಮಂತ್ರಿಯೋ, ಮುಖ್ಯಮಂತ್ರಿಯೋ ಆಗಲಿಲ್ಲ. ಕೇವಲ ಪಕ್ಷದ ಅತ್ಯುನ್ನತ ಮಟ್ಟದ ಕಾರ್ಯಕರ್ತರಾಗಿಯೇ ಉಳಿದುಬಿಟ್ಟರು. ಕಿಂಗ್ ಮೇಕರ್ ಆಗುತ್ತ ಬಂದರೇ ವಿನಃ, ಕಳೆದ 40 ವರ್ಷಗಳಿಗಿಂತಲೂ ಹೆಚ್ಚು ಕಾಲದ ತಮ್ಮ ರಾಜಕಾರಣವನ್ನು ಇದಕ್ಕಿಂತ ಹೆಚ್ಚಿನ ವ್ಯಾಪ್ತಿಗೆ ತರಲೇ ಇಲ್ಲ. ಈಗ ಅವರ ಹಿರಿತನಕ್ಕೆ ಮಣೆಹಾಕಿದರೆ ಅವರ ಪಕ್ಷ ಲೋಕಸಭೆಯಲ್ಲಿ ಗೆಲ್ಲುವುದು ಅಷ್ಟರಲ್ಲೇ ಇದೆ. ವ್ಯಕ್ತಿಗಿಂತ ವ್ಯವಸ್ಥೆ ದೊಡ್ಡದು ಎಂದೇ ಉಳಿದ ಹಿರಿಯರು ಮೋದಿಯನ್ನು ಆಯ್ಕೆ ಮಾಡಿದ್ದಾರೆ.

ಬಹುಷಃ ಈ ಇಬ್ಬರ  ಈ ಘಟನೆಯಿಂದ ನಾನೂ ಒಂದು ಹೊಸ ಪಾಠವನ್ನು ಕಲಿತೆ. ಕಂಡು ಕಲಿ ಎನ್ನುವ ಮಾತಿದೆಯಲ್ಲವೇ?